ರಾಜ್ಯಸಭೆ: ಬಿಜೆಪಿಗೆ ಬಿದ್ದ ಆ ಎರಡು ಕಾಂಗ್ರೆಸ್ಸಿನ ಅಡ್ಡಮತ ಯಾರದ್ದು?
ಭಾರೀ ಕುತೂಹಲಕ್ಕೆ ಕಾರಣವಾಗಿದ್ದ ಕರ್ನಾಟಕದ ನಾಲ್ಕು ರಾಜ್ಯಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ಬಿಜೆಪಿಯು ಕಾಂಗ್ರೆಸ್ ಮತ್ತು ಜೆಡಿಎಸ್ಸಿನ ಪ್ರತಿಷ್ಠೆ, ಜಿದ್ದಿನಿಂದಾಗಿ ಮೂರು ಸ್ಥಾನವನ್ನು ಗೆದ್ದಿದೆ. ನಿರೀಕ್ಷೆಯಂತೆ ಕಾಂಗ್ರೆಸ್ ಒಂದು ಸ್ಥಾನವನ್ನು ಗೆದ್ದಿದೆ.
ಕಾಂಗ್ರೆಸ್ ಮತ್ತು ಜೆಡಿಎಸ್ಸಿನಲ್ಲಿ ಅಡ್ಡ ಮತದಾನವಾಗಿದೆ. ಕೋಲಾರದ ಜೆಡಿಎಸ್ ಶಾಸಕ ಶ್ರೀನಿವಾಸ ಗೌಡ ಅವರು ಬಹಿರಂಗವಾಗಿಯೇ ಕಾಂಗ್ರೆಸ್ ಪರ ಮತ ಚಲಾಯಿಸಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಇದಕ್ಕಾಗಿ ಮಾನ ಮರ್ಯಾದೆ ಇದೆಯಾ ಎಂದು ಕುಮಾರಸ್ವಾಮಿ ತರಾಟೆಗೆ ತೆಗೆದುಕೊಂಡಿದ್ದೂ ಆಗಿದೆ.
ಬಿಜೆಪಿ 'ಬಿ ಟೀಂ' ಯಾವುದೆಂದು ಬಯಲಾಯಿತು: ಎಚ್.ಡಿ.ಕುಮಾರಸ್ವಾಮಿ
ಚುನಾವಣಾ ಫಲಿತಾಂಶದ ನಂತರ ಜೆಡಿಎಸ್ ಮತ್ತು ಕಾಂಗ್ರೆಸ್ ಮುಖಂಡರು ಒಬ್ಬರೊನ್ನಬ್ಬರು ದೂರಿ ಕೊಳ್ಳುತ್ತಿದ್ದಾರೆ. ಬಿಜೆಪಿ ಇದ್ಯಾವುದರ ಚಿಂತೆಯೂ ಇಲ್ಲದೇ, ಹೆಚ್ಚುವರಿ ಒಂದು ಸ್ಥಾನ ಸಿಕ್ಕಿದ್ದಕ್ಕಾಗಿ ಖುಷಿಖುಷಿಯಿಂದ ಇದೆ. ಕೇಂದ್ರದ ನಾಯಕರು ರಾಜ್ಯ ಬಿಜೆಪಿ ಮುಖಂಡರು ಬೆನ್ನು ತಟ್ಟಿದ್ದಾರೆ.
ಒಟ್ಟಾರೆಯಾಗಿ, ರಾಜ್ಯಸಭಾ ಚುನಾವಣಾ ಫಲಿತಾಂಶ ಬಿಜೆಪಿಗೆ ತೃಪ್ತಿದಾಯಕವಾಗಿದೆ. ರಾಜಸ್ಥಾನದಲ್ಲಿ ಪಕ್ಷದ ಶಾಸಕ ಕ್ರಾಸ್ ವೋಟಿಂಗ್ ಮಾಡಿದ್ದಕ್ಕಾಗಿ ಬಿಜೆಪಿ ಅವರನ್ನು ಅಮಾನತು ಮಾಡಿದೆ. ಅದೇ ರೀತಿ ಕರ್ನಾಟಕದಲ್ಲೂ ಜೆಡಿಎಸ್ ಮತ್ತು ಕಾಂಗ್ರೆಸ್ ಅಂತಹ ಗಟ್ಟಿ ನಿರ್ಧಾರ ತೆಗೆದುಕೊಳ್ಳುತ್ತದಾ ಎನ್ನುವುದು ಕಾದು ನೋಡಬೇಕಿದೆ. ಚುನಾವಣೆಯಲ್ಲಿ ಇಬ್ಬರು ಕಾಂಗ್ರೆಸ್ ಶಾಸಕರು ಬಿಜೆಪಿಗೆ ಅಡ್ಡಮತ ಕರುಣಿಸಿದ್ದಾರೆ. ಅವರ್ಯಾರು ಎನ್ನುವುದು ಬಹಳ ಚರ್ಚೆಯ ವಿಷಯವಾಗಿದೆ.
ರಾಜ್ಯಸಭಾ ಚುನಾವಣೆ: ಜೆಡಿಎಸ್, ಕಾಂಗ್ರೆಸ್ಸಿಗೆ ಮುಖಭಂಗ, ಡಿಕೆಶಿ ಬೇಸರದ ಪ್ರತಿಕ್ರಿಯೆ
ಬಿಜೆಪಿಯಿಂದ ನಿರ್ಮಲಾ ಸೀತಾರಾಮನ್ ಮತ್ತು ಜಗ್ಗೇಶ್ ಗೆಲುವು ನಿರಾಯಾಸ
ಬಿಜೆಪಿಯಿಂದ ನಿರ್ಮಲಾ ಸೀತಾರಾಮನ್ ಮತ್ತು ಜಗ್ಗೇಶ್ ಗೆಲುವು ನಿರಾಯಾಸವಾಗಿತ್ತು. ಆದರೆ, ಮೂರನೇ ಅಭ್ಯರ್ಥಿ ಲೆಹರ್ ಸಿಂಗ್ ಸಿರೋಯಿಗೆ ಎರಡನೇ ಪ್ರಾಶಸ್ತ್ಯದ ಮತ ನಿರ್ಣಾಯಕವಾಗಿತ್ತು. ಆದರೆ, ಮೂರು ಅಡ್ದಮತಗಳು ಲೆಹರ್ ಸಿಂಗ್ ಪಾಲಿಗೆ ಬಂದಿದ್ದು ಅವರ ಗೆಲುವಿನಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿತು. ಹೆಚ್ಚುವರಿ ಮತ ಬಂದಿರುವುದನ್ನು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಕೂಡಾ ಒಪ್ಪಿಕೊಂಡಿದ್ದಾರೆ.
ಗುಬ್ಬಿ ಕ್ಷೇತ್ರದ ಶಾಸಕ ಎಸ್.ಆರ್.ಶ್ರೀನಿವಾಸ್
ಜೆಡಿಎಸ್ಸಿನ ಗುಬ್ಬಿ ಕ್ಷೇತ್ರದ ಶಾಸಕ ಎಸ್.ಆರ್.ಶ್ರೀನಿವಾಸ್ ಅವರು ಬಿಜೆಪಿ ಅಭ್ಯರ್ಥಿ ಪರವಾಗಿ ಮೊದಲ ಪ್ರಾಶಸ್ತ್ಯದ ಮತವನ್ನು ಹಾಕಿದ್ದಾರೆ. ಇವರು ಮತ ಚಲಾಯಿಸಿದ ನಂತರ ಸ್ವಲ್ಪಹೊತ್ತು ಅಲ್ಲಿ ಹೈಡ್ರಾಮಾವೇ ನಡೆದು ಹೋಯಿತು. ಮತ ಚಲಾವಣೆಗೂ ಮುನ್ನ ತಮ್ಮ ಮತಪತ್ರವನ್ನು ಏಜೆಂಟರಿಗೆ ತೋರಿಸಬೇಕು. ಆದರೆ, ಶ್ರೀನಿವಾಸ್ ಅವರು ತಮ್ಮ ಹೆಬ್ಬೆರಳಿನ ಮೂಲಕ ಮಾಹಿತಿ ಮರೆಮಾಚಿ ವೋಟರ್ ಬಾಕ್ಸಿಗೆ ಹಾಕಿಬಂದಿದ್ದರು. ಇದು, ರೇವಣ್ಣ ಅವರ ಸಿಟ್ಟಿಗೆ ಕಾರಣವಾಯಿತು. ಇದರ ಜೊತೆಗೆ ಇಬ್ಬರು ಕಾಂಗ್ರೆಸ್ ಶಾಸಕರು ಎರಡನೇ ಪ್ರಾಶಸ್ತ್ಯದ ಮತವನ್ನು ಹಾಕಿದ್ದು ಈಗ ಚರ್ಚೆಯ ವಿಷಯವಾಗಿದೆ.
ಮನೋವಿಶ್ಲೇಷಣೆ ಮಾಡಲು ಹೋಗುವುದಿಲ್ಲ ಎಂದ ಸಿ.ಟಿ.ರವಿ
"ಎರಡನೇ ಪ್ರಾಶಸ್ತ್ಯದ ಎರಡು ಹೆಚ್ಚುವರಿ ಬಂದಿದೆ, ಆದರೆ ಆ ಮತದ ಮನೋವಿಶ್ಲೇಷಣೆ ಮಾಡಲು ಹೋಗುವುದಿಲ್ಲ"ಎಂದು ಸಿ.ಟಿ.ರವಿ ಹೇಳಿದ್ದಾರೆ. ಈ ಎರಡು ಮತ ಯಾರದ್ದು ಎನ್ನುವುದು ಈಗ ಕಾಂಗ್ರೆಸ್ ಮತ್ತು ಬಿಜೆಪಿ ವಲಯದಲ್ಲಿ ಬಿಸಿಬಿಸಿ ಚರ್ಚೆಯ ವಿಷಯವಾಗಿದೆ. ಅವರಿರಬಹುದೇ ಇವರಿರಬಹುದೇ ಎನ್ನುವ ಗುಸುಗುಸು ಹೆಸರುಗಳು ಹರಿದಾಡುತ್ತಿವೆ. ಲೆಹರ್ ಸಿಂಗ್ ಅವರಿಗೆ ಮೊದಲ ಪ್ರಾಶಸ್ತ್ಯದ 33 ಮತ್ತು ಎರಡನೇ ಪ್ರಾಶಸ್ತ್ಯದ ತೊಂಬತ್ತು ಮತಗಳು ಬಿದ್ದಿವೆ.
ಬಿಜೆಪಿಯ ಮೂವರು ಅಭ್ಯರ್ಥಿಗೆ ಮೊದಲ ಪ್ರಾಶಸ್ತ್ಯದ 123 ಮತ
ಪಕ್ಷೇತರರ ಬೆಂಬಲದೊಂದಿಗೆ ಬಿಜೆಪಿಯ ಮೂವರು ಅಭ್ಯರ್ಥಿಗೆ ಮೊದಲ ಪ್ರಾಶಸ್ತ್ಯದ ಒಟ್ಟು 123 ಮತಗಳು ಬಂದಿವೆ, ಅಂದರೆ ನಿಗದಿತ ಸಂಖ್ಯೆಗಿಂತ ಒಂದು ಹೆಚ್ಚು. ಇನ್ನು, ಇಬ್ಬರು ಅಭ್ಯರ್ಥಿಗಳಿಗೆ (ಜಗ್ಗೇಶ್, ಲೆಹರ್ ಸಿಂಗ್) ಒಟ್ಟು 132 ಎರಡನೇ ಪ್ರಾಶಸ್ತ್ಯದ ಮತಗಳು ಬಿದ್ದಿವೆ. ಆ ಮೂಲಕ, ಬಿಜೆಪಿ ಪರವಾಗಿ ಅಡ್ಡಮತದಾನವಾಗಿರುವುದು ಸ್ಪಷ್ಟವಾಗಿದೆ. ಅವರು ಯಾರು ಎನ್ನುವುದು ಸದ್ಯಕ್ಕೆ ಬಹಿರಂಗವಾಗದಿದ್ದರೂ, ಮುಂದಿನ ದಿನಗಳಲ್ಲಿ ಅದರ ಮಾಹಿತಿ ಲಭ್ಯವಾಗಬಹುದು.