ಪಾಪಿಗಳ ಲೋಕದಲ್ಲಿ: ಮುತ್ತಪ್ಪ ರೈ ಯಾರು?
ಪತ್ರಕರ್ತ, ಕತೆಗಾರ ರವಿ ಬೆಳಗೆರೆ ಅವರ 'ಪಾಪಿಗಳ ಲೋಕ' ಪುಸ್ತಕದ ಆಯ್ದ ಭಾಗವನ್ನು ಲೇಖಕರ ಒಪ್ಪಿಗೆಯ ಮೇರೆಗೆ ಪ್ರಕಟಿಸಲಾಗಿದೆ- ಸಂಪಾದಕ
Recommended Video
''ಸದ್ಯಕ್ಕೆ ನಾನು ರಿಟೈರಾಗುವುದಿಲ್ಲ ರವಿಯವರೇ', ಇನ್ನೊಂದಿಷ್ಟು ವರ್ಷ ರಿಟೈರಾಗಬಾರದು ಅಂತ ನಿರ್ಧರಿಸಿದ್ದೇನೆ . . . " ಅಂದವನೇ ಆತ ಪ್ರತಿಕ್ರಿಯೆಗಾಗಿ ಎಂಬಂತೆ ನನ್ನ ಕಣ್ಣುಗಳನ್ನೇ ನೋಡಿದ. ನಾನೂ ವ್ಯವಧಾನದಿಂದ ದಿಟ್ಟಿಸಿದ. ಮುತ್ತಪ್ಪ ರೈ ನನಗೆ ಅಪರಿಚಿತನೇನಲ್ಲ. ಮೊದಲ ಬಾರಿಗೆ ಮಾತನಾಡಿದಾಗ ಆತ ಮಡಿಕೇರಿಯಲ್ಲಿ, ಎರಡನೇ ಸಲ ಮಾತನಾಡುವ ಹೊತ್ತಿಗೆ ದುಬೈನಲ್ಲಿ ದಾಖಲಾಗಿದ್ದ. ಆವತ್ತಿಗೂ ಇವತ್ತಿಗೂ ಆರೂವರೆ ವರ್ಷಗಳ ಫಾಸಲೆ, ಮುತ್ತಪ್ಪ ರೈ ಬದಲಾಗಿದ್ದಾನಾ?
ದುಬೈ ನಲ್ಲಿ ಮುತ್ತಪ್ಪ ರೈ ಹೆಸರೇನು?
ಪುತ್ತೂರಿನಲ್ಲಿ, ಮಂಗಳೂರಿನಲ್ಲಿ, ಬೆಂಗಳೂರಿನಲ್ಲಿ, ಮಡಿಕೇರಿಯಲ್ಲಿ -ಆತ ಜನಕ್ಕೆ ಪರಿಚಿತನಾಗಿರುವುದು ಮುತ್ತಪ್ಪ ರೈ ಎಂಬ ಹೆಸರಿನಲ್ಲಿ, ಪೊಲೀಸರು ಹುಡುಕುತ್ತಿರುವುದೂ ಅದೇ ಹೆಸರಿನ ವ್ಯಕ್ತಿಯನ್ನ. ಆದರೆ ದುಬೈ , ಆತನನ್ನು ಗುರುತಿಸುವುದು ಎನ್. ಎಂ.ರೈ ಅಂತ, ಇಲ್ಲಿ ಆತಾಪ ಸಾಫ್ಟ್ವೇರ್ ಕಂಪೆನಿಯೊಂದರ ಮಾಲಿಕ. ಸ್ಥಳೀಯ ಅರಬ್ಬಿಯೊಬ್ಬನೊಂದಿಗೆ ಪಾಲುದಾರಿಕೆಯ ವ್ಯಾಪಾರ ತೋರಿಸಿ, ಅಧಿಕೃತ ಲೈಸನ್ಸು ಪಡೆದು ಕಂಪ್ಯೂಟರ್ ಸಂಸ್ಥೆಯೊಂದನ್ನು ನಡೆಸುತ್ತಿರುವ ಭಾರತೀಯ ಬ್ಯುಸಿನೆಸ್ ಮ್ಯಾನ್.
ಎಷ್ಟು ದಿನ ಬದುಕಿರುತ್ತೀನೋ ಗೊತ್ತಿಲ್ಲ: ಮುತ್ತಪ್ಪ ರೈ
ರೈ ಆಕೃತಿ ರೂಪುಗೊಳ್ಳುವುದು ಇವೆಲ್ಲವುದರಿಂದ
ಒಂದು ಬಂಗಲೆ, ನಾಲ್ಕು ಕಾರು, ಎರಡು ಕಚೇರಿ, ಎರಡು ನೈಟ್ ಕ್ಲಬ್, ಅರ್ಧ ಡಜನು ಟೆಲಿಫೋನುಗಳು, ಪುಟ್ಟ ಕನ್ನಡಕ, ಅಮೆರಿಕದಲ್ಲೊಬ್ಬ ಮಗ, ಮನೆಯಲ್ಲಿ ಪತ್ನಿ, ಇನ್ನೊಬ್ಬ ಮಗ, ಕುದುರೆ ರೇಸಿನಲ್ಲಿ ಭಯಂಕರ ಆಸಕ್ತಿ ಮತ್ತು ಮರ್ಡರಸ್ ಜಾಯಮಾನ ! ಇವಿಷ್ಟೂ ಸೇರಿದರೆ ಮುತ್ತಪ್ಪ ರೈ ಎಂಬ ಒಂದು ಆಕೃತಿ ರೂಪುಗೊಳ್ಳುತ್ತದೆ
'ದುಬೈ ಗೆ ಹಾರಿದ ಭೂಗತ ದೊರೆಗಳಲ್ಲಿ ರೈ ಮೊದಲಿಗನಲ್ಲ'
ಭಾರತದಲ್ಲಿ ಪಾತಕಗಳನ್ನೆಸಗಿ ದುಬೈಗೆ ಬಂದು ಕುಳಿತ ಭೂಗತ ದೊರೆಗಳ ಪೈಕಿ ಮುತ್ತಪ್ಪ ರೈ ಮೊದಲಿಗನೇನಲ್ಲ. ಕೊನೆಯವನಾಗುವ ಸಾಧ್ಯತೆಗಳಿಲ್ಲ. ಆತ ದುಬೈಗೆ ಬಂದು ಕುಳಿತು ನಾಲ್ಕು ವರ್ಷಗಳ ಮೇಲಾಯಿತು. ಇಲ್ಲಿಂದಲೇ ಇಷಾರೆ ಮಾಡಿ ಕೊಂದಿರುವುದನ್ನು ಮಾತ್ರ ಲೆಕ್ಕ ಹಾಕಿದರೂ, ಹೆಣಗಳ ಸಂಖ್ಯೆ ನಾಲ್ಕು ದಾಟುತ್ತದೆ. ಬೆಂಗಳೂರಿನ ಅಗೋಚರ ಕತ್ತಲ ಜಗತ್ತನ್ನು ಅನೇಕರು ಆಳಿದ್ದಾರೆ. ಘಟಾನುಘಟಿಗಳೇ ಆಗಿ ಹೋಗಿದ್ದಾರೆ. ಆದರೆ ಹೀಗೆ ಸಾವಿರಾರು ಮೈಲಿ ದೂರ ಕುಳಿತು ಬೆರಳ ಇಷಾರೆಯಲ್ಲೇ ಬೆಂಗಳೂರಿನ ಭೂಗತದ ಆಗುಹೋಗುಗಳನ್ನು ನಿರ್ದೇಶಿಸಿದ ಮೊಟ್ಟ ಮೊದಲ ವ್ಯಕ್ತಿಯೆಂದರೆ - ರೈ!
'ಕೊಲೆ ಮಾಡಿದ ಎರಡು ತಾಸಿನಲ್ಲಿ ಸ್ವಿಮ್ಮಿಂಗ್ ಫೂಲ್ನಲ್ಲಿದ್ದೆ'
"ನೀವೂ ಅಂಡರ್ವರ್ಲ್ಡ್ ಬಗ್ಗೆ ತುಂಬ ಬರೆದಿದೀರಿ. ಆದರೆ ಒಂದು ವಿಷಯ ಬಹುಶಃ ನಿಮಗೂ ಗೊತ್ತಿಲ್ಲ. ಬೆಂಗಳೂರಿನಿಂದ ದುಬೈಗೆ ಬಂದು ಕುಳಿತು, ಇಲ್ಲಿಂದಲೇ ಆರ್ಡರು ಮಾಡಿ ಕೊಲೆ ಮಾಡಿಸಿದವರಲ್ಲಿ ನಾನೇ ಮೊದಲಿಗನೇನಲ್ಲ! ಬೆಂಗಳೂರಿನ ಬೂಟ್ ಹೌಸ್ ಕುಮಾರ ನನಗಿಂತ ಎಷ್ಟೋ ವರ್ಷ ಮುಂಚೆಯೇ ದುಬೈಗೆ ಬಂದು ಕುಳಿತಿದ್ದ. ಇಲ್ಲಿಂದಲೇ ಒಂದು ಭಯಾನಕ ಕೊಲೆ ಆಗಬೇಕೆಂದು ವಿನಂತಿಸಿದ್ದ. ಚಡಪಡಿಸಿದ್ದ. ತಾನು ಬಯಸಿದ್ದ ವ್ಯಕ್ತಿಯ ಕೊಲೆಯಾಗುತ್ತಿದ್ದಂತೆಯೇ, ದುಬೈನಲ್ಲಿ ಕುಳಿತೇ ಲಕ್ಷಾಂತರ ರುಪಾಯಿ ದುಡ್ಡು ಮಾಡಿಬಿಟ್ಟ! ಹಾಗೆ ಬೂಟ್ ಹೌಸ್ಕುಮಾರ್ ಅಲಿಯಾಸ್ ಆಯಿಲ್ ಕುಮಾರ್ ದುಬೈಯಲ್ಲಿ ಕುಳಿತು ಚಡಪಡಿಸುತ್ತಿದ್ದರೆ, ಬೆಂಗಳೂರಿನಲ್ಲಿ ಬಂದೂಕು ಹಿಡಿದುಕೊಂಡು ಓಡಾಡುತ್ತಿದ್ದವನು ನಾನು! ಬೂಟ್ಹೌಸ್ ಕುಮಾರ್ಗಾಗಿ ಒಂದು ಭಯಾನಕ ಹತ್ಯೆಯನ್ನು ಕೈಯ್ಯಾರೆ ಮಾಡಿದವನು ನಾನು. ಹಾಗೆ ನನ್ನ ಕೈಯಲ್ಲಿ twelvebore ಬಂದೂಕಿನ ಕಾಡತೂಸು ತಿಂದು ಭಯಾನಕವಾಗಿ ಸತ್ತವನು ಜಯರಾಜ್! ಕೊಲೆಯಾದ ಎರಡೇ ಎರಡು ತಾಸುಗಳ ನಂತರ, ಬೆಂಗಳೂರಿನ ವಿಂಡ್ಕರ್ ಮೇನರ್ ಹೊಟೇಲಿನ ಸ್ವಿಮ್ಮಿಂಗ್ ಪೂಲಿನಲ್ಲಿ ಈಜಿಗಿಳಿಯುವುದಕ್ಕೆ ಮುಂಚೆ. ಇದೇ ದುಬೈನಲ್ಲಿ ಕುಳಿತಿದ್ದ ಬೂಟ್ಹೌಸ್ ಕುಮಾರ್ನಿಗೆ ಫೋನು ಮಾಡಿ, 'ಜಯರಾಜ್ನನ್ನ ಮುಗಿಸಿ ಆಗಿದೆ ಕುಮಾರ್, ನಿಮಗೆ ಕೊಟ್ಟ ಮಾತು ಪೂರ್ತಿ ಮಾಡಿದ್ದೇನೆ' ಎಂದು ಹೇಳಿಯೇ ನೀರಿಗೆ ಜಿಗಿದಿದ್ದೆ. ಬೆಂಗಳೂರಿನ ಹತ್ಯೆಗಳಿಗೂ, ದುಬೈನ ಟೆಲಿಫೋನ್ಗಳಿಗೂ ಇರುವ ಸಂಬಂಧಗಳು ತೀರ ಹಳೆಯವು. ನಿಮಗೆ ಸುಮ್ಮನೆ ನೆನಪು ಮಾಡಿಕೊಟ್ಟೆ ಅಷ್ಟೆ !'' ಅಂದ. ಆಗಲೂ ರೈ ಮುಖದಲ್ಲಿ ನಗೆಯಿರಲಿಲ್ಲ.