ಬಿಸ್ಕೆಟ್ ಗಿಂತ ಬದುಕು ಕಟ್ಟಿಕೊಳ್ಳಬೇಕು, ಕೊಡಗು ಸಂತ್ರಸ್ತರ ಮನವಿ
ಕೊಡಗು ಜಿಲ್ಲೆಯಲ್ಲಿ ಅತಿವೃಷ್ಟಿಯ ಅನಾಹುತವನ್ನು ಕಂಡು, ಕೇಳಿ ಕರಗುತ್ತಿರುವ ಜನರು ಸಹಾಯ ಹಸ್ತ ಚಾಚುತ್ತಿದ್ದಾರೆ. ಆದರೆ ಮೂರು ದಿನದ ಹಿಂದೆ ಇದ್ದ ಸ್ಥಿತಿಗೂ ಈಗಿನ ಸನ್ನಿವೇಶಕ್ಕೂ ವ್ಯತ್ಯಾಸ ಆಗಿದೆ. ಒಟ್ಟಿಗೆ ಹರಿದು ಬಂದ ನೆರವಿನಿಂದ ಸ್ವಲ್ಪ ಮಟ್ಟಿಗೆ ಅಲ್ಲಿನ ಜನ ಚೇತರಿಸಿಕೊಂಡಿದ್ದಾರೆ.
ಈಗ ಅವರಿಗೆ ಬೇಕಿರುವುದು ಬೇರೆ, ಹಾಗಿದ್ದರೆ ಅದೇನು ಎಂಬುದನ್ನು ನಿಮ್ಮ ಮುಂದಿಡುತ್ತಿದೆ ಈ ವರದಿ. "ನಮಗೆ ಬ್ರೆಡ್, ಬನ್ ಬೇಡ. ಯಾವ ಕ್ಯಾಂಡಲ್ ಬೇಡ. ನಮಗೆ ಮತ್ತೆ ಬದುಕು ಕಟ್ಟಿಕೊಳ್ಳ ಬೇಕಿದೆ. ಅದಕ್ಕಾಗಿ ದಯವಿಟ್ಟು ನಿಮ್ಮ ಕೈಲಾದಷ್ಟು ಹಣ ನೀಡಿ" ಎನ್ನುತ್ತಿದ್ದಾರೆ ಕೊಡಗು ಜಿಲ್ಲೆಯಲ್ಲಿ ಸಂಕಷ್ಟಕ್ಕೆ ಈಡಾದ ಜನರು.
ಛೆ, ಎಂಥ ದುರಂತ! ಮನೆ ಪಕ್ಕದ ಬೆಟ್ಟ-ಗುಡ್ಡಗಳೇ ಮೃತ್ಯುಕೂಪವಾಗಿ...
ನೀರಿನ ಬಾಟಲಿ, ಹಾಸಿಗೆ, ಹೊದಿಕೆ, ಔಷಧಿ, ಆಹಾರ ಪದಾರ್ಥಗಳನ್ನು ವಿವಿಧೆಡೆಯಿಂದ ಮಾಧ್ಯಮಗಳು, ಸ್ವಯಂ ಸೇವಾ ಸಂಸ್ಥೆಗಳು, ವಿವಿಧ ಸಂಘಟನೆಗಳವರು ಸಂಗ್ರಹಿಸಿದ್ದು, ಅವುಗಳನ್ನು ಸಂತ್ರಸ್ತರಿಗೆ ತಲುಪಿಸಲು ಆರಂಭವಾಯಿತು. ತಾತ್ಕಾಲಿಕವಾಗಿ ಬೇಕಾದ ವಸ್ತುಗಳನ್ನು ಲಾರಿಗಟ್ಟಲೆ ನೀಡಲು ಶುರು ಮಾಡಿದರು.
ಅವುಗಳನ್ನು ತಲುಪಿಸುವುದೇ ಒಂದು ಸವಾಲಾಗಿತ್ತು. ಕೊಡವ ಸಮಾಜದವರು ಸ್ಥಳೀಯ ಜಿಲ್ಲಾಡಳಿತ, ಪೊಲೀಸರು, ಸಂಘ-ಸಂಸ್ಥೆಗಳವರು ಸಂತ್ರಸ್ತರಿಗೆ ಅಗತ್ಯವಿರುವ ಪರಿಕರಗಳನ್ನು ನೀಡಲು ಮುಂದಾದರು.
ಕಾವೇರಿ ಕೊಟ್ಟ 'ಕೊಡಗಿಗೆ' ಮಿಡಿದ ಕರುನಾಡ ಹೃದಯ: ಧನ್ಯವಾದ ಕರ್ನಾಟಕ!
ಆಗಸ್ಟ್ 12ರಂದು ಮಳೆಗೆ ಮೊದಲು ಎದುರಾದದ್ದು ನಂಜನಗೂಡಿನ ಜನತೆ. ಆ ನಂತರ ಸಣ್ಣದಾಗಿ ಕೊಡಗು, ಮಡಿಕೇರಿ, ಸೋಮವಾರಪೇಟೆ ಬಳಿಯೂ ಮಳೆಯಾಗುತ್ತಿದೆ ಎಂಬ ಸುದ್ದಿ ಹಬ್ಬಲು ಶುರುವಾಗಿತ್ತು. ಇದರೊಟ್ಟಿಗೆ ಕರಾವಳಿಯ ಮಹಾಮಳೆಗೆ ಹಾರಂಗಿ, ನುಗು, ಕಾವೇರಿ, ಹೇಮಾವತಿಗೆ ಬಿಟ್ಟ ಏಕಾಏಕಿ ನೀರು ಈ ಪಾತ್ರದ ಜನರಿಗೆ ನುಂಗಲಾರದ ಪರಿಣಾಮವನ್ನು ಎದುರಿಸುವಂತೆ ಮಾಡಿತು.
ಮಳೆಯ ರಭಸಕ್ಕೆ ಮಕ್ಕಳ ಆಟಿಕೆಯಂತಾದ ಮನೆಗಳು
ಈ ಹಿಂದೆಂದೂ ಕಾಣದಷ್ಟು ಮಳೆಯು ಎಡಬಿಡದೇ ಕಾಡಿಸಿ, ಪೀಡಿಸಿ ರೋದಿಸುವಂತೆ ಮಾಡಿತು. ಮಳೆಯ ರಭಸಕ್ಕೆ ಮನೆಗಳು ಮಕ್ಕಳ ಆಟಿಕೆಗಳಂತೆ ಒಂದರ ಹಿಂದೆ ಒಂದು ಬೀಳಲು ಶುರುವಾದವು. ಇತ್ತ ಜಿಲ್ಲಾಡಳಿತವು ಕೈಲಾದಷ್ಟು ಪ್ರಯತ್ನ ಮಾಡಿದ ನಂತರ ಕೈ ಚೆಲ್ಲಿ ಕುಳಿತಿತು. ಸಾಮಾಜಿಕ ಜಾಲತಾಣಗಳಲ್ಲಿ, ಪತ್ರಿಕೆ - ಟೀವಿಗಳಲ್ಲಿ ವರದಿ ಪ್ರಸಾರವಾಗುತ್ತಿದ್ದಂತೆ ಸದ್ಯದ ಪರಿಸ್ಥಿತಿ ಏನೆಂಬುದು ರಾಜಕಾರಣಿಗಳನ್ನು ತಟ್ಟಿತು, ಆದರೆ ಮುಟ್ಟಲಿಲ್ಲ. ಜಾತಿ- ಭೇದವಿಲ್ಲದೆ ಅನೇಕ ಸಂಘ ಸಂಸ್ಥೆಗಳು ಮಡಿಕೇರಿ ಭಾಗದ ಜನರನ್ನು ರಕ್ಷಿಸಲು ಮುಂದಾದರು. ಅದರಲ್ಲೂ ಸ್ವಾತಂತ್ರ್ಯ ದಿನಾಚರಣೆಯ ಆಗಸ್ಟ್ 15ರಂದು ವೈರಲ್ ಆದ ವಿಡಿಯೋಗಳನ್ನು ನೋಡಿ ಎಲ್ಲರೂ ಅಚ್ಚರಿಪಟ್ಟರು. ಕಣ್ಣೆದುರೇ ಕುಸಿದ ಮನೆ, ಮೈಮೇಲೆ ಬರುತ್ತಿದ್ದ ಬೆಟ್ಟದ ಮಣ್ಣು, ಕೊರೆಯುವ ಚಳಿ, ಸುತ್ತಲೂ ಆವರಿಸಿದ್ದ ಪ್ರವಾಹ... ಹೀಗೆ ಆತಂಕಕ್ಕೆ ಹಲವು ಕಾರಣಗಳಿದ್ದವು.
ಬೆಟ್ಟದ ತಪ್ಪಲಿನಲ್ಲಿ ಸಿಲುಕಿದ್ದಾರೆ
ಈ ಎಲ್ಲ ಸವಾಲು ದಾಟಿ ಜೀವ ಉಳಿಸಿಕೊಂಡು ಕೆಲವರು ರಸ್ತೆಗೆ ಬಂದರೆ, ಇನ್ನೂ ಕೆಲವರು ಐದು ದಿನಗಳಿಂದ ಊಟ, ನಿದ್ರೆಯಿಲ್ಲದೆ ಜೀವ ಕೈಯಲ್ಲಿ ಹಿಡಿದು ಬೆಟ್ಟದ ತಪ್ಪಲಿನಲ್ಲಿ ರಕ್ಷಣೆಗೆ ಅಂಗಲಾಚುತ್ತಿದ್ದಾರೆ. ಅದರಲ್ಲಿ ಹಲವರನ್ನು ಶನಿವಾರ ರಕ್ಷಿಸಲು ಮುಂದಾಯಿತು ರಕ್ಷಣಾ ಸಿಬ್ಬಂದಿ ತಂಡ. ಕೊಡಗು ಜಿಲ್ಲೆಯ ದುರಂತಕ್ಕೆ ಹೆಚ್ಚು ಸವಾಲೊಡ್ಡಿದ್ದು ಮಕ್ಕಂದೂರು, ಹಾಲೇರಿ, ಗಾಳಿಬೀಡು, ಹಟ್ಟಿಹೊಳೆ, 2ನೇ ಮೊಣ್ಣಂಗೇರಿ, ಜೋಡುಪಾಲ, ತಂತಿಪಾಲ, ಮೇಘತಾಳ್, ಮೊಕ್ಕೊಡ್ಲು, ಕೋಟೆಬೆಟ್ಟ, ಪುಷ್ಪಗಿರಿ , ಮಾದಾಪುರ, ಮುವತ್ತೊಕ್ಲು, ಶಿರಂಗಳ್ಳಿ, ಗರ್ವಾಲೆ, ಕಿಕ್ಕರಳ್ಳಿ, ತಾಕೇರಿ, ಶಾಂತಳ್ಳಿ, ಹೆಮ್ಮತ್ತಾಳು, ಮಡಿಕೇರಿ ಭಾಗವೇ.
ಕೊಡಗು ದುರಂತ: ನಷ್ಟದ ಲೆಕ್ಕ ಹಾಕೋಕೆ ವಾರವೇ ಬೇಕಂತೆ!
1 ಸಾವಿರಕ್ಕೂ ಹೆಚ್ಚು ಮನೆಗಳಿಗೆ ಹಾನಿ
ಮಳೆಯ ಹೊಡೆತಕ್ಕೆ ಸಿಕ್ಕು 1 ಸಾವಿರಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿವೆ. ಮೊದಲಿಗೆ 35ಕ್ಕೂ ಹೆಚ್ಚು ಗಂಜಿ ಕೇಂದ್ರಗಳನ್ನು ಆರಂಭಿಸಲಾಯಿತು. ಆ ನಂತರ ನೆರವಿನ ಮಹಾಪೂರ ಹರಿದುಬರಲು ಶುರುವಾಯಿತು. ಮೊದಲೆರಡು ದಿನ ಕೇವಲ ನೂರಾರು ಲೆಕ್ಕದಲ್ಲಿ ಗಂಜಿ ಕೇಂದ್ರಕ್ಕೆ ಬಂದ ನಿರಾಶ್ರಿತರ ಸಂಖ್ಯೆ. ಸದ್ಯಕ್ಕೆ 2 ಸಾವಿರಕ್ಕೂ ಹೆಚ್ಚಾಗಿದೆ. ಇನ್ನು ಸಂತ್ರಸ್ತರ ನೆರವಿಗೆ ಬನ್ನಿ ಎಂದು ಕೊಟ್ಟ ಕರೆಗೆ ಭಾನುವಾರ ಬೆಳಗ್ಗೆಯಿಂದ ಹಾದಿಯೂ ಸುಗಮವಾಯಿತು. ಪರಿಹಾರ ಸಾಮಗ್ರಿಗಳನ್ನು ಹೊತ್ತ ಟೆಂಪೋ ಲಾರಿ ಸೇರಿದಂತೆ ವಿವಿಧ ವಾಹನಗಳು ಮಡಿಕೇರಿ, ವಿರಾಜಪೇಟೆ, ಕುಶಾಲನಗರಗಳಿಗೆ ತಂಡೋಪತಂಡವಾಗಿ ತಲುಪಿದವು.
ನಿರಾಶ್ರಿತರಿಗಿಂತ ಬಂದು- ಹೋಗುವವರ ಸಂಖ್ಯೆಯೇ ಅಧಿಕ
ಎನ್ ಡಿಆರ್ ಎಫ್, ಸಿವಿಲ್ ಡಿಫೆನ್ಸ್, ಅಗ್ನಿಶಾಮಕ ದಳ, ಭೂ ಸೇನೆಯ ಡೋಗ್ರಾ ರೆಜಿಮೆಂಟ್, ಎನ್.ಸಿ.ಸಿ, ವಾಯುಪಡೆಯ ತಂಡ ಸಹಿತ ಒಟ್ಟು 948 ಜನ ರಕ್ಷಣಾ ಕಾರ್ಯದಲ್ಲಿ ಭಾಗಿಯಾದರು. ಸಂಘ- ಸಂಸ್ಥೆಗಳ ಸದಸ್ಯರು ಸೇರಿದಂತೆ ನೂರಾರು ಜನರು ರಕ್ಷಣೆ ಮಾಡಲು ತಂಡೋಪತಂಡವಾಗಿ ಬರುತ್ತಿದ್ದಾರೆ. ಸದ್ಯ ಎದುರಾಗಿರುವ ಸಮಸ್ಯೆ ಏನೆಂದರೆ, ಗಂಜಿ ಕೇಂದ್ರದಲ್ಲಿ ನಿರಾಶ್ರಿತರು ಅಂತ ಇರುವವರು 2500ಕ್ಕೂ ಅಧಿಕ ಮಂದಿಯಾದರೆ, ರಕ್ಷಣೆಗೆಂದು ನಿಂತಿರುವವರು 1500ಕ್ಕೂ ಹೆಚ್ಚು ಜನ. ರಕ್ಷಣಾ ಕಾರ್ಯಕ್ಕೆ ಜನರು ಬರುತ್ತಲೇ ಇದ್ದಾರೆ. ಆಹಾರ ಹಾಗೂ ಅಗತ್ಯ ಸಾಮಗ್ರಿಗಳು ಗಂಜಿ ಕೇಂದ್ರಗಳತ್ತ ಬರುತ್ತಲೇ ಇವೆ. ಇದೀಗ ಎದುರಾಗಬೇಕಾದ ಪ್ರಶ್ನೆ ಏನೆಂದರೆ, ಸಾವಿರಾರು ಮಂದಿ ಸ್ವಯಂಸೇವಕರಾಗಿ ಬಂದುಬಿಟ್ಟರೆ ಯಾರನ್ನು ಕಾಪಾಡುವುದು, ಯಾರನ್ನು ಬಿಡುವುದು ಎಂಬುದೇ ಬಹುದೊಡ್ಡ ಪ್ರಶ್ನೆ. ಇದು ಹೀಗೇ ಮುಂದುವರಿದರೆ ನಿರಾಶ್ರಿತರಿಗಿಂತ ಬಂದು- ಹೋಗುವವರ ಸಂಖ್ಯೆಯೇ ಅಧಿಕವಾಗುತ್ತದೆ. ದಯವಿಟ್ಟು ಹೊಸಬರು ಬರುವುದೇ ಬೇಡ ಎಂದು ಅಂಗಲಾಚುತ್ತಿದ್ದಾರೆ ರಕ್ಷಣಾ ಸಿಬ್ಬಂದಿ.
ಕರ್ನಾಟಕದ ಪ್ರವಾಹ ಸಂತ್ರಸ್ತರಿಗೆ ನೆರವಾಗುವುದು ಹೇಗೆ?
ಬನ್, ಬ್ರೆಡ್, ಬಿಸ್ಕತ್ ಗಳೇ ಟನ್ ಗಟ್ಟಲೆ ಕುಳಿತಿವೆ
5ಕ್ಕೂ ಹೆಚ್ಚು ಡಂಪಿಂಗ್ ಯಾರ್ಡ್ ಗಳಲ್ಲಿ ಬನ್, ಬ್ರೆಡ್, ಬಿಸ್ಕತ್ ಗಳೇ ಟನ್ ಗಟ್ಟಲೆ ಕುಳಿತಿವೆ. ಆದರೆ ಈಗಾಗಲೇ ಜನರಿಗೆ ಅದರ ಪೂರೈಕೆ ಹೆಚ್ಚಿದೆ. ಆಹಾರ ಸಾಮಗ್ರಿಗಳ ಪೂರೈಕೆಯೇ ಬೇಡ ಎಂದು ನಿರಾಶ್ರಿತರು ಅಂಗಲಾಚುತ್ತಿದ್ದಾರೆ. ಅನೇಕರಿಗೆ ಮುಂದಿನ ದಿನಗಳಲ್ಲಿ ವಾಸ ಮಾಡಲು ಮನೆಯೇ ಇಲ್ಲ ಎಂಬ ಸ್ಥಿತಿ ಇದೆ. ಅದಿರಲಿ ಮನೆ ಕಟ್ಟಿಕೊಳ್ಳಲು ನೆಲ ಕೂಡ ಇಲ್ಲದ ಪರಿಸ್ಥಿತಿಯೇ ಅನೇಕರಿಗಾಗಿದೆ. ನಿರಾಶ್ರಿತರು ಕೈ ಮುಗಿದು ಕೇಳಿಕೊಳ್ಳುತ್ತಿದ್ದಾರೆ, ನಮಗೆ ಹಣಕಾಸಿನ ನೆರವು ನೀಡಿ. ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ನಮಗೆ ಪರಿಹಾರ ಕೊಡಿಸಿ. ನಾವು ಅಕ್ಷರಶಃ ಬಿದ್ದಿಗೆ ಬಿದ್ದಿದ್ದೇವೆ ಎಂದು ಗೋಳಿಡುತ್ತಿದ್ದಾರೆ.
ನಮ್ಮ ಮನೆ ಹುಡುಕಿಕೊಡಿ
'ನಾವಿರುವ ಬೆಟ್ಟದಲ್ಲಿ ಮಳೆ ಬಂದು ಎಲ್ಲವನ್ನೂ ಹೊತ್ತುಕೊಂಡು ಹೋಗಿದೆ. ಬುಧವಾರ ರಾತ್ರಿ ಮಳೆ ಜೋರಾಗುತ್ತಿದ್ದಂತೆ ಮಕ್ಕಳು, ಸೊಸೆಯಂದಿರು ಮನೆಯಿಂದ ಹೊರಬಂದು ಕಾಡಿನತ್ತ ಓಡಿ ರಸ್ತೆ ಸೇರಿದ್ದೆವು. ಆದರೆ ಇದೀಗ ಮನೆ ಇದೆಯೋ ಇಲ್ಲವೋ ಗೊತ್ತಿಲ್ಲ. ದಯವಿಟ್ಟು ಹುಡುಕಿಕೊಡಿ' ಎಂದು ಕಣ್ಣೀರಿಟ್ಟರು ಮಕ್ಕಂದೂರು ನಿರಾಶ್ರಿತೆ ಲೀಲಾ. ಸುತ್ತಮುತ್ತ ಗ್ರಾಮದಲ್ಲಿ ಅನೇಕ ವರ್ಷದಿಂದ ಮಳೆಯಿಂದ ಸಮಸ್ಯೆ ಎದುರಿಸುತ್ತಿದ್ದೇವೆ. ಪ್ರತಿ ಸಲ ಮಳೆ ಬಂದಾಗಲೆಲ್ಲ ಮನೆಗಳಿಗೆ ಸಣ್ಣ ಪ್ರಮಾಣದಲ್ಲಿ ಹಾನಿಯಾಗುತ್ತಿತ್ತು. ಆದರೆ ಈ ಬಾರಿ ಕ್ಷಣ ಮಾತ್ರದಲ್ಲಿ ಗುಡ್ಡ ಕುಸಿದಿದ್ದರಿಂದ ದಿನಸಿ, ದವಸ, ಪಾತ್ರೆ, ದುಡ್ಡು, ಮನೆ ಸಾಮಗ್ರಿಗಳು ಮಣ್ಣಿನ ಅಡಿಯಲ್ಲಿವೆ. ರಾತ್ರಿ ಬೆಟ್ಟದಲ್ಲಿ ನೀರು ಧುಮ್ಮಿಕ್ಕುವ ದೊಡ್ಡ ಸದ್ದು ಕೇಳಿತು. ನೋಡ ನೋಡುತ್ತಲೇ ಗುಡ್ಡಗಳು ಮನೆಗಳ ಮೇಲೆ ಬೀಳತೊಡಗಿದವು. ಮಕ್ಕಳು- ಮರಿ ಎಲ್ಲಿ ಕೊಚ್ಚಿ ಹೋಗುತ್ತಾರ ಎಂಬ ಭಯವಾಯಿತು. ತಕ್ಷಣ ಎಲ್ಲರೂ ಜೀವ ಕೈಯಲ್ಲಿ ಹಿಡಿದು ಹೊರ ಬಂದೆವು ಎಂದು ತಮ್ಮ ಅನುಭವ ಹೇಳಿಕೊಳ್ಳುವವರು ಅನೇಕರು ಎದುರಾಗುತ್ತಾರೆ.
ಕೇರಳ, ಕರ್ನಾಟಕದ ಪ್ರವಾಹದ ನೈಜ ಕಾರಣ ಬಹಿರಂಗ
ಸಾಮಗ್ರಿಗಳಿಗಿಂತ ದೇಣಿಗೆ ನೀಡಿದರೆ ಸಹಾಯ
'ಸೇವಾಭಾರತಿ'ಯ ಸದಸ್ಯ ಚಂದ್ರು ಮಾತನಾಡಿ, ನಮ್ಮ ತಂಡದಿಂದ 300 ಜನರು ಬಂದಿದ್ದೇವೆ. ಎನ್ ಡಿಆರ್ ಎಫ್ ತಂಡಕ್ಕೂ ಮುಂಚಿತವಾಗಿ ಬಂದು ಜನರನ್ನು ರಕ್ಷಣಾ ಕಾರ್ಯದಲ್ಲಿ ತೊಡಗಿದೆವು. ಈ ಪರಿಸ್ಥಿತಿ ಎಂದಿಗೂ ಮತ್ತೆ ಬರುವುದು ಬೇಡ. ನಮ್ಮ ಜೀವವನ್ನು ಪಣವಾಗಿಟ್ಟುಕೊಂಡು ಅನೇಕರನ್ನು ಬದುಕಿಸಲು ಸಾಧ್ಯವಾಯಿತು ಎಂದರು. -ಇದು ಕೊಡಗಿನ ವಾಸ್ತವ ಸ್ಥಿತಿ. ನೆರವು ನೀಡಲು ಮುಂದಾಗಲು ಮನಸ್ಸು ಮಾಡುತ್ತಿರುವವರು ಒಮ್ಮೆ ಯೋಚಿಸಿ. ನಿರಾಶ್ರಿತರಿಗೆ ಸಾಮಗ್ರಿಗಳಿಗಿಂತ ದೇಣಿಗೆ ನೀಡಿದರೆ ಸಹಾಯವಾಗುತ್ತದೆ. ಮತ್ತೆ ಬದುಕನ್ನು ಕಟ್ಟಿಕೊಳ್ಳಲು ನೆರವಾಗುತ್ತದೆ.