ಪಂಜಾಬ್: ದಲಿತ ಸಿಎಂ ಮಾಡಿದ ಕಾಂಗ್ರೆಸ್ಸಿನ ಅಸಲಿ ಕಥೆಯಿದು?
ಪಂಜಾಬ್ ರಾಜ್ಯದ ಹದಿನಾರನೇ ಮುಖ್ಯಮಂತ್ರಿಯಾಗಿ ಚರಣ್ ಜಿತ್ ಸಿಂಗ್ ಚನ್ನಿ, ಸೆಪ್ಟಂಬರ್ ಇಪ್ಪತ್ತರಂದು ಪ್ರಮಾಣವಚನ ಸ್ವೀಕರಿಸಿದ್ದಾರೆ. ಆ ಮೂಲಕ ಹಲವು ತಿಂಗಳಿನಿಂದ ನಾಯಕತ್ವದ ವಿಚಾರದಲ್ಲಿದ್ದ ಗೊಂದಲಕ್ಕೆ ತಾತ್ಕಾಲಿಕ ಪರಿಹಾರ ಸಿಕ್ಕಿದೆ. ತಾತ್ಕಾಲಿಕ ಎನ್ನುವುದಕ್ಕೆ ಕಾರಣ ಮುಗಿಯದ ಆಂತರಿಕ ಬೇಗುದಿ..
ಪ್ರಮಾಣವಚನ ಕಾರ್ಯಕ್ರಮಕ್ಕೆ ದೆಹಲಿಯಿಂದ ರಾಹುಲ್ ಗಾಂಧಿ ಆಗಮಿಸಿದ್ದರೂ, ನಿರ್ಗಮಿತ ಮುಖ್ಯಮಂತ್ರಿ ಕ್ಯಾ. ಅಮರೀಂದರ್ ಸಿಂಗ್ ಗೈರಾಗಿದ್ದರು. ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಅವರನ್ನು ಪಾಕಿಸ್ತಾನ ಪ್ರೇಮಿ ಎಂದು ಕ್ಯಾಪ್ಟನ್ ಜರಿದಿದ್ದಾರೆ.
ಇಂತಹ ದೃಢ ನಿರ್ಧಾರ ತೆಗೆದುಕೊಂಡರೆ ಮಾತ್ರ ಕಾಂಗ್ರೆಸ್ಸಿಗೆ ಉಳಿಗಾಲ
ಪ್ರಮಾಣವಚನಕ್ಕೆ ಮುನ್ನ ಪಂಜಾಬ್ ಉಸ್ತುವಾರಿ ಮಾಡಿದ ಎಡವಟ್ಟು, ಬಿಜೆಪಿ, ಅಕಾಲಿದಳ ಮತ್ತು ಆಮ್ ಆದ್ಮಿ ಪಕ್ಷಕ್ಕೆ ಭರ್ಜರಿ ಬಾಡೂಟ ನೀಡಿದಂತಾಗಿದೆ. ದಲಿತ ಸಮುದಾಯದವರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವ ಮೂಲಕ, ಕಾಂಗ್ರೆಸ್ ಉತ್ತಮ ಹೆಜ್ಜೆಯನ್ನೇನೋ ಇಟ್ಟಿತ್ತು.
ಕರ್ನಾಟಕ, ಗುಜರಾತ್ ಮಾದರಿಯಲ್ಲೇ ಪಂಜಾಬ್ಗೂ ಅಚ್ಚರಿಯ ಸಿಎಂ
ಆದರೆ, ಮುಂದಿನ ಚುನಾವಣೆಯನ್ನು ನಾವು ಸಿಧು ನೇತೃತ್ವದಲ್ಲಿ ಎದುರಿಸಲಿದ್ದೇವೆ ಎನ್ನುವ ಉಸ್ತುವಾರಿಯ ಹೇಳಿಕೆಗೆ ಪಕ್ಷದಲ್ಲೇ ವಿರೋಧ ವ್ಯಕ್ತವಾಗಿದೆ. ಇನ್ನು, ವಿರೋಧ ಪಕ್ಷದವರು ಬಿಟ್ಟಾರಾ? ಸಿಎಂ ಚರಣ್ ಜಿತ್ ಸಿಂಗ್ ಚನ್ನಿ ಬರೀ ನಾಮಕೇವಾಸ್ತೆ ಸಿಎಂ ಎಂದು ಬಿಜೆಪಿ ಟೀಕಿಸಿದೆ.
ಪಂಜಾಬ್ ಕಾಂಗ್ರೆಸ್ ಉಸ್ತುವಾರಿ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಹರೀಶ್ ರಾವತ್
ಮುಂದಿನ ಮುಖ್ಯಮಂತ್ರಿ ಆಯ್ಕೆಯ ವಿಚಾರದಲ್ಲಿ ಕಾಂಗ್ರೆಸ್ಸಿನಲ್ಲಿ ಮೂರು ಬಣಗಳಾಗಿದ್ದವು. ಅವರ ಜೊತೆಗೆ ಪ್ರತ್ಯೇಕವಾಗಿ ಮಾತುಕತೆ ನಡೆಸಿ, ಎಲ್ಲರ ಸಹಮತದಿಂದ ಚರಣ್ ಜಿತ್ ಸಿಂಗ್ ಚನ್ನಿ ಮುಂದಿನ ಸಿಎಂ ಎನ್ನುವ ಅಂತಿಮ ನಿರ್ಧಾರಕ್ಕೆ ಬರುವಲ್ಲಿ ಪಂಜಾಬ್ ಕಾಂಗ್ರೆಸ್ ಉಸ್ತುವಾರಿ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಹರೀಶ್ ರಾವತ್ ಅವರ ಪಾತ್ರ ಪ್ರಮುಖವಾದದ್ದು. ಆದರೆ, ಪ್ರಮಾಣವಚನಕ್ಕೆ ಮುನ್ನವೇ ಅವರು ನೀಡಿದ ಹೇಳಿಕೆ, ಪಕ್ಷಕ್ಕೆ ತೀವ್ರ ಮುಜುಗರವನ್ನು ತಂದೊಡ್ಡಿದೆ. (ಚಿತ್ರ: ಪಿಟಿಐ)
ಬಿಜೆಪಿ ಪ್ರಧಾನ ಕಾರ್ಯದರ್ಶಿ ದುಷ್ಯಂತ್ ಕುಮಾರ್ ಗೌತಂ ಆಕ್ಷೇಪ
"ಮುಂದಿನ ವರ್ಷದ ಆದಿಯಲ್ಲಿ ನಡೆಯಲಿರುವ ಪಂಜಾಬ್ ಅಸೆಂಬ್ಲಿ ಚುನಾವಣೆಯನ್ನು ನಾವು ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ನೇತೃತ್ವದಲ್ಲಿ ಎದುರಿಸುತ್ತೇವೆ"ಎಂದು ಹರೀಶ್ ರಾವತ್ ಹೇಳಿದ್ದರು. ಹಾಲೀ ವಿಧಾನಸಭೆಯ ಅವಧಿ ಮಾರ್ಚ್ 2022ಕ್ಕೆ ಮುಗಿಯಲಿದೆ. "ಹಾಗಾದರೆ, ಚರಣ್ ಜಿತ್ ಸಿಂಗ್ ಚನ್ನಿ ನಾಮಕೇವಾಸ್ತೆ ಮುಖ್ಯಮಂತ್ರಿಯೇ, ಐದಾರು ತಿಂಗಳಿಗಾಗಿ ಚನ್ನಿ ಅವರನ್ನು ಸಿಎಂ ಮಾಡಿ, ದಲಿತ ಕಾರ್ಡ್ ಅನ್ನು ಕಾಂಗ್ರೆಸ್ ಬಳಸಿತೇ" ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ದುಷ್ಯಂತ್ ಕುಮಾರ್ ಗೌತಂ ಆಕ್ಷೇಪ ವ್ಯಕ್ತಪಡಿಸಿದ್ದಾರೆ. (ಚಿತ್ರ: ಪಿಟಿಐ)
ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ
ರಾವತ್ ಅವರ ಹೇಳಿಕೆ ಪಕ್ಷಕ್ಕೆ ಮುಜುಗರ ತರುತ್ತಿರುವುದನ್ನು ಗಮನಿಸಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ, "ಮುಂದಿನ ಚುನಾವಣೆಯನ್ನು ನಾವು ಸಿಎಂ ಚರಣ್ ಜಿತ್ ಮತ್ತು ಪಿಪಿಸಿಸಿ ಅಧ್ಯಕ್ಷ ಸಿಧು ಜೊತೆಯಾಗಿ ಎದುರಿಸಲಿದ್ದೇವೆ, ನಮ್ಮಲ್ಲಿ ಯಾವುದೇ ಗೊಂದಲವಿಲ್ಲ"ಎನ್ನುವ ತೇಪೆ ಹಚ್ಚುವ ಕೆಲಸವನ್ನು ಅವರು ಮಾಡಿದ್ದಾರೆ. ಆದರೆ, ವಿರೋಧ ಪಕ್ಷಗಳು ಈಗ ಇದನ್ನೇ ಪ್ರಮುಖ ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಿದೆ. ದಲಿತ ಎನ್ನುವುದು ಕಾಂಗ್ರೆಸ್ಸಿಗೆ ಬರೀ ವೋಟ್ ಬ್ಯಾಂಕ್ ಎಂದು ಆರೋಪಿಸುತ್ತಿವೆ. (ಚಿತ್ರ: ಪಿಟಿಐ)
ಸೋನಿಯಾ ಮತ್ತು ರಾಹುಲ್ ಗಾಂಧಿ ನೇತೃತ್ವದಲ್ಲಿ ಮುಂದಿನ ಚುನಾವಣೆ ಎದುರಿಸೋಣ
ಸಿಎಂ ಆಯ್ಕೆಯ ಸಂದರ್ಭದಲ್ಲಿ ಸೋನಿಯಾ ಮತ್ತು ರಾಹುಲ್ ಗಾಂಧಿ ನೇತೃತ್ವದಲ್ಲಿ ಮುಂದಿನ ಚುನಾವಣೆ ಎದುರಿಸೋಣ ಎಂದಿದ್ದ ಹರೀಶ್ ರಾವತ್ ಅವರು ಸ್ವಪಕ್ಷೀಯರೇ ದಿಗ್ಬ್ರಮೆಗೊಳ್ಳುವಂತಹ ಹೇಳಿಕೆಯನ್ನು ನೀಡಿದ್ದಾರೆ. ಮುಖ್ಯಮಂತ್ರಿ ಚರಣ್ ಜಿತ್ ಸಿಂಗ್ ಚನ್ನಿ ಅವರ ಸಾಮರ್ಥ್ಯದ ಬಗ್ಗೆ ಕಾಂಗ್ರೆಸ್ಸಿಗೇ ಅನುಮಾನವಿದೆ, ಅದಕ್ಕೆ ಸಿಧು ನೇತೃತ್ವ ಎಂದು ರಾವತ್ ಹೇಳುತ್ತಿದ್ದಾರೆ ಎಂದು ವಿರೋಧ ಪಕ್ಷದವರು ಆರೋಪಿಸಿದ್ದಾರೆ. ಇನ್ನು ಸಿಎಂ ಅಭಿಮಾನಿಗಳಿಗೂ ರಾವತ್ ಅವರ ಹೇಳಿಕೆ ಅಸಮಾಧಾನವನ್ನು ತಂದಿದೆ. (ಚಿತ್ರ: ಪಿಟಿಐ)