ಯಡಿಯೂರಪ್ಪರಿಂದ ರಾಜೀನಾಮೆ ಪಡೆಯಲು ಬಿಜೆಪಿಗಿದ್ದ 5 ಪ್ರಮುಖ ಕಾರಣಗಳು
ಬೆಂಗಳೂರು, ಜುಲೈ 26: ರಾಜ್ಯದಲ್ಲಿ ನಾಲ್ಕು ಬಾರಿ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಕೊನೆಗೂ ರಾಜೀನಾಮೆ ನೀಡಿದ್ದಾರೆ.
ಕಳೆದ ಒಂದು ವರ್ಷದಿಂದಲೂ ಯಡಿಯೂರಪ್ಪ ರಾಜೀನಾಮೆ ಅಥವಾ ಪದತ್ಯಾಗದ ಬಗ್ಗೆ ಚರ್ಚೆಗಳು ನಡೆಯುತ್ತಲೇ ಇದ್ದವು. ಯಡಿಯೂರಪ್ಪ ರಾಜೀನಾಮೆ ಎಂದು ಎನ್ನುವ ಪ್ರಶ್ನೆ ಆಗಾಗ ಮುನ್ನಲೆಗೆ ಬರುತ್ತಲೇ ಇತ್ತು.
ಆದರೆ ಈ ರಾಜೀನಾಮೆ ವಿಚಾರವು ಯಡಿಯೂರಪ್ಪಗೆ ದಿಢೀರ್ ಎಂದು ಹೈಕಮಾಂಡ್ನಿಂದ ಬಂದಿರುವ ಸಂದೇಶವಲ್ಲ, 2018ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿಯೇ ಈ ವಿಚಾರವನ್ನು ಯಡಿಯೂರಪ್ಪ ಅವರಿಗೆ ಬಿಜೆಪಿ ವರಿಷ್ಠರು ಸ್ಪಷ್ಟಪಡಿಸಿದ್ದರು.
ಜುಲೈ 27ರಂದು ಬಿಜೆಪಿ ಸಂಸದೀಯ ಮಂಡಳಿ ಸಭೆ, ಮುಂದಿನ ಸಿಎಂ ಆಯ್ಕೆ?
ಯಡಿಯೂರಪ್ಪ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಣೆ ಮಾಡಿದ ಸಂದರ್ಭದಲ್ಲಿ 2 ರಿಂದ 3 ವರ್ಷ ಮಾತ್ರ ಅಧಿಕಾರದಲ್ಲಿ ಯಡಿಯೂರಪ್ಪ ಇರಬಹುದು ಎನ್ನುವ ಸಂದೇಶವನ್ನು ನೀಡಲಾಗಿತ್ತು.
ಆದರೆ ಅಧಿಕಾರಕ್ಕೆ ಬಂದು ಎರಡೇ ದಿನದ ಬಳಿಕ ರಾಜೀನಾಮೆ ನೀಡುವ ಸ್ಥಿತಿ ಬಂದರೂ, ಮತ್ತೆ ಯಡಿಯೂರಪ್ಪ ಅವರು ಸಮ್ಮಿಶ್ರ ಸರ್ಕಾರವನ್ನು ಕೆಳಗಿಳಿಸಿ ಅಧಿಕಾರಿಕ್ಕೆ ಬಂದರೂ. ಆಗಲೂ ಕೂಡ ಪೂರ್ಣಾವಧಿಗೆ ಯಡಿಯೂರಪ್ಪ ಅವರನ್ನು ಮುಂದುವರೆಸುವ ಯಾವುದೇ ಭರವಸೆಯನ್ನು ಹೈಕಮಾಂಡ್ ನೀಡಿರಲಿಲ್ಲ.
ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ಘೋಷಿಸಿದ ಯಡಿಯೂರಪ್ಪ
ಒಂದು ಅಥವಾ ಎರಡು ವರ್ಷದ ಅವಧಿಗೆ ಮಾತ್ರ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿಯಾಗಿರಿಸಿ ನಂತರ ಪರ್ಯಾಯ ನಾಯಕರನ್ನು ಬೆಳಸುವ ಉದ್ದೇಶವನ್ನು ಹೈಕಮಾಂಡ್ ಹೊಂದಿತ್ತು ಎನ್ನಲಾಗಿದೆ. ಈಗದು ಕಾರ್ಯರೂಪಕ್ಕೆ ಬರುತ್ತಿದೆ. ಇವೆಲ್ಲದರ ಮಧ್ಯೆ ಯಡಿಯೂರಪ್ಪ ರಾಜೀನಾಮೆಗೆ ಐದು ಪ್ರಮುಖ ಕಾರಣಗಳನ್ನು ನೀಡಲಾಗುತ್ತಿದೆ.
ಕಾರಣ 1: ಯಡಿಯೂರಪ್ಪ ವಯಸ್ಸು
2014ರಲ್ಲಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಬಿಜೆಪಿಯಲ್ಲಿ ಮುನ್ನಲೆಗೆ ಬಂದ ಮೇಲೆ, ಒಂದು ಅಲಿಖಿತ ನಿಯಮವನ್ನು ಜಾರಿಗೆ ತರಲಾಯಿತು. ದೇಶದಲ್ಲಿ ಯಾವುದೇ ಬಿಜೆಪಿ ನಾಯಕರಿಗೆ 75 ವರ್ಷವಾದರೆ ಪಕ್ಷ ಅಥವಾ ಸರ್ಕಾರದಲ್ಲಿ ಸ್ಥಾನ ನೀಡದಿರಲು ನಿರ್ಧರಿಸಲಾಗಿದೆ.
ಇದು ಅಂದು ಅಡ್ವಾಣಿ ಹಾಗೂ ಮುರಳಿ ಮನೋಹರ್ ಜೋಶಿ ಅವರನ್ನು ಅಧಿಕಾರದಿಂದ ದೂರವಿಡಲು ಮಾಡಿದ ತಂತ್ರ ಎನ್ನಲಾಗುತ್ತಿದ್ದರೂ ಇದಕ್ಕೆ ಬಿಜೆಪಿಯಲ್ಲಿ ಅದರದ್ದೇ ಆದ ವಿವರಣೆ ಇದೆ. ಈಗ ಅದೇ ಸೂತ್ರವನ್ನು ಯಡಿಯೂರಪ್ಪ ರಾಜೀನಾಮೆಗೂ ಕೂಡ ಅಳವಡಿಸಲಾಗಿದೆ. ಆದರೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದು 75 ವರ್ಷವಾದ ಬಳಿಕವೇ ಆಗಿತ್ತು, ಇದೀಗ 78 ವರ್ಷವಾದ ಬಳಿಕ ಯಡಿಯೂರಪ್ಪ ರಾಜೀನಾಮೆ ನೀಡುತ್ತಿದ್ದಾರೆ. ಯಡಿಯೂರಪ್ಪ ಅವರು ಕೂಡ ತಮ್ಮ ರಾಜೀನಾಮೆಗೆ ಮೇಲೆ ಬೇರೆ ಬೇರೆ ಕಾರಣಗಳಿದ್ದರೂ ಇದನ್ನೇ ಪ್ರಮುಖವಾಗಿ ಮುಂದಿಟ್ಟುಕೊಳ್ಳುತ್ತಿದ್ದಾರೆ. ತನಗೆ 78 ವರ್ಷದವರೆಗೂ ದೇಶದಲ್ಲಿ ವಿಶೇಷವಾಗಿ ಪರಿಗಣಿಸಿ ಅಧಿಕಾರದಲ್ಲಿರಲು ಅವಕಾಶ ಕೊಟ್ಟಿದ್ದಾರೆ ಇದಕ್ಕಾಗಿ ಮೋದಿ, ಶಾ ಹಾಗೂ ನಡ್ಡಾ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದಿದ್ದಾರೆ.ಕಾರಣ 2: ಜಾತಿ ಆಧಾರಿತ ರಾಜಕೀಯ
ಕರ್ನಾಟಕದಲ್ಲಿ ಜಾತಿ ರಾಜಕಾರಣ ದೊಡ್ಡ ಪ್ರಾಮುಖ್ಯತೆಯನ್ನು ಹೊಂದಿದೆ, ಬಿಜೆಪಿಯು ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ಜಾತಿ ರಾಜಕೀಯದ ಹೊರತು ಕೇಡರ್ ವ್ಯವಸ್ಥೆಯನ್ನು ಹೊಂದಿದೆ. ಜಾತಿಯ ಹೊರತಾಗಿಯೂ ಸಣ್ಣ ಪುಟ್ಟ ಸಮುದಾಯದ ನಾಯಕರನ್ನು ಮುಖ್ಯಮಂತ್ರಿಯನ್ನಾಗಿಸಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ಯಶಸ್ವಿಯಾಗಿದೆ. ಇದಕ್ಕೆ ಹರ್ಯಾಣ ಒಂದು ಪ್ರಮುಖ ಉದಾಹರಣೆ ಎನ್ನಬಹುದು. ಆದರೆ ಕರ್ನಾಟಕದಲ್ಲಿ ಬಿಜೆಪಿಗೆ ಇಂಥದ್ದೊಂದು ಅವಕಾಶವಾಗುತ್ತಿದೆ. ಕರ್ನಾಟಕ ಬಿಜೆಪಿ ಎಂದರೆ ಲಿಂಗಾಯತ ಎನ್ನುವ ಇಮೇಜ್ ಅನ್ನು ಯಡಿಯೂರಪ್ಪ ಮಾಡಿಟ್ಟಿದ್ದಾರೆ. ಇದರಿಂದ ಹೊರಬರಲು ಬಿಜೆಪಿ ಪ್ರಯತ್ನಿಸುತ್ತಿದೆ. ಕರ್ನಾಟಕದಲ್ಲಿಯೂ ಜಾತಿ ಆಧಾರಿತ ರಾಜಕೀಯವನ್ನು ಹೋಗಲಾಡಿಸಿ ಪಕ್ಷ ಆಧಾರಿತ ಪಕ್ಷದ ಕೇಡರ್ ವ್ಯವಸ್ಥೆಯನ್ನು ತರಲು ಬಿಜೆಪಿ ವರಿಷ್ಠರು ಮುಂದಾಗಿದ್ದಾರೆ ಎನ್ನಲಾಗಿದೆ. ಹೀಗಾಗಿ ಯುವ ನಾಯಕರಿಗೆ ಅವಕಾಶ ನೀಡಿ ಪಕ್ಷವನ್ನು ಜಾತಿ ಆಧಾರಿತ ಹೊರತಾಗಿ ತನ್ನದೇ ಕೇಡರ್ ಮೂಲಕ ಮತಬೇಟೆ ಕಡೆ ಬಿಜೆಪಿ ಚಿಂತನೆ ನಡೆಸಿದೆ.
ಕಾರಣ 3:: ಪಕ್ಷ ಬಿಟ್ಟು ಮತ್ತೆ ಪಕ್ಷಕ್ಕೆ ಬಂದವರು
ಪಕ್ಷಕ್ಕಾಗಿ ಸೈಕಲ್ ತುಳಿದುವ ನೂರಾರು ಕಿ.ಮೀ ಪಾದಯಾತ್ರೆ ಮಾಡಿ ಹೋರಾಟಗಳ ಮೂಲಕ ಬಿಜೆಪಿಯನ್ನು ಯಡಿಯೂರಪ್ಪ ಕಟ್ಟಿದ್ದಾರೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ ಹಾಗೆಯೇ ಬಿಜೆಪಿಗೆ ಶಾಸಕರಿಲ್ಲದ ಸಂದರ್ಭದಲ್ಲಿ ಒಬ್ಬರೇ ಪಕ್ಷದಲ್ಲಿ ನಿಂತು ವಿಧಾನಸಭೆಯಲ್ಲಿ ಹೋರಾಡಿದವರು ಯಡಿಯೂರಪ್ಪ, ಆದರೆ 2012-13ರ ಸಮಯದಲ್ಲಿ ಯಡಿಯೂರಪ್ಪ ತೆಗೆದುಕೊಂಡ ಒಂದು ತೀರ್ಮಾನವು ಪಕ್ಷದಲ್ಲಿನ ಅವರ ಇಮೇಜ್ನ್ನು ಕುಗ್ಗಿಸಿದೆ. ಅಂದು ಮುಖ್ಯಮಂತ್ರಿ ಗಾದಿಯಿಂದ ಕೆಳಗಿಳಿಸಿದ್ದಾರೆ ಎನ್ನುವ ಕೋಪದಿಂದ ಕರ್ನಾಟಕ ಜನತಾ ಪಕ್ಷ ಕೆಜೆಪಿಯನ್ನು ಯಡಿಯೂರಪ್ಪ ಸ್ಥಾಪಿಸಿದ್ದರು. ಬಳಿಕ ಲೋಕಸಭೆ ಚುನಾವಣೆಗೂ ಮುನ್ನ ಮತ್ತೆ ಅವರು ಬಿಜೆಪಿಗೆ ಬಂದರು ಎನ್ನುವುದು ಎರಡನೇ ವಿಚಾರ ಅವರು ಪಕ್ಷದ ವಿರುದ್ಧವಾಗಿ ನಿಂತಿದ್ದರಿಂದ 2013ರಲ್ಲಿ ಬಿಜೆಪಿ ಶೋಚನೀಯವಾಗಿ ಸೂಲುವ ಸ್ಥಿತಿ ನಿರ್ಮಾಣವಾಯಿತು. ಇದು ಪಕ್ಷದ ಕೆಲ ಮುಖಂಡರು ಹಾಗೂ ಆರ್ಎಸ್ಎಸ್ನ ಕೆಲವು ನಾಯಕರಿಗೆ ಬೇಸರ ತರಿಸಿದೆ, ಇದನ್ನು ಎಂದಿಗೂ ಅವರು ಮರೆಯುತ್ತಿಲ್ಲ. ಬಿಜೆಪಿಗೆ ಯಡಿಯೂರಪ್ಪ ರಾಜ್ಯದಲ್ಲಿ ಪಕ್ಷವನ್ನು ವಾಪಸ್ ತಂದರೂ ಕೂಡ ರಾಷ್ಟ್ರ ನಾಯಕರು ಹಳೆಯ ವಿಚಾರವನ್ನು ಮರೆಯುತ್ತಿಲ್ಲ.
ಕಾರಣ 4:ಯಡಿಯೂರಪ್ಪ ಓರ್ವ ಪ್ರಶ್ನಾತೀತ ನಾಯಕ
ರಾಜ್ಯದಲ್ಲಿ ಯಡಿಯೂರಪ್ಪ ಅವರು ಪ್ರಶ್ನಾತೀತ ಬಿಜೆಪಿ ನಾಯಕ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ ಹೀಗಾಗಿ, ಬಿಜೆಪಿಯ ಹಾಲಿ ಹೈಕಮಾಂಡ್ ವ್ಯವಸ್ಥೆಗೂ , ವರಿಷ್ಠರಲ್ಲಿನ ವ್ಯವಸ್ಥೆಗೂ ಹಾಗೂ ರಾಜ್ಯಕ್ಕೂ ಸಾಕಷ್ಟು ವ್ಯತ್ಯಾಸಗಳಿದ್ದವು. ದೇಶದ ಉಳಿದೆಲ್ಲಾ ಸಿಎಂಗಳು ಬಿಜೆಪಿ ವರಿಷ್ಠರ ಹಿಡಿತದಲ್ಲಿದ್ದಾರೆ. ಆದರೆ ಕರ್ನಾಟಕದಲ್ಲಿ ತನ್ನದೇ ಒಂದು ವ್ಯವಸ್ಥೆಯನ್ನು ಯಡಿಯೂರಪ್ಪ ಹೊಂದಿದ್ದರು. ಹೈಕಮಾಂಡ್ ನಿರ್ಧಾರ ಎಂದರೂ ಕೂಡ ಯಡಿಯೂರಪ್ಪ ಪ್ರತಿ ವಿಚಾರದಲ್ಲೂ ಮುನ್ನಲೆಗೆ ತೆಗೆದುಕೊಂಡು ಪ್ರಚಾರವನ್ನು ಪಡೆಯುತ್ತಿದ್ದರು.
ಹೀಗಾಗಿ ಈಗ ಮತ್ತೆ ರಾಜ್ಯ ಬಿಜೆಪಿಯನ್ನು ತನ್ನ ಹಿಡಿತಕ್ಕೆ ತರುವ ಉದ್ದೇಶಕ್ಕಾಗಿ ಕೇಂದ್ರ ನಾಯಕರು ಈ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ.ಕಾರಣ 5: ಭಷ್ಟಾಚಾರ ಆರೋಪ
ಯಡಿಯೂರಪ್ಪ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರದಿಂದ ಕೆಳಗಿಳಿಯಲು ಕಾರಣವಾಗಿದ್ದು ಕೂಡ ಭ್ರಷ್ಟಾಚಾರ ಆರೋಪ. ಅಕ್ರಮ ಗಣಿಗಾರಿಕೆ ಕುರಿತು ಲೋಕಾಯುಕ್ತ ವರದಿಯು ಯಡಿಯೂರಪ್ಪಗೆ ಕಂಟಕವಾಗಿ ಪರಿಣಮಿಸಿತ್ತು.
ಅಂದು ಕೂಟ ಅಡ್ವಾಣಿ ಹಾಗೂ ಅರುಣ್ ಜೇಟ್ಲಿ ಸೇರಿ ಇತರೆ ನಾಯಕರು ಯಡಿಯೂರಪ್ಪ ಪರವಾಗಿ ನಿಂತಿರಲಿಲ್ಲ. ಈಗಲೂ ಕೂಡ ಯಡಿಯೂರಪ್ಪ ವಿರುದ್ಧ ಇಂತಹುದೇ ಆರೋಪಗಳು ಕೇಳಿಬರುತ್ತಿವೆ.ವಿಶೇಷವಾಗಿ ಕುಟುಂಬ ಸದಸ್ಯರು ಆಡಳಿತದಲ್ಲಿ ತೀವ್ರವಾದ ಹಸ್ತಕ್ಷೇಪ ಮಾಡುತ್ತಿದ್ದಾರೆ. ಸಾಕಷ್ಟು ಭ್ರಷ್ಟಾಚಾರ ಆರೋಪಗಳಿವೆ ಎಂದು ಪ್ರತಿಪಕ್ಷಗಳು ಕೂಡ ಆರೋಪಿಸುತ್ತಿವೆ. ಇದೇ ಕಾರಣಕ್ಕಾಗಿಯೇ ಪಕ್ಷ, ಸರ್ಕಾರದ ಇಮೇಜ್ನ್ನು ವೃದ್ಧಿಸಿಕೊಳ್ಳುವ ದೃಷ್ಟಿಯಿಂದ ಯಡಿಯೂರಪ್ಪ ಅವರನ್ನು ಕೆಳಗಿಸಿ ಮುಂದಿನ ಎರಡು ವರ್ಷದ ವಿಧಾನಸಭೆ ಚುನಾವಣೆ ವರೆಗೆ ಪಕ್ಷಕ್ಕೆ ಹೊಸ ಮುಖದ ಮೂಲಕ ಹೆಸರು ತರಲು ಬಿಜೆಪಿ ಕೇಂದ್ರದ ನಾಯಕರು ನಿರ್ಧರಿಸಿದ್ದಾರೆ.