Railway Budget 2021: ರೈಲ್ವೆ ಇಲಾಖೆಗೆ ನಿರ್ಮಲಾರಿಂದ ಏನೇನು ಸಿಗಬಹುದು?
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರವು ಪ್ರತ್ಯೇಕ ರೈಲ್ವೆ ಬಜೆಟ್ ಪದ್ಧತಿಯನ್ನು ಕೈಬಿಟ್ಟು, ಒಂದೇ ಕೇಂದ್ರ ಆಯವ್ಯಯ ಪತ್ರ ಮಂಡನೆಗೆ ಚಾಲನೆ ನೀಡಿ ವರ್ಷಗಳು ಕಳೆದಿವೆ.
ಪ್ರತ್ಯೇಕ ರೈಲ್ವೆ ಖಾತೆ ಇದ್ದರೂ, ಪ್ರತ್ಯೇಕ ರೈಲ್ವೆ ಬಜೆಟ್ ಪದ್ಧತಿ ಈಗ ಇಲ್ಲ. ಸುಮಾರು 92 ವರ್ಷಗಳ ಈ ವಿಧಾನಕ್ಕೆ ಅರುಣ್ ಜೇಟ್ಲಿ ಅವರಿದ್ದಾಗಲೇ ತಿಲಾಂಜಲಿ ನೀಡಲಾಯಿತು. ಕೇಂದ್ರ ಬಜೆಟ್ ನೊಂದಿಗೆ ರೈಲ್ವೆ ಬಜೆಟ್ ವಿಲೀನವಾಗಿಬಿಟ್ಟಿತು.
ಬಜೆಟ್ 2021: ಆದಾಯ ತೆರಿಗೆದಾರರಿಗೆ ರೀಲಿಫ್ ಇಲ್ಲ, ಮತ್ತೇನಿದೆ?
ಇಂಟರ್ ಸಿಟಿ ರೈಲು, ಹೊಸ ಮಾರ್ಗಗಳು, ಸೂಪರ್ ಫಾಸ್ಟ್ ರೈಲುಗಳ ನಿರೀಕ್ಷೆ, ಸಬ್ ಅರ್ಬನ್, ನಮ್ಮ ಮೇಟ್ರೋ ಕಾರ್ಯಪ್ರಗತಿ, ಬುಲೆಟ್ ಟ್ರೈನ್ ಬಗ್ಗೆ ನಿರೀಕ್ಷೆ ಜೊತೆಗೆ ರೈಲು ನಿಲ್ದಾಣಗಳನ್ನು ಮೇಲ್ದರ್ಜೆಗೇರಿಸುವುದು ಪ್ರತಿ ಬಾರಿಯ ಆಶ್ವಾಸನೆ ಹಾಗೂ ನಿರೀಕ್ಷೆಯಾಗಿದೆ. ಐದು ರಾಜ್ಯಗಳ ಚುನಾವಣೆ, ಕೊವಿಡ್ 19 ನಿಯಮ ಜಾರಿ ನಡುವೆ ಪ್ರಯಾಣಿಕರ ಸಂಖ್ಯೆ ಹೆಚ್ಚಿಸುವುದು ಮುಂತಾದವುಗಳನ್ನು ಎದುರು ನೋಡಬಹುದು.
ಐದು ರಾಜ್ಯಗಳ ಚುನಾವಣೆ ಮೆಲೆ ಫೋಕಸ್
ಈ ಬಾರಿ ಚುನಾವಣೆ ಇರುವ ರಾಜ್ಯಗಳಲ್ಲಿ ಹೊಸ ರೈಲುಗಳ ಘೋಷಣೆ ಹಾಗೂ ಹೆಚ್ಚಿನ ಮಟ್ಟದಲ್ಲಿ ಕೊಡುಗೆ ನೀಡುವ ಮೂಲಕ ಮತದಾರರನ್ನು ಸೆಳೆಯುವ ಸಾಧ್ಯತೆಯಿದೆ.
ತಮಿಳುನಾಡು, ಕೇರಳ, ಆಂಧ್ರಪ್ರದೇಶ ಹಾಗೂ ತೆಲಂಗಾಣಕ್ಕೆ ಭರ್ಜರಿ ಗಿಫ್ಟ್ ಸಿಕ್ಕರೆ ಅದರಲ್ಲಿ ಸ್ವಲ್ಪ ಪಾಲು ಗಡಿಭಾಗದ ಕರ್ನಾಟಕಕ್ಕೂ ಸಿಗಲಿದೆ ಎಂಬ ಪರೋಕ್ಷ ಕನಸು ಕಾಣುವ ಅಸಹಾಯಕ ಸ್ಥಿತಿ ಕರ್ನಾಟಕಕ್ಕೆ ದಶಕಗಳಿಂದ ಬಂದೊದಗಿದೆ.
ರೈಲ್ವೆ ಇಲಾಖೆಗೆ ಹೆಚ್ಚಿನ ಅನುದಾನ
ರೈಲ್ವೆ ಇಲಾಖೆಗೆ ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಅನುದಾನ ಸಿಗಬಹುದು. ಶೇ 3 ರಿಂದ 5 ರಷ್ಟು ಹೆಚ್ಚು ಮೊತ್ತ ಇಲಾಖೆಗೆ ನೀಡುವ ಸಾಧ್ಯತೆ ಅಧಿಕವಾಗಿದೆ ಎಂದು ಜೀ ಮೀಡಿಯಾ ವರದಿ ಮಾಡಿದೆ. ಬಜೆಟ್ ಖರ್ಚು ವೆಚ್ಚ 1.80 ಲಕ್ಷ ಕೋಟಿ ರು ಎಂದು ಅಂದಾಜಿಸಲಾಗಿದೆ. ಆದರೆ 2021-22ರ ಆರ್ಥಿಕ ವರ್ಷಕ್ಕಾಗಿ 1.70 ಲಕ್ಷ ಕೋಟಿ ರು ಸಿಗುವ ನಿರೀಕ್ಷೆಯಿದೆ. ಇದಲ್ಲದೆ, 75, 000 ಕೋಟಿ ರು ಹೆಚ್ಚುವರಿ ಅನುದಾನ ಇಲಾಖೆಗೆ ಲಭಿಸಲಿದೆ ಎಂದು ವರದಿಗಳಿವೆ.
ರೈಲ್ವೆ ಬಜೆಟ್ ಫೋಕಸ್
ಈ ಬಾರಿ ರೈಲ್ವೆ ಬಜೆಟ್ ನಲ್ಲಿ ಖಾಸಗಿ ರೈಲು ಮಾರ್ಗ ಹಾಗೂ ಹೊಸ ರೈಲು ಮಾರ್ಗ ಮೂಲಕ ಶೀಘ್ರ ಸಂಚಾರ ಸಂಪರ್ಕ ಸಾಧಿಸುವುದರ ಬಗ್ಗೆ ಹೆಚ್ಚಿನ ಗಮನ ಹರಿಸುವ ಸಾಧ್ಯತೆಯಿದೆ. ಮುಖ್ಯವಾಗಿ ಪ್ರವಾಸಿ ತಾಣಗಳಿಗೆ ರೈಲು ಮಾರ್ಗ ಸಂಪರ್ಕ ಹೆಚ್ಚಿಸುವುದು, ಹೆಚ್ಚಿನ ಕಿಸಾನ್ ರೈಲು ಮಾರ್ಗ, ಈಶಾನ್ಯ ರಾಜ್ಯಗಳಿಗೆ ಅಗತ್ಯವಾಗಿ ಬೇಕಿರುವ ಮೂಲ ಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಲಾಗುತ್ತದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಬಜೆಟ್ ಅಧಿವೇಶನ
ಜನವರಿ 29ರಂದು ಬಜೆಟ್ ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಭಾಷಣ ಮಾಡಲಿದ್ದಾರೆ. ಫೆಬ್ರವರಿ 1ರಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಮಂಡನೆ ಮಾಡಲಿದ್ದಾರೆ. ಫೆಬ್ರವರಿ 15ಕ್ಕೆ ಬಜೆಟ್ ಮುಂದೂಡಲಿದ್ದು, ಮಾರ್ಚ್ 8ರಂದು ಮತ್ತೆ ಆರಂಭವಾಗಲಿದೆ. ಏಪ್ರಿಲ್ 8ರ ತನಕ ಅಧಿವೇಶನ ಮುಂದುವರೆಯಲಿದೆ. ಕೊವಿಡ್ 19 ನಿಯಮಗಳನ್ನು ಅನುಸರಿಸಿ ಈ ಬಾರಿ ಪ್ರಶ್ನೋತ್ತರ ವೇಳೆಯನ್ನು ಕನಿಷ್ಠ 5 ಗಂಟೆಗಳ ಅವಧಿ ಕಾಲ ನಡೆಸಲು ಸಿದ್ಧತೆಯಾಗಿದೆ.