ಉಡುಪಿಯಲ್ಲಿ 85 ಇಲಿಜ್ವರ ಪ್ರಕರಣ ದಾಖಲು; ಲಕ್ಷಣಗಳೇನು, ಹೇಗೆ ಹರಡುತ್ತೆ?
ಕರಾವಳಿಯಲ್ಲಿ ಮಳೆಯ ಅಬ್ಬರ ಕಡಿಮೆಯಾಗಿದೆ. ಮಳೆಯ ಅಬ್ಬರ ಕಡಿಮೆಯಾಗುತ್ತಿದ್ದಂತೇ ಹಲವು ಭಾಗಗಳಲ್ಲಿ ವೈರಲ್ ಫೀವರ್, ಡೆಂಗ್ಯೂ, ಮಲೇರಿಯಾ ಇನ್ನಿತರ ಜ್ವರ ಪ್ರಕರಣಗಳು ಕಾಣಿಸಿಕೊಂಡಿದೆ. ಮಂಕಿ ಪಾಕ್ಸ್ ಆತಂಕದ ಜೊತೆಗೆಯೂ ಉಡುಪಿಯಲ್ಲಿ ಇಲಿ ಜ್ವರದ ಪ್ರಕರಣ ಹೆಚ್ಚಾಗುತ್ತಿರುವುದು ಜಿಲ್ಲಾಡಳಿತದ ಆತಂಕಕ್ಕೆ ಕಾರಣವಾಗಿದೆ.
ಕೊರೊನಾ, ಮಂಕಿ ಫಾಕ್ಸ್ ಆತಂಕದ ನಡುವೆ ಉಡುಪಿಯಲ್ಲಿ ಇಲಿ ಜ್ವರ ಭೀತಿಯನ್ನು ಹುಟ್ಟಿಸಿದೆ. ಹೀಗಾಗಿ ಉಡುಪಿಯಲ್ಲಿ ಇಲಿ ಜ್ವರ ಕುರಿತಾಗಿ ಕಟ್ಟೆಚ್ಚರ ವಹಿಸಲಾಗಿದೆ. ಜಿಲ್ಲೆಯಲ್ಲಿ ಈಗಾಗಲೇ 85 ಇಲಿಜ್ವರ ಪ್ರಕರಣ ದಾಖಲಾಗಿದ್ದು, ಪ್ರತಿದಿನ ಈ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ.
ಭಯವೇಕೆ ಭಾರತೀಯರೇ; ಮಂಕಿಪಾಕ್ಸ್ ಬಗ್ಗೆ ಓದಿ, ತಿಳಿದು ಜಾಗೃತರಾಗಿರಿ
ಸಾಮಾನ್ಯ ಜ್ವರದಂತೆ ಕಂಡರೂ ಇಲಿ ಜ್ವರ ಮಾರಕವಾಗಿದ್ದು, ನಿರ್ಲಕ್ಷ್ಯ ಮಾಡಿದರೆ ಕಿಡ್ನಿ ,ಮೆದುಳು, ಯಕೃತ್ಗೆ ಹಾನಿಯಾಗಲಿದೆ. ಹೀಗಾಗಿ ಯಾವುದೇ ಜ್ವರದ ಲಕ್ಷಣ ಕಂಡುಬಂದರೂ ತಡಮಾಡದೇ ಸ್ಥಳೀಯ ಆಸ್ಪತ್ರೆ ಗಳಲ್ಲಿ ತಪಾಸಣೆ ಮಾಡಬೇಕೆಂದು ಉಡುಪಿ ಜಿಲ್ಲಾಡಳಿತ ಜನರ ಬಳಿ ಮನವಿ ಮಾಡಿದೆ.
ಮಳೆ, ನೆರೆ ಬಂದ ನಂತರ ಇಲಿ ಜ್ವರದ ಭೀತಿ ಹೆಚ್ಚಿದ್ದು, ಪಶ್ಚಿಮ ಘಟ್ಟದ ಮಳೆ ನೀರು, ಕರಾವಳಿಯಲ್ಲಿ ನೆರೆನೀರಿನಲ್ಲೂ ಇಲಿ ಜ್ವರ ಬರುವ ಸಾಧ್ಯತೆಗಳಿವೆ. ಇಲಿಯ ಮೂತ್ರ ನೆರೆ ನೀರು ಸೇರಿ ವೈರಸ್ ಮನುಷ್ಯನ ದೇಹಕ್ಕೆ ಸೇರಿ ಜ್ವರ ಬರಲಿದೆ. ಗದ್ದೆಗಳಲ್ಲಿ ನಿಂತ ನೆರೆ ನೀರಿನಿಂದ ಕೃಷಿಕರಿಗೆ ಇಲಿ ಜ್ವರವ ಸಾಧ್ಯತೆಗಳಿವೆ. ಮನುಷ್ಯನ ಕಾಲಿನಲ್ಲಿರುವ ಬಿರುಕುಗಳಿಂದ ದೇಹ ಪ್ರವೇಶಿಸುವ ರೋಗಾಣುವಿನಿಂದ ಜ್ವರ ಬರಬಹುದು.
ಇಲಿ ಜ್ವರದ ಲಕ್ಷಣ, ಹರಡುವಿಕೆ
ಇಲಿ, ಹಸು, ನಾಯಿ, ಹಂದಿ ಮೂಲಕವೂ ಇಲಿ ಜ್ವರ ಹಬ್ಬುತ್ತದೆ. ಪರಿಸರ ನೈರ್ಮಲ್ಯದ ಕೊರತೆ, ನೆರೆಹಾವಳಿ ಇಲಿ ಜ್ವರ ಹರಡಲು ಮುಖ್ಯ ಕಾರಣವಾಗಿದೆ. ರೋಗಾಣು ಪ್ರವೇಶಿಸಿದ 2 ರಿಂದ 25 ದಿನಗಳಲ್ಲಿ ತೀವ್ರತರದ ಜ್ವರ ಕಾಡುತ್ತದೆ. ಮೈಕೈ ನೋವು, ತಲೆನೋವು , ಕೆಲವೊಮ್ಮೆ ವಾಂತಿ ಹೊಟ್ಟೆ ನೋವು ಬರುವುದು, ಈ ಜ್ವರದ ಲಕ್ಷಣವಾಗಿದೆ. ರಕ್ತಸ್ರಾವ, ಕಾಮಾಲೆ ಕಾಣಿಸಿಕೊಂಡರೆ ದೇಹದ ಎಲ್ಲಾ ಅಂಗಗಳಿಗೂ ರೋಗಾಣು ಪ್ರವೇಶವಾಗಿ ಅಂಗಾಂಗ ವೈಫಲ್ಯದಿಂದ ಸಾವನ್ನಪ್ಪುವ ಅಪಾಯವೂ ಬರಬಹುದಾಗಿದೆ.
ಕೃಷಿಕರು, ಮೀನುಗಾರರಿಗೆ ಎಚ್ಚರಿಕೆ
ಬೇಸಾಯಗಾರರು, ಮೀನುಗಾರರು, ಹಂದಿ ಸಾಕುವವರು, ಚರಂಡಿ ಕೂಲಿ ಕಾರ್ಮಿಕರು, ಮಾಂಸದ ವ್ಯಾಪಾರಿಗಳಿಗೆ ಹೆಚ್ಚಿನ ಜ್ವರ ಭೀತಿ ಎದುರಾಗಿದ್ದು, ಸಕಾಲದಲ್ಲಿ ಚಿಕಿತ್ಸೆ ದೊರೆತರೆ ಗುಣಮುಖವಾಗುವ ಸಾಧ್ಯತೆಗಳಿವೆ. ಹೀಗಾಗಿ ಯಾವುದೇ ಜ್ವರ ಬಂದರೂ ಕಡೆಗಣಿಸಿದೆ ತಕ್ಷಣ ಪರೀಕ್ಷೆ ಮಾಡಬೇಕೆಂದು ಜಿಲ್ಲಾಧಿಕಾರಿ ಕೂರ್ಮರಾವ್ ಹಾಗೂ ಸರ್ವೇಕ್ಷಣಾಧಿಕಾರಿ ನಾಗರತ್ನ ಜನರಿಗೆ ಮನವಿ ಮಾಡಿದ್ದಾರೆ..
ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಔಷದ ಲಭ್ಯ
ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಉಡುಪಿ ಜಿಲ್ಲಾಧಿಕಾರಿ ಕೂರ್ಮರಾವ್,ಉಡುಪಿಯ ಹಲವು ಭಾಗಗಳಲ್ಲಿ ಇಲಿ ಜ್ವರ ಪ್ರಕರಣ ಕಂಡು ಬಂದಿದೆ. ಜಿಲ್ಲೆಯ ಎಲ್ಲಾ ತಾಲೂಕು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಇಲಿ ಜ್ವರಕ್ಕೆ ಬೇಕಾದಂತಹ ಎಲ್ಲಾ ಔಷಧಗಳು ಲಭ್ಯವಿದೆ. ಯಾವುದೇ ಜ್ವರ ಕಂಡು ಬಂದಲ್ಲಿ ಜಿಲ್ಲೆಯ ಜನರು ನಿರ್ಲಕ್ಷ ಮಾಡದೆ ತುರ್ತಾಗಿ ಸ್ಥಳೀಯ ಆಸ್ಪತ್ರೆಗಳಿಗೆ ಹೋಗಿ ತಪಾಸಣೆಯನ್ನು ಮಾಡಬೇಕು. ಈಗಾಗಲೇ ಜಿಲ್ಲೆಯ ಆರೋಗ್ಯ ಅಧಿಕಾರಿಗಳ ಬಗ್ಗೆ ಈ ಬಗ್ಗೆ ಸಭೆ ಮಾಡಿ ಮಾಹಿತಿಯನ್ನು ನೀಡಿದ್ದೇನೆ ಎಂದು ಹೇಳಿದ್ದಾರೆ
ಇಲಿ ಮಲ-ಮೂತ್ರದಿಂದ ರೋಗಾಣು ಹರಡುವಿಕೆ
ಇನ್ನು ಇಲಿ ಜ್ವರದ ಬಗ್ಗೆ ಮಾಹಿತಿ ನೀಡಿದ ಉಡುಪಿ ಜಿಲ್ಲಾ ಆರೋಗ್ಯ ಸರ್ವೇಕ್ಷಣಾಧಿಕಾರಿ ನಾಗರತ್ನ, ಕರಾವಳಿ ತೀರಗಳಲ್ಲಿ ಇಲಿ ಜ್ವರ ಬಹಳ ವೇಗವಾಗಿ ಹಬ್ಬುತ್ತಿದೆ. ಹೆಗ್ಗಣಗಳ ಮಲ ಮತ್ತು ಮೂತ್ರದಿಂದ ರೋಗಾಣು ಮನುಷ್ಯನ ದೇಹವನ್ನು ಪ್ರವೇಶಿಸುತ್ತದೆ. ಬಿರುಕು ಕಾಲು ಇದ್ದಾಗ ರೋಗಾಣು ಸುಲಭವಾಗಿ ದೇಹ ಪ್ರವೇಶಿಸಿ ಖಾಯಿಲೆ ಉಂಟಾಗುತ್ತದೆ. ಮಳೆ ನೀರು ಗುಡ್ಡ ಪ್ರದೇಶದಿಂದ ಹರಿದು ಬಂದಾಗ ಅದರ ಜೊತೆ ಇಲಿ, ಹೆಗ್ಗಣಗಳ ಹಿಕ್ಕೆ ಸೇರಿ ಮನುಷ್ಯ ಕಾಲುಗಳಿಗೆ ನೀರು ತಗುಲುತ್ತದೆ. ನೆರೆಯ ನೀರು, ಹೊಳೆಯ ನೀರು, ವಾಹನ ತೊಳಿಯುವವರು ಇದರ ಸಮಸ್ಯೆಯನ್ನು ಎದುರಿಸುತ್ತಾರೆ.
ಕಾಲು ಬಿರುಕು ಇದ್ದರೆ ಈ ಕಾಯಿಲೆ ಸುಲಭವಾಗಿ ಬರುತ್ತದೆ. ಕೃತಕ ನೆರೆ ನೀರು ನಿಂತಾಗಲೂ ರೋಗಾಣು ಪ್ರವೇಶವಾಗುತ್ತದೆ. ನೀರಿನಲ್ಲಿ ಈ ವೈರಸ್ಗಳ ಜೀವಿತಾವಧಿ ಜಾಸ್ತಿ ಇರುತ್ತದೆ. ಜ್ವರ ಮೈ- ಕೈ ನೋವು ಬಂದು ಹೋಗೋದು ಈ ಜ್ವರದ ಸಾಮಾನ್ಯ ಲಕ್ಷಣವಾಗಿದೆ. ಆದರೆ ಜ್ವರ ಮೈ-ಕೈ ನೋವು, ಮಲಮೂತ್ರ ಕಮ್ಮಿ ಹೋಗೋದು, ಪ್ರೋಟೀನ್ ಅಂಶ ಕಡಿಮೆ ಆಗೋದು ಮತ್ತು ಜಾಂಡಿಸ್ ಆಗುವಂತಹ ಸಾಧ್ಯತೆಗಳಿವೆ. ಇಲಿ ಜ್ವರವನ್ನು ಮಲೇರಿಯಾ ಡೆಂಗ್ಯೂ ಜೊತೆ ಗೊಂದಲ ಮಾಡೋದು ಬೇಡ ಎಂದು ನಾಗರತ್ನ ಜನರ ಬಳಿ ಮನವಿ ಮಾಡಿದ್ದಾರೆ.