ರವೀಂದ್ರನಾಥ್ ಠಾಗೂರ್, ಪ್ರಗತಿಪರ ಚಿಂತನೆಯ ಸ್ವಾತಂತ್ರ್ಯ ಹೋರಾಟಗಾರ
ಭಾರತದ ರಾಷ್ಟ್ರಗೀತೆ ಜನ ಗಣ ಮನ ಹಾಡನ್ನು ಬರೆದವರು ರವೀಂದ್ರನಾಥ್ ಠಾಗೋರ್ ಎಂಬುದು ಎಲ್ಲರಿಗೂ ಗೊತ್ತು. ಇವರು ಸಾಹಿತಿಗಳಷ್ಟೇ ಅಲ್ಲ, ಸ್ವಾತಂತ್ರ್ಯ ಹೋರಾಟಗಾರರೂ ಹೌದು. ಸ್ವಾತಂತ್ರ್ಯ ಸಿಗುವ ಬಹಳ ವರ್ಷಗಳ ಮುಂಚೆಯೇ ಅವರು ಸ್ವಾತಂತ್ರ್ಯದ ಪರಿಕಲ್ಪನೆಗಳಿರುವ ಹಾಡನ್ನು ರಚಿಸಿದ್ದರು. ಇದು ಅವರ ಮುಂದಾಲೋಚನೆಗೆ ಒಂದು ನಿದರ್ಶನ.
ಅಂದಹಾಗೆ, ರವೀಂದ್ರನಾಥ್ ಠಾಗೋರ್ 1911ರಲ್ಲಿ ಬಂಗಾಳಿ ಭಾಷೆಯಲ್ಲಿ ರಚಿಸಿದ "ಭಾರತೊ ಭಾಗ್ಯೊ ಬಿಧಾತ" ಹಾಡು ಜನ ಮನ ಗಣ ಎಂದು ಮರುನಾಮಕರಣಗೊಂಡು ಭಾರತದ ಸ್ವಾತಂತ್ರ್ಯೋತ್ತರ ರಾಷ್ಟ್ರಗೀತೆಯಾಗಿ ಆಯ್ಕೆ ಆಯಿತು.
ಎವರೆಸ್ಟ್ ಮೇಲೆ ರಾಷ್ಟ್ರಗೀತೆ ಹಾಡಿದ ಐಎಎಫ್ ಅಧಿಕಾರಿ
ರವೀಂದ್ರನಾಥ್ ಠಾಗೋರ್ ಪ್ರಖರ ರಾಷ್ಟ್ರೀಯವಾದಿಯಾದರೂ ಬ್ರಿಟಿಷರನ್ನು ದ್ವೇಷಿಸುವ ಅತಿರೇಕ ಹಂತದ ಮನಃಸ್ಥಿತಿಯನ್ನೂ ವಿರೋಧಿಸುತ್ತಿದ್ದರು. ಹಾಗಂತ ಬ್ರಿಟಿಷರ ಅನ್ಯಾಯವನ್ನೂ ಅವರು ಸಹಿಸುತ್ತಿರಲಿಲ್ಲ.
ಅವರಿಗೆ ವೈಜ್ಞಾನಿಕ ದೃಷ್ಟಿಕೋನ ಇತ್ತು. ಸ್ವಾತಂತ್ರ್ಯ ಎಂದರೆ ಹೇಗಿರಬೇಕು ಎಂಬ ಪರಿಕಲ್ಪನೆ ವಿಭಿನ್ನವಾಗಿತ್ತು. ಮಹಾತ್ಮ ಗಾಂಧಿಯ ಕೆಲ ವಿಚಾರಗಳನ್ನು ವಿರೋಧಿಸುವ ಮಟ್ಟಿಗೆ ಅವರಲ್ಲಿ ಸ್ವಂತಿಕೆ ಇತ್ತು. ತಮ್ಮ ಅನಿಸಿಕೆಯನ್ನು ಅವರು ಮುಲಾಜಿಲ್ಲದೇ ತೋರ್ಪಡಿಸುವ ಧೈರ್ಯ ಹೊಂದಿದ್ದರು.
ಈಗ ಭಾರತಕ್ಕೆ 75ನೇ ಸ್ವಾತಂತ್ರ್ಯ ಮಹೋತ್ಸವದ ಸಂದರ್ಭದಲ್ಲಿ ರವೀಂದ್ರನಾಥ್ ಠಾಗೂರ್ ಅವರನ್ನು ಸ್ಮರಿಸುವುದು ಹೆಮ್ಮೆಯ ವಿಚಾರ.
ಅಪ್ರತಿಮ ಸಾಹಿತಿ
ರವೀಂದ್ರನಾಥ್ ಠಾಗೋರ್ ಅಪ್ರತಿಮ ಸಾಹಿತಿಯಾಗಿದ್ದರು. ಕವಿತೆ, ನಾಟಕ, ಕಥೆ ಹೀಗೆ ಹಲವು ಸಾಹಿತ್ಯ ಆಯಾಮಗಳಲ್ಲಿ ಕೃತಿ ರಚಿಸಿದ್ದಾರೆ. ಎರಡು ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಬರೆದಿದ್ದಾರೆ. ಇವರು ಬರೆದ "ಗೀತಾಂಜಲಿ" ಮತ್ತು "ಜೀವನ್ ಸ್ಮೃತಿ" ಕೃತಿಗಳು ಈಗಲೂ ಜನಪ್ರಿಯವಾಗಿವೆ.
ಬಂಗಾಳಿ ಸಾಹಿತ್ಯಕ್ಕೆ ಆಡುನುಡಿಯ ಸ್ಪರ್ಶ ಕೊಟ್ಟ ಶ್ರೇಯಸ್ಸು ಅವರದ್ದು. ಅಲ್ಲಿಯವರೆಗೂ ಬಂಗಾಳಿ ಸಾಹಿತ್ಯದ ರಚನೆಯಲ್ಲಿ ಸಂಸ್ಕೃತದ ಪ್ರಭಾವ ಇತ್ತು. ಠಾಗೋರ್ ಹೊಸ ಮಾದರಿಯ ಕವಿತೆ ರಚನೆಯಿಂದ ಜನರ ಮನಸು ಗೆದ್ದರು.
ನೊಬೆಲ್ ಪುರಸ್ಕಾರ
1913ರಲ್ಲಿ ಇವರಿಗೆ ಸಾಹಿತ್ಯದಲ್ಲಿ ನೊಬೆಲ್ ಪ್ರಶಸ್ತಿ ಸಿಕ್ಕಿತು. ನೊಬೆಲ್ ಪ್ರಶಸ್ತಿ ಪಡೆದ ಮೊದಲ ಭಾರತೀಯ ಮಾತ್ರವಲ್ಲ, ಮೊದಲ ಏಷ್ಯನ್ ಕೂಡ ಅವರಾಗಿದ್ದಾರೆ. ಹಾಗೆಯೇ, ನೊಬೆಲ್ ಪಾರಿತೋಷಕ ಪಡೆದ ಮೊದಲ ಬಿಳಿಯೇತರ ವ್ಯಕ್ತಿಯೂ ಹೌದು.
ಇವರು ಸ್ಥಾಪಿಸಿದ ವಿಶ್ವ ಭಾರತಿ ವಿಶ್ವವಿದ್ಯಾಲಯಕ್ಕೆ ದೇಣಿಗೆ ಕೊಡಲು ಮುಂದೆ ಬಂದ ರಾಷ್ಟ್ರಗಳು ಅನೇಕ. ಒಂದು ರೀತಿಯಲ್ಲಿ ಇವರು ವಿಶ್ವ ಕವಿ ಎನಿಸಿದ್ದರು. ಇವರು ಯಾವುದಾದರೂ ದೇಶಕ್ಕೆ ಭೇಟಿ ನೀಡಿದರೆ ಆ ದೇಶವು ಇವರ ವಿಶ್ವವಿದ್ಯಾಲಯಕ್ಕೆ ಸಾವಿರಾರು ಡಾಲರ್ ಹಣ ಕೊಡುತ್ತಿತ್ತೆನ್ನಲಾಗಿದೆ.
ಶ್ರೀಲಂಕಾ, ಬಾಂಗ್ಲಾದೇಶಕ್ಕೂ ಕೊಡುಗೆ
ರವೀಂದ್ರನಾಥ್ ಠಾಗೋರ್ ಭಾರತದ ರಾಷ್ಟ್ರಗೀತೆ ರಚಿಸಿದವರು ಹೌದು. ಬಾಂಗ್ಲಾದೇಶದ ರಾಷ್ಟ್ರಗೀತೆ "ಅಮರ್ ಸೋನಾರ್ ಬಾಂಗ್ಲಾ" ರಚಿಸಿದ್ದೂ ಠಾಗೋರ್ ಅವರೆಯೇ. ಇನ್ನೂ ಅಚ್ಚರಿಯ ಸಂಗತಿ ಎಂದರೆ ಶ್ರೀಲಂಕಾದ ರಾಷ್ಟ್ರಗೀತೆ "ಶ್ರೀಲಂಕಾ ಮಾತಾ" ಹಾಡಿಗೆ ರವೀಂದ್ರನಾಥ್ ಠಾಗೋರ್ ಸ್ಫೂರ್ತಿ ಎನ್ನಲಾಗಿದೆ. ಲಂಕಾದ ಆ ಇಡೀ ರಾಷ್ಟ್ರಗೀತೆಯ ಸಾಲುಗಳನ್ನು ಠಾಗೋರ್ ಅವರೇ ರಚಿಸಿದ್ದು ಎಂದು ಕೆಲವರು ಹೇಳುತ್ತಾರೆ.
ರವೀಂದ್ರನಾಥ್ ಠಾಗೋರ್ ವೈಯಕ್ತಿಕ ಪರಿಚಯ
ರಬೀಂದ್ರನಾಥ್ ಠಾಕೂರ್ ಕೋಲ್ಕತ್ತಾದ್ಲಿ 1861 ಮೇ 7ರಂದು ಜನಿಸಿದರು. ಇವರತಂದೆ ದೇವೇಂದ್ರನಾಥ್ ಠಾಗೋರ್ ಬ್ರಹ್ಮಸಮಾಜದ ನಾಯಕರಾದವರು ಉಪನಿಷತ್ಗಳ ಆಧಾರದ ಮೇಲೆ ಹಿಂದೂ ಧರ್ಮಕ್ಕೆ ಹೊಸ ಸ್ವರೂಪ ಕೊಡಲು ಹುಟ್ಟಿಕೊಂಡಿದ್ದು ಬ್ರಹ್ಮಸಮಾಜ. ರವೀಂದ್ರನಾಥ್ ಠಾಗೋರ್ ಅವರ ವ್ಯಕ್ತಿತ್ವ ರೂಪುಗೊಳ್ಳಲು ಬ್ರಹ್ಮಸಮಾಜದ ಪ್ರಭಾವ ಕೆಲಸ ಮಾಡಿದೆ ಎಂದು ಕೆಲವರು ಹೇಳುತ್ತಾರೆ.
ಠಾಗೋರ್ ಸ್ವಾತಂತ್ರ್ಯ ಪರಿಕಲ್ಪನೆ
ರವೀಂದ್ರನಾಥ್ ಠಾಗೋರ್ ಅವರಿಗೆ ಸ್ವಾತಂತ್ರ್ಯದ ಬಗ್ಗೆ ತಮ್ಮದೇ ಪರಿಕಲ್ಪನೆ ಇತ್ತು. ಭಾರತಕ್ಕೆ ಸ್ವಾತಂತ್ರ್ಯ ಬೇಕಾದರೂ ಅದು ಬ್ರಿಟಿಷರಿಂದ ಪಡೆದ ರಾಜಕೀಯ ಸ್ವಾತಂತ್ರ್ಯ ಮಾತ್ರವೆನಿಸಬಾರದು. ನಿಜವಾದ ಸ್ವಾತಂತ್ರ್ಯ ಎಂದರೆ ಸತ್ಯದ ದಾರಿಯಲ್ಲಿ ನಡೆಯುವ ಸಾಮರ್ಥ್ಯ ಮತ್ತು ಆತ್ಮಸಾಕ್ಷಿಯಂತೆ ನಡೆದುಕೊಳ್ಳುವ ಸಾಮರ್ಥ್ಯ ಇರುವುದಾಗಿದೆ. ಇಲ್ಲದಿದ್ದರೆ ಸ್ವಾತಂತ್ರ್ಯಕ್ಕೆ ಅರ್ಥವೇ ಇರುವುದಿಲ್ಲ ಎಂದು ರವೀಂದ್ರನಾಥ್ ಠಾಗೋರ್ ಭಾವಿಸಿದ್ದರು.
ವಸಾಹತುಶಾಹಿಯನ್ನು ವಿರೋಧಿಸುವ ಭರದಲ್ಲಿ ಬ್ರಿಟಿಷರದ್ದೆಲ್ಲವನ್ನೂ ತಿರಸ್ಕರಿಸಬೇಕೆಂದಿಲ್ಲ. ಸ್ವಾತಂತ್ರ್ಯೋತ್ತರ ಭಾರತದಲ್ಲಿ ಭಾರತವು ನಮ್ಮ ಸಂಸ್ಕೃತಿ ಮತ್ತು ಪಾಶ್ಚಿಮಾತ್ಯ ಸಂಸ್ಕೃತಿಯ ಒಳ್ಳೆಯ ಅಂಶಗಳು ಮೇಳೈಸಿರಬೇಕು ಎಂದು ಅವರು ಹೇಳುತ್ತಿದ್ದರು.
ಮಹಾತ್ಮ ಗಾಂಧಿ ನೇತೃತ್ವದಲ್ಲಿ ಬ್ರಿಟಿಷರ ವಿರುದ್ಧ ನಡೆಯುತ್ತಿದ್ದ ಅಸಹಕಾರ ಆಂಧೋಲನದ ಬಗ್ಗೆ ಠಾಗೋರ್ಗೆ ಒಲವಿರಲಿಲ್ಲ. ಬ್ರಿಟಿಷರದ್ದೆಲ್ಲವನ್ನೂ ವಿರೋಧಿಸುವ ಅಗತ್ಯ ಇಲ್ಲ ಎಂಬುದು ಅವರ ಅನಿಸಿಕೆ.
ಹಾಗೆಯೇ, ಬ್ರಿಟಿಷರು ನಡೆಸುತ್ತಿದ್ದ ದೌರ್ಜನ್ಯವನ್ನು ಖಂಡತುಂಡವಾಗಿ ಖಂಡಿಸುತ್ತಿದ್ದರು. ಅಮೃತಸರದಲ್ಲಿ ಒಂದೂವರೆ ಸಾವಿರ ಅಮಾಯಕ ಜನರ ನರಮೇಧ ಮಾಡಿದ ಘಟನೆಯನ್ನು ತೀವ್ರವಾಗಿ ವಿರೋಧಿಸಿದ್ದರು. ೧೯೧೫ರಲ್ಲಿ ಬ್ರಿಟಿಷರು ತಮಗೆ ನೀಡಿದ್ದ ನೈಟ್ವುಡ್ ಗೌರವ ಪದವಿಯನ್ನು ಠಾಗೋರ್ ಮರಳಿಸಿದ್ದರು. ಒಟ್ಟಾರೆ ಸಾಮಾಜಿಕ ವ್ಯಾಧಿಯ ಒಂದು ರೋಗಲಕ್ಷಣವಾಗಿ ಬ್ರಿಟಿಷರನ್ನು ಪರಿಗಣಿಸಿದ್ದರು.
(ಒನ್ಇಂಡಿಯಾ ಸುದ್ದಿ)