Explainer: ರಾಜ್ಯಸಭಾ ಚುನಾವಣೆ ದಿನಾಂಕ, ಫಲಿತಾಂಶದ ಜೊತೆ ಪಕ್ಷಗಳ ಗೆಲುವಿನ ಲೆಕ್ಕಾಚಾರ
ನವದೆಹಲಿ, ಜೂನ್ 9: ದೇಶದಲ್ಲಿ ರಾಜ್ಯಸಭೆ ಚುನಾವಣೆಗೆ ಕ್ಷಣಗಣನೆ ಶುರುವಾಗಿದೆ. ಭಾರತದ 15 ರಾಜ್ಯಗಳ 57 ರಾಜ್ಯಸಭಾ ಸ್ಥಾನಗಳಿಗೆ ಜೂನ್ 10ರಂದು ಚುನಾವಣೆ ನಡೆಯಲಿದ್ದು, ಅದೇ ದಿನ ಫಲಿತಾಂಶ ಹೊರ ಬೀಳಲಿದೆ. ಮೇಲ್ಮನೆ ಈ ನಂತರ ಚುನಾವಣೆಯಲ್ಲಿ ಬಿಜೆಪಿಯ ಸಂಖ್ಯೆ 100ಕ್ಕೆ ಉಳಿಯುವ ಸಾಧ್ಯತೆಯಿದ್ದರೂ, ಕಾಂಗ್ರೆಸ್ ಒಂದೆರಡು ಸ್ಥಾನಗಳಷ್ಟು ಹೆಚ್ಚಿಸಿಕೊಳ್ಳಬಹುದು.
ಕಳೆದ ಜೂನ್ ಮತ್ತು ಆಗಸ್ಟ್ ನಡುವೆ ವಿವಿಧ ದಿನಾಂಕಗಳಲ್ಲಿ ಸದಸ್ಯರ ನಿವೃತ್ತಿಯಿಂದಾಗಿ ಖಾಲಿಯಾಗುವ ಸ್ಥಾನಗಳಿಗೆ ಚುನಾವಣೆ ನಡೆಸಲಾಗುತ್ತಿದೆ. ಕೇಂದ್ರ ಸಚಿವ ಪಿಯೂಷ್ ಗೋಯಲ್ ಮತ್ತು ಮುಖ್ತಾರ್ ಅಬ್ಬಾಸ್ ನಖ್ವಿ, ಕಾಂಗ್ರೆಸ್ ನಾಯಕ ಅಂಬಿಕಾ ಸೋನಿ, ಜೈರಾಮ್ ರಮೇಶ್ ಮತ್ತು ಕಪಿಲ್ ಸಿಬಲ್ ಮತ್ತು ಬಿಎಸ್ಪಿಯ ಸತೀಶ್ ಚಂದ್ರ ಮಿಶ್ರಾ ನಿವೃತ್ತಿ ಆಗಲಿದ್ದಾರೆ.
ರಾಜ್ಯಸಭೆ ಚುನಾವಣೆ: ರೆಸಾರ್ಟ್ನತ್ತ ಮೂರೂ ಪಕ್ಷಗಳ ಶಾಸಕರು?
ಈ ಮೊದಲು ರೂಢಿಯಲ್ಲಿ ಇರುವಂತೆ ರಾಜ್ಯಸಭೆ ಚುನಾವಣೆಯ ಮತದಾನ ಮುಕ್ತಾಯವಾಗಿ ಒಂದು ಗಂಟೆಯ ನಂತರ ಎಣಿಕೆ ನಡೆಯುತ್ತದೆ. ಈ ಚುನಾವಣೆಯಲ್ಲಿ ಗೆದ್ದ ಹೊಸ ಸದಸ್ಯರು ಜುಲೈನಲ್ಲಿ ನಡೆಯಲಿರುವ ಅಧ್ಯಕ್ಷರ ಚುನಾವಣೆಯಲ್ಲಿ ಮತ ಚಲಾಯಿಸುವ ಸಾಧ್ಯತೆ ಇರುತ್ತದೆ. ಉತ್ತರ ಪ್ರದೇಶದಲ್ಲಿ 11 ಸ್ಥಾನಗಳು ಖಾಲಿಯಾಗಿದ್ದರೆ, ತಮಿಳುನಾಡು ಮತ್ತು ಮಹಾರಾಷ್ಟ್ರದಿಂದ ತಲಾ ಆರು ಸದಸ್ಯರು, ಬಿಹಾರದಿಂದ ಐದು ಮತ್ತು ಆಂಧ್ರಪ್ರದೇಶ, ರಾಜಸ್ಥಾನ ಮತ್ತು ಕರ್ನಾಟಕದಿಂದ ತಲಾ ನಾಲ್ವರು ಸದಸ್ಯರು ನಿವೃತ್ತರಾಗುತ್ತಿದ್ದಾರೆ. ಈ ಹಂತದಲ್ಲಿ ನಡೆಯುವ 57 ಸ್ಥಾನಗಳಿಗೆ ನಡೆಯುತ್ತಿರುವ ರಾಜ್ಯಸಭೆ ಚುನಾವಣೆ ಕುರಿತು ವಿಸ್ತೃತ ವರದಿ ಇಲ್ಲಿದೆ ನೋಡಿ.
ರಾಜ್ಯಸಭೆ ಚುನಾವಣೆ: ಮಹಾರಾಷ್ಟ್ರದಲ್ಲಿ ಮತ್ತೆ ರೆಸಾರ್ಟ್ ರಾಜಕೀಯ
ರಾಜ್ಯವಾರು ನಿವೃತ್ತಿಯಾದ ಸದಸ್ಯರ ಸಂಖ್ಯೆ ಎಷ್ಟು?
ರಾಜ್ಯಸಭೆಯಲ್ಲಿ ಸದಸ್ಯರ ನಿವೃತ್ತಿಯಿಂದ ಖಾಲಿ ಆಗಿರುವ ಸ್ಥಾನಗಳಿಗೆ ಈಗ ಚುನಾವಣೆ ನಡೆಸಲಾಗುತ್ತಿದೆ. ಉತ್ತರ ಪ್ರದೇಶದಲ್ಲಿ ರಾಜ್ಯಸಭೆಯ 11 ಸ್ಥಾನಗಳು ಖಾಲಿಯಾಗಿದ್ದರೆ, ತಮಿಳುನಾಡು ಮತ್ತು ಮಹಾರಾಷ್ಟ್ರದಿಂದ ತಲಾ ಆರು ಸದಸ್ಯರು ನಿವೃತ್ತಿ ಹೊಂದಲಿದ್ದಾರೆ. ಬಿಹಾರದಿಂದ ಐದು ಮತ್ತು ಆಂಧ್ರಪ್ರದೇಶ, ರಾಜಸ್ಥಾನ ಮತ್ತು ಕರ್ನಾಟಕದಿಂದ ತಲಾ ನಾಲ್ವರು ಸದಸ್ಯರು ರಾಜ್ಯಸಭೆಯಿಂದ ನಿವೃತ್ತಿ ಆಗುತ್ತಿದ್ದಾರೆ. ಅದೇ ರೀತಿ ಮಧ್ಯಪ್ರದೇಶ ಮತ್ತು ಒಡಿಶಾದಿಂದ ತಲಾ ಮೂವರು, ತೆಲಂಗಾಣ, ಛತ್ತೀಸ್ಗಢ, ಪಂಜಾಬ್ ಜಾರ್ಖಂಡ್ ಮತ್ತು ಹರ್ಯಾಣದಿಂದ ತಲಾ ಇಬ್ಬರು ಮತ್ತು ಉತ್ತರಾಖಂಡದಿಂದ ಒಬ್ಬ ಸದಸ್ಯರು ನಿವೃತ್ತರಾಗಿದ್ದಾರೆ.
ಸಂಸತ್ ಮೇಲ್ಮನೆಯಲ್ಲಿ ಸದಸ್ಯರು ಮತ್ತು ಪಕ್ಷಗಳ ಲೆಕ್ಕಾಚಾರ
ಸಂಸತ್ ಮೇಲ್ಮನೆಯ 245 ಸದಸ್ಯರ ಪೈಕಿ ಭಾರತೀಯ ಜನತಾ ಪಕ್ಷವು 95 ಸದಸ್ಯರನ್ನು ಹೊಂದಿದ್ದರೆ, ಕಾಂಗ್ರೆಸ್ 29 ಸದಸ್ಯರನ್ನು ಹೊಂದಿದೆ. ಬಿಜೆಪಿಯು ಆಂಧ್ರ ಪ್ರದೇಶದಲ್ಲಿ ಸೋಲು ಅನುಭವಿಸಲಿದೆ, ಅಲ್ಲಿ ಅದು ಮೂರು ಸದಸ್ಯರನ್ನು ಕಳೆದುಕೊಂಡಿದೆ. ಜಾರ್ಖಂಡ್ ಮತ್ತು ರಾಜಸ್ಥಾನದಲ್ಲಿ ಕಳೆದುಕೊಳ್ಳುವ ಸ್ಥಾನವನ್ನು ಬಿಜೆಪಿಯು ಉತ್ತರ ಪ್ರದೇಶ ಮತ್ತು ಉತ್ತರಾಖಂಡದಂತಹ ರಾಜ್ಯಗಳಲ್ಲಿ ಪಡೆದುಕೊಳ್ಳುವ ಭರವಸೆಯಲ್ಲಿದೆ.
ಕೇಸರಿ ಪಕ್ಷವು ರಾಜ್ಯಸಭೆಯಲ್ಲಿ 100 ಗಡಿಯನ್ನು ಮುಟ್ಟಿದಾಗ ಪ್ರಮುಖ ಮೈಲಿಗಲ್ಲು ಸ್ಥಾಪಿಸಲಿದೆ. ಕಳೆದ 1988ರಲ್ಲಿ ಕಾಂಗ್ರೆಸ್ ಕೂಡ ಮೇಲ್ಮನೆಯಲ್ಲಿ 100 ಸದಸ್ಯರನ್ನು ಹೊಂದುವ ಮೂಲಕ ಹೊಸ ಮೈಲಿಗಲ್ಲು ಸೃಷ್ಟಿಸಿತ್ತು. ಈಗ ಅದೇ ಸಾಲಿಗೆ ಬಿಜೆಪಿ ಸೇರ್ಪಡೆ ಆಗುತ್ತಿದ್ದು, ಮಿತ್ರಪಕ್ಷಗಳೊಂದಿಗೆ 123ರ ಮ್ಯಾಜಿಕ್ ನಂಬರ್ ತಲುಪುವುದಕ್ಕೆ ಬಿಜೆಪಿ ಸ್ಕೆಚ್ ಹಾಕುತ್ತಿದೆ.
ಮಹಾರಾಷ್ಟ್ರದಲ್ಲಿ ಆಡಳಿತಾರೂಢ ಶಿವಸೇನೆ-ಎನ್ಸಿಪಿ-ಕಾಂಗ್ರೆಸ್ ಸಮ್ಮಿಶ್ರ ಪಕ್ಷಗಳು ಎಲ್ಲಾ 3 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಸಾಮರ್ಥ್ಯವನ್ನು ಹೊಂದಿದೆ, ಆದರೆ ಬಿಜೆಪಿ ತನ್ನ ಮೂರು ಸ್ಥಾನಗಳಲ್ಲಿ ಎರಡು ಸ್ಥಾನಗಳನ್ನು ಸುಲಭವಾಗಿ ಗೆದ್ದುಕೊಳ್ಳಲಿದೆ. ಈ ಚುನಾವಣೆಯ ನಂತರ ಮೇಲ್ಮನೆಯಲ್ಲಿ ಬಿಎಸ್ಪಿಯ ಅಸ್ತಿತ್ವ ಕೇವಲ ಒಂದಕ್ಕೆ ಇಳಿಯುವ ಸಾಧ್ಯತೆಯಿದೆ.
ಪಂಜಾಬ್ನಿಂದ ಅಕಾಲಿದಳದ ಏಕೈಕ ಸದಸ್ಯ ಬಲ್ವಿಂದರ್ ಸಿಂಗ್ ಭುಂದರ್ ಮತ್ತು ಕಾಂಗ್ರೆಸ್ನ ಅಂಬಿಕಾ ಸೋನಿ ಆಮ್ ಆದ್ಮಿ ಪಕ್ಷದ ಸದಸ್ಯರಿಗೆ ದಾರಿ ಮಾಡಿಕೊಡುವ ಸಾಧ್ಯತೆಯಿದೆ. ಅವರ ವಿಧಾನಸಭೆಯಲ್ಲಿನ ಬಲವು ಎರಡೂ ಸ್ಥಾನಗಳನ್ನು ಗೆಲ್ಲುವುದನ್ನು ಖಚಿತಪಡಿಸುತ್ತದೆ.
ಉತ್ತರ ಪ್ರದೇಶದಲ್ಲಿ ನಿವೃತ್ತರಾಗಿರುವ 11 ರಾಜ್ಯಸಭಾ ಸದಸ್ಯರಲ್ಲಿ ಐವರು ಬಿಜೆಪಿ ಸಂಸದರು ಸೇರಿದ್ದಾರೆ. ಮಿತ್ರಪಕ್ಷಗಳೊಂದಿಗೆ ಪಕ್ಷವು ಎಂಟು ಸ್ಥಾನಗಳನ್ನು ಗೆಲ್ಲುವ ಸ್ಥಿತಿಯಲ್ಲಿದೆ, ಆದರೆ ಪ್ರತಿಪಕ್ಷ ಸಮಾಜವಾದಿ ಪಕ್ಷವು ತನ್ನ ಮೂರು ಸ್ಥಾನಗಳನ್ನು ಉಳಿಸಿಕೊಳ್ಳಬಹುದು.
ಯಾವ ರಾಜ್ಯದಲ್ಲಿ ಎಷ್ಟು ಸ್ಥಾನಗಳಿಗೆ ಚುನಾವಣೆ?
* ಉತ್ತರ ಪ್ರದೇಶ - 11
* ಮಹಾರಾಷ್ಟ್ರ - 6
* ತಮಿಳುನಾಡು - 6
* ಬಿಹಾರ - 5
* ರಾಜಸ್ಥಾನ - 4
* ಆಂಧ್ರ ಪ್ರದೇಶ - 4
* ಕರ್ನಾಟಕ - 4
* ಮಧ್ಯಪ್ರದೇಶ - 3
* ಒಡಿಶಾ - 3
* ಪಂಜಾಬ್ - 2
* ಹರಿಯಾಣ - 2
* ಜಾರ್ಖಂಡ್ - 2
* ತೆಲಂಗಾಣ - 2
* ಛತ್ತೀಸ್ಗಢ - 2
* ಉತ್ತರಾಖಂಡ - 1
ಕರುನಾಡಿನಲ್ಲಿ ಮೇಲ್ಮನೆ ಸೋಲು-ಗೆಲುವಿನ ಲೆಕ್ಕ
ಕರ್ನಾಟಕದಲ್ಲಿ ಒಬ್ಬ ಅಭ್ಯರ್ಥಿ ಗೆಲುವಿಗೆ ಕನಿಷ್ಠ 45 ಮತಗಳು ಅಗತ್ಯವಾಗಿದೆ. ಬಿಜೆಪಿಯು 121 ಶಾಸಕರನ್ನು ಹೊಂದಿದ್ದು, ರಾಜ್ಯಸಭೆಯ ಮೂರು ಸ್ಥಾನಗಳ ಮೇಲೆ ಕಣ್ಣಿಟ್ಟಿದೆ. 70 ಶಾಸಕರನ್ನು ಹೊಂದಿರುವ ಕಾಂಗ್ರೆಸ್ ಇಬ್ಬರು ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳುವುದು ಪಕ್ಕಾ ಆಗಿದೆ. ಇನ್ನೊಂದು ಮಗ್ಗಲಿನಲ್ಲಿ 32 ಶಾಸಕರನ್ನು ಹೊಂದಿರುವ ಜೆಡಿಎಸ್ ಉಳಿದ ನಾಲ್ಕನೇ ಸ್ಥಾನಕ್ಕಾಗಿ ಕುಪೇಂದ್ರ ರೆಡ್ಡಿಯನ್ನು ಪಕ್ಷದ ಅಭ್ಯರ್ಥಿಯಾಗಿ ಅಖಾಡಕ್ಕೆ ಇಳಿಸಿದೆ.
ರಾಜಸ್ಥಾನದಲ್ಲಿ 4ನೇ ಸ್ಥಾನಕ್ಕೆ ಜಿದ್ದಾಜಿದ್ದಿ ಹೋರಾಟ
ರಾಜ್ಯಸಭೆಯ ನಾಲ್ಕನೇ ಸದಸ್ಯ ಸ್ಥಾನದ ಮೇಲೆ ಮಾಧ್ಯಮ ಉದ್ಯಮಿ ಸುಭಾಷ್ ಚಂದ್ರ ಕಣ್ಣಿಟ್ಟಿದ್ದಾರೆ. ರಾಜ್ಯದ 200 ಸದಸ್ಯ ಬಲದ ವಿಧಾನಸಭೆಯಲ್ಲಿ ಒಬ್ಬ ಸದಸ್ಯ ಮೇಲ್ಮನೆ ಚುನಾವಣೆಯನ್ನು ಗೆದ್ದುಕೊಳ್ಳುವುದಕ್ಕಾಗಿ ಕನಿಷ್ಠ 41 ಮತಗಳನ್ನು ಪಡೆದುಕೊಳ್ಳಬೇಕು. ಕಾಂಗ್ರೆಸ್ 108 ಶಾಸಕರನ್ನು ಹೊಂದಿದೆ. ಇದರ ಅರ್ಥ ಕಾಂಗ್ರೆಸ್ ಮೂರು ಸ್ಥಾನಗಳನ್ನು ಗೆದ್ದುಕೊಳ್ಳುವುದಕ್ಕೆ 123 ಮತಗಳ ಅಗತ್ಯವಿದೆ. ಬಿಜೆಪಿಯು 71 ಮತಗಳನ್ನು ಹೊಂದಿದ್ದು ಒಂದು ಸ್ಥಾನ ಗೆದ್ದುಕೊಳ್ಳುವುದು ಪಕ್ಕಾ ಆಗಿದೆ. ಅದಕ್ಕಾಗಿ ಉದ್ಯಮಿ ಸುಭಾಷ್ ಚಂದ್ರು ಅನ್ನು ಕಣಕ್ಕಿಳಿಸಿದೆ. ಇದರ 41 ಮತಗಳ ಹೊರತಾಗಿಯೂ ಬಿಜೆಪಿಯು 30 ಮತಗಳನ್ನು ಹೊಂದಿರಲಿದ್ದು, ಎರಡನೇ ಸ್ಥಾನವನ್ನು ಗೆಲ್ಲುವುದಕ್ಕೆ ಲೆಕ್ಕಾಚಾರ ಹಾಕಿಕೊಳ್ಳುತ್ತಿದೆ. ಅದೇ ರೀತಿ ಕಾಂಗ್ರೆಸ್ ಮೂರನೇ ಸ್ಥಾನವನ್ನು ಗೆದ್ದುಕೊಳ್ಳುವುದಕ್ಕೆ 15 ಮತಗಳ ಅಗತ್ಯವಿದೆ.
ಮೇಲ್ಮನೆ ಚುನಾವಣೆ ಗೆಲ್ಲುವುದಕ್ಕೆ ಹರ್ಯಾಣ ರಾಜಕೀಯ
ಹರ್ಯಾಣದಲ್ಲಿ ಮತ್ತೊಬ್ಬ ಮಾಧ್ಯಮ ಉದ್ಯಮಿ ಕಾರ್ತಿಕೇಯ ಶರ್ಮಾ ಬಿಜೆಪಿಯ ಬೆಂಬಲ ಪಡೆದು ಅಖಾಡಕ್ಕೆ ಇಳಿದಿದ್ದಾರೆ. ಇದರಿಂದ ಹರ್ಯಾಣದಲ್ಲಿ ಸ್ಪರ್ಧೆ ಕಠಿಣಗೊಳ್ಳುವಂತೆ ಮಾಡಿದೆ. ಅವರಿಗೆ ಗೆಲ್ಲುವುದಕ್ಕೆ ಕನಿಷ್ಠ 31 ಮತಗಳ ಅಗತ್ಯವಿರುತ್ತದೆ, ಕಾಂಗ್ರೆಸ್ 31 ಸ್ಥಾನಗಳನ್ನು ಹೊಂದಿದೆ. ಆದರೆ ಕೈ ಪಾಳಯದಲ್ಲಿ ಅಡ್ಡ ಮತದಾನ ನಡೆಯುತ್ತದೆಯೇ ಎನ್ನುವ ಭಯ ಕಾಡುತ್ತಿದೆ.
ಮಹಾರಾಷ್ಟ್ರದಲ್ಲಿ ರಾಜ್ಯಸಭೆ ಚುನಾವಣೆ ಪೈಪೋಟಿ
ರಾಜ್ಯಗಳಿಂದ ಆಯ್ಕೆಯಾಗುವ ಆರು ರಾಜ್ಯಸಭಾ ಸಂಸದರು ಗೆಲ್ಲುವುದಕ್ಕೆ 42 ಮತಗಳ ಅಗತ್ಯವಿದೆ. ಆಡಳಿತಾರೂಢ ಮಹಾ ವಿಕಾಸ್ ಅಗಾಧಿಯ 151 ಮತಗಳನ್ನು ಹೊಂದಿದ್ದು ಮೂರು ಸ್ಥಾನಗಳನ್ನು ಗೆಲ್ಲುವುದು ತೀರಾ ಸುಲಭವಾಗಿರುತ್ತದೆ. ಆದರೆ ಅದು ನಾಲ್ಕನೇ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಮತ್ತೊಂದೆಡೆ ಬಿಜೆಪಿ 106 ಶಾಸಕರನ್ನು ಹೊಂದಿದ್ದು, ಎರಡು ಸ್ಥಾನಗಳನ್ನು ಗೆಲ್ಲವುದು ಪಕ್ಕಾ ಆಗಿದೆ. ಅದಾಗ್ಯೂ, ಮೂರನೇ ಸ್ಥಾನಕ್ಕಾಗಿ ಪೈಪೋಟಿಗೆ ಇಳಿದಿದೆ.
ಎಂವಿಎಗೆ ತನ್ನ 4ನೇ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಇನ್ನೂ 15 ಮತಗಳ ಅಗತ್ಯವಿದೆ. ಅದೇ ರೀತಿ ಬಿಜೆಪಿಗೆ ಇನ್ನೂ 13 ಸ್ಥಾನಗಳ ಅವಶ್ಯಕತೆಯಿದ್ದು, ಉಭಯ ಪಕ್ಷವು ಸಣ್ಣ ಪಕ್ಷ ಮತ್ತು ಸ್ವತಂತ್ರ ಅಭ್ಯರ್ಥಿಗಳನ್ನು ನೆಚ್ಚಿಕೊಂಡಿದ್ದಾರೆ.