ಮಹಾತ್ಮ ಗಾಂಧಿ ಸುಳ್ಳೇಕೆ ಹೇಳುತ್ತಿರಲಿಲ್ಲ?
ಸತ್ಯಾಗ್ರಹ, ಸತ್ಯಾನ್ವೇಷಣೆಯಂತಹ ವಿಷಯಗಳು ಸಮಾಜ, ಸಮುದಾಯ, ನ್ಯಾಯ, ನೀತಿ, ರಾಜಕಾರಣದಲ್ಲಿ ಅಪಾರ ಪ್ರಭಾವ ಬೀರುವಂತಹದ್ದಾಗಿದ್ದರೂ ಅದರ ನಿಜ ಹಿಡಿತ ಬಿಗಿತಗಳಿರುವುದು ವ್ಯಕ್ತಿಯ ವ್ಯಕ್ತಿತ್ವದ ನೆಲೆಯಲ್ಲಿ.
ಗಾಂಧೀಜಿಯ ಬಾಲ್ಯದ ಉದಾಹರಣೆಗಳಲ್ಲಿ, ಸುಳ್ಳು ಹೇಳುವುದಕ್ಕೆ ಅವಕಾಶ ಹೇರಳವಾಗಿದ್ದರೂ ಅವುಗಳತ್ತ ಮನಸ್ಸು ಹೋಗದಿರುವಂತೆ ಮಾಡಿದ್ದು ಸತ್ಯ ಎನ್ನುವ ಸರಿ ಅಥವಾ ನೈತಿಕ ಸ್ಥಿತಿ. ಏಕೆಂದರೆ ಸನ್ನಿವೇಶಕ್ಕೊಂದು ಸುಳ್ಳು ಎನ್ನುವ ದೃಷ್ಟಿಯಿಂದ ನೋಡಿದಾಗ ಸುಳ್ಳು ಹೇಳುವುದು ಸುಲಭ ಇರಬಹುದು, ಇರದಿರಬಹುದು, ಆದರೆ ಸುಳ್ಳು ಎನ್ನುವ ಸ್ಥಿತಿಯು ನರಮಂಡಲದಲ್ಲಿ ಮೂಡಿಸುವಂತಹ ಸ್ಥಿತಿಯು ಹುಟ್ಟಿಸುವ ಹಿತ, ಸುಖ, ಖುಷಿ ಸತ್ಯ ನೀಡಲಾರದು. ಹೀಗಾಗಿ ಸುಳ್ಳು ಹೇಳುವುದೊಂದು ಮಹದಾನಂದದ ಚಟುವಟಿಕೆ.
ಗಾಂಧಿಯ ತತ್ವಾದರ್ಶ ಮರೆತ ನಮ್ಮ ನಾಯಕರು...
ಸತ್ಯ, ಸುಳ್ಳುಗಳು ಮೂಡಿಸುವ "ವಕ್ರ"ದ ವರ್ತನೆಗಳು
ಸುಳ್ಳಿನಲ್ಲಿರುವ ಅಮಲೇರಿಸುವ ಸಾರವು ನವ ಚೈತನ್ಯವನ್ನು ಕೊಡುತ್ತಲೇ ಇರುವುದು. ಜೊತೆಯಲ್ಲಿ ಸಮಯ ಸ್ಪೂರ್ತಿ ಎನ್ನುವಂತಹ ಮನೋಬಲವೂ ಸುಳ್ಳಿನ ಸರಾಗತೆಗೆ ನೆರವಾಗುತ್ತದೆ. ಮಾನಸಿಕ ದುಸ್ಥಿತಿಯಲ್ಲಿರುವಂತಹ ವ್ಯಕ್ತಿಗಳಲ್ಲಿ ಸುಳ್ಳು ಮತ್ತು ಸತ್ಯದ ಸ್ಥಿತಿಯೇ ಹಲವಾರು "ವಕ್ರ" ಎನ್ನುವಂತಹ ವರ್ತನೆಗಳಿಗೆ ಕಾರಣವಾಗಿಬಿಡುತ್ತದೆ.
ಸುಳ್ಳಿನಿಂದ ದೂರ ಸರಿಯಲು ಮಾಡಿದವರ ಪ್ರಯತ್ನಗಳು ಹೇಗಿರುವುದು ಎನ್ನುವುದರ ಅತ್ಯುತ್ತಮ ನಿದರ್ಶನ ಸತ್ಯ ಹರಿಶ್ಚಂದ್ರನ ಕತೆ. ಮಡದಿ, ಮಕ್ಕಳು, ಮನೆ, ಅಧಿಕಾರ, ರಾಜ್ಯ ಎಲ್ಲವನ್ನೂ ಕಡೆಗಣಿಸುವಂತಹ ಮಾನಸಿಕತೆ ಅದು. ಹೀಗೆ ಮಾಡುವುದರಿಂದಷ್ಟೇ ಮನಕ್ಕೆ ಸುಖವೆನ್ನುವುದು ಸಾಮಾನ್ಯ ಜನರಿಗೆ ಅರ್ಥವಾಗದು. ಸುಳ್ಳು ಒದಗಿಸುವ ಸುಖಭೋಗಗಳು ಅಸಹನೀಯ ಎನ್ನುವಂತಹ ಚಿತ್ರಗಳೇ ಮನವನ್ನು ಆವರಿಸಿದಾಗ ಅದನ್ನು ಅಳಿಸಲು ಸತ್ಯವೆನ್ನುವಂತಹ ಗೋಚರಾನುಭವವು (ಪರ್ಸ್ ಪ್ಷನ್ ) ಪ್ರಬಲವಾಗಿ ಮೂಡುತ್ತದೆ.
ಸುಳ್ಳಿನ ಸ್ಥಿತಿಯೇ ಅನುಕರಣೀಯ
ಬಹುಪಾಲು ಮನುಷ್ಯರಲ್ಲಿ ಇಂತಹ ಗೋಚರಾನುಭವಗಳು ಇತರರ ಆಸೆ, ಆಕಾಂಕ್ಷೆ, ನಡೆನುಡಿಗಳಿಗೇ ಸೀಮಿತವಾಗಿದ್ದು ಅವರುಗಳ ಸುಳ್ಳಿನ ಸ್ಥಿತಿಯೇ ಅನುಕರಣೀಯ ಎನ್ನುವಂತೆ ಆಗಿಬಿಡುತ್ತದೆ. ಹೀಗಾಗಿ ಸತ್ಯವಿರದಿದ್ದರೂ ಹಿತ ಸಿಗುತ್ತದೆ- ಅಷ್ಟೇಕೆ ಸತ್ಯವಿರದಿದ್ದರೇನೇ ಹಿತ. ಆದುದರಿಂದಲೇ ರಾಜಕಾರಣಿಗಳು, ಅಧಿಕಾರಿಗಳು ಸುಳ್ಳಿನ ಕಂತೆಗಳನ್ನು ಎಷ್ಟೇ ಒರಟಾಗಿ ಹಣಿದರೂ ನಿಸ್ಸಂಕೋಚವಾಗಿ ಒಪ್ಪಿಕೊಳ್ಳುವ ಜನಸಮೂಹ ಅಪಾರ. ಜನನಾಯಕರ ಸುಳ್ಳನ್ನು ಒಪ್ಪಿ ಸಂಭ್ರಮಿಸುವ ಜನಮಾನಸಿಕತೆ ವಿಶ್ವವ್ಯಾಪಿ. ಇಂತಹ ವ್ಯಕ್ತಿಗಳ ಹಾವ ಭಾವಗಳು ಜನಮಿದುಳಿಗೆ ಕ್ಷಣಮಾತ್ರದಲ್ಲಿ ಅಂಟಿಕೊಂಡು ಬಿಡುತ್ತದೆ. ಆದುದರಿಂದಲೇ ಸತ್ಯವನ್ನಾಡುವವರನ್ನು ಮುಂದಾಳುಗಳನ್ನಾಗಿ ಬಯಸುವುದಿಲ್ಲ ಜನಸಮುದಾಯ. ಸತ್ಯ ಹಿತ ಕೊಡದು, ಹಿಡಿತ ಬಿಡದು ಎನ್ನುವುದು ಕಂದಮ್ಮಗಳಿಗೂ ತಿಳಿದುಬಿಡುತ್ತದೆ.
ಮಾಧ್ಯಮ ಸ್ವಾತಂತ್ರ್ಯ ಮತ್ತು ಅಜ್ಜ ಹೇಳಿದ ಗಾಂಧಿ ಕಥೆ
ಗಾಂಧೀಜಿಯವರ ಮನೋವಿಕಾಸದ ಹಾದಿ
ಗಾಂಧೀಜಿಯವರ ಮನೋವಿಕಾಸದ ಹಾದಿ ಸಾಗಿದ ರೀತಿಯತ್ತ ಗಮನ ಹರಿಸಿದಾಗ ತಿಳಿದು ಬರುವ ಸಂಗತಿಯೂ ಇದೇ ಆಗಿರುತ್ತದೆ. ಸುಳ್ಳು ಹೇಳುವುದರಿಂದ ಯಾವ ಹಿತ ಅಥವಾ ಲಾಭವೂ ಇಲ್ಲ ಎನ್ನುವುದರಲ್ಲಿ ನೈತಿಕತೆಯ ಹಿಡಿತಕ್ಕಿಂತಲೂ ನರಮಂಡಲದ ಹಿಡಿತವೇ ಹೆಚ್ಚಾಗಿತ್ತು. ಸಣ್ಣ ವಯಸ್ಸಿನಿಂದಲೇ ಇಂತಹದೊಂದು ಅಹಿತ ಸ್ಥಿತಿಯಿಂದ ದೂರ ಉಳಿಯುವ ಪ್ರಯತ್ನಗಳು ಅವರ ಜೀವನದುದ್ದಕ್ಕೂ ಮುಂದುವರೆದಿತ್ತು. ವೈಯಕ್ತಿಕ ಬದುಕಿನಲ್ಲಂತೂ ಪ್ರತಿಯೊಂದು ಸಂಗತಿಯನ್ನು ವಿಶ್ಲೇಷಿಸುವಂತಹ ಮನೋಗುಣಗಳನ್ನು ಅವರು ಮೂಡಿಸಿಕೊಂಡಿದ್ದರು. ಸತ್ಯದ ಅನ್ವೇಷಣೆ ಎನ್ನುವುದೇ ಅವರ ಜೀವನ ಸೂತ್ರವಾಗಿದ್ದರೂ ಅದೊಂದು ಮಿದುಳನ್ನು ತುಂಬಿಸಿಸುತ್ತಿದ್ದ ತೃಪ್ತಿಕರ ಚಟುವಟಿಕೆ.
ಸುಳ್ಳನ್ನು ಪೋಷಿಸುವುದು ಸುಲಭ ಮತ್ತು ಜಾಣತನ
ಸತ್ಯಾನ್ವೇಷಣೆ ಸರಳ ಸಾಮಾನ್ಯ ಸೂತ್ರ ಎನ್ನುವುದನ್ನು ಶುದ್ಧ ವಿಜ್ಞಾನವು ತಪ್ಪದೇ ಆಚರಿಸುತ್ತದೆ. ಆದರೆ ಮನುಷ್ಯ ವ್ಯವಹಾರಗಳಿಗೆ ಸಂಬಂಧಿಸಿದಂತೆ ನೋಡಿದಾಗ ಉನ್ನತ ನೈತಿಕ ನಿಯಮ ಎನ್ನುವಂತಹ ಪಟ್ಟಕ್ಕೇರಿ ಬಿಡುತ್ತದೆ. ಈ ಸ್ವರೂಪವನ್ನು ವಿರೋಧಿಸುವವರೂ ಇದ್ದಾರೆ, ಆದರಂತಹವರ ಸಂಖ್ಯೆ ಕಡಿಮೆ. ಜನಪ್ರಚಾರ, ಮುಂದಾಳತ್ವದ ಅವಕಾಶಗಳು ಇಂತಹ ವ್ಯಕ್ತಿಗಳಿಗೆ ಸಿಗುವುದೇ ಇಲ್ಲ. ಒಟ್ಟಿನಲ್ಲಿ ಸುಳ್ಳನ್ನು ಪೋಷಿಸುವುದು ಬಲು ಸುಲಭ ಮತ್ತು ಜಾಣತನವೂ ಹೌದು ಎನ್ನುವುದರ ಜ್ವಲಂತ ಉದಾಹರಣೆಗಳು ಕಳೆದ ಕೆಲವು ದಿನಗಳಲ್ಲಿ ನಮ್ಮ ಮಾಧ್ಯಮಗಳಲ್ಲಿ ಕಾಣಿಸಿವೆ. ನಾಗರೀಕತೆಯನ್ನು ಉತ್ತಮವಾಗಿ ಪೋಷಿಸಿ, ಬೆಳಸಲು ಬೇಕಾಗಿರುವುದು ವ್ಯಕ್ತಿಯ ಮನೋವಿಕಾಸಕ್ಕೆ ಅಡಚಣೆಯಾಗಿರುವ ಸುಳ್ಳಿನ ಸರಮಾಲೆಗಳನ್ನು ಕಿತ್ತೆಸೆಯಬಲ್ಲ ಅರಿವು.