ಖಾಸ್ ಬಾತ್ : ರವಿ ಬೆಳಗೆರೆ ಹಾಗೂ ಜ್ಯೋತಿಷ್ಯ ಎಂಬ ಮಹಾ ಸ್ವಪ್ನ
ಪತ್ರಕರ್ತ ರವಿ ಬೆಳಗೆರೆ ಅವರು ಸ್ವತಃ ಜ್ಯೋತಿಷ್ಯದಲ್ಲಿ ತಮಗೆ ನಂಬಿಕೆ ಇಲ್ಲ ಎಂದು ಹೇಳಿದ್ದಿದೆ. ಆದರೆ ಓ ಮನಸೇಗಾಗಿ ಅವರು 'ಮಹಾಸ್ವಪ್ನ' ಹೆಸರಿನಲ್ಲಿ ವಿವಿಧ ರಾಶಿಗಳ ಗುಣ- ಸ್ವಭಾವಗಳ ಬಗ್ಗೆ ಬರೆಯುತ್ತಿದ್ದರು ಎಂಬುದು ಎಷ್ಟೋ ಮಂದಿಗೆ ತಿಳಿಸಿಲ್ಲ. ಅವರ ಬರವಣಿಗೆ ಎಷ್ಟು ಆಸಕ್ತಿಕರವಾಗಿರುತ್ತಿತ್ತು ಅಂದರೆ, ಅದನ್ನು ಓದಲೇಬೇಕು ಅಂತ ಜನರು ಓ ಮನಸೇ ಖರೀದಿಸುತ್ತಿದ್ದರು.
ಆದರೆ, ಅದನ್ನು ಅವರು ಲಿಂಡಾ ಗುಡ್ ಮನ್ ಅವರ ಪುಸ್ತಕದಿಂದ ಅನುವಾದ ಮಾಡಿರುತ್ತಿದ್ದರು. ಆದರೆ ಅದು ಬರೀ ಅನುವಾದಗಳಾಗಿರುತ್ತಿರಲಿಲ್ಲ. ಅದಕ್ಕೆ ತಮ್ಮದೊಂದು ಸ್ಪೆಷಲ್ ಟಚ್ ನೀಡುತ್ತಿದ್ದರು. ರವಿ ಬೆಳಗೆರೆ ಅವರ ಮೇಲೆ ತೆಲುಗು ಸಾಹಿತ್ಯದ ಪ್ರಭಾವ ವಿಪರೀತ. ಆದ್ದರಿಂದಲೇ ಎಷ್ಟೋ ಸಲ ತೆಲುಗಿನ ಶಬ್ದಗಳನ್ನೇ ಬಳಸಿಬಿಡುತ್ತಿದ್ದರು. ಇನ್ನು ಅಲ್ಲಲ್ಲಿ ಇಂಗ್ಲಿಷ್ ಶಬ್ದಗಳನ್ನು ಬಳಕೆ ಮಾಡಿ, ಬರೆಯುವ ಶೈಲಿ ಕೂಡ ಅಲ್ಲಿನದೇ.
ಅಕ್ಷರ ಗಾರುಡಿಗ, ಖ್ಯಾತ ಪತ್ರಕರ್ತ ರವಿ ಬೆಳಗೆರೆ ನಿಧನ
ರವಿ ಬೆಳಗೆರೆ ಅವರ ಜನ್ಮ ನಾಮ ಜಿತೇಂದ್ರ. ಅವರದು ಉತ್ತರಾಷಾಢ ನಕ್ಷತ್ರ, ಮಕರ ರಾಶಿ. ಈ ಸಲ ಅವರಿಗೆ ಮೂರನೇ ಬಾರಿಗೆ ಸಾಡೇ ಸಾತ್ ಬಂದಿತ್ತು. ಷಷ್ಠಿಪೂರ್ತಿ ಶಾಂತಿ ಮಾಡಿಸಿಕೊಳ್ಳುವ ವೇಳೆ ಕೆಲವು ಶಾಂತಿ- ಪೂಜೆಗಳನ್ನು ಲಲಿತಾ ಬೆಳಗೆರೆ ಅವರು ಮಾಡಿಸಿದ್ದರು. ತಮ್ಮ ನಂಬಿಕೆಗಳು ಏನೇ ಇದ್ದರೂ ಮನೆಯಲ್ಲಿನ ಆಚರಣೆಗೆ ಪ್ರಶ್ನೆಯೇ ಮಾಡುತ್ತಿರಲಿಲ್ಲ ಆರ್ ಬಿ.
ಹುಬ್ಬಳ್ಳಿ ಮೂಲದ ಜ್ಯೋತಿಷಿಯೊಬ್ಬರಿಂದ ರವಿ ಬೆಳಗೆರೆ ಅಭಿಮಾನಿಯೇ ಒಬ್ಬರು ಜಾತಕ ಪರಿಶೀಲನೆ ಮಾಡಿಸಿ, ಅದರ ಆಡಿಯೋ ಕಳಿಸಿದ್ದರು. ಅದರಿಂದ ಬೆಳಗೆರೆ ಬಹಳ ಖುಷಿ ಪಟ್ಟಿದ್ದರು. ಅದೆಷ್ಟು ನಿಖರವಾಗಿದೆ ಹಾಗೂ ತಮ್ಮ ಜೀವನದ ಘಟನೆಗಳಿಗೆ ತಾಳೆಯಾಗುತ್ತದೆ ಎಂದು ಹೇಳಿಕೊಳ್ಳುತ್ತಿದ್ದರು. ಆ ಜ್ಯೋತಿಷಿಗಳ ಸಲಹೆ ಮೇರೆಗೆ ಗೋಕರ್ಣದಲ್ಲಿ ಪಿತೃ ಕಾರ್ಯಗಳನ್ನು ಮಾಡಿದ್ದರು.
ಪತ್ರಕರ್ತ- ಸಾಹಿತಿ ರವಿ ಬೆಳಗೆರೆ ನಿಧನ- 1958ರಿಂದ 2020ರ ಹಾದಿ
ಆದರೂ ಈ ಎಲ್ಲವೂ ಅವರ ಪಾಲಿಗೆ ಎಲ್ಲ ವಿದ್ಯೆಯಂತೆಯೇ ಒಂದು. ಅದನ್ನು ಸರಿಯಾಗಿ ಕಲಿತವರು ಹೆಚ್ಚು ನಿಖರವಾಗಿ ಹೇಳಬಲ್ಲರು ಎಂಬ ಭಾವನೆ ಇತ್ತೇ ಹೊರತು ಅದರ ಆಚೆಗೆ ದೈವತ್ವದಲ್ಲಿ ಯಾರನ್ನೂ ಕೂರಿಸುತ್ತಿರಲಿಲ್ಲ. ಕುಟುಂಬ ಸದಸ್ಯರ ಮೂಲದ ಪ್ರಕಾರ, ಈ ನವೆಂಬರ್ ತಿಂಗಳು ಕಳೆಯುವುದು ರವಿ ಬೆಳೆಗೆರೆಯವರ ಪಾಲಿಗೆ ಬಹಳ ಕಷ್ಟ ಇತ್ತು. ಈಗ ಹಾಗೇ ಆಗಿದೆ.