ಇದ್ದ ರಾಜ್ಯವನ್ನು ಹೇಗೆ ಕಳೆದುಕೊಳ್ಳಬಹುದು: ಕಾಂಗ್ರೆಸ್ ನಲ್ಲಿದೆ ಉತ್ತರ!
ದಶಕಗಳ ಕಾಲ ದೇಶವನ್ನು ಆಳಿದ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆಯ ಮೇಲೆ ಹಿನ್ನಡೆಯಾಗುತ್ತಿದೆ. ಅದರಲ್ಲೂ, ನರೇಂದ್ರ ಮೋದಿ ಸರಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ಅಡಳಿತದಲ್ಲಿದ್ದ ರಾಜ್ಯವನ್ನೂ ಕಾಂಗ್ರೆಸ್ ಕಳೆದುಕೊಳ್ಳುತ್ತಿದೆ.
ಕಾಂಗ್ರೆಸ್ಸಿನ ಸೋಲಿನ ಸರಪಳಿಗೆ ಇನ್ನೊಂದು ಸೇರ್ಪಡೆ ಪಂಜಾಬ್. ಅಧಿಕಾರ ಉಳಿಸಿಕೊಳ್ಳಲು ದೊಡ್ಡ ಸಾಹಸವನ್ನೇನೂ ಕಾಂಗ್ರೆಸ್ ಅಲ್ಲಿ ಮಾಡಬೇಕಾಗಿರಲಿಲ್ಲ. ಆದರೆ, ಆಂತರಿಕ ಕಿತ್ತಾಟ, ಡೈನಾಮಿಕ್ ಇಲ್ಲದ ಹೈಕಮಾಂಡಿನಿಂದಾಗಿ ಕಾಂಗ್ರೆಸ್ ಅಲ್ಲೂ ಮಂಡಿಯೂರಿದೆ.
2017ರ ಪಂಜಾಬ್ ಚುನಾವಣೋತ್ತರ ಸಮೀಕ್ಷೆ ಹೇಳಿದ್ದೇನು? ಆಗಿದ್ದೇನು?
ಕೆಲವೇ ಕೆಲವು ತಿಂಗಳ ಹಿಂದೆ ಪಂಜಾಬ್ ನಲ್ಲಿ ಕಾಂಗ್ರೆಸ್ ಅಧಿಕಾರ ಉಳಿಸಿಕೊಳ್ಳುತ್ತಿದೆ ಎನ್ನುವ ಲೆಕ್ಕಾಚಾರ ಈಗ ಸಂಪೂರ್ಣವಾಗಿ ಉಲ್ಟಾ ಹೊಡೆದಿದೆ ಅಂದರೆ ಕಾಂಗ್ರೆಸ್ ಯಾವ ಪಕ್ಷವನ್ನೂ ದೂರುವಂತಿಲ್ಲ. ಇದು ಸ್ವಯಂಕೃತ ಅಪರಾಧ ಎನ್ನುವುದು ರಾಜಕೀಯ ವಿಶ್ಲೇಷಕರ ಲೆಕ್ಕಾಚಾರ.
ಕಾಂಗ್ರೆಸ್ಸಿನ ಎರಡು ಬಣಗಳ ನಡುವಿನ ಕಿತ್ತಾಟಕ್ಕೆ ಮದ್ದು ಹುಡುಕದೇ ಅದನ್ನು ಬೆಳೆಯಲು ಬಿಟ್ಟು ಈಗ ಪಕ್ಷ ಕೈಕೈಹಿಸುಕಿಕೊಳ್ಳುವಂತೆ ಮಾಡಿದೆ. ಅಸಲಿಗೆ, ಕಾಂಗ್ರೆಸ್ ಪಕ್ಷಕ್ಕೆ ಚುನಾವಣೆ ಗೆಲ್ಲಲು ಎಲ್ಲಾ ಪೂರಕವಾದ ವಾತಾವರಣವೇ ಇತ್ತು, ಆದರೆ ಅದರ ಲಾಭವನ್ನು ಪಡೆದುಕೊಳ್ಳಲು ಕಾಂಗ್ರೆಸ್ ಸಂಪೂರ್ಣವಾಗಿ ವಿಫಲಗೊಂಡಿದೆ.
Punjab NewsX-Polstrat Exit Poll 2022: ಯಾರಿಗೆ ಗದ್ದುಗೆ?
ಅಮರೀಂದರ್ ಸಿಂಗ್ ಮತ್ತು ನವಜೋತ್ ಸಿಂಗ್ ಸಿಧು ನಡುವಿನ ಮನಸ್ತಾಪ
ಪಂಜಾಬ್ ಮಾಜಿ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಮತ್ತು ಪಂಜಾಬ್ ಘಟಕದ ಅಧ್ಯಕ್ಷ ನವಜೋತ್ ಸಿಂಗ್ ಸಿಧು ನಡುವಿನ ಮನಸ್ತಾಪವನ್ನು ಚಿವಟಿ ಹಾಕದೇ ಇದ್ದದ್ದೇ ಕಾಂಗ್ರೆಸ್ಸಿಗಾದ ಮೊದಲ ಹಿನ್ನಡೆ. ದಿನದಿಂದ ದಿನಕ್ಕೆ ಇವರಿಬ್ಬರ ಶೀತಲ ಸಮರಕ್ಕೆ ಮದ್ದು ಹುಡುಕದೇ ಇದ್ದದ್ದು ಕಾಂಗ್ರೆಸ್ ಅಧಿಕಾರ ಕಳೆದುಕೊಳ್ಳಲು ಮೊದಲು ಕಾರಣವಾಯಿತು. ಚುನಾವಣೆಯ ಹೊಸ್ತಿಲಲ್ಲಲಿ ಪಕ್ಷಕ್ಕೆ ಅಮರೀಂದರ್ ಸಿಂಗ್ ರಾಜೀನಾಮೆ ನೀಡಿದ್ದು, ಹೊಸ ಪಕ್ಷವನ್ನು ಸ್ಥಾಪಿಸಿದ್ದು, ಮುಖ್ಯಮಂತ್ರಿಗಳ ಆಯ್ಕೆಯ ವಿಚಾರ, ಚರಣಜಿತ್ ಸಿಂಗ್ ಚನ್ನಿ ಆಯ್ಕೆಯಾದ ನಂತರವೂ ಗೊಂದಲ ಮುಂದುವರಿದಿದ್ದು, ಕಾಂಗ್ರೆಸ್ಸಿಗೆ ಇನ್ನಿಲ್ಲದಂತೆ ಮುಳುವಾಗಿ ಕಾಡಿತು.
ಕೃಷಿ ಕಾಯಿದೆಯ ನಂತರ ಪಂಜಾಬ್ ರೈತರು ಬಿಜೆಪಿಯಿಂದ ಹಿಮ್ಮುಖ
ಪಂಜಾಬ್ ರಾಜಕೀಯದಲ್ಲಿ ಪ್ರಮುಖವಾಗಿ ಗುರುತಿಸಿಕೊಳ್ಳುವ ಶಿರೋಮಣಿ ಅಕಾಲಿದಳವೂ ಬಿಜೆಪಿಯಿಂದ ಬೇರೆಗೊಂಡಿತು. ಇದರಿಂದ, ಬಿಜೆಪಿ ಮತ್ತು ಅಕಾಲಿದಳದ ಮತಗಳು ಇಬ್ಭಾಗವಾದವು. ಇನ್ನೊಂದು ಕಡೆ, ವಿವಾದೀತ ಕೃಷಿ ಕಾಯಿದೆಯ ನಂತರ ಪಂಜಾಬ್ ರೈತರು ಬಿಜೆಪಿಯಿಂದ ಹಿಮ್ಮುಖರಾಗಿದ್ದರು ಎನ್ನುವ ಮಾತೂ ಕೇಳಿಬರುತ್ತಿತ್ತು. ಇದೆಲ್ಲವನ್ನೂ ಚುನಾವಣೆಯಲ್ಲಿ ಎನ್ ಕ್ಯಾಶ್ ಮಾಡಿಕೊಳ್ಳುವ ಉತ್ತಮ ಅವಕಾಶವನ್ನು ಕಾಂಗ್ರೆಸ್ ಕಳೆದುಕೊಂಡಿತು. ಆದರೆ, ಚುನಾವಣೆ ಸಮೀಪ ಬರುತ್ತಿದ್ದಂತೆಯೇ ಅಲ್ಲಿ ರಾಜಕೀಯ ಸಮೀಕರಣವೇ ಉಲ್ಟಾ ಆಗಲು ಆರಂಭಿಸಿತು.
ಮುಂದಿನ ಮುಖ್ಯಮಂತ್ರಿ ಯಾರು ಎನ್ನುವ ಗೊಂದಲ
ಮುಂದಿನ ಮುಖ್ಯಮಂತ್ರಿ ಯಾರು ಎನ್ನುವ ಗೊಂದಲ ಚುನಾವಣೆಯ ಹೊಸ್ತಿಲಲ್ಲಿ ಮುನ್ನಲೆಗೆ ಬಂದಿದ್ದು ಕಾಂಗ್ರೆಸ್ಸಿಗಾದ ಬಹುದೊಡ್ಡ ಹಿನ್ನಡೆ ಕೂಡಾ. ಕಾಂಗ್ರೆಸ್ ಹೈಕಮಾಂಡ್ ಚನ್ನಿಯವರನ್ನು ಘೋಷಿಸಬೇಕಾ ಅಥವಾ ಸಿದ್ದು ಅವರನ್ನು ಸಿಎಂ ಅಭ್ಯರ್ಥಿ ಮಾಡಬೇಕಾ ಎನ್ನುವ ಗೊಂದಲಕ್ಕೆ ಪರಿಹಾರ ಕಂಡುಕೊಳ್ಳಲಿಲ್ಲ. ಈ ವಿಚಾರದಲ್ಲಿ ಬಹಿರಂಗವಾಗಿಯೇ ನಡೆದ ಹೇಳಿಕೆಗಳು/ವಾಗ್ಯುದ್ದಗಳು ಕಾಂಗ್ರೆಸ್ಸಿಗೆ ಮುಜುಗರವನ್ನು ತಂದೊಡ್ಡುವಂತೆ ಮಾಡಿತು.
Recommended Video
ಭಗವಂತ್ ಸಿಂಗ್ ಮಾನ್ ಅವರನ್ನು ಸಿಎಂ ಅಭ್ಯರ್ಥಿ ಎಂದು ಪ್ರಕಟಿಸಿತು
ಇದನ್ನೆಲ್ಲಾ ಅವಲೋಕಿಸುತ್ತಾ ಆಮ್ ಆದ್ಮಿ ಪಕ್ಷ ವಿಭಿನ್ನ ಪ್ರಣಾಳಿಕೆ, ಪ್ರಚಾರದ ಕಾರ್ಯತಂತ್ರವನ್ನು ಬಳಸಿಕೊಂಡಿತು. ಯಾವುದೇ ಗೊಂದಲವಿಲ್ಲದೇ ಭಗವಂತ್ ಸಿಂಗ್ ಮಾನ್ ಅವರನ್ನು ಸಿಎಂ ಅಭ್ಯರ್ಥಿ ಎಂದು ಪ್ರಕಟಿಸಿತು. ಇವರೊಬ್ಬ ಕುಡುಕ ಎಂದು ವಿರೋಧ ಪಕ್ಷಗಳು ಜರಿದರೂ ಆಮ್ ಆದ್ಮಿ ಪಕ್ಷ ವ್ಯವಸ್ಥಿತ ಪ್ರಚಾರವನ್ನು ನಡೆಸಿತು. ಶಿರೋಮಣಿ ಅಕಾಲಿದಳ ಮತ್ತು ಬಿಜೆಪಿ ಚುನಾವಣೆಗೆ ಮುನ್ನವೇ ಶಸ್ತ್ರತ್ಯಾಗ ಮಾಡಿತು. ಕಾಂಗ್ರೆಸ್ ತನ್ನ ಆಂತರಿಕ ಸಮಸ್ಯೆಯಿಂದ ಸೋಲುಂಡರೆ, ಆಮ್ ಆದ್ಮಿ ಪಕ್ಷ ಅದರ ಲಾಭವನ್ನು ಪಡೆದುಕೊಂಡಿತು. ಪಂಜಾಬ್ ನಲ್ಲಿನ ಸೋಲಿಗೆ ಕಾಂಗ್ರೆಸ್ ತನಗೆ ತಾನೇ ಹೊಣೆ ಎನ್ನುವುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ.