ಮುರುಘಾ ಮಠದಲ್ಲಿ ರಾಹುಲ್ ಗಾಂಧಿ 'ಲಿಂಗದೀಕ್ಷೆ'ಗೆ ರಾಜಕೀಯ ಆಯಾಮ?
ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಮತ್ತೆ ಪ್ರಮುಖ ಭೂಮಿಕೆಯಾಗಬಹುದು ಎಂದು ನಿರೀಕ್ಷಿಸಲಾಗಿದ್ದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ ಅಮೃತ ಮಹೋತ್ಸವ ಕಾರ್ಯಕ್ರಮ ಭರ್ಜರಿ ಯಶಸ್ಸನ್ನು ಪಡೆದುಕೊಂಡಿದೆ.
ಅಮೃತ ಮಹೋತ್ಸವ ಸಿದ್ದರಾಮಯ್ಯನವರ ಹುಟ್ಟುಹಬ್ಬದ ಕಾರ್ಯಕ್ರಮಕ್ಕೆ ಸೀಮಿತವಾಗದೇ, ಪಕ್ಷದ ಕಾರ್ಯಕ್ರಮವಾಗಿ ಮಾರ್ಪಾಡುಗೊಂಡಿತ್ತು. ನೆರೆದಿದ್ದ ಜನಸಾಗರ ಕಾಂಗ್ರೆಸ್ಸಿಗೆ ಟಾನಿಕ್ ನೀಡಿರುವುದಂತೂ ಹೌದು.
ಕಾಂಗ್ರೆಸ್ ಬಣ ರಾಜಕೀಯ ಒಪ್ಪಿಕೊಂಡು, ಸಿದ್ದರಾಮೋತ್ಸವದಲ್ಲಿ ಇತಿಶ್ರೀ ಹಾಡಿದ ರಾಹುಲ್ ಗಾಂಧಿ
ರಾಹುಲ್ ಗಾಂಧಿ, ಕೆ.ಸಿ.ವೇಣುಗೋಪಾಲ್, ರಣದೀಪ್ ಸುರ್ಜೇವಾಲ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ದಾವಣಗೆರೆಗೆ ಆಗಮಿಸುವ ಮುನ್ನ ಚಿತ್ರದುರ್ಗದ ಮುರುಘಾ ಮಠಕ್ಕೆ ಭೇಟಿ ನೀಡಿದ ರಾಹುಲ್, ಲಿಂಗದೀಕ್ಷೆಯನ್ನು ಪಡೆದದ್ದು ವಿಶೇಷ.
ಇದು ಸಾಮಾನ್ಯ ಲಿಂಗ ದೀಕ್ಷೆಯ ಪ್ರಕ್ರಿಯೆಯಾಗಿದ್ದು ಲಿಂಗಾಯತ ಧರ್ಮದ ಆಳವಾದ ದೀಕ್ಷೆಯ ಪ್ರಕ್ರಿಯೆಯಲ್ಲ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಪ್ರಕಾರ, ರಾಹುಲ್ ಗಾಂಧಿಯವರು ಈ ಮಠಕ್ಕೆ ಭೇಟಿ ನೀಡಲು ಬಯಸಿದ್ದರು.
ಮುರುಘಾ ಮಠಕ್ಕೆ ರಾಹುಲ್ ಭೇಟಿ, ಲಿಂಗ ದೀಕ್ಷೆ ಸ್ವೀಕಾರ!
ಇಪ್ಪತ್ತಕ್ಕೂ ಹೆಚ್ಚು ಮಠಾಧೀಶರ ಜೊತೆಗೆ ಸಂವಾದ
ಮುರುಘಾ ಮಠಕ್ಕೆ ರಾಹುಲ್ ಗಾಂಧಿ, ಡಿಕೆಶಿ ಜೊತೆಗೆ ಭೇಟಿ ನೀಡಿ, ಇಪ್ಪತ್ತಕ್ಕೂ ಹೆಚ್ಚು ಮಠಾಧೀಶರ ಜೊತೆಗೆ ಸಂವಾದವನ್ನು ನಡೆಸಿದರು. ಎಲ್ಲರ ಸಮ್ಮುಖದಲ್ಲಿ ಡಾ. ಶಿವಮೂರ್ತಿ ಮುರುಘಾ ಶರಣರು ರಾಹುಲ್ ಗಾಂಧಿಗೆ ವಿಭೂತಿ ಹಚ್ಚಿ, ಲಿಂಗ ದೀಕ್ಷೆ ನೀಡಿದ್ದಾರೆ. ಲಿಂಗಪೂಜೆ ಆಚರಣೆ ಬಗ್ಗೆ ಮುರುಘಾಶ್ರೀ ಗಳು ರಾಹುಲ್ ಗಾಂಧಿಗೆ ಪ್ರವಚನವನ್ನೂ ನೀಡಿದ್ದಾರೆ. ರಾಹುಲ್ ಗಾಂಧಿಯವರ ಮುರುಘಾ ಮಠ ಭೇಟಿ ಮತ್ತು ಲಿಂಗ ದೀಕ್ಷೆಯನ್ನು ರಾಜಕೀಯವಾಗಿಯೂ ವಿಶ್ಲೇಷಿಸಲಾಗುತ್ತಿದೆ.
ಇಷ್ಟಲಿಂಗ ಪೂಜೆ ಕಲಿಸಿ ಕೊಡುತ್ತೀರಾ ಎಂದ ರಾಹುಲ್
ಇಷ್ಟಲಿಂಗ ಪೂಜೆ ಕಲಿಸಿ ಕೊಡುತ್ತೀರಾ ಎಂದು ರಾಹುಲ್ ಗಾಂಧಿಯವರೇ ಕೇಳಿದಾಗ ಮುರುಘಾ ಶ್ರೀಗಳು ಪ್ರಾತ್ಯಕ್ಷಿಕೆ ಮೂಲಕ ಬಸವತತ್ವ, ಶಿವಯೋಗದ ಬಗ್ಗೆ ವಿವರಣೆಯನ್ನು ನೀಡಿದರು. ಚುನಾವಣಾ ವರ್ಷವಾಗಿರುವುದರಿಂದ ರಾಹುಲ್ ಗಾಂಧಿಯವರ ಈ ಭೇಟಿ ಮತ್ತು ಇಷ್ಟಲಿಂಗ ಪೂಜೆಯನ್ನು ಒಂದು ಸಮುದಾಯದ ಮತವನ್ನು ಸೆಳೆಯುವ ಪ್ರಯತ್ನ ಎಂದೂ ವ್ಯಾಖ್ಯಾನಿಸಲಾಗುತ್ತಿದೆ.
ಲಿಂಗಾಯತ ಧರ್ಮವನ್ನು ಪ್ರತ್ಯೇಕಿಸಲು ಹೊರಟಿದ್ದಾಗ
ಈ ಹಿಂದೆ, ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಂತಹ ಸಂದರ್ಭದಲ್ಲಿ ಲಿಂಗಾಯತ ಧರ್ಮವನ್ನು ಪ್ರತ್ಯೇಕಿಸಲು ಹೊರಟಿದ್ದರು. ಧರ್ಮ ವಿಭಜನೆಯ ಪ್ರಯತ್ನ ಕಾಂಗ್ರೆಸ್ಸಿಗೆ 2018ರ ಚುನಾವಣೆಯಲ್ಲಿ ಬಹುದೊಡ್ಡ ಏಟನ್ನು ನೀಡಿತ್ತು. ಪ್ರತ್ಯೇಕ ಧರ್ಮದ ವಿಚಾರ ಈಗಲೂ ಬಿಜೆಪಿಗೆ, ಸಿದ್ದರಾಮಯ್ಯ ವಿರುದ್ದ ಬಳಸಲು ಅಸ್ತ್ರವಾಗಿರುವುದರಿಂದ ರಾಹುಲ್ ಗಾಂಧಿಯವರ ಮುರುಘಾ ಮಠಕ್ಕೆ ಭೇಟಿ ಮಹತ್ವನ್ನು ಪಡೆದುಕೊಂಡಿದೆ ಎಂದು ಹೇಳಲಾಗುತ್ತಿದೆ.
ಲಿಂಗಾಯತ ಧರ್ಮದ ಹೆಚ್ಚಿನ ಒಲವು ಬಿಜೆಪಿ ಪರ
ಕಳೆದ ಚುನಾವಣೆಯಲ್ಲಿ ಲಿಂಗಾಯತ ಧರ್ಮದ ಹೆಚ್ಚಿನ ಒಲವು ಬಿಜೆಪಿ ಪರ ಇದ್ದಿದ್ದು ಗೊತ್ತಿರುವ ವಿಚಾರ. ಮತ್ತು, ಉತ್ತರ ಮತ್ತು ಮಧ್ಯ ಕರ್ನಾಟಕದ ಭಾಗದಲ್ಲಿ ಬಿಜೆಪಿ ಈಗಲೂ ಪ್ರಭಲ ಶಕ್ತಿಯನ್ನು ಹೊಂದಿದೆ. ಸಮುದಾಯದ ಪ್ರಮುಖ ಪೀಠವಾಗಿರುವ ಮುರುಘಾ ಮಠಕ್ಕೆ ಭೇಟಿ ನೀಡುವ ಮೂಲಕ, ರಾಹುಲ್ ಗಾಂಧಿ ಬೇರೆ ರಾಜಕೀಯ ಸಂದೇಶ ರವಾನಿಸಲು ಹೊರಟಿದ್ದಾರಾ ಎನ್ನುವ ಪ್ರಶ್ನೆ ಎದುರಾಗುವುದು ಸಹಜ.