ಜಾರಕಿಹೊಳಿ ನೇತೃತ್ವದ ಅತೃಪ್ತರ ಸಭೆ: ಸಾಮೂಹಿಕ ರಾಜೀನಾಮೆಗೆ ರೆಡಿ?
ಬೆಂಗಳೂರು, ಮೇ 24: ಲೋಕಸಭೆ ಚುನಾವಣೆಯ ಫಲಿತಾಂಶದ ನಂತರ ಕರ್ನಾಕರ್ನಾಟಕ ರಾಜ್ಯ ಸರ್ಕಾರದಲ್ಲಿ ಭಾರೀ ಬದಲಾವಣೆಯಾಗುವ ಸೂಚನೆ ದೊರೆತಿದೆ. ಇಷ್ಟು ದಿನ ಕಷ್ಟಪಟ್ಟು ಉಳಿಸಿಕೊಂಡಿದ್ದ ಸಮ್ಮಿಶ್ರ ಸರ್ಕಾರಕ್ಕೆ ಕಂಟಕ ಎಂಬಂತೆ ಇಂದು ಬೆಂಗಳೂರಿನಲ್ಲಿ ಅತೃಪ್ತ ಶಾಸಕರೊಡನೆ ಕಾಂಗ್ರೆಸ್ ಶಾಸಕ ರಮೇಶ್ ಜಾರಕಿಹೊಳಿ ಸಭೆ ನಡೆಸಲಿದ್ದಾರೆ.
ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಮತ್ತು ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಕಾಂಗ್ರೆಸ್ ನ ಇನ್ನಿತರ ಅತೃಪ್ತ ಶಾಸಕರೂ ಸಭೆಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.
ಲೋಕಸಭಾ ಚುನಾವಣೆ 2019 : ಕರ್ನಾಟಕದಲ್ಲಿ ಗೆದ್ದವರು, ಸೋತವರು
ಲೋಕಸಭೆ ಚುನಾವಣೆಯ ಫಲಿತಾಂಶ ಗುರುವಾರ ಬಿಡುಗಡೆಯಾಗಿದ್ದು, ಕರ್ನಾಟಕದಲ್ಲಿ ಬಿಜೆಪಿ 25(+1 ಪಕ್ಷೇತರ) ಸ್ಥಾನಗಳಲ್ಲಿ ಜಯಗಳಿಸಿ ಅನಿರೀಕ್ಷಿತ ಸಾಧನೆ ಮೆರೆದಿದೆ. ಕೇಂದ್ರದಲ್ಲೂ ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರಕ್ಕೇ ಜನರು ಬೆಂಬಲ ನೀಡಿದ್ದು ರಾಜ್ಯ ಸರ್ಕಾರದಲ್ಲಿ ಬಿಜೆಪಿ ಸರ್ಕಾರ ರಚಿಸುವ ಸೂಚನೆ ಸಿಕ್ಕುತ್ತಿದ್ದಂತೆಯೇ ಅತೃಪ್ತ ಶಾಸಕರು ಬೆಂಗಳೂರಿಗೆ ದೌಡಾಯಿಸಿದ್ದಾರೆ.
ಇತ್ತ ಕಾಂಗ್ರೆಸ್ ಶಾಸಕರು ಉಪಮುಖ್ಯಮಂತ್ರಿ ಜಿ ಪರಮೇಶ್ವರ್ ಅವರ ಮನೆಯಲ್ಲಿ ಇಂದು ಬೆಳಿಗ್ಗೆ ಉಪಹಾರ ಸೇವಿಸಿ ಸಭೆ ನಡೆಸಿದರು. ಫಲಿತಾಂಶದ ಬಗ್ಗೆ ಚರ್ಚೆ ಮಾಡಿದ ಅವರು ಪಕ್ಷದ ಮುಂದಿನ ನಡೆಯ ಬಗ್ಗೆಯೂ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.