ಪ್ರೀತಿ ಸಫಲವಾಗಲೆಂದು ಇಟಲಿಯಲ್ಲಿ ಮದುವೆಯಾಗುವ ಹರಕೆ ಹೊರುತ್ತಾರಾ!
ನಮ್ಮ ಪ್ರೀತಿ ಯಶಸ್ವಿಯಾದರೆ ಇಟಲಿಯಲ್ಲಿ ಮದುವೆ ಆಗ್ತೀವಿ ಅಂತೇನಾದರೂ ಈ ಜನ ಹರಕೆ ಹೊತ್ತುಕೊಳ್ತಾರಾ ಅನ್ನೋ ಅನುಮಾನ ಕಾಡ್ತಾ ಇದೆ. ವಿರಾಟ್ ಕೊಹ್ಲಿ- ಅನುಷ್ಕಾ ಶರ್ಮಾರ ಮದುವೆ ಆಗಿದ್ದು ಇಟಲಿಯಲ್ಲೇ. ಇದೀಗ ದೀಪಿಕಾ- ರಣ್ ವೀರ್ ಸಿಂಗ್ ಕೂಡ ಅದೇ ದೇಶದಲ್ಲಿ ಸತಿ-ಪತಿಗಳಾಗಿದ್ದಾರೆ.
ತೆಲುಗಿನ ಹೆಸರಾಂತ ನಟರೊಬ್ಬರ ಮಗನ ಮದುವೆಯೂ ಇಲ್ಲೇ ಆಗಬೇಕಿತ್ತು. ಆದರೆ ಆ ಮದುವೆ ಮುರಿದುಬಿತ್ತು. ಇರಲಿ ಕೆಲವು ಆಸಕ್ತಿಕರ ಫೋಟೋಗಳನ್ನು ಸುದ್ದಿ ಸಹಿತ ನಿಮ್ಮೆದುರು ಇಡಲಾಗಿದೆ. ಅದರಲ್ಲಿ ರಾಜಸ್ತಾನದ ಪುಷ್ಕರದಲ್ಲಿ ನಡೆಯುವ ಜಗತ್ತಿನ ಅತಿ ದೊಡ್ಡ ಒಂಟೆ ಮಾರಾಟ ಮೇಳ, 'ಗಜ' ಚಂಡಮಾರುತ, ಶಬರಿಮಲೆ ಅಯ್ಯಪ್ಪನ ದೇಗುಲಕ್ಕೆ ದರ್ಶನ ಮಾಡಲು ಬಂದಿರುವ ತೃಪ್ತಿ ದೇಸಾಯಿ ಕೂಡ ಇದ್ದಾರೆ.
ತಮಿಳುನಾಡಿನಲ್ಲಿ ಗಜ ಚಂಡಮಾರುತಕ್ಕೆ 11 ಮಂದಿ ಬಲಿ
ಇಲ್ಲಿನ ಫೋಟೋಗಳೇ ಬಹಳ ಸಂಗತಿಗಳನ್ನು ಹೇಳುತ್ತಿವೆ. ಆದರೂ ಅವುಗಳ ಬಗೆಗೊಂದು ವಿವರಣೆ ಇದ್ದರೆ ಇನ್ನೊಂದಿಷ್ಟು ಚೆಂದ ಎನಿಸಿದ್ದರಿಂದ ಅದು ಕೂಡ ಇದೆ. ಪಿಟಿಐ ಸುದ್ದಿ ಸಂಸ್ಥೆಯ ಫೋಟೋಗಳೇ ಕಣ್ಣಿಗೆ ಹಬ್ಬ ನೀಡುವಂಥ ಪೋಣಿಸಿಟ್ಟ ಮುತ್ತಿನ ಹಾರದಂತೆ. ಅದರ ಜತೆಗೆ ವಿವರಣೆಯನ್ನೂ ಓದಿಕೊಂಡು ಬಿಡಿ.
ಕ್ಯಾಮೆರಾ ಕಣ್ಣಿನಲ್ಲಿ 'ಕ್ಯಾಮಲ್'ನೊಂದಿಗಿನ ಚಿತ್ರ
ರಾಜಸ್ತಾನದ ಪುಷ್ಕರದಲ್ಲಿ 2018ನೇ ಇಸವಿಯ ವಾರ್ಷಿಕ ಒಂಟೆ ಮಾರಾಟ ಮೇಳ ನಡೆಯುತ್ತಿದೆ. ಐದು ದಿನಗಳ ಕಾಲ ನಡೆಯುವ ಈ ಮೇಳ ಜಗತ್ತಿನಲ್ಲೇ ಅತಿ ದೊಡ್ಡ ಒಂಟೆ ಮಾರಾಟ ಮೇಳ. ಶುಕ್ರವಾರದಂದು ಈ ಮೇಳದಲ್ಲಿ ಭಾಗವಹಿಸಿದ್ದ ವಿದೇಶೀಯರು ಸಾಂಪ್ರದಾಯಿಕವಾದ ದಿರಿಸು ಧರಿಸಿ ಸೆಲ್ಫಿ ತೆಗೆದುಕೊಳ್ಳುವಲ್ಲಿ ತನ್ಮಯರಾಗಿದ್ದ ವೇಳೆ ಕ್ಯಾಮೆರಾ ಕಣ್ಣಿನಲ್ಲಿ 'ಕ್ಯಾಮಲ್'ನೊಂದಿಗೆ ಕಂಡ ಚಿತ್ರ.
'ಗಜ' ಆರ್ಭಟಕ್ಕೆ ಎತ್ತರೆತ್ತರಕ್ಕೆ ಸಮುದ್ರ ಅಲೆಗಳು
ತಮಿಳುನಾಡಿನ ರಾಮನಾಥಪುರಂ ಜಿಲ್ಲೆಯಲ್ಲಿರುವ ರಾಮೇಶ್ವರಂ ವಿಶ್ವ ಪ್ರಸಿದ್ಧವಾದ ಪ್ರವಾಸಿ ತಾಣ. ಶುಕ್ರವಾರ ಬೆಳಗ್ಗೆ 'ಗಜ' ಚಂಡಮಾರುತ ನಾಗಪಟ್ಟಿಣಂ ಹಾಗೂ ವೇದಾರಣ್ಯಂ ಮಧ್ಯ ಇರುವ ತಮಿಳುನಾಡಿನ ಕಡಲು ದಾಟಿದೆ. ಮುಂಜಾಗ್ರತಾ ಕ್ರಮವಾಗಿ ಎಂಬತ್ತು ಸಾವಿರ ಮಂದಿಯನ್ನು ಸ್ಥಳಾಂತರಿಸಲಾಗಿದೆ. ಭಾರೀ ಮಳೆಯನ್ನು ಹೊತ್ತು ತಂದಿರುವ 'ಗಜ'ದ ಹೊಡೆತ ಹೇಗಿದೆ ಎಂಬುದನ್ನು ತೋರಿಸುವ ಚಿತ್ರ ಇದು. ಸಮುದ್ರದ ಬಳಿಯ ನಡೆದಾಡುವ ಪಥಕ್ಕೆ ಉಗ್ರ ಸ್ವರೂಪದ ಅಲೆಗಳು ಹೇಗೆ ಬಡಿಯುತ್ತಿವೆ ನೋಡಿ.
ಕೊಚ್ಚಿ ವಿಮಾನ ನಿಲ್ದಾಣದಲ್ಲಿ ತೃಪ್ತಿ ದೇಸಾಯಿಗೆ ತಡೆ
ಕೇರಳದ ಶಬರಿಮಲೆ ಅಯ್ಯಪ್ಪ ದೇವಸ್ಥಾನದ ವಾರ್ಷಿಕ ಯಾತ್ರೆಗೆ ಬಾಗಿಲು ತೆರೆಯುವ ವೇಳೆ ಪ್ರವೇಶ ಮಾಡುವ ಸಲುವಾಗಿ ಬಂದಿದ್ದ ಮಹಿಳಾ ಹಕ್ಕುಗಳ ಹೋರಾಟಗಾರ್ತಿ ತೃಪ್ತಿ ದೇಸಾಯಿ (ಎಡ ಭಾಗದಿಂದ ನಾಲ್ಕನೆಯವರು) ಅವರಿಗೆ ಕೊಚ್ಚಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ತಡೆ ಹಾಕಲಾಯಿತು. ಸೆಪ್ಟೆಂಬರ್ ನಲ್ಲಿ ಬಂದ ಸುಪ್ರೀಂ ಕೋರ್ಟ್ ನಲ್ಲಿ ಎಲ್ಲ ವಯಸ್ಸಿನ ಮಹಿಳೆಯರು ಪ್ರವೇಶ ಮಾಡಬಹುದು ಎಂಬ ತೀರ್ಪು ನೀಡಿದ ನಂತರ ಬಹಳ ವಿರೋಧ ವ್ಯಕ್ತವಾಗುತ್ತಿದೆ. ಶಬರಿಮಲೆ ದೇಗುಲಕ್ಕೆ ನವೆಂಬರ್ 17ಕ್ಕೆ ಪ್ರವೇಶಿಸುವ ಸಲುವಾಗಿ ತೃಪ್ತಿ ದೇಸಾಯಿ ಕೇರಳಕ್ಕೆ ಬಂದಿದ್ದಾರೆ.
ರಾಮಾಯಣ ಎಕ್ಸ್ ಪ್ರೆಸ್ ಪ್ರವಾಸಿಗರಿಗೆ ಭರ್ಜರಿ ಸ್ವಾಗತ
ರಾಮಾಯಣ ಎಕ್ಸ್ ಪ್ರೆಸ್ ನಲ್ಲಿ ದೆಹಲಿಯಿಂದ ಗುರುವಾರ ಹೊರಟ ಪ್ರಯಾಣಿಕರು ಫೈಜಾಬಾದ್ ನ ರೈಲು ನಿಲ್ದಾಣದಲ್ಲಿ ಶುಕ್ರವಾರ ಬಂದಿಳಿದಾಗ ಭರ್ಜರಿ ಸ್ವಾಗತ ಕೋರಲಾಯಿತು. ಭಾರತೀಯ ರೈಲ್ವೆಯಿಂದ ಈ ಯೋಜನೆ ಆರಂಭಿಸಲಾಗಿದ್ದು, ರಾಮಾಯಣದಲ್ಲಿ ಪ್ರಸ್ತಾವ ಆಗುವ ಹಲವು ಸ್ಥಳಗಳಿಗೆ ಭೇಟಿ ನೀಡುವ ಪ್ರವಾಸ ಇದಾಗಿದೆ.
ದೀಪಿಕಾ-ರಣ್ ವೀರ್ ಕಲ್ಯಾಣ
ದೀಪಿಕಾ ಪಡುಕೋಣೆ ಹಾಗೂ ರಣ್ ವೀರ್ ಸಿಂಗ್ ವಿವಾಹ ಆಗಿದ್ದಾರೆ. ಅದೂ ಕೊಂಕಣಿ ಹಾಗೂ ಸಿಂಧಿ ಎರಡೂ ಸಂಪ್ರದಾಯದ ಪ್ರಕಾರ ಮದುವೆ ಆಗಿದ್ದಾರೆ. ಉತ್ತರ ಇಟಲಿಯ ಲೇಕ್ ಕೊಮೊದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕುಟುಂಬದ ಸದಸ್ಯರು ಹಾಗೂ ಆಪ್ತರು ಪಾಲ್ಗೊಂಡಿದ್ದರು. ಆರತಕ್ಷತೆ ಮುಂಬೈ, ದೆಹಲಿ, ಬೆಂಗಳೂರು ಇಲ್ಲೆಲ್ಲ ಮಾಡಿಕೊಳ್ಳುತ್ತಾರೆ ಎಂಬ ಸುದ್ದಿ ಇದೆ. ಕನ್ನಡತಿ ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ಗೆ ಶುಭ ಹಾರೈಸೋಣ.
'ಗಜ' ಆಗಮನಕ್ಕೂ ಮುನ್ನ ಗೆಳೆಯರ ಸೆಲ್ಫಿ
ನಾಳೆ ಹೇಗೋ ಏನೋ ಇವತ್ತೇ ಒಂದು ಫೋಟೋ ತೆಗೆದಿಟ್ಟುಕೊಳ್ಳೋಣ ಅಂತ ನೀವು ಯಾವುದಕ್ಕೆಲ್ಲ ಅಂದುಕೊಂಡಿರಬಹುದು? 'ಗಜ' ಚಂಡಮಾರುತ ಅಪ್ಪಳಿಸುವ ಮುನ್ನ ಚೆನ್ನೈನ ಮರೀನಾ ಬೀಚ್ ಬಳಿ ಗೆಳೆಯರ ಗುಂಪು ಸೆಲ್ಫಿ ತೆಗೆದುಕೊಳ್ಳುತ್ತಿತ್ತು. ಹಿನ್ನೆಲೆಯಲ್ಲಿ ಕಂಡುಬರುವ ದಟ್ಟೈಸಿದ ಮೋಡ, ಸಮುದ್ರದ ಅಲೆ, ಗೆಳೆಯರ ಗುಂಪಿನ ಈ ಕ್ಷಣದ ಸಂತೋಷ... ಇವೆಲ್ಲ ಬದುಕಿನ ಬಗ್ಗೆ ದೊಡ್ಡ ಸಂದೇಶ ಸಾರುತ್ತಿವೆಯೇನೋ ಎಂಬಂತಿದೆ.