3ನೇ ಬಾರಿ ರಾಜ್ಯಸಭಾ ಸದಸ್ಯರಾದ ರಾಜೀವ್ ಚಂದ್ರಶೇಖರ್ಗೆ ಮಂತ್ರಿಗಿರಿ ಭಾಗ್ಯ
ನವದೆಹಲಿ, ಜುಲೈ 07: ಕೇಂದ್ರದ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಸಂಪುಟ ಪುನಾರಚನೆಯಲ್ಲಿ ಕರ್ನಾಟಕದ ನಾಲ್ವರು ಸಂಸದರಿಗೆ ಸಚಿವಗಿರಿ ನೀಡಲಾಗಿದೆ. ರಾಜ್ಯದ ಮೂವರು ಲೋಕಸಭಾ ಸದಸ್ಯರ ಜೊತೆ ಒಬ್ಬ ರಾಜ್ಯಸಭೆ ಸದಸ್ಯರಿಗೆ ಮಂತ್ರಿಗಿರಿ ಭಾಗ್ಯ ಒಲಿದು ಬಂದಿದೆ.
Recommended Video
ಕರ್ನಾಟಕದಿಂದ ಲೋಕಸಭೆಗೆ ಆಯ್ಕೆ ಆಗಿರುವ ಸಂಸದ ಭಗವಂತ್ ಖೂಬಾ, ಸಂಸದ ಎ ನಾರಾಯಣಸ್ವಾಮಿ, ಸಂಸದೆ ಶೋಧಾ ಕರಂದ್ಲಾಜೆ ಹಾಗೂ ರಾಜ್ಯಸಭೆಗೆ ಆಯ್ಕೆ ಆಗಿರುವ ಸಂಸದ ರಾಜೀವ್ ಚಂದ್ರಶೇಖರ್ ಪಾಲಿಗೆ ಈ ಬಾರಿ ಸಚಿವ ಸ್ಥಾನ ಅರಸಿ ಬಂದಿದೆ.
ಸಾಮಾನ್ಯ ಕಾರ್ಯಕರ್ತನಾಗಿ ಕೇಂದ್ರ ಮಂತ್ರಿಯಾದ ಎ. ನಾರಾಯಣಸ್ವಾಮಿ ವ್ಯಕ್ತಿ ಚಿತ್ರ
ಭಾರತದಲ್ಲಿ ಹಿರಿಯ ಪತ್ರಕರ್ತರಾಗಿ, ಉದ್ಯಮಿಯಾಗಿ, ರಾಜಕಾರಣಿಯಾಗಿ ಗುರುತಿಸಿಕೊಂಡಿರುವ ರಾಜೀವ್ ಚಂದ್ರಶೇಖರ್ ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆ ಆಗಿದ್ದಾರೆ. ಪ್ರಧಾನಿ ಮೋದಿ ನೇತೃತ್ವದ 2.0 ಸರ್ಕಾರದಲ್ಲಿ ಮಂತ್ರಿ ಕುರ್ಚಿಗೆ ಏರಿರುವ ರಾಜೀವ್ ಚಂದ್ರಶೇಖರ್ ಕುರಿತು ವ್ಯಕ್ತಿ ಪರಿಚಯ 'Oneindia' ಓದುಗರಿಗಾಗಿ.
ಹುಟ್ಟು ಮತ್ತು ಬೆಳವಣಿಗೆ:
ರಾಜೀವ್ ಚಂದ್ರಶೇಖರ್ 1964ರ ಮೇ 31ರಂದು ಗುಜರಾತಿನ ಅಹ್ಮದಾಬಾದ್ ನಲ್ಲಿ ಜನಿಸಿದರು. ಇವರ ತಂದೆ ಭಾರತೀಯ ವಾಯುಸೇನೆಯಲ್ಲಿ ಕಮಾಂಡರ್ ಆಗಿ ಸೇವೆ ಸಲ್ಲಿಸಿದ್ದಾರೆ. ರಾಜೀವ್ ಚಂದ್ರಶೇಖರ್ ಹಲವು ವಿಶ್ವವಿದ್ಯಾಲಯಗಳಲ್ಲಿ ವ್ಯಾಸಂಗ ಮಾಡಿದ್ದಾರೆ. ಮಣಿಪಾಲ್ ಇನ್ಸ್ ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಎಲೆಕ್ಟ್ರಾನಿಕ್ ಇಂಜಿನಿಯರಿಂಗ್ ವ್ಯಾಸಾಂಗ ಮಾಡಿದ್ದಾರೆ. 1988ರಲ್ಲಿ ಇಲ್ಲಿನಾಸ್ ಇನ್ಸ್ ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಕಂಪ್ಯೂಟರ್ ಸೈನ್ಸ್ ವಿಷಯದಲ್ಲಿ ಪದವಿ ಪಡೆದುಕೊಂಡರು. ಚಿಕಾಗೋದ ಹಾರ್ವರ್ಡ್ ಬಿಜಿನೆಸ್ ಸ್ಕೂಲ್ ನಲ್ಲಿ ಆರು ವಾರಗಳ ಅಡ್ವಾನ್ಸ್ ಮ್ಯಾನೆಂಜ್ ಮೆಂಟ್ ಪ್ರೊಗ್ರಾಮ್ ನಲ್ಲಿ ಹಾಜರಾಗಿದ್ದರು.
ರಾಜೀವ್ ಚಂದ್ರಶೇಖರ್ ವೈಯಕ್ತಿಕ ಜೀವನ:
- ಸಿಲಿಕಾನ್ ವ್ಯಾಲಿಯಲ್ಲಿ ತಂತ್ರಾಂಶ ಮತ್ತು ಮೈಕ್ರೊಪ್ರೊಸೆಸರ್ ಕ್ಷೇತ್ರದಲ್ಲಿ ವೃತ್ತಿಜೀವನ ಆರಸುತ್ತಾ ಇಂಟೆಲ್ ಕಂಪನಿಯಲ್ಲಿ ಕಾರ್ಯ ನಿರ್ವಹಿಸಿದರು. ಐತಿಹಾಸಿಕ 80486 ಪ್ರೊಸೆಸ್ಸರ್ ಮತ್ತು ಪೆಟಿಯಂ ನಿರ್ಮಿಸಿದ ತಂಡದ ಭಾಗವಾಗಿದ್ದರು.
- 1992ರಲ್ಲಿ ಭಾರತಕ್ಕೆ ಮರಳಿದರು ಅಂದಿನಿಂದಲೂ ಪತ್ನಿ ಮತ್ತು ಇಬ್ಬರು ಮಕ್ಕಳ ಜೊತೆ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ತಂದೆ-ತಾಯಿ, ಸಹೋದರಿಯ ಕುಟುಂಬ ಸದಸ್ಯರೂ ಸಹ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.
- ಭಾರತದ ಅತ್ಯಂತ ದೊಡ್ಡ ಮೊದಲನೆ ಸೆಲ್ಯೂಲಾರ್ ಕಂಪನಿ, ಬಿಪಿಎಲ್ ಮೊಬೈಲ್ ಅನ್ನು 1994ರಲ್ಲಿ ಆರಂಭಿಸಿದರು. ಆಗ ರಾಜೀವ್ ಚಂದ್ರಶೇಖರ್ ಅವರ ವಯಸ್ಸು ಕೇವಲ 30.
PM Modi Cabinet Reshuffle Live Updates: 12 ಸಚಿವರು ಔಟ್, 43 ಇನ್
ರಾಜಕೀಯದಲ್ಲಿ ರಾಜೀವ್ ಚಂದ್ರಶೇಖರ್:
ಕರ್ನಾಟಕದಿಂದ 2006ರಲ್ಲಿ ಮೊದಲ ಬಾರಿಗೆ ಸ್ವತಂತ್ರ ಅಭ್ಯರ್ಥಿಯಾಗಿ ರಾಜೀವ್ ಚಂದ್ರಶೇಖರ್ ರಾಜ್ಯಸಭೆಗೆ ಆಯ್ಕೆಯಾದರು. ಅಲ್ಲಿಂದ ಆರು ವರ್ಷಗಳ ಅವಧಿಗೆ ಸತತ ಮೂರು ಬಾರಿ ರಾಜ್ಯಸಭೆಗೆ ರಾಜೀವ್ ಚಂದ್ರಶೇಖರ್ ಆಯ್ಕೆಯಾಗಿದ್ದಾರೆ. 2018ರಲ್ಲಿ ಭಾರತೀಯ ಜನತಾ ಪಕ್ಷವನ್ನು ಸೇರಿಕೊಂಡ ರಾಜ್ಯದಿಂದ ಮೂರನೇ ಬಾರಿ ರಾಜ್ಯಸಭೆ ಸದಸ್ಯರಾಗಿ ಆಯ್ಕೆಯಾದರು.
ಪ್ರಸ್ತುತ ಸಂಸದ ರಾಜೀವ್ ಚಂದ್ರಶೇಖರ್ ಬಿಜೆಪಿಯ ರಾಷ್ಟ್ರೀಯ ವಕ್ತಾರರಾಗಿ ಗುರುತಿಸಿಕೊಂಡಿದ್ದಾರೆ. ಕೇರಳ ಬಿಜೆಪಿಯ ವೈಸ್ ಚೇರ್ ಮೆನ್ ಆಗಿದ್ದಾರೆ. ಇದರ ಜೊತೆಗೆ ಹಣಕಾಸು ಕುರಿತು ಸಂಸದೀಯ ಸ್ಥಾಯಿ ಸಮಿತಿಯ ಸದಸ್ಯರಾಗಿ ಹಾಗೂ ಸಾರ್ವಜನಿಕ ಖಾತೆಗಳ ಸಮಿತಿ (ಪಿಎಸಿ), ಡೇಟಾ ಸಂರಕ್ಷಣಾ ಮಸೂದೆ, 2019 ಮತ್ತು ಜಂಟಿ ಸಮಿತಿಯ ಸದಸ್ಯ, ಸಂವಹನ ಸಚಿವಾಲಯ, MoE & IT ಕುರಿತ ಸಲಹಾ ಸಮಿತಿಯ ಸದಸ್ಯ, ವಿಶ್ವ ವ್ಯವಹಾರಗಳ ಭಾರತೀಯ ಮಂಡಳಿಯ ಸದಸ್ಯರಾಗಿ ರಾಜೀವ್ ಚಂದ್ರಶೇಖರ್ ಸೇವೆ ಸಲ್ಲಿಸುತ್ತಿದ್ದಾರೆ.
ರಾಜೀವ್ ಚಂದ್ರಶೇಖರ್ ಸೇವೆ:
- ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ವಾಣಿಜ್ಯ ಮತ್ತು ಉದ್ಯಮ ಮಂಡಳಿಯ ಯುವ ಸದಸ್ಯರಲ್ಲಿ ಒಬ್ಬರಾಗಿದ್ದರು. ಭಾರತೀಯ ವಾಣಿಜ್ಯೋದ್ಯಮ ಮಹಾಸಂಘಗಳ ಒಕ್ಕೂಟದ ಅತ್ಯಂತ ಕಿರಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.
- ರಾಜೀವ್ ಚಂದ್ರಶೇಖರ್ ತಮ್ಮ ಜ್ಯುಪಿಟರ್ ಸಂಸ್ಥೆಯ ಮೂಲಕ ಮಾಡಿರುವ ಹಲವು ಹೂಡಿಕೆಗಳಲ್ಲಿ ಸುವರ್ಣ ನ್ಯೂಸ್, ಕನ್ನಡ ಪ್ರಭ, ರಿಪಬ್ಲಿಕ್ ಟಿವಿ ಮತ್ತು ಅವುಗಳ ಡಿಜಿಟಲ್ ಆವೃತ್ತಿಗಳು ಸಹ ಸೇರಿವೆ.
- 1990ರ ದಶಕದ ಮಧ್ಯಭಾಗದಿಂದ ಬಿಜೆಪಿಯೊಂದಿಗೆ ಒಡನಾಟ ಹೊಂದಿದ್ದಾರೆ. ರಾಷ್ಟ್ರ ಮಟ್ಟದಲ್ಲಿ ಮತ್ತು ಕರ್ನಾಟಕದ ಹಲವಾರು ಚುನಾವಣೆಗಳಲ್ಲಿ ಬಿಜೆಪಿಯನ್ನು ಬೆಂಬಲಿಸಿದ್ದಾರೆ ಮತ್ತು ಪಕ್ಷಕ್ಕಾಗಿ ಕೆಲಸ ಮಾಡಿದ್ದಾರೆ.
- ಸಂಸದರಾಗಿ ರಾಜೀವ್ ಚಂದ್ರಶೇಖರ್ ನಿರಂತರವಾಗಿ ಕೆಲಸ ಮಾಡಿದ್ದಾರೆ. ಬೆಂಗಳೂರು ಮತ್ತು ಬೆಂಗಳೂರಿನ ನಾಗರೀಕರ ಹಿತಾಸಕ್ತಿ ಕಾಪಾಡುವುದು, ನಗರಾಡಳಿತ, ಡಿಜಿಟಲ್ ಇಂಡಿಯಾ, ನಿವೃತ್ತ ಮತ್ತು ಸೇವಾನಿರತ ಯೋಧರ ಕಲ್ಯಾಣ, ಮಕ್ಕಳ ರಕ್ಷಣೆ ಮೊದಲಾದ ವಿಷಯಗಳ ಬಗ್ಗೆ ಅತೀವ ಕಾಳಜಿ ಹೊಂದಿದ್ದಾರೆ.
ಕರ್ನಾಟಕದ ಪಾಲಿಗೆ ರಾಜೀವ್ ಚಂದ್ರಶೇಖರ್ ಕೊಡುಗೆ:
- ಕಳೆದ 2009ರಲ್ಲಿ ಉತ್ತರ ಕರ್ನಾಟಕದಲ್ಲಿ ಸಂಭವಿಸಿದ ಪ್ರವಾಹದಿಂದ ಮನೆ ಕಳೆದುಕೊಂಡಿದ್ದವರಿಗೆ ಪುರ್ನವಸತಿ ಕಲ್ಪಿಸಲು ಯಡಿಯೂರಪ್ಪ ಸರ್ಕಾರ ಹಮ್ಮಿಕೊಂಡಿದ್ದ 'ಆಶ್ರಯ' ಯೋಜನೆಯನ್ನು ಯಶಸ್ವಿಗೊಳಿಸಲು ಸಹಕರಿಸಿದ್ದಾರೆ.
- ಸಿಸ್ಕೋ, ಇನ್ಫೋಸಿಸ್, ವಿಪ್ರೋ ಮುಂತಾದ ಕಂಪನಿಗಳನ್ನು ಒಗ್ಗೂಡಿಸಿ ನೆರೆ ಪೀಡಿತ ಸುಮಾರು 40 ಸಾವಿರ ಮನೆಗಳನ್ನು ನಿರ್ಮಿಸುವ ಅಭೂತಪೂರ್ವ ಕಾರ್ಯ ಕೈಗೊಂಡರು.
- ತಮ್ಮ ಆರ್ ಸಿ ಪ್ರತಿಷ್ಠಾನದ ಮೂಲಕ ಬಾಗಲಕೋಟೆ ಜಿಲ್ಲೆಯ ಶಿರಬಡಗಿ ಗ್ರಾಮದಲ್ಲಿ 293ಕ್ಕೂ ಹೆಚ್ಚು ಮನೆಗಳನ್ನು ನಿರ್ಮಿಸಿಕೊಟ್ಟರು.
- ರಾಷ್ಟ್ರೀಯ ಸೇನಾ ಸ್ಮಾರಕ: ಬೆಂಗಳೂರಿನಲ್ಲಿರುವ ಸ್ವತಂತ್ರ ಭಾರತದ ಪ್ರಥಮ ಸೇನಾ ಸ್ಮಾರಕ. ರಾಜೀವ್ ಚಂದ್ರಶೇಖರ್ ಅವರ ಕನಸಿನ ಕುಡಿ. ಇದು ಕಾರ್ಯಾರಂಭಗೊಂಡ ದಿನದಿಂದಲೂ ರಾಜೀವ್ ಅವರು ಅಲ್ಲಿನ 210 ಅಡಿ ಧ್ವಜಸ್ತಂಭದ ಮೇಲೆ ಹಾರಾಡುವ ರಾಷ್ಟ್ರಧ್ವಜವನ್ನು ಕಾಣಿಕೆಯಾಗಿ ನೀಡುತ್ತಾ ಬಂದಿದ್ದಾರೆ.