ರಾಜ್ಯೋತ್ಸವ ಪ್ರಶಸ್ತಿ; ಬಳ್ಳಾರಿ ವೈದ್ಯೆ ನಾಗರತ್ನ ಪರಿಚಯ
ಬಳ್ಳಾರಿ, ಅಕ್ಟೋಬರ್ 28: 2020ರ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಪ್ರಕಟಿಸಲಾಗಿದ್ದು, ವೈದ್ಯಕೀಯ ಕ್ಷೇತ್ರದಲ್ಲಿ ಬಳ್ಳಾರಿಯ ಡಾ.ಎ.ನಾಗರತ್ನ ಅವರಿಗೆ ಪ್ರಶಸ್ತಿಯನ್ನು ನೀಡಲಾಗುತ್ತಿದೆ.
ಬುಧವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ. ಟಿ. ರವಿ ಅವರು 2020ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಿಸಿದ್ದು, ನವೆಂಬರ್ 7ರಂದು ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತದೆ. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಒಟ್ಟು 65 ಜನರಿಗೆ ಪ್ರಶಸ್ತಿಯನ್ನು ಘೋಷಣೆ ಮಾಡಲಾಗಿದೆ.
65 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ: ಪುರಸ್ಕೃತರ ಪಟ್ಟಿ
ವೈದ್ಯಕೀಯ ಕ್ಷೇತ್ರದಲ್ಲಿ ಬಳ್ಳಾರಿಯ ಡಾ.ಎ.ನಾಗರತ್ನ ಅವರಿಗೆ ಈ ವರ್ಷದ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ಸಂಘ-ಸಂಸ್ಥೆ ಅಡಿ ಬಳ್ಳಾರಿಯ ದೇವದಾಸಿ ಸ್ವಾವಲಂಬನಾ ಕೇಂದ್ರಕ್ಕೂ ಪ್ರಶಸ್ತಿ ಘೋಷಣೆಯಾಗಿದೆ.
ವೈದ್ಯಕೀಯ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಡಾ.ಎ.ನಾಗರತ್ನ ಅವರು, ಬಳ್ಳಾರಿಯ ಸಂಗನಕಲ್ಲು ಸಮೀಪ ಸಮಾಜದ ಹಿರಿಯ ಜೀವಿಗಳಿಗೆ ವೃದ್ಧಾಶ್ರಮ ತೆರೆದು ಅವರಿಗೆ ಉಚಿತ ಸೇವೆ ನೀಡುತ್ತಿದ್ದಾರೆ. ಕಳೆದ 40 ವರ್ಷಗಳಿಂದ ವೈದ್ಯಕೀಯ ಕ್ಷೇತ್ರದಲ್ಲಿ ಹೆಸರು ಗಳಿಸಿದ್ದು, ನೊಂದ ಹಿರಿಯ ಜೀವಿಗಳ ಪಾಲಿಗೆ ಆಸರೆಯಾಗಿದ್ದಾರೆ.
ಚನ್ನಪಟ್ಟಣದ ಜನಾನುರಾಗಿ ವೈದ್ಯ ವೆಂಕಟಪ್ಪನವರಿಗೆ ಒಲಿದ ರಾಜ್ಯೋತ್ಸವ ಪ್ರಶಸ್ತಿ
ಅಲ್ಲದೆ ಬಳ್ಳಾರಿಯಲ್ಲಿರುವ ಶಾರದಾ ವಿದ್ಯಾಪೀಠ ಶಾಲೆಯ ಸದಸ್ಯರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದು, ಹಲವು ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಿದ್ದಾರೆ. ನಾಗರತ್ನ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಲಭಿಸಿರುವುದಕ್ಕೆ ಜಿಲ್ಲೆಯ ಜನರು ಹರ್ಷ ವ್ಯಕ್ತಪಡಿಸಿದ್ದಾರೆ.