ಕೆಟ್ಟ ಸಿಟ್ಟು, ಅಸಾಧ್ಯ ಹಠಕ್ಕೆ ಎಷ್ಟೆಲ್ಲ ಬೆಲೆ ತೆತ್ತರು ಬೆಳಗೆರೆ?
ಹಾಯ್ ಬೆಂಗಳೂರ್ ಕವರ್ ಪೇಜ್ ಸಿದ್ಧವಾಗುತ್ತಿತ್ತು. ಅದಕ್ಕೆ ಫೋಟೋ ಬೇಕು. ಅದನ್ನು ನೋಡದ ಹೊರತು ಹೆಡ್ಡಿಂಗ್ ಕೊಡಲು ರವಿ ಬೆಳಗೆರೆ ಸಿದ್ಧರಿಲ್ಲ. ಆ ಕಡೆಯಿಂದ ವರದಿಗಾರ, ಸರ್ ಫೋಟೋ ಮೇಲ್ ಮಾಡಿದ್ದೀನಿ ಅಂತಿದ್ದಾನೆ. ಇತ್ತ ಆಫೀಸ್ ನಲ್ಲಿ ಇರೋನು, ಫೋಟೋ ಬಂದಿಲ್ಲ ಎನ್ನುತ್ತಿದ್ದಾನೆ.
ಇವರಿಗೆ ಎಲ್ಲಿತ್ತೋ ಸಿಟ್ಟು, ತಗೋ ಬೋಳಿಮಗನೇ ಅವನ ಜತೆ ಮಾತಾಡು. ನಿಮಗೆಲ್ಲ ನಾನೇ ವಿಚಾರಿಸಿ ಹೇಳಬೇಕಾ ಅಂದವರೇ ತಮ್ಮ ಕೈಯಲ್ಲಿದ್ದ ಐಫೋನ್ ಅನ್ನು ಎಂಟು- ಹತ್ತು ಅಡಿ ದೂರದಲ್ಲಿ ಇದ್ದ ಕಂಪ್ಯೂಟರ್ ಸೆಕ್ಷನ್ ನವನ ಕಡೆಗೆ ತೂರಿ ಎಸೆದರು ಬೆಳಗೆರೆ.
ಒಂದೇ ಸಲಕ್ಕೆ 3 ಲಕ್ಷ ಪಾಯಿಯಷ್ಟು Apple ಪ್ರಾಡಕ್ಟ್ ಖರೀದಿಸಿದ್ದ RB
ಅದು ಐಫೋನ್ 3GS. ಆಗಿನ ಬೆಲ್ 45,000 ರುಪಾಯಿ. ನಾಲ್ಕೈದು ದಿನಗಳ ಹಿಂದಷ್ಟೇ ಖರೀದಿಸಿದ್ದ ಫೋನ್. ಅಯ್ಯೋ ಏನಾದೀತೋ ಎಂಬ ಆತಂಕ ನಮ್ಮದು. ಆದರೆ ಇವರ ಸಿಟ್ಟು ಕಡಿಮೆ ಆಗಿದ್ದರೆ ಕೇಳಿ.
ಇನ್ನೊಂದು ಸಲ, ತಮ್ಮ ಬಳಿ ಚಾಲಕನಿಗೆ ನೀಡಿದ್ದ ಸೂಚನೆ ಪಾಲಿಸಲಿಲ್ಲ ಎಂಬ ಕಾರಣಕ್ಕೆ ತಾರಾಮಾರಾ ಹೊಡೆದುಬಿಟ್ಟರು. ಅದ್ಯಾವ ಪರಿ ಅಂದರೆ, ಅವನ ಕೈಗೆ ಕಟ್ಟು ಹಾಕಿಸಿಕೊಂಡು ಬಂದು ನಿಂತ. "ಇವನಿಗೆ ಐದು ಸಾವಿರ ರುಪಾಯಿ ಕೊಟ್ಟು ಕಳಿಸು, ರೆಸ್ಟ್ ತಗೊಳ್ಳಲಿ. ಹೀಗೆ ಸಿಟ್ಟು ಮಾಡಿಕೊಂಡು ಇವನಿಗೆ ಹೊಡೆಯುವುದರಿಂದ ನನಗೇ ನಷ್ಟ," ಎಂದಿದ್ದರು.
ರವಿ ಬೆಳಗೆರೆ ಅಷ್ಟು ದೊಡ್ಡ ಮಟ್ಟದಲ್ಲಿ ದುಡ್ಡು ಮಾಡಿದ್ದು ಹೇಗೆ?
ರವಿ ಬೆಳಗೆರೆ ತಮ್ಮ ಸಿಟ್ಟು, ಹಠದ ಕಾರಣಕ್ಕೆ ಕಳೆದುಕೊಂಡಿದ್ದು ಹೆಚ್ಚು. ಹೊರಗಿನಿಂದ ನೋಡಿ, ಅವರ ಪ್ರತಿಭೆಗೆ ಶರಣಾಗಿ ಹತ್ತಿರ ಹೋದರೆ ಗಾಬರಿ ಆಗಿಬಿಡುತ್ತಿತ್ತು. ಹಿಂದೆ- ಮುಂದೆ ನೋಡದೆ ರೇಗಿ ಬಿಡುತ್ತಿದ್ದರು. ದಿಢೀರನೇ, ಈಗಿಂದಲೇ ಕೆಲಸಕ್ಕೆ ಬರಬೇಡ ಅಂದುಬಿಡುತ್ತಿದ್ದರು.
ಇದಕ್ಕೆ ವ್ಯತಿರಿಕ್ತವಾಗಿ ವಿಪರೀತ ಹಚ್ಚಿಕೊಳ್ಳುತ್ತಿದ್ದರು. ಮನೆ ಅಡ್ವಾನ್ಸ್, ಎಷ್ಟೋ ಮಂದಿಗೆ ಮನೆ ಕಟ್ಟುವುದಕ್ಕೆ ಸಹ ಹಣ ಕೊಟ್ಟಿದ್ದರು. ಆದರೆ ಆ ವ್ಯಕ್ತಿಗಳು ನಿಷ್ಠೆ ಬದಲಿಸಿದರೋ ಅಂತಲೋ ಅಥವಾ ತಮಗೆ ಸಿಟ್ಟು ತರಿಸಿದರೋ ಅಂತಲೋ ಕೂಗಾಡುವುದೋ ಬೈಯ್ಯುವುದೋ ಮಾಡಿಬಿಡುತ್ತಿದ್ದರು. ಅಲ್ಲಿಯ ತನಕ ಮಾಡಿದ ಸಹಾಯವೆಲ್ಲ ಹೊಳೆಯೆಲ್ಲ ಹುಣಸೇಹಣ್ಣು ತೊಳೆದಂತೆ ಆಗುತ್ತಿತ್ತು.
ವೃತ್ತಿಯ ಕಾರಣಕ್ಕೆ ಹತ್ತಿರ ಇದ್ದ ಎಷ್ಟೋ ಗೆಳೆಯರನ್ನು ರವಿ ಬೆಳಗೆರೆ ದೂರ ಮಾಡಿಕೊಂಡು ಬಿಟ್ಟರು. ಕೆಲವರು ತಾವಾಗಿಯೇ ದೂರವಾದರು. ಮತ್ತೆ ಕೆಲವರು ಅಂತರ ಕಾಯ್ದುಕೊಂಡರು.
ಪತ್ರಕರ್ತ- ಸಾಹಿತಿ ರವಿ ಬೆಳಗೆರೆ ನಿಧನ- 1958ರಿಂದ 2020ರ ಹಾದಿ
ಅವರಿಗೆ ನ್ಯಾಯಯುತವಾಗಿ ಸಲ್ಲಬೇಕಾದ ಪ್ರಶಸ್ತಿ- ಗೌರವಗಳು ಮತ್ಯಾವಾಗಲೋ ಬಂದವು. ಇವರ ಜಿಲ್ಲೆಯವರೇ ಮಂತ್ರಿ ಆದರಲ್ಲಾ, ಸರ್ಕಾರದಲ್ಲಿ ಪವರ್ ಫುಲ್ ಬೇರೆ. ಇನ್ನೇನು ಋಣ ಸಂದಾಯ ಮಾಡಿದ್ದಾರೆ ಅಂತ ಮಾತನಾಡಿಕೊಳ್ಳುವಂತಾಯಿತು. ಆದರೆ ವಾಸ್ತವದಲ್ಲಿ ಆ ಎಲ್ಲ ಪ್ರಶಸ್ತಿ- ಗೌರವಗಳು ಬಹಳ ಹಿಂದೆಯೇ ಸಿಗಬೇಕಾಗಿತ್ತು.
ಆಯಕಟ್ಟಿನ ಹುದ್ದೆಯಲ್ಲಿ ಇರುವವರನ್ನು ಬೆಳಗೆರೆ ಸರಿಯಾಗಿಯೇ ತಿವಿದಿರುತ್ತಿದ್ದರು. ಅದು ಮುಖ್ಯಮಂತ್ರಿ ಇರಲಿ, ಮತ್ತೊಬ್ಬರಿರಲಿ. ತಡವಿಕೊಂಡು ಗೋಳು ಹೊಯ್ದುಕೊಂಡಿರುತ್ತಿದ್ದರು. ಈ ಎಲ್ಲದರಿಂದ ರವಿ ಬೆಳಗೆರೆ ಕಳೆದುಕೊಂಡಿದ್ದೇ ಹೆಚ್ಚು.
Recommended Video