ಭಾರೀ ಚರ್ಚೆಗೆ ಕಾರಣವಾದ 'ಜಮೀರ್ ಭಾಯ್ ಹಮಾರ ಹೀರೋ ಹೇ' ಹೇಳಿಕೆ
ಅಲ್ಪಸಂಖ್ಯಾತ ಸಮುದಾಯದ ನಾಯಕ ಕಾಂಗ್ರೆಸ್ಸಿನಲ್ಲಿ ಪ್ರಮುಖವಾಗಿ ಯಾರು ಎನ್ನುವ ಪ್ರಶ್ನೆಗೆ ಬಲವಾದ ಉತ್ತರ ಆ ಪಕ್ಷದಿಂದ ಸಿಗುವ ಸಾಧ್ಯತೆ ಕಮ್ಮಿ. ಯಾಕೆಂದರೆ, ಸಿ.ಕೆ.ಜಾಫರ್ ಷರೀಫ್, ರೋಶನ್ ಬೇಗ್, ಸಿ.ಎಂ.ಇಬ್ರಾಹಿಂ ನಂತರ ಬಹಳಷ್ಟು ಮುಸ್ಲಿಂ ನಾಯಕರು ಕಾಂಗ್ರೆಸ್ಸಿನಲ್ಲಿ ಮುನ್ನಲೆಗೆ ಬಂದಿರುವುದು.
ಸಿಂಧಗಿ ಮತ್ತು ಹಾನಗಲ್ ಕ್ಷೇತ್ರದ ಉಪ ಚುನಾವಣೆಯ ನಂತರ ಈ ಚರ್ಚೆ ಪಕ್ಷದೊಳಗೆ ಹೆಚ್ಚಾಗುತ್ತಿದೆ. ಯಾಕೆಂದೆರೆ, ಈ ಎರಡೂ ಕ್ಷೇತ್ರಗಳಲ್ಲಿ ಜೆಡಿಎಸ್, ಮುಸ್ಲಿಂ ಸಮುದಾಯದವರನ್ನು ಅಭ್ಯರ್ಥಿಯನ್ನಾಗಿ ಮಾಡಿದ ನಂತರದ ರಾಜಕೀಯ ಬೆಳವಣಿಗೆಗಳು.
ಬಿಟ್ಕಾಯಿನ್: ದೆಹಲಿಯಿಂದ ಸಿಎಂ ಬೊಮ್ಮಾಯಿಗೆ ಸುರ್ಜೇವಾಲ 6 ಪ್ರಶ್ನೆಗಳು
ಎರಡೂ ಕ್ಷೇತ್ರಗಳಲ್ಲಿ ಮುಸ್ಲಿಂ ಸಮುದಾಯದವರು ನಿರ್ಣಾಯಕ ಪಾತ್ರ ವಹಿಸುತ್ತಾರಾದರೂ, ಜೆಡಿಎಸ್ ಪಕ್ಷ ಅಲ್ಲಿ ಠೇವಣಿ ಉಳಿಸಿಕೊಳ್ಳುವಲ್ಲಿ ವಿಫಲವಾಗಿತ್ತು. ಈ ಸಮುದಾಯದ ಹೆಚ್ಚಿನ ಮತಗಳು ಕಾಂಗ್ರೆಸ್ ಪರ ಚಲಾವಣೆಯಾಗಿದೆ ಎನ್ನುವುದು ನಿರ್ವಿವಾದ.
ಹಾನಗಲ್ ಗೆಲುವು ಯಾರಿಗೆ ಸಲ್ಲಬೇಕು ಎನ್ನುವ ವಿಚಾರ ಬಂದಾಗ, ಆ ಸಮುದಾಯದ ಮಾಜಿ ಸಚಿವ ಯು.ಟಿ.ಖಾದರ್, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಮತ್ತು ಮತ್ತೋರ್ವ ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಅವರ ಹೆಸರು ಮುಂದಕ್ಕೆ ಬರುತ್ತದೆ. ಆದರೆ, ಕೆಪಿಸಿಸಿ ಉಸ್ತುವಾರಿ ರಣದೀಪ್ ಸುರ್ಜೇವಾಲ ಅವರು 'ಜಮೀರ್ ಭಾಯ್ ತೋ ಹಮಾರ ಹೀರೋ ಹೇ' ಎಂದು ಹೇಳಿರುವುದು, ಸಮುದಾಯದಲ್ಲಿ ಹೊಸ ಚರ್ಚೆಗೆ ನಾಂದಿ ಹಾಡಿದೆ.
ಅಮಿತ್ ಶಾ ಒಂದೇ ಒಂದು ಎಚ್ಚರಿಕೆಗೆ ರಾಜ್ಯ ಬಿಜೆಪಿ ನಾಯಕರು ಫುಲ್ ಅಲರ್ಟ್
ಯು.ಟಿ.ಖಾದರ್ ಮತ್ತು ಜಮೀರ್ ಅಹ್ಮದ್ ಖಾನ್ ಪ್ರಚಾರವನ್ನು ನಡೆಸಿದ್ದರು
ಸಿಂಧಗಿ ಮತ್ತು ಹಾನಗಲ್ ಕ್ಷೇತ್ರದಲ್ಲಿ ಯು.ಟಿ.ಖಾದರ್ ಮತ್ತು ಜಮೀರ್ ಅಹ್ಮದ್ ಖಾನ್ ಪ್ರಚಾರವನ್ನು ನಡೆಸಿದ್ದರು. ಆದರೆ, ಜಮೀರ್ ಅವರ ಪ್ರಚಾರಕ್ಕೆ ಜನಸ್ಪಂದನೆ ಹೆಚ್ಚು ಸಿಗುತ್ತಿತ್ತು. ಜೆಡಿಎಸ್ ಪಕ್ಷ ಮುಸ್ಲಿಂ ಸಮುದಾಯದವರಿಗೆ ಟಿಕೆಟ್ ನೀಡಿರುವುದಕ್ಕೆ ತೀವ್ರ ವಾಗ್ದಾಳಿಯನ್ನು ಜಮೀರ್ ನಡೆಸಿದ್ದರು. ಕುಮಾರಸ್ವಾಮಿಯವರ ಮೇಲಂತೂ ಸೂಟ್ಕೇಸ್ ಸಂಸ್ಕೃತಿ ಎಂದು ಜರಿದಿದ್ದರು. ಮುಸ್ಲಿಂ ಪ್ರಾಭಲ್ಯವಿರುವ ಕ್ಷೇತ್ರದಲ್ಲಿ ಹೆಚ್ಚಿನ ಒತ್ತು ನೀಡಿದ್ದ ಜಮೀರ್, ತಮ್ಮ ಸಮುದಾಯದ ಮತಗಳೂ ಕಾಂಗ್ರೆಸ್ ಬಿಟ್ಟು ಹೋಗದಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು.
ಹಾನಗಲ್ ಕ್ಷೇತ್ರದ ಚುನಾವಣಾ ಉಸ್ತುವಾರಿ ಸಲೀಂ ಅಹ್ಮದ್
ಇನ್ನು, ಹಾನಗಲ್ ಕ್ಷೇತ್ರದ ಚುನಾವಣಾ ಉಸ್ತುವಾರಿಯನ್ನು ಶಿಸ್ತುಬದ್ದವಾಗಿ ನೋಡಿಕೊಂಡವರು ಸಲೀಂ ಅಹ್ಮದ್. ಕಾರ್ಯತಂತ್ರವನ್ನು ಸಮಯೋಜಿತವಾಗಿ ಹಣೆದಿದ್ದ ಸಲೀಂ ಪಕ್ಷದ ಅಭ್ಯರ್ಥಿ ದಡ ಸೇರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆದರೆ, ಜೆಡಿಎಸ್ ಪಾರ್ಟಿ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸುವುದು ಖಾತ್ರಿಯಾದ ನಂತರ, ಕಾಂಗ್ರೆಸ್ ಹೈಕಮಾಂಡ್ ಹೆಚ್ಚಿನ ಒತ್ತನ್ನು ನೀಡಿದ್ದ ಜಮೀರ್ ಅವರಿಗೆ. ದೆಹಲಿಯಿಂದ ನೇರ ನಿರ್ದೇಶನ ಪಡೆದಿದ್ದ ಜಮೀರ್, ಪಕ್ಷ ವಹಿಸಿದ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದ್ದರು.
ಜಮೀರ್ ಭಾಯ್ ತೋ ಹಮಾರ ಹೀರೋ ಹೇ
ಸೋಮವಾರ (ನ 15) ಕೆಪಿಸಿಸಿ ಉಸ್ತುವಾರಿ ಮತ್ತು ಸೋನಿಯಾ ಕುಟುಂಬದ ಆಪ್ತರೂ ಆಗಿರುವ ರಣದೀಪ್ ಸುರ್ಜೇವಾಲ ಅವರು ಜಮೀರ್ ಅವರ ಐಷಾರಾಮಿ ನಿವಾಸಕ್ಕೆ ಭೇಟಿ ನೀಡಿದ್ದರು. ಅವರ ಜೊತೆ, ಸಲೀಂ ಅಹ್ಮದ್, ಜಿ.ಕೆ.ಬಾವ ಮುಂತಾದ ನಾಯಕರಿದ್ದರು. "ಉಪ ಚುನಾವಣೆಯಲ್ಲಿ ನಮ್ಮ ಕಾಂಗ್ರೆಸ್ಸಿನ ಎಲ್ಲಾ ನಾಯಕರು, ಪ್ರಮುಖವಾಗಿ ಜಮೀರ್ ಕೂಡಾ ಉತ್ತಮವಾದ ಕೆಲಸವನ್ನು ಮಾಡಿದ್ದಾರೆ. ಅಲ್ಪಸಂಖ್ಯಾತ ಸಮುದಾಯದವರು ಮತ್ತು ಸಮಾಜದ ಎಲ್ಲಾ ವರ್ಗದ ಜನರು ನಮ್ಮ ಕೈಹಿಡಿದರು. ಜಮೀರ್ ಭಾಯ್ ತೋ ಹಮಾರ ಹೀರೋ ಹೇ"ಎಂದು ಭೇಟಿಯ ನಂತರ ಸುರ್ಜೇವಾಲ ಹೇಳಿದ್ದಾರೆ.
ದೆಹಲಿಗೆ ಹೋಗಿದ್ದಾಗ, ಸುರ್ಜೇವಾಲ ಅವರನ್ನು ಭೇಟಿಯಾಗಿದ್ದೆ
ಈ ಬಗ್ಗೆ ಮಾತನಾಡಿದ ಜಮೀರ್ ಅಹ್ಮದ್, "ದೆಹಲಿಗೆ ಹೋಗಿದ್ದಾಗ, ಸುರ್ಜೇವಾಲ ಅವರನ್ನು ಭೇಟಿಯಾಗಿದ್ದೆ, ಮನೆಗೆ ಬರುವಂತೆ ಆಹ್ವಾನ ನೀಡಿದ್ದೆ. ಬೆಂಗಳೂರಿಗೆ ಬಂದಾಗ ಮನೆಗೆ ಬಂದು ಚಹಾ ಸೇವಿಸಿ ಹೋಗುತ್ತೇನೆ ಎಂದು ಹೇಳಿದ್ದರು, ಅದರಂತೆ ಬಂದಿದ್ದಾರೆ. ಸ್ಥಳೀಯ ಸಂಸ್ಥೆ ಚುನಾವಣೆಯ ಸಂಬಂಧ ಮಾತುಕತೆ ನಡೆಸಲು ಸುರ್ಜೇವಾಲ ಬಂದಿದ್ದರು" ಎಂದು ಜಮೀರ್ ಹೇಳಿದ್ದಾರೆ. ಒಟ್ಟಿನಲ್ಲಿ, ಸುರ್ಜೇವಾಲ ಅವರ ಹೇಳಿಕೆ ಕಾಂಗ್ರೆಸ್ ಪಕ್ಷದ ಮುಸ್ಲಿಂ ಸಮುದಾಯದಲ್ಲಿ ಹೊಸ ಚರ್ಚೆಯನ್ನಂತೂ ಹುಟ್ಟು ಹಾಕಿದೆ.