Oneindia Explainer: ರಾಜ್ಯಸಭೆಗೆ ಚುನಾವಣೆ ಹೇಗೆ ನಡೆಯಲಿದೆ? ಮತದಾನ ಸೂತ್ರ ಹೇಗೆ?
ದೇಶದಲ್ಲಿ ರಾಜ್ಯಸಭೆ ಚುನಾವಣೆಯ ಭರಾಟೆ ಮುಂದುವರೆದಿದೆ. 15 ರಾಜ್ಯಗಳ 57 ಸ್ಥಾನಗಳಿಗೆ ಚುನಾವಣೆ ನಿಗದಿಯಾಗಿತ್ತು. ಆದರೆ, ಈ ಪೈಕಿ11 ರಾಜ್ಯಗಳ ಒಟ್ಟು 41 ರಾಜ್ಯಸಭೆ ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಳಿದ ಸ್ಥಾನಗಳಿಗೆ ಶುಕ್ರವಾರ(ಜೂನ್ 10) ಚುನಾವಣೆ ನಡೆಯಲಿದೆ.
ಮಹಾರಾಷ್ಟ್ರ, ರಾಜಸ್ಥಾನ, ಕರ್ನಾಟಕ ಮತ್ತು ಹರ್ಯಾಣ ರಾಜ್ಯಗಳಲ್ಲಿನ 16 ಸದಸ್ಯರ ಆಯ್ಕೆ ಕುತೂಹಲ ಕೆರಳಿಸಿದೆ. ಈ ನಾಲ್ಕು ರಾಜ್ಯಗಳಲ್ಲಿ ಯಾರಿಗೆ ಜಯ ಲಭಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.
Rajya Sabha Elections 2022 Live : ರಾಜ್ಯಸಭೆ ಚುನಾವಣೆ ರಾಜಕೀಯ
ಕಳೆದ ಜೂನ್ ಮತ್ತು ಆಗಸ್ಟ್ ನಡುವೆ ವಿವಿಧ ದಿನಾಂಕಗಳಲ್ಲಿ ಸದಸ್ಯರ ನಿವೃತ್ತಿಯಿಂದಾಗಿ ಖಾಲಿಯಾಗುವ ಸ್ಥಾನಗಳಿಗೆ ಚುನಾವಣೆ ನಡೆಸಲಾಗುತ್ತಿದೆ. ಕೇಂದ್ರ ಸಚಿವ ಪಿಯೂಷ್ ಗೋಯಲ್ ಮತ್ತು ಮುಖ್ತಾರ್ ಅಬ್ಬಾಸ್ ನಖ್ವಿ, ಕಾಂಗ್ರೆಸ್ ನಾಯಕ ಅಂಬಿಕಾ ಸೋನಿ, ಜೈರಾಮ್ ರಮೇಶ್ ಮತ್ತು ಕಪಿಲ್ ಸಿಬಲ್ ಮತ್ತು ಬಿಎಸ್ಪಿಯ ಸತೀಶ್ ಚಂದ್ರ ಮಿಶ್ರಾ ನಿವೃತ್ತಿ ಆಗಲಿದ್ದಾರೆ.
Oneindia Explainer: ರಾಜ್ಯಸಭೆಗೆ ಚುನಾವಣೆ ಹೇಗೆ ನಡೆಯಲಿದೆ?
ಜೂನ್ 10ರ ಶುಕ್ರವಾರ ಮತದಾನ ಪ್ರಕ್ರಿಯೆ ನಡೆಯಲಿದೆ. ಸಂಜೆ ಮತ ಎಣಿಕೆ ನಡೆದು ಫಲಿತಾಂಶ ರಾತ್ರಿ ವೇಳೆಗೆ ಘೋಷಣೆಯಾಗುವ ಸಾಧ್ಯವಿದೆ. ಈ ಚುನಾವಣೆಯಲ್ಲಿ ಗೆದ್ದ ಹೊಸ ಸದಸ್ಯರು ಜುಲೈನಲ್ಲಿ ನಡೆಯಲಿರುವ ಅಧ್ಯಕ್ಷರ ಚುನಾವಣೆಯಲ್ಲಿ ಮತ ಚಲಾಯಿಸುವ ಸಾಧ್ಯತೆ ಇರುತ್ತದೆ. ರಾಜ್ಯಸಭೆಗೆ ಚುನಾವಣೆ ಹೇಗೆ ನಡೆಯಲಿದೆ? ಪ್ರಕ್ರಿಯೆ, ಸೂತ್ರ ಹೇಗೆ ತಿಳಿಯಲು ಮುಂದೆ ಓದಿ..
ಕರ್ನಾಟಕದಿಂದ ತಲಾ ನಾಲ್ವರು ಸದಸ್ಯರು ನಿವೃತ್ತ
ಉತ್ತರ ಪ್ರದೇಶದಲ್ಲಿ 11 ಸ್ಥಾನಗಳು ಖಾಲಿಯಾಗಿದ್ದರೆ, ತಮಿಳುನಾಡು ಮತ್ತು ಮಹಾರಾಷ್ಟ್ರದಿಂದ ತಲಾ ಆರು ಸದಸ್ಯರು, ಬಿಹಾರದಿಂದ ಐದು ಮತ್ತು ಆಂಧ್ರಪ್ರದೇಶ, ರಾಜಸ್ಥಾನ ಮತ್ತು ಕರ್ನಾಟಕದಿಂದ ತಲಾ ನಾಲ್ವರು ಸದಸ್ಯರು ನಿವೃತ್ತರಾಗುತ್ತಿದ್ದಾರೆ.
ತಮಿಳುನಾಡು ಮತ್ತು ಮಹಾರಾಷ್ಟ್ರದಿಂದ ತಲಾ ಆರು ಸದಸ್ಯರು ನಿವೃತ್ತಿ ಹೊಂದಲಿದ್ದಾರೆ. ಬಿಹಾರದಿಂದ ಐದು ಮತ್ತು ಆಂಧ್ರಪ್ರದೇಶ, ರಾಜಸ್ಥಾನ ಮತ್ತು ಕರ್ನಾಟಕದಿಂದ ತಲಾ ನಾಲ್ವರು ಸದಸ್ಯರು ರಾಜ್ಯಸಭೆಯಿಂದ ನಿವೃತ್ತಿ ಆಗುತ್ತಿದ್ದಾರೆ. ಅದೇ ರೀತಿ ಮಧ್ಯಪ್ರದೇಶ ಮತ್ತು ಒಡಿಶಾದಿಂದ ತಲಾ ಮೂವರು, ತೆಲಂಗಾಣ, ಛತ್ತೀಸ್ಗಢ, ಪಂಜಾಬ್ ಜಾರ್ಖಂಡ್ ಮತ್ತು ಹರ್ಯಾಣದಿಂದ ತಲಾ ಇಬ್ಬರು ಮತ್ತು ಉತ್ತರಾಖಂಡದಿಂದ ಒಬ್ಬ ಸದಸ್ಯರು ನಿವೃತ್ತರಾಗಿದ್ದಾರೆ.
ರಾಜ್ಯಸಭಾ ಸದಸ್ಯರನ್ನು ಆಯ್ಕೆ ಹೇಗೆ?:
ಸಾರ್ವಜನಿಕರು ನೇರವಾಗಿ ರಾಜ್ಯಸಭಾ ಸದಸ್ಯರನ್ನು ಆಯ್ಕೆ ಮಾಡುವ ಅವಕಾಶವಿಲ್ಲ. ಆದರೆ, ಪರೋಕ್ಷವಾಗಿ ಆಯ್ಕೆ ಪ್ರಕ್ರಿಯೆ ಭಾಗವಾಗುತ್ತಾರೆ. ಜನರು ಆಯ್ಕೆ ಮಾಡಿದ ಶಾಸಕರು ಮತದಾನದ ಮೂಲಕ ಆಯ್ಕೆ ಮಾಡಬಹುದು. ಇದಲ್ಲದೆ, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರನ್ನು ರಾಷ್ಟ್ರಪತಿಗಳು ರಾಜ್ಯಸಭೆಗೆ ನಾಮ ನಿರ್ದೇಶನ ಮಾಡುತ್ತಾರೆ.
245 ಸದಸ್ಯರು ಇರುತ್ತಾರೆ
ವಿವಿಧ ರಾಜ್ಯಗಳಲ್ಲಿ ವಿಧಾನ ಪರಿಷತ್ ಅನ್ನು ಮೇಲ್ಮನೆ ಎಂದು ಕರೆಯಲಾಗುತ್ತದೆ. ಹಾಗೆಯೇ ದೇಶದ ಶಾಸಕಾಂಗ ವ್ಯವಸ್ಥೆಯಲ್ಲಿ ರಾಜ್ಯಸಭೆಯನ್ನು ಮೇಲ್ಮನೆ ಎನ್ನಲಾಗುತ್ತದೆ. ಉಪ ರಾಷ್ಟ್ರಪತಿಗಳು ರಾಜ್ಯಸಭೆಯ ಸಭಾಪತಿಗಳಾಗಿರುತ್ತಾರೆ. ರಾಜ್ಯಸಭೆಯ ಒಟ್ಟು ಸದಸ್ಯರ ಬಲ 245. ಈ ಪೈಕಿ 233 ಮಂದಿ ಆಯ್ಕೆಯಾಗುವ ಸದಸ್ಯರಾಗಿದ್ದರೆ, 12 ಮಂದಿಯನ್ನು ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಂದ ರಾಷ್ಟ್ರಪತಿಗಳು ಆಯ್ಕೆ ಮಾಡಿ ನಾಮಾಂಕಿತಗೊಳಿಸುತ್ತಿದ್ದಾರೆ, ಸಾಂವಿಧಾನಿಕ ಮಿತಿಯಂತೆ ಮೇಲ್ಮನೆ ಸದಸ್ಯರ ಬಲ ಮಿತಿ 250 ದಾಟುವಂತಿಲ್ಲ. ರಾಜ್ಯಸಭೆಯ ಸ್ಥಾನ ಪ್ರಮಾಣವನ್ನು ವಿವಿಧ ರಾಜ್ಯಗಳ ಜನಸಂಖ್ಯೆ ಆಧಾರ ಮೇಲೆ ನಿರ್ಧರಿಸಲಾಗುತ್ತದೆ.
ಸದಸ್ಯರ ಆಯ್ಕೆ ಹೇಗೆ?
ರಾಜ್ಯಸಭೆಗೆ ಜನರು ನೇರವಾಗಿ ಸದಸ್ಯರನ್ನು ಆಯ್ಕೆ ಮಾಡುವಂತಿಲ್ಲ. 245 ಸದಸ್ಯರಲ್ಲಿ 12 ನಾಮ ನಿರ್ದೇಶಿತ ಸದಸ್ಯರು ಇರುತ್ತಾರೆ. ಕಲೆ, ಸಾಹಿತ್ಯ, ಕ್ರೀಡೆ, ಶಿಕ್ಷಣ, ನ್ಯಾಯಾಂಗ ಹೀಗೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಣ್ಯರನ್ನು ರಾಷ್ಟ್ರಪತಿಗಳು ರಾಜ್ಯಸಭೆಗೆ ನಾಮ ನಿರ್ದೇಶನ ಮಾಡುತ್ತಾರೆ. ಸಚಿನ್ ತೆಂಡೂಲ್ಕರ್, ಸುಪ್ರೀಂಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ರಂಜನ್ ಗೋಗಾಯ್ ಮುಂತಾದವರು ಹೀಗೆ ನಾಮ ನಿರ್ದೇಶನಗೊಂಡವರು
ಮತದಾನ ಪ್ರಕ್ರಿಯೆ:
ಪ್ರತಿ ಶಾಸಕರು ಓಪನ್ ಬ್ಯಾಲೆಟ್ ಮೂಲಕ ಮತದಾನ ಮಾಡುತ್ತಾರೆ. ಒಂದು ವರ್ಗಾವಣೆ ಮತ ಎಂದು ಪ್ರತಿ ವೋಟ್ ಪರಿಗಣಿಸಲಾಗುತ್ತದೆ. ಹೀಗಾಗಿ ಪ್ರತಿ ಶಾಸಕರ ಮತ ಒಮ್ಮೆ ಗಣನೆಗೆ ಬರುತ್ತದೆ.
ಸದಸ್ಯರ ಅವಧಿ ಎಷ್ಟು?
ನಾಮ ನಿರ್ದೇಶಿತ ಸದಸ್ಯರನ್ನು ಬಿಟ್ಟು ಉಳಿದ ರಾಜ್ಯಸಭಾ ಸದಸ್ಯರು ರಾಜ್ಯಗಳ ವಿಧಾನಸಭೆಯಿಂದ ಆಯ್ಕೆಯಾಗುತ್ತಾರೆ. ಜನರಿಂದ ಆಯ್ಕೆಯಾದ ಶಾಸಕರು ರಾಜ್ಯಸಭಾ ಸದಸ್ಯರನ್ನು ಆಯ್ಕೆ ಮಾಡುತ್ತಾರೆ. ರಾಜ್ಯಸಭಾ ಸದಸ್ಯರ ಅವಧಿ 6 ವರ್ಷ. ಇವರಲ್ಲಿ 1/3ರಷ್ಟು ಸದಸ್ಯರುಗಳು 2 ವರ್ಷಕ್ಕೊಮ್ಮೆ ನಿವೃತ್ತಿ ಹೊಂದುತ್ತಾರೆ. ಕರ್ನಾಟಕದಿಂದ 12 ಸದಸ್ಯರನ್ನು ರಾಜ್ಯಸಭೆಗೆ ಕಳಿಸಬಹುದಾಗಿದೆ. ಒಂದು ವೇಳೆ ಅಧಿಕಾರ ಅವಧಿಯಲ್ಲಿ ಸದಸ್ಯರು ಮೃತಪಟ್ಟರೆ ಅನರ್ಹಗೊಂಡರೆ, ರಾಜೀನಾಮೆ ಸಲ್ಲಿಸಿದರೆ, ಆ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಸಲಾಗುತ್ತದೆ.
ಮತದಾನ ಸೂತ್ರ ಹೇಗಿದೆ?
ಮತದಾನ ಸೂತ್ರ : ರಾಜ್ಯಸಭೆಯ ಸದಸ್ಯರನ್ನು ಶಾಸಕರು ಆಯ್ಕೆ ಮಾಡುವುದರಿಂದ, ಲೋಕಸಭೆಯಲ್ಲಿ ಹೆಚ್ಚಿನ ಬಲ ಹೊಂದಿರುವ ರಾಜಕೀಯ ಪಕ್ಷಗಳು ಹೆಚ್ಚಿನ ಸಂಸದರನ್ನು ಮೇಲ್ಮನೆಗೆ ಕಳುಹಿಸಬಹುದಾಗಿದೆ. ಆದರೆ, ಇದು ಎಲ್ಲಾ ಸಮಯದಲ್ಲೂ ಸಾಧ್ಯವಾಗುವುದಿಲ್ಲ.
ಮತದಾನ ವ್ಯವಸ್ಥೆಯಲ್ಲಿ ಶಾಸಕರು ಪ್ರತಿ ಸ್ಥಾನಕ್ಕೂ ಮತ ಹಾಕುವುದಿಲ್ಲ. ಹಾಗಿದ್ದಲ್ಲಿ ಆಡಳಿತ ಪಕ್ಷದ ಅಭ್ಯರ್ಥಿಗಳು ಮಾತ್ರ ಜಯಭೇರಿ ಬಾರಿಸುತ್ತಿದ್ದರು. ಬದಲಾಗಿ, ಶಾಸಕರು ತಮ್ಮ ಆದ್ಯತೆಗೆ ಅನುಗುಣವಾಗಿ ವಿವಿಧ ಅಭ್ಯರ್ಥಿಗಳನ್ನು ಪಟ್ಟಿ ಮಾಡಬೇಕು.
ಉಳಿದ ಮತವನ್ನು ಉಳಿದ ಅಭ್ಯರ್ಥಿಗೆ
ಪ್ರಾಶಸ್ತ್ಯ ಮತ: ಮೊದಲ ಪ್ರಾಶಸ್ತ್ರ್ಯ ಮತವನ್ನು ಸೂಚಿಸಬೇಕು ಹಾಗೂ ಉಳಿದ ಮತವನ್ನು ಉಳಿದ ಅಭ್ಯರ್ಥಿಗೆ ಕಡಿಮೆ ಮೌಲ್ಯಕ್ಕೆ ನೀಡಬಹುದು. ಹೀಗಾಗಿ ಆಡಳಿತ ಪಕ್ಷದ ಶಾಸಕರೊಬ್ಬರು ಬೇರೆ ಪಕ್ಷದ ಅಭ್ಯರ್ಥಿಗೂ ಮತ ಹಾಕುವ ಅವಕಾಶ ಇರಲಿದೆ.
ಶಾಸಕರಿಂದ 1 ರ್ಯಾಂಕ್ ಪಡೆಯುವ ಅಭ್ಯರ್ಥಿಯು ಮೊದಲ ಪ್ರಾಶಸ್ತ್ಯದ ಮತವನ್ನು ಪಡೆಯುತ್ತಾನೆ. ಗೆಲ್ಲಲು, ಅಭ್ಯರ್ಥಿಗೆ ನಿರ್ದಿಷ್ಟ ಸಂಖ್ಯೆಯ ಮೊದಲ ಪ್ರಾಶಸ್ತ್ಯದ ಮತಗಳ ಅಗತ್ಯವಿದೆ. ಈ ಸಂಖ್ಯೆಯು ರಾಜ್ಯ ವಿಧಾನಸಭೆಯ ಬಲ ಮತ್ತು ರಾಜ್ಯಸಭೆಗೆ ಕಳುಹಿಸುವ ಸಂಸದರ ಸಂಖ್ಯೆಯನ್ನು ಅವಲಂಬಿಸಿರುತ್ತದೆ.
ಗೆಲುವು ಹೇಗೆ? ಸಾಧ್ಯ
ಗೆಲುವು ಹೇಗೆ?: ಒಬ್ಬ ಅಭ್ಯರ್ಥಿಯು ಗೆಲ್ಲಲು, ಕೋಟಾ ಅಥವಾ ಪ್ರಾಶಸ್ತ್ಯದ ಮತ ಎಂದು ಕರೆಯಲ್ಪಡುವ ಅಗತ್ಯವಿರುವ ಸಂಖ್ಯೆಯ ಮತಗಳನ್ನು ಪಡೆಯಬೇಕು. ಸೂತ್ರ ಹೀಗಿದೆ [ಒಟ್ಟು ಮತಗಳ ಸಂಖ್ಯೆ/(ರಾಜ್ಯಸಭಾ ಸ್ಥಾನಗಳ ಸಂಖ್ಯೆ + 1)] + 1.
ಆದರೆ, ಒಂದಕ್ಕಿಂತ ಹೆಚ್ಚು ಸೀಟುಗಳನ್ನು ಭರ್ತಿ ಮಾಡಬೇಕಾದರೆ ಸೂತ್ರವನ್ನು ಬದಲಾಯಿಸ ಬೇಕಾಗುತ್ತದೆ. ಅಂಥ ಸಂದರ್ಭದಲ್ಲಿ ಅಭ್ಯರ್ಥಿಗೆ ಅಗತ್ಯವಿರುವ ಒಟ್ಟು ಮತಗಳ ಸಂಖ್ಯೆ = [(ಮತಗಳ ಸಂಖ್ಯೆ x 100) / (ಖಾಲಿ ಸ್ಥಾನಗಳು + 1)] + 1. ಈ ಸೂತ್ರ ಬಳಸಲಾಗುತ್ತದೆ.
ರಾಜ್ಯಸಭೆಗೂ ಮಹತ್ವ ಇದೆ.
ಲೋಕಸಭೆಯಷ್ಟೇ ಮಹತ್ವ ರಾಜ್ಯಸಭೆಗೂ ಇದೆ. ಲೋಕಸಭೆಯಲ್ಲಿ ಅನುಮೋದನೆಗೊಂಡ ಮಸೂದೆಗಳನ್ನು ತಿರಸ್ಕರಿಸುವ ಹಕ್ಕು ಸಹ ರಾಜ್ಯಸಭೆಗೆ ಇದೆ. ಆದ್ದರಿಂದ, ಕೇಂದ್ರದಲ್ಲಿ ಆಡಳಿತ ನಡೆಸುವ ಸರ್ಕಾರಗಳು ರಾಜ್ಯಸಭೆ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಳ್ಳುತ್ತವೆ. ಸದಸ್ಯರ ಸಂಖ್ಯೆ ಕಡಿಮೆ ಇದ್ದಾಗ ಮೈತ್ರಿಕೂಟ ರಚಿಸಿಕೊಂಡು ಮಸೂದೆಗಳು ಅಂಗೀಕಾರವಾಗುವಂತೆ ನೋಡಿಕೊಳ್ಳುತ್ತವೆ.