ಪಂಜಾಬ್ ಚುನಾವಣೆ: ಶಾಸಕರ ಹಿಂಡು ಉಳಿಸಿಕೊಳ್ಳಲು ಕಾಂಗ್ರೆಸ್ನ ಯತ್ನ
ಚಂಡೀಗಢ, ಜನವರಿ 16: ಫೆಬ್ರವರಿಯಲ್ಲಿ ಪಂಜಾಬ್ನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ನಿಟ್ಟಿನಲ್ಲಿ ಎಲ್ಲಾ ಪಕ್ಷಗಳು ತಯಾರಿಯನ್ನು ನಡೆಸುತ್ತಿದೆ. ಕಾಂಗ್ರೆಸ್ ಆಡಳಿತದ ಚುಕ್ಕಾಣಿಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ. ಒಳಜಗಳಗಳನ್ನು ನಾಶ ಮಾಡುವ ಯತ್ನವನ್ನೂ ಮಾಡುತ್ತಿದೆ. ಇದಕ್ಕೆ ಪೂರಕವಾಗಿ ಕಾಂಗ್ರೆಸ್ ತನ್ನ ಟಿಕೆಟ್ ಹಂಚಿಕೆಯನ್ನು ಮಾಡಿದೆ.
ಒಟ್ಟು 79 ಶಾಸಕರ ಪೈಕಿ 61 ಶಾಸಕರಿಗೆ ಪಕ್ಷದ ಟಿಕೆಟ್ ನೀಡುವ ಮೂಲಕ ಕಾಂಗ್ರೆಸ್ ತನ್ನ ಹಿಂಡುಗಳನ್ನು ಒಟ್ಟಿಗೆ ಇಡಲು ಹಾಗೂ ಇತರ ಪಕ್ಷಗಳ ಕಳ್ಳ ಬೇಟೆಗೆ ತನ್ನ ಶಾಸಕರು ಬಲಿಯಾಗದಂತೆ ನೋಡಿಕೊಳ್ಳಲು ಪ್ರಯತ್ನವನ್ನು ಮಾಡಿದೆ. ಕೈಬಿಡಲಾದ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರ ಸಂಪುಟದಲ್ಲಿದ್ದ ನಾಲ್ವರು ಸಚಿವರಾದ ಬಲ್ಬೀರ್ ಸಿಂಗ್ ಸಿಧು, ಸಾಧು ಸಿಂಗ್ ಧರಮ್ಸೋತ್, ಸುಂದರ್ ಶಾಮ್ ಅರೋರಾ ಮತ್ತು ಗುರುಪ್ರೀತ್ ಸಿಂಗ್ ಕಂಗರ್ ಕೂಡಾ ಈ ಅಭ್ಯರ್ಥಿಗಳ ಪಟ್ಟಿಯಲ್ಲಿ ಇದ್ದಾರೆ. ಹಾಗಾಗಿ ಮೀಸಲು ಸ್ಥಾನದಿಂದ 14 ಶಾಸಕರು ಇದ್ದಾರೆ.
ಪಂಜಾಬ್ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ; ಸಿಧು, ಸಿಎಂ ಚನ್ನಿ ಎಲ್ಲೆಲ್ಲಿ ಸ್ಪರ್ಧೆ?
ಕೆಲವು ಸ್ಥಾನಗಳಲ್ಲಿ, ಎಐಸಿಸಿ ನೇಮಿಸಿದ ಸ್ಕ್ರೀನಿಂಗ್ ಕಮಿಟಿಯು ಶಾಸಕರ ವಿರುದ್ಧದ ಅಂಶಗಳನ್ನು ನಿರ್ಲಕ್ಯ್ಷ ಮಾಡಿದೆ. ಪಕ್ಷದ ಒಳಗಿನ ವೈಷಮ್ಯ ಮತ್ತು ಮತಗಳ ನಷ್ಟವನ್ನು ತಡೆಯುವ ನಿಟ್ಟಿನಲ್ಲಿ ಗೆಲುವು ಎಂಬ ಮಾನದಂಡವನ್ನು ಪಕ್ಷವು ಕೈಬಿಟ್ಟಿದೆ. ಪಂಜಾಬ್ ವಿಧಾನಸಭೆಯ ಒಟ್ಟು 34 ಮೀಸಲು ಸ್ಥಾನಗಳ ಪೈಕಿ 23 ಕಾಂಗ್ರೆಸ್ ಪಾಲಾಗಿದೆ.
ಸಮತೋಲನ ಮಾಡುವ ನಿಟ್ಟಿನಲ್ಲಿ ಹೈಕಮಾಂಡ್ ಕಾರ್ಯತಂತ್ರ
ಮೊದಲ ಪಟ್ಟಿಯಲ್ಲಿ, ಈ ಸ್ಥಾನಗಳ ಮೂವರು ಶಾಸಕರುಗಳಾದ ಅಜೈಬ್ ಸಿಂಗ್ ಭಟ್ಟಿ (ಮಾಲೌಟ್), ನಾಥು ರಾಮ್ (ಬಲ್ಲುವಾನಾ) ಮತ್ತು ಬಲ್ವಿಂದರ್ ಲಡ್ಡಿ (ಶ್ರೀ ಹರಗೋಬಿಂದಪುರ) ರನ್ನು ಕೈಬಿಡಲಾಗಿದೆ. ಪಂಜಾಬ್ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ಮತ್ತು ಪಂಜಾಬ್ ಪ್ರದೇಶ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ನಡುವಿನ ಕೆಲವು ಸ್ಥಾನಗಳ ಭಿನ್ನಾಭಿಪ್ರಾಯವನ್ನು ಗಮನದಲ್ಲಿಟ್ಟುಕೊಂಡು ಪಕ್ಷದ ಹೈಕಮಾಂಡ್ ಉತ್ತಮವಾಗಿ ಸಮತೋಲನ ಮಾಡಿಕೊಳ್ಳುವ ಕಾರ್ಯವನ್ನು ಮಾಡಿದೆ.
ಅಮರ್ಪ್ರೀತ್ ಲಾಲಿ (ಗರ್ಶಶಂಕರ್) ಮತ್ತು ಬೃಂದರ್ ಧಿಲ್ಲೋನ್ (ರೋಪರ್) ಅವರಿಗೆ ಉನ್ನತ ನಾಯಕತ್ವದ ಮಧ್ಯಸ್ಥಿಕೆಯ ಮೇರೆಗೆ ಟಿಕೆಟ್ ನೀಡಲಾಗಿದೆ ಎಂದು ವರದಿಯಾಗಿದೆ. 2017ರ ಪಂಜಾಬ್ ವಿಧಾನಸಭೆ ಚುನಾವಣೆಯನ್ನು ನಿಭಾಯಿಸಿದ ಪಂಜಾಬ್ ವ್ಯವಹಾರಗಳ ಉಸ್ತುವಾರಿ ಹರೀಶ್ ಚೌಧರಿ ಮತ್ತು ರಾಹುಲ್ ಗಾಂಧಿ ಆಪ್ತ ಕೃಷ್ಣ ಅಲ್ಲಾವಾರು ಅವರದ್ದೆ ಆದ ಹಾದಿಯನ್ನು ಹಿಡಿದಿರುವುದು ಸ್ಪಷ್ಟವಾಗಿ ಗೋಚರವಾಗುತ್ತಿದೆ. ಪಂಜಾಬ್ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ಸುಖ್ವಿಂದರ್ ಕೋಟ್ಲಿ (ಆದಂಪುರ) ಪರವಾಗಿ ಹಾಗೂ ಪಂಜಾಬ್ ಪ್ರದೇಶ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಬೃಂದರ್ ಸಿಂಗ್ ಧಿಲ್ಲೋನ್ (ರೋಪರ್) ಪರ ಬ್ಯಾಟಿಂಗ್ ಮಾಡುತ್ತಿದ್ದಾರೆ. ಜಾತಿ ಮತ್ತು ಪ್ರದೇಶದಂತಹ ಅಂಶಗಳು ಸರಿಯಾಗಿ ಹೊಂದಿಕೆ ಆಗುವ ಕಾರಣ ಇಬ್ಬರನ್ನು ಕೂಡಾ ಇರಿಸಿಕೊಳ್ಳಲಾಗಿದೆ ಎಂದು ಹಿರಿಯ ನಾಯಕರೊಬ್ಬರು ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.
ಪಂಜಾಬ್ 3 ಲಕ್ಷ ಕೋಟಿ ಸಾಲದಿಂದ ಮುಕ್ತಿ; ಆಪ್ ಚುನಾವಣಾ ಭರವಸೆ
ಇನ್ನು ಯುವ ನಾಯಕರುಗಳಿಗೂ ಕಾಂಗ್ರೆಸ್ ಟಿಕೆಟ್ ನೀಡಿದೆ. ಬರಿಂದರ್ ಧಿಲ್ಲೋನ್, ಬ್ರಹ್ಮ್ ಮೊಹಿಂದ್ರಾ ಅವರ ಪುತ್ರ ಮೋಹಿತ್ ಮೊಹಿಂದ್ರಾ, ಅಮರ್ಪ್ರೀತ್ ಲಾಲಿ ಮತ್ತು ಪ್ರದೇಶ ಕಾಂಗ್ರೆಸ್ ಸಮಿತಿಯ ಮಾಜಿ ಮುಖ್ಯಸ್ಥ ಸುನೀಲ್ ಜಾಖರ್ ಅವರ ಸೋದರಳಿಯ ಸಂದೀಪ್ ಜಾಖರ್ ಅವರಿಗೆ ಟಿಕೆಟ್ ನೀಡಲಾಗಿದೆ. ಇಬ್ಬರು ಸಂಸದರಾದ ಡಾ ಅಮರ್ ಸಿಂಗ್ ಮತ್ತು ಚೌಧರಿ ಸಂತೋಖ್ ಸಿಂಗ್ ಅವರ ಪುತ್ರರೂ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. (ಒನ್ಇಂಡಿಯಾ ಸುದ್ದಿ)