ನನ್ನ ಪರ್ಫಾರ್ಮೆನ್ಸ್ ನಿಮಗೆ ಇಷ್ಟವಾದಲ್ಲಿ JARAKI ಅಂತಾ ಟೈಪ್ ಮಾಡಿ 5757ಗೆ ಕಳುಹಿಸಿ...
ಬೆಂಗಳೂರು, ಮಾ. 03: ನಾನೇನು ತಪ್ಪು ಮಾಡಿಲ್ಲ. ಅದು ನಕಲಿ ವಿಡಿಯೋ ಎನ್ನುತ್ತಲೇ ಇಡೀ ನಾಡಿನ ಜನರೆದುರು ಬೆತ್ತಲಾದ ರಮೇಶ್ ಜಾರಕಿಹೊಳಿ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಮಳೆ ನಿಂತರೂ ಮಳೆ ಹನಿ ನಿಲ್ಲುವುದಿಲ್ಲ ಎಂಬಂತೆ ರಮೇಶ್ ಜಾರಕಿಹೊಳಿ 'ಜಾರಿ'ದ್ದನ್ನು ನಾಡಿನ ಪಡ್ಡೆ ಹುಡುಗರು ಟ್ರೋಲ್ ಮೂಲಕ ವಿಡಂಬನೆ ಮಾಡುತ್ತಿದ್ದಾರೆ. ಆ ಮೂಲಕ ಹಿರಿಯ ರಾಜಕಾರಣಿಗಳಿಗೆ ಬುದ್ಧಿ ಹೇಳುತ್ತಿದ್ದಾರೆ.
ಸಾಂಪ್ರದಾಯಿಕ ಮಾಧ್ಯಮಗಳನ್ನು ಮೀರಿ ಸಾಮಾಜಿಕ ಮಾಧ್ಯಮ ಬೆಳೆದಿದೆ. ಪ್ರತಿಯೊಂದನ್ನು ಅದು ತನ್ನದೇ ರೀತಿಯಲ್ಲಿ ವಿಶ್ಲಷಣೆ ಮಾಡುತ್ತದೆ. ಹೀಗಾಗಿ ಅದು ಪ್ರಭಾವಿಯಾಗಿದೆ ಕೂಡ. ಕೆಲವೊಮ್ಮೆ ಮಾಧ್ಯಮಗಳು ಪ್ರಶ್ನೆ ಮಾಡಲು ಆಗದಿದ್ದನ್ನು ಸಾಮಾಜಿಕ ಮಾಧ್ಯಮ ಮಾಡುತ್ತದೆ. ಈ ಕಾಲಘಟ್ಟದಲ್ಲಿ ಪ್ರತಿಯೊಂದು ಘಟನೆಯನ್ನು ತನ್ನದೇ ಆದ ದಾಟಿಯಲ್ಲಿ ಹಲವು ರೀತಿಯಲ್ಲಿ ವಿಶ್ಲೇಷಣೆ ಮಾಡುವುದು ಸಾಮಾನ್ಯ.
ಇದೀಗ ವಿಡಂಬನಾತ್ಮಕವಾಗಿ ಸಾಮಾಜಿಕ ಜಾಲ ತಾಣದಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರನ್ನು ತರಾಟೆಗೆ ತೆಗೆದುಕೊಳ್ಳಲಾಗುತ್ತಿದೆ. ರಮೇಶ್ ಜಾರಕಿಹೊಳಿ ಅವರ ರಾಸಲೀಲೆ ಸಿಡಿ ಬಿಡುಗಡೆಯಾದ ಕೆಲ ಹೊತ್ತಿನಲ್ಲಿಯೇ ಹಲವು ವಿಡಂಬನಾತ್ಮಕ ವಿಡಿಯೊ ತುಣುಕುಗಳು, ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ಹೇರಳವಾಗಿ ಹರಿದಾಡುತ್ತಿವೆ.
ರಮೇಶ್ ಜಾರಕಿಹೊಳಿ "ರಾಸಲೀಲೆ ಸಿಡಿ" ಪ್ರಕರಣ; ಆರ್.ಟಿ. ನಗರದ ಪಿಜಿ ಸುಂದರಿ ಯಾರು ?
ಟ್ರೋಲ್ ಮಾಡುವ ಮೂಲಕ ರಮೇಶ್ ಜಾರಕಿಹೊಳಿ ಅವರನ್ನು ಗೇಲಿ ಮಾಡಲಾಗುತ್ತಿದೆ. ಜೊತೆಗೆ ಈ ಹಿಂದೆ ಇಂತಹ ಪ್ರಕರಣದಲ್ಲಿ ಸಿಕ್ಕಿಕೊಂಡಿದ್ದವರನ್ನೂ ಈಗಿನ ಟ್ರೋಲ್ಗಳಲ್ಲಿ ಎಳೆದು ತರಲಾಗಿದೆ. ಆ ಮೂಲಕ ರಾಜೀನಾಮೆ ಕೊಡುವ ಮೂಲಕ ಮಾಧ್ಯಮಗಳಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡುವ ರಾಜಕಾರಣಿಗಳಿಗೆ ಸೊಶಿಯಲ್ ಮೀಡಿಯಾ ತಮ್ಮದೇ ಶೈಲಿಯಲ್ಲಿ ಬುದ್ಧಿ ಹೇಳುತ್ತಿದೆ.
JARAKI ಅಂತ ಟೈಪ್ ಮಾಡಿ 5757ಗೆ ಕಳುಹಿಸಿ...
ರಮೇಶ್ ಕಾರಕಿಹೊಳಿ ಅವರ ಕುರಿತಾಗಿ ಅತಿಹೆಚ್ಚು ಹರಿದಾಡುತ್ತಿರುವ ಎಡಿಟೆಡ್ ಫೋಟೊ ಎಂದರೆ HM ಅಂದರೆ ಹುಬ್ಬಳ್ಳಿ ಮೆನ್ ಎಂದು ಹೆಸರಿಟ್ಟುಕೊಂಡಿರುವವರು ಮಾಡಿರುವ ಟ್ರೋಲ್. ರಮೇಶ್ ಜಾರಕಿಹೊಳಿ ಅವರು ಕೈಮುಗಿದು ನಿಂತಿರುವ ಫೋಟೊವೊಂದಕ್ಕೆ ವಿಡಂಬನಾತ್ಮಕವಾಗಿ, ನನ್ನ ಪರ್ಫಾರ್ಮೆನ್ಸ್ ನಿಮಗೆ ಇಷ್ಟವಾದಲ್ಲಿ JARAKI ಅಂತ ಟೈಪ್ ಮಾಡಿ 5757ಗೆ ಕಳುಹಿಸಿ ಎಂದು ಮನವಿ ಮಾಡಲಾಗಿದೆ. ಇತ್ತೀಚೆಗೆ ರಿಯಾಲಿಟಿ ಶೋ ನಂತರ ವೋಟ್ಗಾಗಿ ಶೋನಲ್ಲಿ ಭಾಗವಹಿಸಿದ್ದವರು ಕೇಳುವಂತೆ ರಮೇಶ್ ಜಾರಕಿಹೊಳಿ ಅವರನ್ನು ತೋರಿಸಲಾಗಿದೆ.
'ಎಗರು' ಸಿನಿಮಾ ಎಲ್ಲಡೆ ಭರ್ಜರಿ ಪ್ರದರ್ಶನ...
ಇನ್ನು ಟ್ರೋಲ್ ಆಗುತ್ತಿರುವ ಮತ್ತೊಂದು ಫೋಟೊದಲ್ಲಿ ಇತ್ತೀಚೆಗೆ ತೆರೆ ಕಂಡ 'ಪೊಗರು' ಸಿನಿಮಾದ ಹೆಸರಿನಂತೆಯೆ 'ಎಗರು' ಸಿನಿಮಾ ಎಲ್ಲಡೆ ಭರ್ಜರಿ ಪ್ರದರ್ಶನವಾಗುತ್ತಿದೆ. ಎಲ್ಲ ಕಡೆಗೂ ಚಿತ್ರಮಂದಿರಗಳು ಭರ್ತಿಯಾಗಿವೆ ಎಂದು ವಿಡಂಬನೆ ಮಾಡಲಾಗಿದೆ.
ಈ ಲಿಸ್ಟ್ ಮುಂದುವರೆಯಲಿದೆ ಎಂದ ಕಾಂಗ್ರೆಸ್....
ಇನ್ನು ಹೀಗೆ ಕಾಲೆಳೆಯುವುದರಲ್ಲಿ ರಾಜ್ಯ ಕಾಂಗ್ರೆಸ್ ಸಾಮಾಜಿಕ ಜಾಲತಾಣ ವಿಭಾಗ ಕೂಡ ಹಿಂದೆ ಬಿದ್ದಿಲ್ಲ. ಅಲ್ಲಿಯೂ ಕೂಡ ಸೃಜನಾಮತ್ಮಕ ವಿಡಂಬನೆಯಿಂದ ನಗು ಉಕ್ಕುತ್ತದೆ. ಧರ್ಮ ಸಂಸ್ಕೃತಿ ಹೆಸರಿನಲ್ಲಿ ಅತ್ಯುತ್ತಮ ಪರ್ಫಾರ್ಮೆನ್ಸ್ ತೋರಿದ ನಾಯಕರು ಎಂಬ ತಲೆಬರಹದೊಂದಿಗೆ ಲೇವಡಿ ಮಾಡಲಾಗಿದೆ. ಕಳೆದ ಬಾರಿ ಬಿಜೆಪಿ ಸರ್ಕಾರ ಇದ್ದಾಗ ರೇಣುಕಾಚಾರ್ಯ, ಹಾಲಪ್ಪ, ರಘುಪತಿ ಭಟ್, ಲಕ್ಷ್ಮಣ ಸವದಿ, ಸಿ.ಸಿ. ಪಾಟೀಲ್, ರಾಮದಾಸ್, ಕೃಷ್ಣ ಪಾಲೇಮಾರ್ ಹಾಗೂ ಈ ಬಾರಿಯಲ್ಲಿ ಲಿಂಬಾವಳಿ ಹಾಗೂ ಜಾರಕಿಹೊಳಿ ಪರ್ಫಾರ್ಮೆನ್ಸ್ ತೋರಿದ್ದಾರೆ. ಲಿಸ್ಟ್ ಮುಂದುವರೆಯಲಿದೆ ಎಂದು INC KARNATAKA ಲೇವಡಿ ಮಾಡಿದೆ.
ಜಾರಕಿಹೊಳಿ ಅವರ 'ಎಗರು' ಚಿತ್ರ ರಿಲೀಸ್ ....
ಇನ್ನು ಹುಣಸೂರು ಟ್ರೋಲ್ಸ್ ಎಂದು ಟ್ರೋಲ್ ಮಾಡಿರುವ ಹುಡುಗರು, ಪೊಗರು ಚಿತ್ರದ ಪ್ರದರ್ಶನವನ್ನು ನಿಲ್ಲಿಸಿ ಜಾರಕಿಹೊಳಿ ಅವರ 'ಎಗರು' ರಿಲೀಸ್ ಮಾಡಲು ಮುಂದಾದ ಕರ್ನಾಟಕ ಫಿಲ್ಮ್ ಚೆಂಬರ್ ಎಂದು ಲೇವಡಿ ಮಾಡಲಾಗಿದೆ. ಜೊತೆಗೆ ಸಿನಿಮಾ ಮುಗಿಯುವವರೆಗೆ ಟಿವಿ ನೋಡುವುದರಿಂದ ಮಕ್ಕಳನ್ನು ದೂರವಿಡಿ ಎಂದು ವಿನಂತಿಸಿಕೊಳ್ಳಲಾಗಿದೆ.
ಇದನ್ನೂ ನೋಡಿ ಬಿಟ್ನೇನಪಾ...
ಇನ್ನು ತಮ್ಮ ಭಾಷಣಗಳಿಂದ ಈಗಾಗಲೇ ಅತಿ ಹೆಚ್ಚು ಟ್ರೋಲ್ ಆಗುತ್ತಿರುವ ಯುವ ಬ್ರಿಗೇಡ್ನ ಚಕ್ರವರ್ತಿ ಸೂಲಿಬೆಲೆ ಅವರನ್ನು ಎಳೆದು ತರಲಾಗಿದೆ. ಹಿಂದೊಮ್ಮೆ ಅವರು ಹೇಳಿದ್ದ, ನಿಮಗಿದು ಗೊತ್ತಿರ್ಲಿ ಮಿತ್ರರೇ, ಪ್ರತಿಯೊಬ್ಬ ಬಿಜೆಪಿ ಸಚಿವರ ಕೆಲಸಗಳನ್ನು ಮೋದಿಜಿ ಸ್ವತಃ ಲ್ಯಾಪ್ಟಾಪ್ಗೆ ಕನೆಕ್ಟ್ ಮಾಡಿಕೊಂಡು ನೋಡ್ತಾರೆ ಎಂಬುದನ್ನು ಬಳಸಿಕೊಳ್ಳಲಾಗಿದೆ. ಇದನ್ನೂ ನೋಡಿ ಬಿಟ್ನೇನೆನಪಾ? ಎಂದು ಕಿಚಾಯಿಸಲಾಗಿದೆ. ಸಾಮಾಜಿಕ ಜಾಲ ತಾಣದಲ್ಲಿ ಈ ಫೋಟೊ ಕೂಡ ಅತಿ ಹೆಚ್ಚು ಟ್ರೋಲ್ ಆಗುತ್ತಿದೆ.
ಆದ್ರೆ ನಮ್ ಜನಾ ಮಾತ್ರ ಕೇಳಲ್ಲ....
ಇನ್ನು ಇಂಥದ್ದೆ ಕಾರಣದಿಂದ ಮೂಲೆಗುಂಪಾದ ಸ್ವಾಮಿ ನಿತ್ಯಾನಂದ ಅವರನ್ನೂ ಜಾರಕಿಹೊಳಿ ರಾಸಲೀಲೆಗೆ ಅಟಕಾಯಿಸಲಾಗಿದೆ. ಗುರುಗಳು ಯಾವಾಗಲೋ ಹೇಳಿದ್ದಾರೆ. ಆದ್ರೆ ನಮ್ ಜನಾ ಮಾತ್ರ ಕೇಳಲ್ಲ ಅಂತಾ UNKNWON TROLLERS ಹೆಸರಿನಲ್ಲಿ ಟ್ರೋಲ್ ಮಾಡಲಾಗಿದೆ. ಸ್ವಾಮಿ ನಿತ್ಯಾನಂದ ಅವರ ಫೋಟೊ ಹಾಕಿ, ಲವ್ ದಿ ಲೇಡಿ. ಬಟ್ ಡೋಂಟ್ ಟಚ್ ಹರ್ ಬಾಡಿ. ಇಫ್ ಯು ಟಚ್ ಹರ್ ಬಾಡಿ ಸಮ್ಒನ್ ವಿಲ್ ಮೇಕ್ ದ ಸಿಡಿ ಎಂದು ಬುದ್ದಿ ಹೇಳುವಂತೆ ಟ್ರೋಲ್ ಮಾಡಲಗಿದೆ. ಅದು ಕೂಡ ಸಾಮಾಜಿಕ ಜಾಲತಾಣದಲ್ಲಿ ಭರ್ಜರಿಯಾಗಿ ಹರಿದಾಡುತ್ತಿದೆ.
Recommended Video
ನಾನೇ ಅವರಿಗೆ ಕಿವಿಮಾತು ಹೇಳಿದ್ದೆ...
ಇನ್ನು ಮಾಜಿ ಸಚಿವ ರೇಣುಕಾಚಾರ್ಯ ಅವರ ಫೋಟೊ ಹಾಕಿ ಮಾಡಿರುವ ಟ್ರೋಲ್ ನಗು ಉಕ್ಕಿಸುತ್ತಿದೆ. ಬಿಜೆಪಿ ಪಕ್ಷಕ್ಕೆ ಸೇರಿದ ಮೇಲೆ ಪಕ್ಷದ ತತ್ವ ಸಿದ್ಧಾಂತಗಳಿಗೆ ಬದ್ದವಾಗಿರಲೇ ಬೇಕು ಎಂದು ನಾನೇ ಅವರಿಗೆ ಕಿವಿ ಮಾತು ಹೇಳಿದ್ದೆ ಎಂದು ನಮ್ಮ # ನಮ್ಮ ಟ್ರೋಲ್ ಅಡ್ಡಾ ಎಂಬ ಹೆಸರಿನಲ್ಲಿ ಟ್ರೋಲ್ ಮಾಡಲಾಗಿದೆ.
ಕೇವಲು ಇವು ಕೆಲ ಉದಾಹರಣೆಗಳಷ್ಟೇ. ಇಂತಹ ನೂರಾರು ಟ್ರೋಲ್ಗಳಿ ನಿನ್ನೆಯಿಂದ ಗಮನ ಸೆಳೆಯುತ್ತವೆ. ಇನ್ನೂ ಕೆಲ ತಿಂಗಳುಗಳ ಕಾಲ ಸಾಮಾಜಿಕ ಜಾಲತಾಣದಲ್ಲಿ ರಮೇಶ್ ಜಾರಕಿಹೊಳಿ ಅವರು ಟ್ರೋಲ್ ಆಗುವುದನ್ನು ಯಾರಿಂದಲೂ ತಪ್ಪಿಸುವುದು ಅಸಾಧ್ಯ.
ಎಲ್ಲೆ ಮೀರದೇ, ದಾರಿ ತಪ್ಪುವ ತಮ್ಮ ಜನನಾಯಕರನ್ನು ಟ್ರೋಲ್ ಮೂಲಕ ಸರಿ ದಾರಿಗೆ ತರುವ ಪ್ರಯತ್ನವೂ ಇದಾಗಿರಬಹುದು. ಒಟ್ಟಾರೆ ಅದೇನೆ ಇರಲಿ, ಮಾಧ್ಯಮಗಳಿಗೆ ಕಡಿವಾಣ ಹಾಕಿದಂತೆ ಟ್ರೋಲ್ ಆಗುವುದರಿಂದ ತಪ್ಪಿಸಿಕೊಳ್ಳುವುದು ತಪ್ಪು ಮಾಡಿದವರಿಗೆ ಅಸಾಧ್ಯ ಎಂಬುದು ಮಾತ್ರ ನಿಜ!
NOTE: ಇಲ್ಲಿ ಯಾರನ್ನೂ ನೋಯಿಸುವ ಉದ್ದೇಶವಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಕಂಡು ಬಂದಿದ್ದನ್ನು ಓದುಗರ ಮುಂದಿಡುವ ಸಣ್ಣ ಪ್ರಯತ್ನ ಮಾಡಲಾಗಿದೆ ಅಷ್ಟೇ.