ಸಾಮಾನ್ಯವಾಗಿ ನಾವು ಇದನ್ನು ಮಾಡಲ್ಲ, ಆದರೆ: ರಾಹುಲ್ ಗಾಂಧಿ ಹೇಳುವುದು ಹೀಗೆ
ನವದೆಹಲಿ, ಜನವರಿ 27: ಪಂಜಾಬ್ನಲ್ಲಿ ಕಾಂಗ್ರೆಸ್ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಶೀಘ್ರದಲ್ಲೇ ಘೋಷಿಸಲಿದ್ದು, ಕಾರ್ಯಕರ್ತರು ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಮುಂದಿನ ತಿಂಗಳು ನಡೆಯಲಿರುವ ಪಂಜಾಬ್ ಚುನಾವಣೆಗೆ ಕಾಂಗ್ರೆಸ್ ಪ್ರಚಾರಕ್ಕೆ ಹಾನಿಯುಂಟುಮಾಡುವ ಬೆದರಿಕೆಯೊಡ್ಡುತ್ತಿರುವ ನವಜೋತ್ ಸಿಧು ವರ್ಸಸ್ ಚರಣ್ಜಿತ್ ಸಿಂಗ್ ಚನ್ನಿ ಪೈಪೋಟಿಯ ನಡುವೆ, "ಇಬ್ಬರು ನಾಯಕತ್ವ ವಹಿಸಲು ಸಾಧ್ಯವಿಲ್ಲ, ಒಬ್ಬರಿಗೆ ಮಾತ್ರ ಸಾಧ್ಯ," ಎಂದು ರಾಹುಲ್ ಗಾಂಧಿ ಒತ್ತಿ ಹೇಳಿದ್ದಾರೆ.
"ಮುಖ್ಯಮಂತ್ರಿ ಅಭ್ಯರ್ಥಿ ಬೇಕು ಎಂಬ ನಿಮ್ಮ ಬೇಡಿಕೆಯನ್ನು ಆದಷ್ಟು ಬೇಗ ಈಡೇರಿಸುತ್ತೇವೆ.ಸಾಮಾನ್ಯವಾಗಿ ಮುಖ್ಯಮಂತ್ರಿ ಘೋಷಣೆ ಮಾಡುವುದಿಲ್ಲ ಆದರೆ ಕಾಂಗ್ರೆಸ್ ಕಾರ್ಯಕರ್ತರು ಬೇಕಾದರೆ ಸಿಎಂ ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತೇವೆ. ಆದರೆ ನಾವು ಕಾಂಗ್ರೆಸ್ ಕಾರ್ಯಕರ್ತರನ್ನು ಸಂಪರ್ಕಿಸಿ ಅವರೇ ನಿರ್ಧರಿಸುತ್ತಾರೆ," ಎಂದು ತಿಳಿಸಿದ್ದಾರೆ. ಮುಂದಿನ ತಿಂಗಳು ನಡೆಯಲಿರುವ ಚುನಾವಣೆಗೆ ಪಕ್ಷದ ಪ್ರಚಾರವನ್ನು ಪ್ರಾರಂಭಿಸಲು ಪಂಜಾಬ್ಗೆ ಭೇಟಿ ನೀಡಿದ ಸಂದರ್ಭದಲ್ಲಿ ರಾಹುಲ್ ತಿಳಿಸಿದ್ದಾರೆ.
ರಾಹುಲ್ ಗಾಂಧಿ ರ್ಯಾಲಿ ಬಹಿಷ್ಕರಿಸಿದ 5 ಕಾಂಗ್ರೆಸ್ ಸಂಸದರು?
ಪಂಜಾಬ್ ಅನ್ನು ಆಳುವ ಪಕ್ಷವು ಫೆಬ್ರವರಿ 20 ರ ಚುನಾವಣೆಯ ನಂತರವೇ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಈ ಹಿಂದೆ ಹೇಳಿತ್ತು. ಆದರೆ ವೇದಿಕೆಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಧು ಮತ್ತು ಮುಖ್ಯಮಂತ್ರಿ ಚರಂಜಿತ್ ಚನ್ನಿ ಇಬ್ಬರ ಸಮ್ಮುಖದಲ್ಲಿಯೇ ಈ ಹೇಳಿಕೆಯನ್ನು ನೀಡಿದ್ದಾರೆ. ಈ ಮೂಲಕ ಪರೋಕ್ಷವಾಗಿ ಇಬ್ಬರಿಗೆ ಟಾಂಗ್ ನೀಡಿದಂತೆ ಆಗಿದೆ.
ಪಂಜಾಬ್ ಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ
ಇಬ್ಬರು ಮುನ್ನಡೆಸಲು ಸಾಧ್ಯವಿಲ್ಲ
"ಇಬ್ಬರು ಮುನ್ನಡೆಸಲು ಸಾಧ್ಯವಿಲ್ಲ, ಒಬ್ಬರು ಮಾತ್ರ ಮುನ್ನಡೆಸಬಹುದು. ಇನ್ನೊಬ್ಬರು ಎಲ್ಲಾ ಬೆಂಬಲವನ್ನು ನೀಡುವುದಾಗಿ ಭರವಸೆ ನೀಡಿದ್ದಾರೆ. ಇಬ್ಬರ ಹೃದಯದಲ್ಲಿ ಕಾಂಗ್ರೆಸ್ ಚಿಂತನೆಗಳಿವೆ," ಎಂದಿದ್ದಾರೆ. ಪಂಜಾಬ್ಗೆ ಈಗ ಬೇಕಾಗಿರುವುದು ಶಾಂತಿ ಮತ್ತು ಸಹೋದರತ್ವ ಎಂದು ಕೂಡಾ ರಾಹುಲ್ ಗಾಂಧಿ ತಿಳಿಸಿದ್ದಾರೆ.
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ರ ಉಲ್ಲೇಖ ಮಾಡಿದ ರಾಹುಲ್
ಇನ್ನು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ರನ್ನು ಕೂಡಾ ರಾಹುಲ್ ಗಾಂಧಿ ಉಲ್ಲೇಖ ಮಾಡಿದ್ದಾರೆ. "ನೂರಾರು ಕಾಂಗ್ರೆಸ್ ಕಾರ್ಯಕರ್ತರು ತಮ್ಮ ರಕ್ತವನ್ನು ಚೆಲ್ಲಿದ್ದಾರೆ ಎಂಬುದು ನಮ್ಮ ಅನುಭವದ ಮತು. ಏನೇ ಆದರೂ ರಾಜ್ಯದಲ್ಲಿ ಶಾಂತಿ ಕದಡಲು ನಾವು ಎಂದಿಗೂ ಬಿಡುವುದಿಲ್ಲ. ಎಲ್ಲರನ್ನು ಹೇಗೆ ಕರೆದುಕೊಂಡು ಹೋಗಬೇಕು ಎಂಬುದು ನಮಗೆ ಗೊತ್ತು, ನಿಮ್ಮೆಲ್ಲರಿಂದ ನಾನು ಕಲಿತಿದ್ದೇನೆ. ಮನಮೋಹನ್ ಸಿಂಗ್ ಅವರಿಂದ ಸಾಕಷ್ಟು ಕಲಿತಿದ್ದೇನೆ," ಎಂದು ಹೇಳಿದ್ದಾರೆ.
ರಾಹುಲ್ ನಿರ್ಧಾರವನ್ನು ಒಪ್ಪಿಕೊಳ್ಳುತ್ತೇವೆ ಎಂದ ಸಿಧು
"ಏನೇ ಆಗಲಿ ರಾಹುಲ್ ಗಾಂಧಿ ನಿರ್ಧಾರವನ್ನು ಒಪ್ಪಿಕೊಳ್ಳುತ್ತೇನೆ," ಎಂದು ನವಜೋತ್ ಸಿಧು ಭರವಸೆ ನೀಡಿದ್ದಾರೆ. "ಈ ಬಿಕ್ಕಟ್ಟಿನಿಂದ (ಪಂಜಾಬ್ನಲ್ಲಿ) ಅವರನ್ನು ಯಾರು ರಕ್ಷಿಸುತ್ತಾರೆ ಎಂಬ ಜನರ ಮನಸ್ಸಿನಲ್ಲಿ ಇದೆ. ಹೇಗೆ ಎಂಬ ಪ್ರಶ್ನೆಯೂ ಇದೆ. ಜನರು ಕೇಳುತ್ತಿರುವ ಮೂರನೇ ಪ್ರಶ್ನೆಯೆಂದರೆ ಈ ಸುಧಾರಣೆಗಳನ್ನು ಜಾರಿಗೆ ತರುವವರು ಯಾರು ಎಂಬುವುದಾಗಿದೆ," ಎಂದು ನವಜೋತ್ ಸಿಧು ಹೇಳಿದ್ದಾರೆ. "ಶಿಸ್ತಿನ ಸಿಪಾಯಿಯಂತೆ ನಾನು ರಾಹುಲ್ ಗಾಂಧಿ ಅವರ ನಿರ್ಧಾರಕ್ಕೆ ಬದ್ಧನಾಗಿರುತ್ತೇನೆ ಎಂದು ಭರವಸೆ ನೀಡುತ್ತೇನೆ," ಎಂದು ಪ್ರತಿಪಾದನೆ ಮಾಡಿದ್ದಾರೆ. "ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ. ನಾವು ಟಿಆರ್ಪಿಗಾಗಿ ಹೋರಾಡುತ್ತಿಲ್ಲ. ನಾವು ಮುಂದಿನ ಸರ್ಕಾರ ರಚಿಸಲು ಹೋರಾಡುತ್ತಿದ್ದೇವೆ. ಅದಕ್ಕಾಗಿ, ಅಗತ್ಯವಿದ್ದರೆ ನೀವು ನನ್ನನ್ನು ಸಮಾಧಿ ಮಾಡಿ ಮತ್ತು ನಾನು ಧ್ವನಿ ಎತ್ತುವುದಿಲ್ಲ. ಆದರೆ ನನಗೆ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ನೀಡಿ. ನನ್ನನ್ನು ಶೋಪೀಸ್ನಂತೆ ನಡೆಸಿಕೊಳ್ಳಬೇಡಿ," ಎಂದು ಕೂಡಾ ಹೇಳಿದ್ದಾರೆ.
"ನಾನು ಯಾವುದೇ ಹುದ್ದೆಯ ಹಿಂದೆ ಇಲ್ಲ"
"ನಾನು ಯಾವುದೇ ಹುದ್ದೆಯ ಹಿಂದೆ ಇಲ್ಲ. ನೀವು ಮುಖ್ಯಮಂತ್ರಿಗೆ ಯಾವುದೇ ಹೆಸರನ್ನು ನಿರ್ಧರಿಸಿ ಮತ್ತು ಅವರ ಪರವಾಗಿ ಪ್ರಚಾರ ಮಾಡುವ ಮೊದಲ ವ್ಯಕ್ತಿ ನಾನೇ," ಎಂದು ಮುಖ್ಯಮಂತ್ರಿ ಚರಣ್ಜೀತ್ ಸಿಂಗ್ ಚನ್ನಿ ಹೇಳಿದ್ದಾರೆ. "ಸಿದ್ದು ಸಾಬ್, ನಾನು ಕೈಮುಗಿದು ಹೇಳುತ್ತಿದ್ದೇನೆ ಕೇಜ್ರಿವಾಲ್ ಅವರಂತಹ ಹೊರಗಿನವರು ಕಾಂಗ್ರೆಸ್ನಲ್ಲಿ ಆಂತರಿಕ ಕಚ್ಚಾಟವಿದೆ ಎಂದು ಹೇಳಬಾರದು," ಎಂದು ಮುಖ್ಯಮಂತ್ರಿ ನಾಟಕೀಯವಾಗಿ ಹೇಳಿದ್ದಾರೆ. (ಒನ್ಇಂಡಿಯಾ ಸುದ್ದಿ)