ವಯನಾಡಲ್ಲಿ ರಾಹುಲ್ ಗಾಂಧಿ ಗೆದ್ದರೂ ಅದು ಕಾಂಗ್ರೆಸ್ ಗೇ ಮಾರಕ!
ತಿರುವನಂತಪುರಂ, ಏಪ್ರಿಲ್ 01: ಕಾಂಗ್ರೆಸ್ ಪಾಲಿಗೆ ನಿಜವಾದ ವಿರೋಧಿ ಯಾರು? ಇಂಥದೊಂದು ಪ್ರಶ್ನೆ ಪಕ್ಷಾಧ್ಯಕ್ಷ ರಾಹುಲ್ ಗಾಂಧಿ ಅವರು ಕೇರಳದ ವಯನಾಡಿನಿಂದ ಸ್ಪರ್ಧಿಸಿದ ನಂತರ ಎದ್ದಿದೆ. ಕಾಂಗ್ರೆಸ್ ನ ಸಾಂಪ್ರದಾಯಿಕ ಎದುರಾಳಿ ಬಿಜೆಪಿಯ ಅಸ್ತಿತ್ವವೇ ಹೆಚ್ಚಿಲ್ಲದ ಕೇರಳದಲ್ಲಿ ಸ್ಪರ್ಧೆಗೆ ನಿಂತು ಯಾರಿಗೆ ಪಾಠ ಕಲಿಸಲು ರಾಹುಲ್ ಗಾಂಧಿ ಮುಂದಾಗಿದ್ದಾರೆ ಎಂಬುದು ಈಗ ಎದ್ದಿರುವ ಪ್ರಶ್ನೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ರಾಹುಲ್ ಗಾಂಧಿ ಅವರಿಗೆ ಅಮೇಥಿಯಲ್ಲಿ ಸೋಲುವ ಭಯ ಕಾಡಿದೆಯಾ? ಅದಕ್ಕೆಂದೇ ಕಾಂಗ್ರೆಸ್ ನ ಭದ್ರಕೋಟೆ ವಯನಾಡಿನಲ್ಲಿ ಕಣಕ್ಕಿಳಿಯಲು ಚಿಂತನೆ ನಡೆಸಿದರಾ ಎಂಬಿತ್ಯಾದಿ ಪ್ರಶ್ನೆಗಳು ಎದ್ದರೆ ಅದು ಸಹಜವೇ!
ರಾಹುಲ್ ಗೆ ಪ್ರತಿಷ್ಠೆಯ ಕಣವಾಗಿರುವ 'ಅಮೇಥಿ' ಲೋಕಸಭಾ ಕ್ಷೇತ್ರ
ಲೋಕಸಭಾ ಚುನಾವಣೆಗೆ ಇನ್ನು ಕೆಲವೇ ದಿನ ಬಾಕಿ ಉಳಿದಿದೆ. ಉತ್ತರ ಭಾರತದಲ್ಲಿ ಮಾತ್ರವಲ್ಲದೆ, ದಕ್ಷಿಣ ಭಾರತದಲ್ಲೂ ಚುನಾವಣೆಗೆ ಸ್ಪರ್ಧಿಸುವ ಇಂಗಿತ ಹೊಂದಿರುವ ರಾಹುಲ್ ಗಾಂಧಿ ಎರಡೆರಡು ಕ್ಷೇತ್ರಗಳಲ್ಲಿ ಚುನಾವಣೆಗೆ ನಿಂತಿದ್ದಾರೆ. ಆದರೆ ಕೇರಳದಲ್ಲಿ ಆಡಳಿತದಲ್ಲಿರುವ ಎಡಪಕ್ಷಕ್ಕೆ ಕಾಂಗ್ರೆಸ್ ನಡೆ ಭಾರೀ ಆಘಾತವನ್ನುಂಟು ಮಾಡಿದೆ. ರಾಹುಲ್ ನಡೆ ಎಡಪಕ್ಷ ಮತ್ತು ಕಾಂಗ್ರೆಸ್ ಮಧ್ಯೆ ಬಿರುಕನ್ನುಂಟು ಮಾಡುವ ಸಾಧ್ಯತೆಯಂತೂ ನಿಚ್ಛಳವಾಗಿದೆ. ಹಾಗೊಮ್ಮೆ ಆದರೆ ಲೋಕಸಭಾ ಚುನಾವಣೆಗೂ ಮುನ್ನವೇ ಮಹಾಮೈತ್ರಿಕೂಟದಲ್ಲಿ ಭಾರೀ ಬಿರುಕು ಕಾಣಿಸಿಕೊಂಡರೆ ಅಚ್ಚರಿಯಿಲ್ಲ.
ಕಾಂಗ್ರೆಸ್ ನ ನಿಜವಾದ ಎದುರಾಳಿ ಯಾರು?
ಕಾಂಗ್ರೆಸ್ ನ ನಿಜವಾದ ಎದುರಾಳಿ ಬಿಜೆಪಿಯೇ ಆಗಿದ್ದರೆ, ಕೇರಳದಲ್ಲಿ ಚುನಾವಣೆಗೆ ನಿಲ್ಲುವ ಮೂಲಕ ರಾಹುಲ್ ಗಾಂಧಿ ಯಾರಿಗೆ ಪಾಠ ಕಲಿಸಲು ಹೊರಟಿದ್ದಾರೆ. 2014 ರ ಲೋಕಸಭೆ ಚುನಾವಣೆಯಲ್ಲಿ ಕೇರಳದಲ್ಲಿ ಬಿಜೆಪಿ ಒಂದೇ ಒಂದು ಸ್ಥಾನವನ್ನೂ ಗೆದ್ದಿಲ್ಲ. ಎಡಪಕ್ಷಗಳ ಪ್ರಾಬಲ್ಯವಿರುವ ಕೇರಳದಲ್ಲಿ ಕಾಂಗ್ರೆಸ್ ಎಡಪಕ್ಷದ ವಿರುದ್ಧ ಸೆಣಸಬೇಕಾಗಿದೆಯೇ ವಿನಃ, ಬಿಜೆಪಿ ವಿರುದ್ಧ ಅಲ್ಲ! ಹೀಗಿರುವಾಗ ರಾಹುಲ್ ಗಾಂಧಿ ಅವರು ವಯನಾಡನ್ನು ಆರಿಸಿಕೊಂಡಿದ್ದನ್ನು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಸಿಪಿಎಂ ಮುಖಂಡ ಪ್ರಕಾಶ್ ಕಾರಣ್ ಕಟುವಾಗಿ ಟೀಕಿಸಿದ್ದಾರೆ.
ಅಮೇಥಿಯಲ್ಲಿ ಸೋಲುವ ಭಯ?
ಗಾಂಧಿ ಕುಟುಂಬದ ಭದ್ರಕೋಟೆ ಉತ್ತರ ಪ್ರದೇಶದ ಅಮೇಥಿಯಲ್ಲಿ ರಾಹುಲ್ ಗಾಂಧಿ ಅವರಿಗೆ ಈ ಬಾರಿ ಕಠಿಣ ಸ್ಪರ್ಧೆ ಎದುರಾಗಬಹುದು ಎನ್ನಲಾಗುತ್ತಿದೆ. ಬಿಜೆಪಿಯಿಂದ ಕೇಂದ್ರ ಸಚಿವ ಸ್ಮೃತಿ ಇರಾನಿ ಅವರು ಈ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. 2014 ರ ಲೋಕಸಭಾ ಚುನಾವಣೆಯಲ್ಲಿ ಗಾಂಧಿ ಕುಟುಂಬದ ಭದ್ರಕೋಟೆಯನ್ನು ಸ್ಮೃತಿ ಇರಾನಿ ಅಲ್ಲಾಡಿಸಿದ್ದರು. ರಾಹುಲ್ ಗಾಂಧಿ 408,651 ಮತಗಳನ್ನು ಪಡೆದಿದ್ದರೆ, ಇರಾನಿ 300,748 ಮತಗಳನ್ನು ಪಡೆದು ಪ್ರಬಲ ಪ್ರತಿಸ್ಪರ್ಧೆ ನೀಡಿದ್ದರು. 1 ಲಕ್ಷಕ್ಕೂ ಹೆಚ್ಚು ಮತಗಳ ಅಮತರದಿಂದ ರಾಹುಲ್ ಗಾಂಧಿ ಗೆದ್ದಿದ್ದರೂ, ಈ ಬಾರಿ ಈ ಕ್ಷೇತ್ರವನ್ನು ನಿರ್ಲಕ್ಷ್ಯಿಸುವಂತಿಲ್ಲ.
ವಯನಾಡಲ್ಲಿ ರಾಹುಲ್ ಸೋಲಿಗೆ ಪಣತೊಟ್ಟ ಎಡಪಕ್ಷ, ರೋಚಕತೆಯತ್ತ ಕಣ
ಸ್ಮೃತಿ ಇರಾನಿ ಮೇಲೆ ವಿಶ್ವಾಸ
ಕಳೆದ ಚುನಾವಣೆಯಲ್ಲಿ ಅಮೇಥಿಯ ಪರಿಚಯ ಹೆಚ್ಚಿಲ್ಲದಿದ್ದರೂ ರಾಹುಲ್ ಗಾಂಧಿ ನಾಯಕತ್ವದ ಮೇಲಿನ ವಿರೋಧಿ ಅಲೆಯೇ ಇರಾನಿಗೆ ವರವಾಗತ್ತು. ಆದರೆ ಈ ಬಾರಿ ಸ್ಮೃತಿ ಆ ಕ್ಷೇತ್ರದಲ್ಲಿ ಕಳೆದ ಐದು ವರ್ಷಗಳಿಂದ ಹಲವು ಬಾರಿ ಓಡಾಡಿ, ಜನರ ನಾಡಿ ಮಿಡಿತವನ್ನು ಅರಿತಿದ್ದು, ಅವರಿಗೆ ನೆರವಾಗಬಹುದು. ಈ ಭಯವೂ ರಾಹುಲ್ ಗಾಂಧಿಯವರಿಗೆ ಇದ್ದಂತಿದೆ.ಅದೂ ಅಲ್ಲದೆ, ಕೇಮದ್ರ ಸಚಿವೆಯಾಗಿಯೂ ಕಾರ್ಯ ನಿರ್ವಹಿಸುತ್ತಿರುವ ಇರಾನಿ ಅವರು ಈ ಬಾರಿಯೂ ರಾಹುಲ್ ಗಾಂಧಿ ಅವರಿಗೆ ಪ್ರಬಲ ಪ್ರತಿಸ್ಪರ್ಧೆ ನೀಡುವುದು ಖಂಡಿತ ಎನ್ನಲಾಗಿದೆ.
ಮಹಾಮೈತ್ರಿಕೂಟದ ಮೇಲೆ ಪರಿಣಾಮ
ಕಾಂಗ್ರೆಸ್ ನೊಂದಿಗೆ ಮಹಾಮೈತ್ರಿಕೂಟದಲ್ಲಿ ಗುರುತಿಸಿಕೊಂಡಿದ್ದ ಎಡಪಕ್ಷಗಳಿಗೆ ರಾಹುಲ್ ಗಾಂಧಿ ವಯನಾಡಿನಿಂದ ಸ್ಪರ್ಧಿಸುತ್ತಿರುವುದು ಭಾರೀ ಬೇಸರವನ್ನುಂಟು ಮಾಡಿರುವುದರಿಂದ, 'ರಾಹುಲ್ ಗಾಂಧಿ ಅವರನ್ನು ಸೋಲಿಸುವುದೇ ನಮ್ಮ ಗುರಿ' ಎಂದು ಬಹಿರಂಗವಾಗಿಯೇ ಸಿಪಿಎಂ ನಾಯಕರು ಹೇಳಿಕೊಂಡಿದ್ದಾರೆ. ಇದು ಚುನಾವಣೆಯ ಮೇಲೆ ಋಣಾತ್ಮಕ ಪರಿಣಾಮ ಬೀರುವುದು ಖಂಡಿತ. ಕೇರಳದಲ್ಲಿ ಉಂಟಾದ ಈ ಬಿರುಕಿನ ಲಾಭವನ್ನು ರಾಷ್ಟ್ರೀಯ ಮಟ್ಟದಲ್ಲಿ ಬಿಜೆಪಿ ತನ್ನ ಲಾಭಕ್ಕಾಗಿ ಬಳಸಿಕೊಳ್ಳಬಹುದು.
ವಯನಾಡಿನಲ್ಲಿ ರಾಹುಲ್ ಗಾಂಧಿ ವಿರುದ್ಧ ಸೂಪರ್ ಸ್ಟಾರ್ ಕಣಕ್ಕೆ?
ವಯನಾಡಿನಲ್ಲಿ ಗೆಲ್ಲೋದು ಕಷ್ಟವಲ್ಲ!
2009 ರಲ್ಲಿ ಸೃಷ್ಟಿಯಾದ ವಯನಾಡು ಲೋಕಸಭಾ ಕ್ಷೇತ್ರ ಕಾಂಗ್ರೆಸ್ ನ ಭದ್ರಕೋಟೆ. ಪರಿಶಿಷ್ಟ ಜಾತಿ, ಪಂಗಡ ಮತ್ತು ಮುಸ್ಲಿಂ ಮತದಾರರೇ ಈ ಕ್ಷೇತ್ರದಲ್ಲಿ ಹೆಚ್ಚಿರುವುದು ಕಾಂಗ್ರೆಸ್ ಗೆ ವರದಾನವಾಗಿದೆ. 2009 ಮತ್ತು 2014 ಎರಡೂ ಚುನಾವಣೆಯಲ್ಲಿ ಕಾಂಗ್ರೆಸ್ ನ ಎಂ ಐ ಶನವಾಸ್ ಗೆದ್ದಿದ್ದರು. ಆದರೆ 2018 ರ ನವೆಂಬರ್ 21 ರಂದು ಶನವಾಸ್ ಅವರ ಮರಣದಿಂದ ಈ ಕ್ಷೇತ್ರ ತೆರವಾಗಿದ್ದು, ಇಲ್ಲಿಂದ ರಾಹುಲ್ ಗಾಂಧಿ ಸ್ಪರ್ಧೆಗಿಳಿಯುತ್ತಾರೆ ಎಂದು ಕಾಂಗ್ರೆಸ್ ಅಧಿಕೃತವಾಗಿ ಘೋಷಿಸಿದೆ.
ಇಂಥ ಸ್ಪರ್ಧೆ ಹೊಸತೇನಲ್ಲ
ಗಾಂಧಿ ಕುಟುಂಬ ಹೀಗೆ ಎರಡೆರಡು ಕ್ಷೇತ್ರಗಳಿಂದ ಕಣಕ್ಕಿಳಿಯುವುದು ಹೊಸ ವಿಷಯವೇನಲ್ಲ. ಉತ್ತರ ಮತ್ತು ದಕ್ಷಿಣ ಎರಡೂ ಕಡೆಗಳಲ್ಲೂ ಚುನಾವಣೆಗೆ ನಿಂತು, ದೇಶದೆಲ್ಲೆಡೆಯೂ ಜನಾಭಿಮಾನ ಗಳಿಸುವ ಕಾರಣಕ್ಕೆ ಹಲವು ಘಟಾನುಘಟಿ ನಾಯಕರು ಎರಡು ಕ್ಷೇತ್ರಗಳಲ್ಲಿ ಚುನಾವಣೆಗೆ ನಿಂತಿದ್ದಾರೆ. 1980 ರಲ್ಲಿ ರಾಯ್ ಬರೇಲಿ ಮತ್ತು ಮೇದಕ್(ತೆಲಂಗಾಣ) ಎರಡೆರಡು ಕ್ಷೇತ್ರಗಳಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಸ್ಪರ್ಧೆಗಿಳಿದು, ಗೆದ್ದಿದ್ದರು. 1999 ರಲ್ಲಿ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅಮೇಥಿ ಮತ್ತು ಬಳ್ಳಾರಿ(ಕರ್ನಾಟಕ) ಎರಡು ಕ್ಷೇತ್ರಗಳಲ್ಲಿಸ್ಪರ್ಧಿಸಿ, ಗೆದ್ದಿದ್ದರು. ಇದೀಗ ರಾಹುಲ್ ಗಾಂಧಿ ಸಹ ಅಮೇಥಿ ಮತ್ತು ವಯನಾಡಿನಿಂದ ಸ್ಪರ್ಧೆಗಿಳಿದಿದ್ದಾರೆ.