RCEP ಗೆ ಮುಂಚಿನ GATT ಎಂಬ ಪೆಡಂಭೂತ, GATT ನ ತಮ್ಮ RCEP
GATT ಒಪ್ಪಂದದ ಮುಖ್ಯ ಉದ್ದೇಶವೇ ಆ ದೇಶ ಈ ದೇಶ ಎಂದು ಯಾವ ದೇಶವನ್ನೂ ತಾರತಮ್ಯದಿಂದ ನೋಡದೇ ಎಲ್ಲ ದೇಶಗಳಿಗೂ ಜಗತ್ತಿನಾದ್ಯಂತ ಮುಕ್ತ ಮಾರುಕಟ್ಟೆ ಒದಗಿಸುವುದು. ಆ ಮೂಲಕ ಅಂತಾರಾಷ್ಟ್ರೀಯ ವ್ಯಾಪಾರವನ್ನು ಹೆಚ್ಚಿಸುವುದು. ಈ 'ದಿವ್ಯ' ಉದ್ದೇಶದ ಹಿಂದೆ ಅಡಗಿರುವುದು ಅಮೆರಿಕಾ ಮತ್ತು ಐರೋಪ್ಯ ಬಂಡವಾಳಶಾಹಿಗಳ ವಾಣಿಜ್ಯ ಸಾಮ್ರಾಜ್ಯದ ವಸಾಹತೀಕರಣವೇ ಹೊರತು ಬೇರೆ ಏನೇನೂ ಅಲ್ಲ.
GATT ಅಡಿಯಲ್ಲಿ ಮುಖ್ಯವಾಗಿ ಮೂರು ಒಪ್ಪಂದಗಳು ಇದ್ದವು: TRIMS, TRIPS ಮತ್ತು GATS. Trade-Related Investment Measures (TRIMS) ನಿಂದ ನಮಗೇನಾಯಿತು?
ರಾಜ್ಯದಲ್ಲಿ ರೈತ ಆತ್ಮಹತ್ಯೆ ಪ್ರಮಾಣ ಕಡಿಮೆ: ಕೃಷಿ ಇಲಾಖೆ ವರದಿ
ಭಾರತವೂ ಸೇರಿದಂತೆ 1984 ರಲ್ಲಿ GATTಗೆ ಸಹಿ ಹಾಕಿದ 164 ದೇಶಗಳು ರಫ್ತುಮಾಡುವ ದೇಶಗಳ ಉತ್ಪನ್ನಗಳನ್ನು ತಮ್ಮ ದೇಶದ ಉತ್ಪನ್ನಗಳಂತೆಯೇ ನೋಡಬೇಕೆನ್ನುವ ಕರಾರಿದೆ.
ಉದಾಹರಣೆಗೆ ನಮ್ಮಲ್ಲಿನ ಅಕ್ಕಿಯೋ, ಗೋಧಿಯೋ, ಔಷಧವನ್ನೋ ಅಥವಾ ಇನ್ನಾವುದೇ ಸರಕನ್ನು ಯಾವ ರೀತಿಯಲ್ಲಿ ನಮ್ಮ ಮಾರುಕಟ್ಟೆಗೆ ಬಿಡುತ್ತೇವೋ ಅದೇ ರೀತಿ ಬೇರೇ ದೇಶಗಳ ಸರಕನ್ನೂ ಸಹ ಮುಕ್ತವಾಗಿ ನಮ್ಮ ಮಾರುಕಟ್ಟೆಗೆ ಬಿಡಬೇಕು ಎನ್ನುವುದು. ಹಾಗಾದಾಗ, ನಮ್ಮ ದೇಶದಲ್ಲಿ ಉತ್ಪಾದಿಸಿದ ಸರಕಿಗೂ, ಆಮದು ಮಾಡಿಕೊಂಡ ಸರಕಿಗೂ ಒಂದೇ ಬೆಲೆ ಇರಬೇಕಾಗುತ್ತದೆ. ಒಂದೇ ಬೆಲೆ ಇರಬೇಕೆಂದರೆ ಒಂದೇ ತೆರಿಗೆಯೂ ಇರಬೇಕಾಗುತ್ತದೆ. ಅಂದರೆ, ಆಮದು ಮಾಡಿಕೊಳ್ಳುವ ಸರಕುಗಳಿಗೆ ದೇಶ ಹೆಚ್ಚಿನ ತೆರಿಗೆ ವಿಧಿಸುವಂತಿಲ್ಲ.
ನಮ್ಮ ಉತ್ಪನ್ನಗಳಿಗೆ ಮಾರುಕಟ್ಟೆ ಕುಸಿಯುವುದಿಲ್ಲವೇ?
ಇದು ಅನ್ಯಾಯವಲ್ಲವೇ? ನಮ್ಮ ಉತ್ಪನ್ನಗಳಿಗೆ ಮಾರುಕಟ್ಟೆ ಕುಸಿಯುವುದಿಲ್ಲವೇ? ಎನ್ನುವ ಸಹಜ ಪ್ರಶ್ನೆ ಏಳುತ್ತದೆ. ಆದರೆ ಈ ಕರಾರಿಗೆ WTO ಕೊಡುವ ಸಮರ್ಥನೆ - ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಗ್ರಾಹಕನಿಗೆ ಅಂತಾರಾಷ್ಟ್ರೀಯ ಗುಣಮಟ್ಟದ ಸರಕುಗಳು ದೊರೆಯಬೇಕೆಂದರೆ ಅದಕ್ಕೆ ಆ ದೇಶ ಅಂತಹ ಸರಕುಗಳಿಗೆ ಬಾಗಿಲು ಹಾಕಿ ಅಥವಾ ಹೆಚ್ಚಿನ ತೆರಿಗೆ ವಿಧಿಸಿ ಅಮದನ್ನು ನಿಯಂತ್ರಿಸುವಂತಿಲ್ಲ ಎನ್ನುವುದು. ಹೀಗೆ ಮಾಡಿದಾಗ ಗ್ರಾಹಕ 'ಉತ್ತಮ' ಸರಕುಗಳಿಂದ ವಂಚಿತನಾಗುತ್ತಾನೆ, ಅದು ದೇಶದ ಅಭಿವೃದ್ಧಿಯ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎನ್ನುವುದು. ಈಗ ಕೆಲವರಿಗೆ ಹೌದಲ್ಲವೇ ಎನಿಸಬಹುದು. ಇಲ್ಲಿಯೇ ನಾವು GATT ನ ಕುತಂತ್ರವನ್ನು ಅರ್ಥಮಾಡಿಕೊಳ್ಳಬೇಕು.
ಚಿತ್ರದಲ್ಲಿ: ಕೇಸರಿ ಹರವೂ.
ಕೃಷಿಕ ಕಾರ್ಮಿಕನಲ್ಲ, ಕಾರ್ಮಿಕ ಸೇವಾಕ್ಷೇತ್ರದವನಲ್ಲ
ಈ ತರ್ಕ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಸರಿಯೆನಿಸಬಹುದು. ಅಲ್ಲಿ ಉತ್ಪಾದನಾ ವರ್ಗಗಳು ತೀವ್ರವಾಗಿ ವಿಭಜನೆಗೊಂಡಿವೆ. ಕೃಷಿಕ ಕಾರ್ಮಿಕನಲ್ಲ, ಕಾರ್ಮಿಕ ಸೇವಾಕ್ಷೇತ್ರದವನಲ್ಲ, ಸೇವಾಕ್ಷೇತ್ರದವ ಇನ್ನೊಂದು ಅಲ್ಲ. ಒಂದು ಉದ್ಯೋಗದವನಿಗೂ ಮತ್ತೊಂದು ಉದ್ಯೋಗದವನಿಗೂ ಹೆಚ್ಚುಕಡಿಮೆ ನೇರಾನೇರ ಸಂಬಂಧವಿಲ್ಲ. ಹಾಗಾಗಿ ಅಲ್ಲಿ ಒಂದು ಕ್ಷೇತ್ರದವ ಮತ್ತೊಂದು ಕ್ಷೇತ್ರದ ಗ್ರಾಹಕನಾಗುತ್ತಾನೆ. ನಮ್ಮ ದೇಶದಲ್ಲಿಯೂ ಇಂದು ಹೀಗೇ ಇದೆ ಅನಿಸಬಹುದು. ಆದರೆ, ನಮ್ಮದು ಮುಖ್ಯವಾಗಿ ಕೃಷಿ ಪ್ರಧಾನ ದೇಶ. 1984ರಲ್ಲಿ ನಾವು ಗ್ಯಾಟ್ ಒಪ್ಪಂದಕ್ಕೆ ಸಹಿ ಹಾಕುವ ಕಾಲದಲ್ಲಿ ನಮ್ಮ 60% ಗೂ ಹೆಚ್ಚು ಜನ ಕೃಷಿ ಮತ್ತು ಕೃಷಿ ಸಂಬಂಧೀ ಉದ್ಯೋಗಗಳ ಮೇಲೆ ಅವಲಂಬಿತರಾಗಿದ್ದರು. ಇಂದಿಗೂ ಪರಿಸ್ಥಿತಿ ಬಹುತೇಕ ಹಾಗೇ ಇದೆ. ಈ ಹಿನ್ನೆಲೆಯಲ್ಲಿ ಉತ್ಪಾದಕನೂ ಅವನೇ, ಗ್ರಾಹಕನೂ ಅವನೇ. ಆಗ TRIMS ನ ಕರಾರುಗಳು ನಮ್ಮ ಜನತೆಗೆ ಹೊರೆಯಾಗುವುದಿಲ್ಲವೇ?
TRIMS ಗೆ ಅಂದು ಸಹಿ ಮಾಡಿದ್ದರಿಂದ ಏನಾಯ್ತು?
ಒಂದು ಉದಾಹರಣೆ. ನಾವು TRIMS ಗೆ ಅಂದು ಸಹಿ ಮಾಡಿದ್ದರಿಂದ ಕೇವಲ 15% ಇದ್ದ ಎಣ್ಣೆ ಆಮದಿನ ಪ್ರಮಾಣ ಇಂದು 70% ದಾಟಿದೆ. ನಮ್ಮ ಎಣ್ಣೆ ತೆಗೆಯುವ ಉದ್ಯಮ ಸಂಪೂರ್ಣ ನೆಲಕಚ್ಚಿದೆ. ಹೀಗೆ ಅನೇಕ ಕೃಷಿಯಾಧಾರಿತ ಕ್ಷೇತ್ರಗಳಲ್ಲಿಯೂ ಇದೇ ರೀತಿಯಾಗಿದೆ. ಆದರೂ ನಮ್ಮ ರೈತರು, ಉದ್ಯಮಿಗಳು ಆ ಪೈಪೋಟಿಯನ್ನು ಎದುರಿಸಿ, ಸ್ಪರ್ಧಾತ್ಮಕ ಜಗತ್ತಿನಲ್ಲಿ ಸೆಣೆಸಬೇಕೆಂದು ಬ್ಯಾಂಕುಗಳು ಸಾಲಕೊಟ್ಟವು. ಮತ್ತೊಂದು ಕಡೆ GATT ಒಪ್ಪಂದದಂತೆ ಆಮದು ಸುಂಕವನ್ನು ವರ್ಷವರ್ಷವೂ ಇಳಿಸುತ್ತಾ ಹೋದವು. ಹೀಗೆ ಒಂದು ಕಣ್ಣಿಗೆ ಬೆಣ್ಣೆ ತೀಡಿ, ಮತ್ತೊಂದು ಕಣ್ಣಿಗೆ ಸುಣ್ಣ ತೀಡುವ ಕೆಲಸವನ್ನು ನಮ್ಮ ಸರ್ಕಾರಗಳೇ ಮಾಡಿದವು. ಇಂಥಾ ವಾತಾವರಣದಲ್ಲಿ ನಮ್ಮಲ್ಲಿ ಸ್ಪರ್ಧಾ ಕೌಶಲ ಹೇಗೆ ಬೆಳೆಯುತ್ತದೆ? ರೈತ ಆತ್ಮಹತ್ಯೆ ಮಾಡಿಕೊಳ್ಳದೇ ಇನ್ನೇನು ತಾನೇ ಮಾಡುತ್ತಾನೆ? ನಮ್ಮ ಅತಿಸಣ್ಣ ಮತ್ತು ಸಣ್ಣ ಕೈಗಾರಿಕೆಗಳ ಪರಿಸ್ಥಿತಿಯನ್ನು ಒಮ್ಮೆ ಕಣ್ಣಾಡಿಸಿ ಬನ್ನಿ. ಇತ್ತೀಚೆಗೆ ಉದ್ಯಮಿಗಳ ಆತ್ಮಹತ್ಯೆಗಳೂ ಶುರುವಾಗಿವೆ. ನಿನ್ನೆ ದೇವನೂರರು ಹೇಳಿದಂತೆ ರೈತ ಮಹಿಳೆಯರ ಆತ್ಮಹತ್ಯೆಗಳೂ ದೂರವಿಲ್ಲ ಎನಿಸುತ್ತದೆ.
ಆಮದು ಮೇಲಿನ ಸುಂಕ ಇಳಿಸುವ ಪ್ರಕ್ರಿಯೆ
ಈ ಆಮದು ಮೇಲಿನ ಸುಂಕ ಇಳಿಸುವ ಪ್ರಕ್ರಿಯೆ ಮತ್ತೊಂದು ದೊಡ್ಡ ವಿಪರ್ಯಾಸಕ್ಕೆ ದಾರಿಮಾಡಿಕೊಟ್ಟಿದೆ. ನಮಗೆ ಬೇಡದ, ನಮ್ಮ ದೊಡ್ಡ ಮಾನವ ಸಂಪನ್ಮೂಲವನ್ನು ನಿರುದ್ಯೋಗಕ್ಕೆ ತಳ್ಳುವಂತಹ ಸಾವಿರಾರು ಸರಕು ಮತ್ತು ಸೇವೆಗಳು ನಮ್ಮ ಮಾರುಕಟ್ಟೆಗಳಿಗೆ ಬಂದು ಬಿದ್ದಿವೆ. ಜಾಹಿರಾತಿನ ಭರಾಟೆಯಲ್ಲಿ ನಾವು ಅವುಗಳ ದಾಸರಾಗಿದ್ದೇವೆ. ಜಾಗತೀಕರಣ ನಮ್ಮನ್ನು ಕೇವಲ ಗ್ರಾಹಕರನ್ನಾಗಿಯಷ್ಟೇ ಉಳಿಸದೇ ಕೊಳ್ಳುಬಾಕರನ್ನಾಗಿ ಮಾಡಿವೆ.
ಇಷ್ಟಾದರೂ ಅದನ್ನೇ ಉತ್ತೇಜಿಸುವಂತೆ ಈ ಆರ್ಥಿಕ ಹಿನ್ನಡೆಯ ದಿನಗಳಲ್ಲಿ ನಮ್ಮ ಸರ್ಕಾರ ತಳಮಟ್ಟದ ಉದ್ಯೋಗ ಸೃಷ್ಟಿಗೆ ಇಂಬು ಕೊಡುವ ಬದಲಾಗಿ ನಮ್ಮ ಬೃಹತ್ ಬಂಡವಾಳಕೋರರಿಗೇ ರಿಯಾಯ್ತಿಗಳನ್ನು ಕೊಡುತ್ತಿವೆ. ಮೊನ್ನೆ ಅದಾನಿ ಸಮೂಹಕ್ಕೆ 72000 ಕೋಟಿ ಸಾಲ ಮನ್ನಾ ಆದದ್ದು ತಿಳಿಯಿತಲ್ಲವೇ? ಈಗ GATT ನ ತಮ್ಮ Regional Comprehensive Economic Partnership(RCEP) ಬಂದು ಬಾಗಿಲು ಬಡಿಯುತ್ತಿದ್ದಾನೆ. ಅವನನ್ನು ಒಳಗೆ ಬಿಟ್ಟುಕೊಂಡಿದ್ದೇ ಆದರೆ ನಾವೆಲ್ಲ ಆಚೆ ನಡೆಯಬೇಕಾಗುತ್ತದೆ.
ಭಾರತ ಸಹಿ ಹಾಕುವುದನ್ನು ತಡೆಯಬೇಕು
ಇಂದು RCEP ಗೆ ಭಾರತ ಸಹಿ ಹಾಕುವುದನ್ನು ತಡೆಯಬೇಕೆಂದು ಎಲ್ಲೆಡೆ ಕೂಗು ಎದ್ದಿದೆ. RCEP ಗೂ ಮುಂಚೆ ನಮ್ಮಲ್ಲಿ ಆರ್ಥಿಕ ಜಾಗತೀಕರಣಕ್ಕೆ ನಾಂದಿ ಹಾಡಿದ್ದು GATT ಪ್ರಸ್ತಾವ ಮತ್ತು ಅತೀವ ಒತ್ತಡದ ಹಿನ್ನೆಲೆಯಲ್ಲಿ ಅದಕ್ಕೆ ನಮ್ಮ ದೇಶ ಸಹಿ ಹಾಕಿದ ಸಂದರ್ಭ. ಅದು ಇದರ ಸಹೋದರ, ಅಷ್ಟೇ. ಜಾಗತೀಕರಣದಿಂದಾಗಿ ನಾವು ಏನೆಲ್ಲಾ ಗಳಿಸಿದ್ದೇವೆ, ಕಳಕೊಂಡಿದ್ದೇವೆ ಎನ್ನುವುದು ನಮ್ಮ ಕಣ್ಣ ಮುಂದೆಯೇ ಇದೆ. ಚರಿತ್ರೆ ಮರುಕಳಿಸಬಾರದು ಎನ್ನುವುದಕ್ಕೆ ಆ ಸಂದರ್ಭವನ್ನು ಮತ್ತೆ ನೆನಪಿಸಲು ಇಲ್ಲಿ ಪ್ರಯತ್ನಿಸಿದ್ದೇನೆ.
GATT ಒಂದು ಅನೌಪಚಾರಿಕ ವೇದಿಕೆ
1947ರಲ್ಲಿ ಭಾರತಕ್ಕೆ ಸ್ವಾತಂತ್ಯ್ರವೇನೋ ಸಿಕ್ಕಿತು. ಸ್ವಾತಂತ್ರ್ಯ ನೀಡಲು ಬ್ರಿಟನ್ ಮನಸ್ಸು ಮಾಡಿದ್ದು ಕೂಡಾ ಎರಡನೇ ಮಹಾಯುದ್ಧದ ನಂತರ ಬ್ರಿಟನ್ ಸಹ ಸೇರಿದಂತೆ ಅನೇಕ ದೇಶಗಳಲ್ಲಿ ಉಂಟಾದ ಯುದ್ಧಾನಂತರದ ಆರ್ಥಿಕ ಮುಗ್ಗಟ್ಟಿನ ಕಾರಣದಿಂದಾಗಿಯೇ. ಆ ಹೊತ್ತಿಗೆ ಸಾಮ್ರಾಜ್ಯಶಾಹೀ ಯುಗ ಕೂಡಾ ಅಂತ್ಯ ಕಾಣುತ್ತಿತ್ತು. ಇದರಿಂದ ಯೂರೋಪ್ ಮತ್ತು ಅಮೆರಿಕಾದ ಬಂಡವಾಳಶಾಹಿಗಳು ಭಾರೀ ಹಿನ್ನಡೆಯನ್ನು ಅನುಭವಿಸುತ್ತಿದ್ದರು.
1948ರ ಹೊತ್ತಿಗೆ ಅವರು ಆಮದು ಮತ್ತು ರಫ್ತಿನ ಕುರಿತಂತೆ ಎಲ್ಲ ದೇಶಗಳನ್ನು ಒಂದು ಜಾಗತಿಕ ವೇದಿಕೆಯಡಿಯಲ್ಲಿ ತರಬೇಕೆಂದು ತಮ್ಮತಮ್ಮ ದೇಶಗಳಲ್ಲಿ ಒತ್ತಡ ಹೇರಲಾರಂಭಿಸಿದ್ದರು. ಆದರೆ ವಿವಿಧ ದೇಶಗಳ ಮುಖ್ಯಸ್ಥರು ವ್ಯಾಪಾರವೆಂಬುದು ದೇಶದೇಶಗಳ ನಡುವೆ ಇರಬೇಕಾದ ಪರಸ್ಪರ ಏರ್ಪಾಡು ಮತ್ತು ಸ್ವಾತಂತ್ರ್ಯ ಎನ್ನುವ ನೈತಿಕತೆಗೆ ಕಟ್ಟುಬಿದ್ದು ಬಂಡವಾಳಶಾಹಿಗಳ ಒತ್ತಡಕ್ಕೆ ಮಣಿಯಲಿಲ್ಲ.
ಬದಲಿಗೆ, ವ್ಯಾಪಾರದ ವಿಚಾರದಲ್ಲಿ ದೇಶಗಳ ನಡುವೆ ಉಂಟಾಗಬಹುದಾದ ವಿವಾದ, ವ್ಯಾಜ್ಯಗಳನ್ನು ಬಗೆಹರಿಸಲು General Treaty on Trade and Tariff (GATT) ಎನ್ನುವ ಒಂದು ಅನೌಪಚಾರಿಕ ವೇದಿಕೆಯನ್ನಷ್ಟೇ ಹುಟ್ಟಿಹಾಕಿದ್ದರು. ಈ ವೇದಿಕೆ 1948 ರಿಂದ 1986 ರ ವರೆಗೆ ಏಳು ಬಾರಿ ಅಂತಾರಾಷ್ಟ್ರೀಯ ಸಮಾವೇಶಗಳಲ್ಲಿ ಸೇರಿ ಇಂಥಾ ವಿವಾದ, ವ್ಯಾಜ್ಯಗಳನ್ನು ಬಗೆಹರಿಸುತ್ತ ಬಂದಿತ್ತು.
ಡಂಕೆಲ್ ಇಟ್ಟ ವ್ಯಾಪಾರ ಸಂಬಂಧೀ ಪ್ರಸ್ತಾಪ
ಇದರಿಂದಷ್ಟೇ ಸಂತುಷ್ಟಗೊಳ್ಳದ ಬಂಡವಾಳಶಾಹಿ ವಿಸ್ತರಣಾ ದಾಹ ತನ್ನ ಮೂಲ ಒತ್ತಡವನ್ನು ಮುಂದುವರೆಸಿಯೇ ಇತ್ತು. ಇದಕ್ಕೆ ಒತ್ತು ನೀಡುವಂತೆ ಡಂಕೆಲ್ ಎನ್ನುವವನು ಕೆಲವು ಪ್ರಸ್ತಾವಗಳನ್ನು ಮುಂದಿಟ್ಟ. ಅದನ್ನು ಚರ್ಚಿಸುವ ಸಲುವಾಗಿಯೇ ನಡೆದದ್ದು ಎಂಟನೇ ಸುತ್ತಿನ ಗ್ಯಾಟ್ ಮಾತುಕತೆ. ಅದು 1986ರಲ್ಲಿ ಉರುಗ್ವೇ ದೇಶದ ರಾಜಧಾನಿ ಪುಂಟಾ ಡೆಲ್ ಇಸ್ಟಾದಲ್ಲಿ ನಡೆಯಿತು.
ಅಲ್ಲಿ ಇಟ್ಟಂತಹ ವಿಷಯಗಳು - ವ್ಯಾಪಾರ ಸಂಬಂಧೀ ಪ್ರಸ್ತಾವಗಳು, ಬಂಡವಾಳ ಹೂಡುವಿಕೆ, ಬೌದ್ಧಿಕ ಆಸ್ತಿ ಹಕ್ಕಿನ ಒಪ್ಪಂದ, ಸೇವೆಗಳ ಕುರಿತಂತೆ ಒಂದು ಅಂತರಾಷ್ಟ್ರೀಯ ಒಪ್ಪಂದ, ಇತ್ಯಾದಿ. ಭಾರತವೂ ಸೇರಿದಂತೆ ಮೂರನೇ ವಿಶ್ವದ ದೇಶಗಳಿಗೆ ಈ ಪ್ರಸ್ತಾವಗಳು ಏನು, ಇವುಗಳಿಂದ ತಮಗೆ ಲಾಭವೇ, ನಷ್ಟವೇ ಎನ್ನುವ ಕಲ್ಪನೆಯೇ ಇರಲಿಲ್ಲ. ಭಾರತದ GATT ರಾಯಭಾರಿಯಾಗಿ ಆ ಸಭೆಗೆ ತೆರಳಬೇಕಿದ್ದ IAS ಅಧಿಕಾರಿ SP ಶುಕ್ಲಾ ಆವರಿಗೆ ಭಾರತದ ನಿಲುವು ಏನು ಎಂದು ನಮ್ಮ ಸರ್ಕಾರ ಬ್ರೀಫಿಂಗೇ ಮಾಡಲಿಲ್ಲ.
SP ಶುಕ್ಲಾ ತನ್ನ ಅನುಭವದ ಹಿನ್ನೆಲೆಯಲ್ಲಿ ವಾದವನ್ನು ಕಟ್ಟಿ, ಈ ಪ್ರಸ್ತಾವಗಳಿಂದ ಭಾರತ ಮತ್ತು ತೃತೀಯ ಜಗತ್ತಿಗೆ ಆಗುವ ನಷ್ಟವೇನು ಎಂದು ಸಮರ್ಥವಾಗಿ ವಾದ ಮಂಡಿಸಿದರು. ಆಗ ಇಡೀ ಮೂರನೇ ವಿಶ್ವದ 106 ದೇಶಗಳು ಭಾರತದ ಜೊತೆ ನಿಂತವು. 1986 ರಿಂದ 91 ರ ಅವಧಿಯಲ್ಲಿ ನಮ್ಮ ದೇಶ ತೀವ್ರ ಆರ್ಥಿಕ ಮುಗ್ಗಟ್ಟು, ಅಂತಾರಾಷ್ತ್ಱೀಯ ಸಾಲ ಮರುಪಾವತಿಯಲ್ಲಿ ಹಿನ್ನಡೆ ಅನುಭವಿಸುತ್ತಿದ್ದಾಗಲೂ ಕೂಡ ಡಂಕೆಲ್ ಪ್ರಸ್ತಾವಗಳ ವಿರುದ್ಧ ನಮ್ಮ ವಾದ ಗಟ್ಟಿಯಾಗಿಯೇ ಇತ್ತು.
ಭಾರತ ಮಣಿಯಲೇಬೇಕಾಯಿತು.
ಆದರೆ 91ರ ಚುನಾವಣೆಯ ನಂತರ ಪಿವಿ ನರಸಿಂಹರಾವ್ ನೇತೃತ್ವದಲ್ಲಿ ಅಲ್ಪ ಬಹುಮತದ ಸರ್ಕಾರ ರಚನೆ ಆಯಿತು. ಹೀಗಾಗಿ ಆರ್ಥಿಕವಾಗಿ ಯಾವುದೇ ಧೃಢ ನಿರ್ಧಾರಗಳನ್ನು ತೆಗೆದುಕೊಳ್ಳಲು ಪೂರ್ಣ ಸ್ವಾತಂತ್ರ್ಯ ಅದಕ್ಕಿರಲಿಲ್ಲ. ಇದೇ ಸಂಧಿಯಲ್ಲಿ ಅಂತರಾಷ್ಟ್ರೀಯ ಬಂಡವಾಳಶಾಹಿಗಳ ವಕ್ತಾರನಾಗಿ ಅಮೆರಿಕಾ SUPER 301, 307 ನಂತಹ ಆರ್ಥಿಕ ನಿರ್ಬಂಧಗಳನ್ನು ಭಾರತದ ಮೇಲೆ ಹೇರುತ್ತೇವೆ ಎಂದು ಒತ್ತಡ ಹಾಕಿತು. ಆಗ GATT ಒಪ್ಪಂದಕ್ಕೆ ಸಹಿ ಹಾಕುತ್ತೇವೆ ಎಂದು ಭಾರತ ಮಣಿಯಲೇಬೇಕಾಯಿತು.
ಈ ಕುರಿತಂತೆ ಮಾತುಕತೆಗೆ ಅಮೆರಿಕಾದ ಆಗಿನ ಡೆಪ್ಯೂಟಿ ವಾಣಿಜ್ಯ ಕಾರ್ಯದರ್ಶಿ ಕಾರ್ಲಾ ಹಲ್ಸನ್ ಬಂದರು. ಆಕೆ ದೆಹಲಿಯ ಪಾಲಮ್ ನಿಲ್ದಾಣದಲ್ಲಿ ಇಳಿಯುವ ಮೊದಲೇ SP ಶುಕ್ಲಾ ರನ್ನು ವರ್ಗಾಯಿಸಿ, ಆ ಜಾಗಕ್ಕೆ ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಆಗಿದ್ದ ತೇಜೀಂದರ್ ಖನ್ನಾರನ್ನು ಕೂರಿಸಿದರು.
ಆನಂತರದಲ್ಲಿ ಭಾರತ ಮತ್ತು ಇಡೀ ಮೂರನೇ ವಿಶ್ವದ ದನಿ GATT ಮಾತುಕತೆಗಳಲ್ಲಿ ಕ್ಷೀಣವಾಯಿತು. 1994ರ ಡಿಸೆಂಬರ್ 19 ರಂದು ಯಾವ ಪ್ರತಿರೋಧವೂ ಇಲ್ಲದೇ ಅಂತರಾಷ್ಟ್ರೀಯಯ ಬಂಡವಾಳಿಗರ ಹುನ್ನಾರಕ್ಕೆ ಇಡೀ ವಿಶ್ವ ಸಹಿ ಹಾಕಿತು. 1995ರ ಜನವರಿ 1 ರಿಂದ ಗ್ಯಾಟ್ IMF (International Monetary Fund) ಸಾಂಸ್ಥಿಕವಾಗಿ ಬದಲಾಯಿತು. IMF ನ ಕೆಲಸವೇ GATT ಒಪ್ಪಂದವನ್ನು ಅನೂಚಾನವಾಗಿ ಅನುಷ್ಠಾನಕ್ಕೆ ತರುವುದು.
ಚಿತ್ರದಲ್ಲಿ: ಪಿ.ವಿ ನರಸಿಂಹ ರಾವ್
GATT ಸಭೆಯ ಸಾಧಕ ಬಾಧಕಗಳ ಬಗ್ಗೆ ವಿಚಾರ ಸಂಕಿರಣ
1997ರಲ್ಲಿ ದೇಶದಲ್ಲಿ ಮೊಟ್ಟಮೊದಲಿಗೆ ರೈತ ಆತ್ಮಹತ್ಯೆ ದಾಖಲಾಯಿತು. ಅದು ನಡೆದದ್ದು ಹಸಿರು ಕ್ರಾಂತಿಯಿಂದಾಗಿ ಕೃಷಿಯ ಅಭಿವೃದ್ಧಿಗೆ ಇದೇ ಬಹುದೊಡ್ಡ ಮಾದರಿ ಎಂದು ಭಾರತ ಸರ್ಕಾರ ವಿಶ್ವದ ಮುಂದೆ ಹೇಳಿಕೊಳ್ಳುವ ಪಂಜಾಬಿನಲ್ಲಿ. ಅಲ್ಲಿಯವರೆಗೆ ಕೃಷಿ ಕಾರಣಗಳಿಗಾಗಿ ರೈತ ಆತ್ಮಹತ್ಯೆ ಆದದ್ದಿಲ್ಲ.
ಪ್ರೊ. ನಂಜುಂಡಸ್ವಾಮಿಯವರ ಮುಂದಾಳತ್ವದಲ್ಲಿ ನಮ್ಮ ರಾಜ್ಯದ ರೈತಸಂಘ 1987ರಲ್ಲೇ ಬೆಂಗಳೂರಿನ ಯವನಿಕಾ ಹಾಲಿನಲ್ಲಿ ರಾಷ್ಟ್ರೀಯ ಸಮಾವೇಶವನ್ನು ನಡೆಸಿ 8ನೇ GATT ಸಭೆಯ ಸಾಧಕ ಬಾಧಕಗಳ ಬಗ್ಗೆ ವಿಚಾರ ಸಂಕಿರಣ ನಡೆಸಿತು. ಮುಂದುವರೆದಂತೆ, ರೈತಸಂಘ 87 ರಿಂದ 94 ರವರೆಗೆ ನಿರಂತರ ಹೋರಾಟ ಮಾಡಿತು.
ಮಹೇಂದ್ರ ಸಿಂಗ್ ಟಿಕಾಯತ್ ರ ಕಿಸಾನ್ ಸಭಾ ಸಹಯೋಗದಲ್ಲಿ ದೆಹಲಿಯಲ್ಲಿ, ವಂದನಾ ಶಿವಾ, ಟಿಕಾಯತ್, ಮೇಧಾ ಪಾಟ್ಕರ್ ಜೊತೆಗೂಡಿ ಬೆಂಗಳೂರಲ್ಲಿ ಬೀಜ ಸತ್ಯಾಗ್ರಹ, ಅಂತಾರಾಹ್ಸ್ಟ್ರೀಯ ಸಮಾವೇಶ ಹಮ್ಮಿಕೊಳ್ಳಲಾಯಿತು. ಹಾಗೆಯೇ ಬಹುರಾಷ್ಟ್ರೀಯ ಬೀಜ ಕಂಪೆನಿಗಳಾದ ಕಾರ್ಗಿಲ್ ಮತ್ತು ಮಾನ್ಸೆಂಟೋಗಳ ಪ್ರಾಯೋಗಿಕ ಬೆಳೆಗಳಿಗೆ ಬೆಂಕಿ ಹಚ್ಚಲಾಯಿತು. ಬ್ರಿಗೇಡ್ ರಸ್ತೆಯ ಕೆಂಟಕಿ ಫ್ರೈಡ್ ಚಿಕನ್ (KFC) ಮಳಿಗೆಯನ್ನು ಧ್ವಂಸಮಾಡಲಾಯಿತು. ಕಡೇಪಕ್ಷ ಕೃಷಿ ಕ್ಷೇತ್ರವನ್ನು GATT ನಿಂದ ಹೊರಗಿಡಿ, ಭಾರತದ ಕೃಷಿಯನ್ನೂ, ರೈತರನ್ನು ಉಳಿಸಿ ಎಂದು ಒತ್ತಡ ಹಾಕಲಾಯಿತು.
ಇಂದು ಮೋದಿ ಸರ್ಕಾರ RCEP ಗೆ ಸಹಿ ಹಾಕಲು ತುದಿಗಾಲಲ್ಲಿ ನಿಂತತಿದೆ. ಅದಕ್ಕೆ ಭಾರತ ಸಹಿ ಹಾಕುವುದನ್ನು ತಡೆಯಬೇಕೆಂದರೆ ಇಂತಹ ಹೋರಾಟಗಳು ಫೇಸ್ಬುಕ್ಕಿನಿಂದ ಆಚೆಗೂ ಬೆಳೆದು ರಸ್ತೆಗಳಲ್ಲಿ, ಹಳ್ಳಿಹಳ್ಳಿಗಳಲ್ಲಿ ನಡೆಯಬೇಕು.
ಚಿತ್ರದಲ್ಲಿ: ಪ್ರೊ. ನಂಜುಂಡಸ್ವಾಮಿ