ಸ್ಮರಣೆ: ಹಾಜಿಪುರದ ದಲಿತ ಮುಖಂಡ ರಾಮ್ ವಿಲಾಸ್ ಪಾಸ್ವಾನ್
ಕೇಂದ್ರ ಆಹಾರ ಹಾಗೂ ಪಡಿತರ ಸರಬರಾಜು ಖಾತೆ ಸಚಿವ, ಲೋಕ ಜನಶಕ್ತಿ ಪಕ್ಷದ ಅಧ್ಯಕ್ಷ ರಾಮ್ ವಿಲಾಸ್ ಪಾಸ್ವಾನ್ ಅವರು ಗುರುವಾರ (ಅಕ್ಟೋಬರ್ 08)ರಂದು ನವದೆಹಲಿಯಲ್ಲಿ ನಿಧನರಾಗಿದ್ದಾರೆ. ಅವರ ರಾಜಕೀಯ ಬದುಕಿನ ಸ್ಮರಣೆ ಇಲ್ಲಿದೆ...
ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ನಿಧನ
ಪಾಟ್ನಾ ನಂತರ ಅತ್ಯಂತ ವೇಗವಾಗಿ ಅಭಿವೃದ್ಧಿ ಕಾಣುತ್ತಿರುವ ನಗರ ಹಾಜಿಪುರದಲ್ಲಿ ದಾಖಲೆಯ ಜಯ ದಾಖಲಿಸಿದ್ದ ಪಾಸ್ವಾನ್ ಅವರ ಬಗ್ಗೆ ಒಂದು ಮಾತಿದೆ.."ಕೇಂದ್ರದಲ್ಲಿ ಯಾವುದೇ ಸರ್ಕಾರ ಬರಲಿ, ಪಾಸ್ವಾನ್ ಮಂತ್ರಿಯಾಗುವ ಅದೃಷ್ಟವಂತ ಚತುರ ರಾಜಕಾರಣಿ'. ಐಪಿಎಸ್ ಆಗಲು ಬಯಸಿದ್ದ ಪಾಸ್ವಾನ್ ಅವರು ಇಂಡಿಯನ್ ಪೊಲಿಟಿಕಲ್ ಸಿಸ್ಟಮ್ ಅರಿತ ಸಮಾಜಮುಖಿ ರಾಜಕಾರಣಿ ಎನಿಸಿಕೊಂಡರು.
ರಾಮ್ ವಿಲಾಸ್ ಪಾಸ್ವಾನ್ ಜೀವನ ಚರಿತ್ರೆ
ಪಾಸ್ವಾನ್ ಅವರ ರಾಜಕೀಯ ಜೀವನ ಆರಂಭ ಹಾಗೂ ಏಳಿಗೆಯನ್ನು ಹಾಜಿಪುರ ಲೋಕಸಭಾ ಕ್ಷೇತ್ರದಿಂದ ಕಂಡಿದ್ದರೂ ಕಳೆದ ಬಾರಿ ಚುನಾವಣೆಯಿಂದ ಹಿಂದೆ ಸರಿದಿದ್ದರು. ರಾಜ್ಯಸಭೆ ಮೂಲಕ ಸಂಸತ್ ಪ್ರವೇಶಿಸಿ, ಕೇಂದ್ರದ ಎನ್ಡಿಎ ಸರ್ಕಾರದಲ್ಲಿ ಸಚಿವರಾದರು. ಇತ್ತ ಈ ಬಾರಿ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಎಲ್ ಜೆಪಿ ಗೆಲುವು, ಪುತ್ರ ಚಿರಾಗ್ ರನ್ನು ಸಿಎಂ ಆಗಿ ಕಾಣುವ ಕನಸು ಕಂಡಿದ್ದರು. ಆಸ್ಪತ್ರೆ ಸೇರಿದಾಗಲೂ ಪುತ್ರನನ್ನು ಹಾರೈಸಿ, ಬೆಂಬಲಿಸಿ ಗೆಲ್ಲುವಂತೆ ಮಾಡಿ ಎಂದು ಟ್ವೀಟ್ ಮಾಡಿದ್ದರು.
ಹಾಜಿಪುರ: ಗಿನ್ನಿಸ್ ದಾಖಲೆ ಬರೆದ ಪಾಸ್ವಾನ್ ಸ್ವಕ್ಷೇತ್ರ
ರಾಜಕೀಯ ಬದುಕು ಆರಂಭ
ಸಂಯುಕ್ತ ಸೋಷಲಿಸ್ಟ್ ಪಾರ್ಟಿಯ ಮೂಲಕ ರಾಜಕೀಯ ಬದುಕು ಆರಂಭಿಸಿದ ಪಾಸ್ವಾನ್ ಅವರು ಬಿಹಾರ ವಿಧಾನಸಭೆ 1969ರಲ್ಲಿ ಮೊದಲಿಗೆ ಆಯ್ಕೆಯಾದರು. ಅಲೋಲಿ ಕ್ಷೇತ್ರದಿಂದ ಅವರು ಉಪ ಚುನಾವಣೆಯಲ್ಲಿ ಕಾಂಗ್ರೆಸ್ನ ಪ್ರಬಲ ಅಭ್ಯರ್ಥಿಯನ್ನು 700 ಮತಗಳಿಂದ ಸೋಲಿಸಿದ್ದರು. 1970ರಲ್ಲಿ ಎಎಸ್ಪಿಯ ಬಿಹಾರ ಘಟಕದ ಜಂಟಿ ಕಾರ್ಯದರ್ಶಿಯಾದರು. ನಂತರ 1974ರಲ್ಲಿ ಲೋಕ್ ದಳ ಪಕ್ಷ ಸ್ಥಾಪನೆಯಾದ ಬಳಿಕ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದರು.
ಅದರ ಬಿಹಾರ ಘಟಕದ ಪ್ರಧಾನ ಕಾರ್ಯದರ್ಶಿಯಾದರು. ಬಿಹಾರದ ದಲಿತರು, ಇತರೆ ಕೆಳವರ್ಗದ ಹಿಂದೂಗಳು ಮತ್ತು ಮುಸ್ಲಿಮರ ನಾಯಕನಾಗಿ ಅವರು ಬೆಳೆದರು.
ಜನತಾ ದಳ, ಜನತಾ ಪಕ್ಷ ಲೋಕದಳ -ಎಲ್ ಜೆಪಿ
ಇಂದಿರಾಗಾಂಧಿ ಅವರು ಹೇರಿದ್ದ ತುರ್ತು ಪರಿಸ್ಥಿತಿಯನ್ನು ಪಾಸ್ವಾನ್ ವಿರೋಧಿಸಿ, ಜೈಲು ವಾಸ ಅನುಭವಿಸಿದ್ದರು. 1977ರಲ್ಲಿ ಮೊದಲ ಬಾರಿಗೆ ಲೋಕಸಭೆಗೆ ಆಯ್ಕೆಯಾದರು. ಹಾಜಿಪುರದಿಂದ ಜನತಾ ಪಾರ್ಟಿ ಸದಸ್ಯರಾಗಿ ಆಯ್ಕೆಯಾದರು. ನಂತರ 1980, 1989, 1996, 1998, 1999, 2004 ಹಾಗೂ 2014ರಲ್ಲಿ ಆಯ್ಕೆಯಾದರು. 1984 ಮತ್ತು 2009ರ ಚುನಾವಣೆಯಲ್ಲಿ ಮಾತ್ರ ಅವರು ಸೋಲಿನ ಕಹಿ ಅನುಭವಿಸಿದರು.
1985ರಲ್ಲಿ ರಾಷ್ಟ್ರೀಯ ಲೋಕದಳದ ಪ್ರಧಾನ ಕಾರ್ಯದರ್ಶಿಯಾದರು. 1987ರಲ್ಲಿ ಜನತಾ ಪಾರ್ಟಿಯೊಂದಿಗೆ ಕೈಜೋಡಿಸಿದರು. ಮರುವರ್ಷ ಜಯಪ್ರಕಾಶ್ ನಾರಾಯಣ್ ನೇತೃತ್ವದಲ್ಲಿ ಜನತಾ ಪಕ್ಷಗಳು ಒಂದಾಗಿ ಜನತಾ ದಳ ರಚನೆಯಾಯಿತು. ಆಗಲೂ ಅದರ ಪ್ರಧಾನ ಕಾರ್ಯದರ್ಶಿಯಾಗಿ ನೇಮಕವಾದರು. ಆದರೆ, 2000ದಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಬಳಗವನ್ನು ಸೇರುವ ವಿಚಾರದಲ್ಲಿ ಜನತಾದಳ ಇಬ್ಭಾಗವಾಯಿತು. ಆಗ ಪಾಸ್ವಾನ್ ಮತ್ತು ಪಕ್ಷದ ಇತರೆ ಸದಸ್ಯರು ಜತೆಗೂಡಿ ಲೋಕ ಜನಶಕ್ತಿ ಪಕ್ಷ (ಎಲ್ಜೆಪಿ) ರಚಿಸಿದರು. 2000 ಇಸವಿಯಲ್ಲಿ ಲೋಕ ಜನಶಕ್ತಿ ಪಕ್ಷ(ಎಲ್ ಜೆಪಿ) ಸ್ಥಾಪಿಸಿ, ಅಧ್ಯಕ್ಷರಾದರು.
ಹಾಜಿಪುರದಲ್ಲಿಗಿನ್ನಿಸ್ ದಾಖಲೆ
1977ರಲ್ಲಿ ಹಾಜಿಪುರದಲ್ಲಿ 4.24 ಲಕ್ಷ ಮತಗಳ ಅಂತರದಿಂದ ಗೆಲುವು ದಾಖಲಿಸಿದ ರಾಮ್ ವಿಲಾಸ್ ಪಾಸ್ವಾನ್ ಅವರು ಗಿನ್ನಿಸ್ ವಿಶ್ವ ದಾಖಲೆ ಬರೆದರು. ರಾಮ್ ವಿಲಾಸ್ ಪಾಸ್ವಾನ್ ಅವರು 2014ರಲ್ಲಿ ಎಲ್ ಜೆಪಿ ಪರ ಸ್ಪರ್ಧಿಸಿ 4,55,652 ಮತಗಳನ್ನು(ಶೇ50.31) ಗಳಿಸಿದರು.
ಕಾಂಗ್ರೆಸ್ಸಿನ ಸಂಜೀವ್ ಪ್ರಸಾದ್ ತೋನಿ ಅವರು 2,30,152(ಶೇ25.41) ಮತಗಳಿಸಿ ಸೋಲು ಕಂಡರು. 2014ರಲ್ಲಿ 9,04,753 ಮತಗಳು ದಾಖಲಾಗಿದ್ದು, ಶೇ55ರಷ್ಟು ಮತದಾನವಾಗಿತ್ತು.
2014ರಲ್ಲಿ ಯುನೈಟೆಡ್ ಪ್ರೊಗ್ರೆಸಿವ್ ಅಲೈಯನ್ಸ್(ಯುಪಿಎ) ಗೆ ಬೆಂಬಲ ವ್ಯಕ್ತಪಡಿಸಿ, ಕೇಂದ್ರ ರಸಗೊಬ್ಬರ ಖಾತೆ ಹಾಗೂ ಉಕ್ಕು ಖಾತೆ ರಾಜ್ಯ ಸಚಿವರಾಗಿದ್ದರು. 2004ರಲ್ಲಿ ಲೋಕಸಭೆ ಚುನಾವಣೆ ಗೆದ್ದರೂ 2009ರಲ್ಲಿ ಸೋಲು ಕಂಡರು. 2010 ರಿಂದ 2014ರ ಅವಧಿಯಲ್ಲಿ ರಾಜ್ಯಸಭಾ ಸದಸ್ಯರಾಗಿದ್ದರು. 2014ರಲ್ಲಿ 16ನೇ ಲೋಕಸಭೆ ಮತ್ತೆ ಇದೇ ಹಾಜಿಪುರ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾದರು.
ವೈಯಕ್ತಿಕ ಬದುಕು
1946ರಲ್ಲಿ ಖಗರಿಯಾ ಜಿಲ್ಲೆ ಶಹಾರಬನ್ನಿ ಗ್ರಾಮದವರಾದ ಜಮುನ್ ಪಾಸ್ವಾನ್ ಹಾಗೂ ಸಿಯಾ ದೇವಿ ಪುತ್ರನಾಗಿ ಜನನ. ಬಿಹಾರದ ದಲಿತ ಕುಟುಂಬದಲ್ಲಿ ಜನಿಸಿದ ಪಾಸ್ವಾನ್, ಪಟ್ನಾ ವಿಶ್ವವಿದ್ಯಾಲಯದಲ್ಲಿ ಕಾನೂನು ಮತ್ತು ಕಲಾ ಪದವಿ ಪಡೆದುಕೊಂಡರು. 1969ರಲ್ಲಿ ರಾಜಕುಮಾರಿ ದೇವಿ ಅವರನ್ನು 1982ರಲ್ಲಿ ರೀನಾ ಶರ್ಮರನ್ನು ಮದುವೆಯಾದರು. ಚಿರಾಗ್ ಪಾಸ್ವಾನ್ ಸೇರಿ ನಾಲ್ವರು ಮಕ್ಕಳು. 2014ರಲ್ಲಿ ಅವರ ಲೋಕಸಭೆ ನಾಮಪತ್ರಿಕೆ ಸಲ್ಲಿಕೆಯ ಬಗ್ಗೆ ಪ್ರಶ್ನೆಗಳು ಎದ್ದಾಗ, ಪತ್ನಿಗೆ 1981ರಲ್ಲಿಯೇ ವಿಚ್ಛೇದನ ನೀಡಿದ್ದಾಗಿ ಬಹಿರಂಗಪಡಿಸಿದರು. ಮೊದಲ ಪತ್ನಿಯಿಂದ ಉಷಾ ಮತ್ತು ಆಶಾ ಎಂಬ ಇಬ್ಬರು ಹೆಣ್ಣುಮಕ್ಕಳಿದ್ದಾರೆ. 1983ರಲ್ಲಿ ಅವರು ಅಮೃತಸರದ ಪಂಜಾಬಿ ಹಿಂದೂ ಕುಟುಂಬದ ಗಗನಸಖಿ ರೀನಾ ಶರ್ಮಾ ಅವರನ್ನು ಮದುವೆಯಾದರು. ಅವರಿಗೆ ಇಬ್ಬರು ಮಕ್ಕಳು. ಅವರ ಪುತ್ರ ಚಿರಾಗ್ ಪಾಸ್ವಾನ್ ನಟ ಮತ್ತು ರಾಜಕಾರಣಿಯಾಗಿ ಗುರುತಿಸಿಕೊಂಡಿದ್ದಾರೆ.
ಪೊಲೀಸ್ ಆಗಲಿಲ್ಲ, ರಾಜಕಾರಣಿಯಾದರು
ಬಿಹಾರ ನಾಗರಿಕ ಸೇವಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಪೊಲೀಸ್ ಉಪ ವರಿಷ್ಠಾಧಿಕಾರಿಯಾಗಿ ಆಯ್ಕೆಯಾದರು. 1968ರಲ್ಲಿ 22 ವರ್ಷದ ಅವರು ಮನೆಯ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಖಾಜಿಗಡ ಜಿಲ್ಲೆಯ ಶಹರ್ಬನಿ ಗ್ರಾಮಕ್ಕೆ ಮರಳಿದ್ದರು. ಆಗ ಊರಲ್ಲಿ ನಡೆದ ಘಟನೆ ಅವರ ಬದುಕನ್ನು ಬದಲಿಸಿತು. ವೈದ್ಯಕೀಯ ವೆಚ್ಚಕ್ಕಾಗಿ ಮಾಲೀಕನಿಂದ 150 ರೂ ಪಡೆದು ಮರಳಿ ಕೊಡದೆ ಇದ್ದ ದಲಿತ ವ್ಯಕ್ತಿಯೊಬ್ಬನನ್ನು ಕಟ್ಟಿಹಾಕಿ ನೂರಾರು ಜನರ ಮುಂದೆ ಪಂಚಾಯಿತಿಯಲ್ಲಿ ವಿಚಾರಣೆ ಮಾಡಲಾಗುತ್ತಿತ್ತು. ಪೊಲೀಸ್ ಅಧಿಕಾರಿಯಾಗುವ ಹುಮ್ಮಸ್ಸಿನಲ್ಲಿದ್ದ ಪಾಸ್ವಾನ್, ಆ ವ್ಯಕ್ತಿಯನ್ನು ಬಿಡಿಸಿದರು. ಆರೋಪಕ್ಕೆ ಪುರಾವೆಯಾಗಿ ತಂದಿದ್ದ ಲೆಕ್ಕದ ಪುಸ್ತಕವನ್ನು ಹರಿದು ಹಾಕಿದರು. ಯುವ ಪಾಸ್ವಾನ್ ಆಗಲೇ ಆ ಹಳ್ಳಿ ಜನರ ಪಾಲಿನ ಹೀರೋ ಆದರು. ಅವರ ಜನಪ್ರಿಯತೆ ಎಲ್ಲೆಡೆ ಹರಡಿತು. ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಮನವೊಲಿಸಿದರು. ಹೀಗಾಗಿ, ಪೊಲೀಸ್ ಅಧಿಕಾರಿಯ ಉದ್ಯೋಗಕ್ಕೆ ಸೇರುವ ಬದಲು ಅವರು ರಾಜಕೀಯದಲ್ಲಿ ವೃತ್ತಿ ಕಟ್ಟಿಕೊಳ್ಳಲು ಪಾಸ್ವಾನ್ ಮುಂದಾದರು. ಪಾಸ್ವಾನ್ ಪೊಲೀಸ್ ಕೆಲಸ ಬಿಟ್ಟು ರಾಜಕೀಯಕ್ಕೆ ಹೊರಟಿದ್ದು ಅವರ ತಂದೆಗೆ ಇಷ್ಟವಿರಲಿಲ್ಲ. ಆದರೆ, ಸೋಷಿಯಲಿಸ್ಟ್ ಪಕ್ಷದಲ್ಲಿದ್ದ ಸ್ನೇಹಿತರೊಬ್ಬರು, 'ನೀನು ಸರ್ಕಾರವಾಗಬೇಕು ಎಂದಿದ್ದರೆ ಶಾಸಕನಾಗು. ಸೇವಕನಾಗಲು ಬಯಸಿದ್ದರೆ ಪೊಲೀಸ್ ಕೆಲಸಕ್ಕೆ ಸೇರಿಕೋ' ಎಂದು ಹೇಳಿದ್ದರಂತೆ.
ಸಚಿವರಾಗಿ ಪಾಸ್ವಾನ್
1989-90ರ ಅವಧಿಯಲ್ಲಿ ವಿಪಿ ಸಿಂಗ್ ನೇತೃತ್ವದ ನ್ಯಾಷನಲ್ ಪ್ರಂಟ್ ಸರ್ಕಾರದಲ್ಲಿ ಕಾರ್ಮಿಕ ಮತ್ತು ಕಲ್ಯಾಣ ಸಚಿವರಾಗಿ ಪಾಸ್ವಾನ್ ಕಾರ್ಯನಿರ್ವಹಿಸಿದ್ದರು. 1996-98ರ ಅವಧಿಯಲ್ಲಿನ ನ್ಯಾಷನಲ್ ಫ್ರಂಟ್ ಸರ್ಕಾರದ ಅವಧಿಯಲ್ಲಿ ರೈಲ್ವೆ ಸಚಿವರಾಗಿದ್ದರು. ವಾಜಪೇಯಿ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದಾಗ 1999-2001ರ ಅವಧಿಯಲ್ಲಿ ಸಂವಹನ ಸಚಿವರಾಗಿ ಮತ್ತು 2001-02ರಲ್ಲಿ ಕಲ್ಲಿದ್ದಲು ಹಾಗೂ ಗಣಿ ಖಾತೆ ಸಚಿವರಾಗಿದ್ದರು. ಸರ್ಕಾರದ ಅವಧಿಯಲ್ಲಿಯೇ ಎಲ್ಜೆಪಿ ಮೈತ್ರಿಯಿಂದ ಹೊರನಡೆಯಿತು. ಕಾಂಗ್ರೆಸ್ನ ವಿರೋಧಿ ಪಾಳೆಯದಲ್ಲಿಯೇ ರಾಜಕಾರಣದಲ್ಲಿದ್ದ ಅವರು 2004ರಲ್ಲಿ ಅಧಿಕಾರಕ್ಕೆ ಬಂದ ಯುಪಿಎ ಸರ್ಕಾರದೊಂದಿಗೆ ಕೂಡ ಕೈಜೋಡಿಸಿದರು. ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಹಾಗೂ ಉಕ್ಕು ಖಾತೆಯನ್ನು ನಿಭಾಯಿಸಿದರು.