ಸಮವಸ್ತ್ರ ಧರಿಸಿ ಪೊಲೀಸ್ ಠಾಣೆಗಳಲ್ಲಿ ಪೊಲೀಸರ ಆಯುಧ ಪೂಜೆ
ಬೆಂಗಳೂರು, ಅ. 17: ಒಂದು ಧರ್ಮವನ್ನು ಪ್ರತಿನಿಧಿಸುವ ಕೇಸರಿ ಬಣ್ಣದ ಬಟ್ಟೆ ಧರಿಸಿ ಪೊಲೀಸ್ ಠಾಣೆಗಳಲ್ಲಿ ಆಯುಧ ಪೂಜೆ ಮಾಡಿದ ಪೊಲೀಸರ ನಡೆ ರಾಜ್ಯದಲ್ಲಿ ದೊಡ್ಡ ವಿವಾದವನ್ನೇ ಹುಟ್ಟು ಹಾಕಿದೆ. ಈ ವಿವಾದ ರಾಜಕೀಯ ಪಕ್ಷಗಳ ನಡುವಿನ ಮುಸುಕಿನ ಗುದ್ದಾಟಕ್ಕೂ ನಾಂದಿ ಹಾಡಿದೆ.
ಒಂದು ಧರ್ಮವನ್ನು ಪ್ರತಿನಿಧಿಸುವ ಬಟ್ಟೆ ಸಮವಸ್ತ್ರ ಧರಿಸಿ ಆಯುಧ ಪೂಜೆ ಮಾಡಿರುವ ಪೊಲೀಸರ ಪೋಟೋಗಳು ಸಾಮಾಜಿಕ ಜಾಲ ತಾಣದಲ್ಲಿ ಒಂದೆಡೆ ವೈರಲ್ ಆಗತ್ತಿವೆ. ಮತ್ತೊಂದೆಡೆ ಪೊಲೀಸರ ಈ ಕ್ರಮ ಪ್ರಶ್ನಿಸಿ ಹಾಲಿ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಳೆಳೆದಿದ್ದಾರೆ. ಒಂದು ಧರ್ಮವನ್ನು ಪ್ರತಿನಿಧಿಸುವ ಸಮವಸ್ತ್ರ ಧರಿಸಿ ಆಯುಧ ಪೂಜೆ ಮಾಡಿದ ಪೊಲೀಸರ ಕ್ರಮ ಮುಂದಿಟ್ಟುಕೊಂಡು ಮಾಜಿ ಸಿಎಂ ಸಿದ್ದರಾಮಯ್ಯ ಬಸವರಾಜ ಬೊಮ್ಮಾಯಿಗೆ ಟ್ವೀಟ್ನಲ್ಲಿ ಬೆವರಿಳಿಸಿದ್ದಾರೆ. ಇದರ ನಡುವೆ ಪೊಲೀಸರು ಪೊಲೀಸ್ ಠಾಣೆಗಳಲ್ಲಿ ದಸರಾ ಪೂಜೆ ಮಾಡಲು ಕಾನೂನಿನ ಮಾನ್ಯತೆ ಇದೆಯೇ ಎಂಬ ಪ್ರಶ್ನೆ ಸುತ್ತ ಚರ್ಚೆ ನಡೆಯುತ್ತಿದೆ.
ವಿಜಯಪುರದ ಗ್ರಾಮೀಣ ಪೊಲಿಸ್ ಸಿಬ್ಬಂದಿ ಹಾಗೂ ಪೊಲೀಸ್ ಅಧಿಕಾರಿಗಳು ಮತ್ತು ಹಿಂದೂ ಸಂಘಟನೆ ಮುಖಂಡರ ಜತೆ ಸೇರಿ ಕೇಸರಿ ಬಣ್ಣದ ಶಾಲು, ಬಿಳಿ ಟೋಪಿ ಹಾಗೂ ಕುರ್ತಾ ತೊಟ್ಟು ಆಯುಧ ಪೂಜೆ ನೆರವೇರಿಸಿದ್ದಾರೆ. ಈ ಕುರಿತು ಪೋಟೋ ತೆಗೆದುಕೊಂಡಿದ್ದು ಸಾಮಾಜಿಕ ಜಾಲ ತಾಣದಲ್ಲಿ ಅಪ್ಲೋಡ್ ಮಾಡಿದ್ದು, ಸಾಮಾಜಿಕ ಜಾಲ ತಾಣದಲ್ಲಿ ದೊಡ್ಡ ಚರ್ಚೆ ಹುಟ್ಟು ಹಾಕಿದೆ. ಇದರೊಂದಿಗೆ ಉಡುಪಿ ಜಿಲ್ಲೆಯ ಕಾಪು ಪೊಲೀಸ್ ಠಾಣೆಯಲ್ಲಿ ಕೂಡ ಹಿಂದೂ ಮುಖಂಡರ ಜತೆ ಸೇರಿ, ಹಿಂದೂ ಪರ ಸಂಘಟನೆಗಳು ಹಾಕುವ ಕೇಸರಿ ಬಣ್ಣದ ಬಟ್ಟಿ ಆಯುಧ ಪೂಜೆ ಮಾಡಲಾಗಿದೆ.
ಪೊಲೀಸ್ ಠಾಣೆಗಳ ವಿವಾದ
ಜಾತ್ಯಾತೀತ ರಾಷ್ಟ್ರದಲ್ಲಿ ಅದೂ ಕಾರ್ಯಾಂಗದ ಒಂದು ಭಾಗವಾಗಿರುವ ಪೊಲೀಸ್ ಇಲಾಖೆಯಲ್ಲಿ ಕೇವಲ ಒಂದು ಧರ್ಮಕ್ಕೆ ಸೀಮಿತ ಆಚರಣೆ ಸಂವಿಧಾನಕ್ಕೆ ವಿರುದ್ಧವಾದುದು ಎಂಬ ಪರಿಜ್ಞಾನ ಪೊಲೀಸರಿಗೆ ಇಲ್ಲವೇ? ಇವರೇನಾ ಕರ್ನಾಟಕ ಪೊಲೀಸರು? ಧಾರ್ಮಿಕ ಸಂಘರ್ಷಗಳಾದ ಸಂದರ್ಭದಲ್ಲಿ ಇವರಿಂದ ಏನಾದರೂ ನ್ಯಾಯ ನಿರೀಕ್ಷೆ ಮಾಡಬಹುದಾ ಎಂಬ ಪ್ರಶ್ನೆ ಪೊಲೀಸರ ಮುಂದಿಡಲಾಗಿದೆ. ಒಂದು ಧರ್ಮ ಪ್ರತಿನಿಧಿಸುವ ಬಟ್ಟೆ ಧರಿಸಿ ಪೊಲೀಸರು ಪೊಲೀಸ್ ಠಾಣೆಗಳಲ್ಲಿ ಆಯುಧ ಪೂಜೆ ಮಾಡಿರುವುದನ್ನು ಕೆಲವರು ಸಮರ್ಥನೆ ಮಾಡಿಕೊಂಡು ಸಾಮಾಜಿಕ ಜಾಲ ತಾಣದಲ್ಲಿ ದೊಡ್ಡ ಚರ್ಚೆ ಹುಟ್ಟು ಹಾಕಿದೆ.
ಕಾನೂನು ಏನು ಹೇಳುತ್ತದೆ ?
ಪೊಲೀಸರ ಮ್ಯಾನುಯಲ್ ಪ್ರಕಾರ ಪೊಲೀಸ್ ಠಾಣೆಯಲ್ಲಿ ಯಾವುದೇ ಒಂದು ಧರ್ಮ ಪ್ರತಿನಿಧಿಸುವ ಪೋಟೋ ಇಡಲು ಸಹ ಅವಕಾಶವಿಲ್ಲ. ಒಂದು ಕೋಮು ಸಮುದಾಯ ಪ್ರತಿನಿಧಿಸುವಂತಹ ಬಟ್ಟೆ ಧರಿಸುವಂತಿಲ್ಲ, ಗಡ್ಡ ಬಿಡುವಂತಿಲ್ಲ. ಒಂದು ಧರ್ಮವನ್ನು ಪ್ರತಿನಿಧಿಸುವ ಹಬ್ಬ ಪೊಲೀಸ್ ಠಾಣೆಯಲ್ಲಿ ಆಚರಿಸುವುದು ಸರಿಯಲ್ಲ. ಒಂದು ಧರ್ಮ ಪ್ರತಿನಿಧಿಸುವ ಬಟ್ಟೆ ಕೂಡ ಹಾಕುವಂತಿರಲಿಲ್ಲ. ಆದರೆ ಇದೀಗ ವಿಜಯಪುರ ಮತ್ತು ಕಾಪು ಪೊಲೀಸ್ ಠಾಣೆಗಳಲ್ಲಿ ಒಂದು ಸಮುದಾಯ ಪ್ರತಿನಿಧಿಸುವ ಬಟ್ಟೆ ಧರಿಸಿ ಆಯುಧ ಪೂಜೆ ಮಾಡಿರುವುದು ವಿವಾದಕ್ಕೆ ನಾಂದಿ ಹಾಡಿದೆ.
ನೈತಿಕ ದೃಷ್ಟಿಯಲ್ಲಿ ಪೊಲೀಸರ ಆಯುಧ ಪೂಜೆ
ನೈತಿಕ ದೃಷ್ಟಿಯಿಂದ ನೋಡುವುದಾದರೆ, ರಾಜ್ಯದಲ್ಲಿ ಬ್ರಿಟೀಷರ ಕಾಲದಿಂದಲೂ ಆಯುಧಗಳಿಗೆ ಪೂಜೆ ಮಾಡುವ ಪದ್ಧತಿ ಅಸ್ತಿತ್ವದಲ್ಲಿದೆ. ಅದೊಂದು ಸಂಪ್ರದಾಯವನ್ನು ಪಾಲನೆ ಮಾಡಿಕೊಂಡು ಬರಲಾಗಿದೆ. ಪೊಲೀಸ್ ಇಲಾಖೆಯಲ್ಲಿ ಶಸ್ತ್ರಾಸ್ತ್ರಗಳಿಗೆ ಪೂಜೆ ಮಾಡುವ ಸಂಪ್ರದಾಯವನ್ನು ಬ್ರಿಟೀಷರ ಕಾಲದಲ್ಲಿ ನಡೆದುಕೊಂಡು ಬಂದಿತ್ತು. ಪೊಲೀಸ್ ಠಾಣೆಗಳಲ್ಲಿ ಆಯುಧಗಳಿಗೆ ಪೂಜೆ ಮಾಡುವುದರಿಂದ ಕನಿಷ್ಠ ಪಕ್ಷ ಒಂದು ವರ್ಷಕ್ಕಾದರೂ ಎಲ್ಲವನ್ನು ಪೊಲೀಸ್ ಠಾಣೆಗಳಲ್ಲಿ ಸ್ವಚ್ಛಗೊಳಿಸುತ್ತಾರೆ. ಅವು ಸರಿಯಾಗಿ ಕೆಲಸ ಮಾಡಿಕೊಳ್ಳಲಾಗುತ್ತಿದೆಯಾ ಎಂಬುದನ್ನು ನೋಡಿಕೊಳ್ಳುತ್ತಾರೆ. ಪೊಲೀಸರು ಸಮವಸ್ತ್ರ ಧರಿಸಿ ತಮ್ಮ ಠಾಣೆಯ ಉಪಕರಣಗಳಿಗೆ ಪೂಜೆ ಮಾಡುವುದರಲ್ಲಿ ಏನು ತಪ್ಪಿದೆ.
ಬ್ರಿಟೀಷರ ಕಾಲದಲ್ಲೂ, ಮೈಸೂರು ಮಹಾರಾಜರ ಆಳ್ವಿಕೆ ಕಾಲದಲ್ಲೂ ಪೊಲೀಸ್ ಠಾಣೆಗಳಲ್ಲಿ ಆಯುಧ ಪೂಜೆ ಮಾಡಲಾಗುತ್ತಿತ್ತು. ಆದರೆ, ಒಂದು ಒಂದು ಧರ್ಮದ ಸಂಘಟನೆ ಪ್ರತಿನಿಧಿಸುವ ಸಮವಸ್ತ್ರ ಪೊಲೀಸರು ಧರಿಸುವ ಅಗತ್ಯ ಇರಲಿಲ್ಲ. ಅದೊಂದು ದೊಡ್ಡ ಬಾಲಿಶತನ. ಆದರೆ ಇದನ್ನೇ ಮುಂದಿಟ್ಟುಕೊಂಡು ಜನ ಪ್ರತಿನಿಧಿಗಳು ಕೋಮು ಸಂಘರ್ಷಕ್ಕೆ ನಾಂದಿ ಹಾಡುವಂತಹ ವಾತಾವರಣ ಸೃಷ್ಟಿಸುತ್ತಿರುವುದು ತಪ್ಪು ಎಂದು ಹೆಸರು ಹೇಳಲು ಇಚ್ಛಿಸದ ಪೊಲೀಸ್ ಅಧಿಕಾರಿ ತಮ್ಮ ಅಭಿಪ್ರಾಯವನ್ನು ಒನ್ಇಂಡಿಯಾ ಕನ್ನಡ ಜತೆ ಹಂಚಿಕೊಂಡರು.
ಸಿದ್ದು ಜಾತ್ಯತೀತ ಹೇಳಿಕೆಗೆ ಪೊಲೀಸ್ ಗುದ್ದು!
ಆಯುಧ ಪೂಜೆ ಒಂದು ಸಂಸ್ಕೃತಿ. ಜಾತ್ಯತೀತ ರಾಷ್ಟ್ರ ಎಂದು ಹೇಳುವ ರಾಜಕಾರಣಗಳು, ದೇಶದ ಎಲ್ಲಾ ಪ್ರಾರ್ಥನಾ ಮಂದಿರಗಳಲ್ಲಿ ರಾಷ್ಟ್ರಗೀತೆ ಹಾಡಿಸಲಿ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ವೇಳೆ ಟಿಪ್ಪು ಜಯಂತಿಯನ್ನು ಆಚರಣೆಗೆ ತಂದರು. ಒಂದು ಕೋಮಿನ ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಮಾಡಿದ್ದು ಅಲ್ಲವೇ? ಟಿಪ್ಪು ಸುಲ್ತಾನ್ ಜನಿಸಿದ್ದು 1751 ರಲ್ಲಿ. ಇನ್ನೂರು ವರ್ಷಗಳ ಬಳಿಕ ನಮಗೆ ಸ್ವಾತಂತ್ರ್ಯ ಬಂದಿದ್ದು. ಜಾತ್ಯತೀತ ಸರ್ಕಾರ ಎಂದು ಹೇಳಿದ್ದ ಸಿದ್ದರಾಮಯ್ಯನವರು ಯಾಕೆ ಟಿಪ್ಪು ಜಯಂತಿಯನ್ನು ಆಚರಣೆಗೆ ತಂದರು. ಅದು ಅವರ ಜಾತ್ಯಾತೀತ ನಿಲುವಿಗೆ ವಿರುದ್ಧ ಅಲ್ಲವೇ? ಯಾವುದೋ ಎರಡು ಠಾಣೆಯಲ್ಲಿ ಆಯುಧ ಪೂಜೆ ಮಾಡಿದ್ದು ತಪ್ಪು ಎನ್ನುವುದು, ಅದರ ಸಮರ್ಥನೆಯಲ್ಲ, ಅದನ್ನೇ ಮುಂದಿಟ್ಟುಕೊಂಡು ಜಾತ್ಯತೀತ ಪಾಠ ಮಾಡುತ್ತಿರುವ ಸಿದ್ದರಾಮಯ್ಯ ಅವರು ಯಾಕೆ ಟಿಪ್ಪು ಜಯಂತಿಯನ್ನು ಆಚರಣೆ ತಂದರು? ಟಿಪ್ಪು ಜಯಂತಿ ಆಚರಣೆ ಸಂವಿಧಾನದ ಜಾತ್ಯತೀತ ತತ್ವಕ್ಕೆ ವಿರುದ್ಧ ಅಲ್ಲವೇ? ಟಿಪ್ಪು ಜಯಂತಿ ಸರ್ಕಾರ ಅಚರಣೆ ಮಾಡಬೇಕು ಎಂದು ಸಂವಿಧಾನದ ಯಾವ ವಿಧಿ ಹೇಳುತ್ತದೆ ಎಂಬ ಪ್ರಶ್ನೆಗೆ ಸಿದ್ದರಾಮಯ್ಯ ಉತ್ತರಿಸಲಿ ಎಂಬ ಕೆಲವು ಪ್ರಶ್ನೆಗಳನ್ನು ಸಿದ್ದರಾಮಯ್ಯ ಅವರ ಮುಂದಿಟ್ಟಿದ್ದಾರೆ. ಕರ್ತವ್ಯದಲ್ಲಿರುವ ಕೆಳ ಹಂತದ ಪೊಲೀಸ್ ಅಧಿಕಾರಿ ಆಗಿರುವ ಕಾರಣ ಅವರ ಹೆಸರು ಪ್ರಸ್ತಾಪಿಸಲು ಅವರು ನಿರಾಕರಿಸಿದ್ದಾರೆ.
ಬೊಮ್ಮಾಯಿಗೆ ಸಿದ್ದು ಟಾಂಗ್
ಪೊಲೀಸರ ದಿರಿಸು ಮಾತ್ರ ಯಾಕೆ ಬದಲಾಯಿಸಿದರಿ? ಅವರ ಕೈಗೆ ತ್ರಿಶೂಲಗಳನ್ನು ಹಿಂಸೆಯ ದೀಕ್ಷೆ ಕೊಟ್ಟು ಬಿಡಿ. ಅಲ್ಲಿಗೆ ನಿಮ್ಮ ಜಂಗಲ್ ರಾಜ್ಯ ಸ್ಥಾಪನೆಯ ಕನಸು ನನಸಾಗಬಹುದು ಎಂದು ಸಿದ್ದರಾಮಯ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಟಾಂಗ್ ಕೊಟ್ಟಿದ್ದಾರೆ. ಗೂಂಡಾಗಿರಿಯನ್ನು ಕ್ರಿಯೆಗೆ ಪ್ರತಿಕ್ರಿಯೆ ಎಂದು ಸಮರ್ಥಿಸಿಕೊಂಡಿರುವ ಸಿಎಂ ಬಸವರಾಜ ಬೊಮ್ಮಾಯಿ ಅವರ ಕರೆಗೆ ಓಗೋಟ್ಟು ಪೊಲೀಸರು ನೆಲದ ಕಾನೂನನ್ನು ಠಾಣೆಯೊಳಗೆ ಕೂಡಿ ಹಾಕಿ ಕಾಡಿನ ಕಾನೂನು ಜಾರಿಗೆ ತರಲು ಬೀದಿಗೆ ಇಳಿದಂತಿದೆ ಎಂದು ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ. ಸರಣಿ ಟ್ವೀಟ್ ಮಾಡುವ ಮೂಲಕ ಬಸವರಾಜ ಬೊಮ್ಮಾಯಿ ಅವರಿಗೆ ಟಾಂಗ್ ಕೊಟ್ಟಿದ್ದಾರೆ.
ಅಂತೂ ಕ್ರಮ ಗ್ಯಾರೆಂಟಿ
ಶಿಸ್ತಿಗೆ ಹೆಸರಾಗಿರುವ ಪೊಲೀಸ್ ಠಾಣೆಗಳಲ್ಲಿ ಆಯುಧ ಪೂಜೆ ಮಾಡುವ ಸಂಪ್ರದಾಯ ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ರಾಜ್ಯದ ಬಹುತೇಕ ಠಾಣೆಗಳಲ್ಲಿ ಆಯುಧ ಪೂಜೆ ಮಾಡಿ ಸಿಬ್ಬಂದಿಗೆ ಸಿಹಿ ಹಂಚಿದ್ದಾರೆ. ಹಾಗೆಂದ ಮಾತ್ರಕ್ಕೆ ಎಲ್ಲಾ ಪೊಲೀಸ್ ಠಾಣೆಗಳು ಒಂದು ಧರ್ಮದ ಪರವಾಗಿ ಕೆಲಸ ಮಾಡಲು ಸಾಧ್ಯವೇ? ಆದರೆ ಕೆಲ ಸಂಘಟನೆಗಳಿಗೆ ಸೇರಿದ ಬಟ್ಟೆ ಧರಿಸಿ ದಸರಾ ಆಚರಣೆ ಮಾಡಿದ ಎರಡು ಪೊಲೀಸ್ ಠಾಣೆಗಳು ಮಾತ್ರ ವಿವಾದ ಎಬ್ಬಿಸಿದ್ದು, ಗೃಹ ಇಲಾಖೆಯ ಶಿಸ್ತುಕ್ರಮದೊಂದಿಗೆ ಈ ವಿವಾದ ಅಂತ್ಯವಾಗುವ ಲಕ್ಷಣ ಗೋಚರಿಸುತ್ತಿದೆ.