ಮುಖಭಂಗ ಸಾಧ್ಯತೆ: ಕರ್ನಾಟಕ ಬಂದ್ ಬರೀ ರ್ಯಾಲಿಗೆ ಸೀಮಿತ?
ಎಲ್ಲಾ ಸಮಸ್ಯೆಗಳಿಗೆ ಬಂದ್ ಕರೆ ನೀಡುವುದೊಂದೇ ಪರಿಹಾರವಾ? ಬಂದ್ ಗೆ ಕರೆ ನೀಡುವವರಿಗೆ ಜನರ, ವರ್ತಕರ ಸಮಸ್ಯೆಯ ಬಗ್ಗೆ ಅರಿವಿದೆಯಾ? ಬಂದ್ ನಡೆಸಿದ ಕೂಡಲೇ ಡಿಮಾಂಡ್ ಈಡೇರುತ್ತಾ? ಇದು ಜನ ಸಾಮಾನ್ಯರಲ್ಲಿ ಎದುರಾಗುವ ಸಾಮಾನ್ಯ ಪ್ರಶ್ನೆ.
ಹಾಗಂತ, ಬಂದ್ ನಡೆಸುವುದು ಅಸಂವಿಧಾನಿಕ ಎಂದು ಹೇಳಲು ಸಾಧ್ಯವಿಲ್ಲ. ನೆಲ, ಜಲ, ಭಾಷೆ ಮುಂತಾದ ವಿಚಾರಗಳಿಗೆ ಸಂಬಂಧಿಸಿದಂತೆ ಹಲವು ಬಾರಿ ಬಂದ್ ಆಗಿದೆ. ರಾಜ್ಯದ ಮೂರೂ ರಾಜಕೀಯ ಪಕ್ಷಗಳೂ ಸಂದರ್ಭಕ್ಕೆ ತಕ್ಕಂತೆ ಬೆಂಬಲ ನೀಡಿದ ಉದಾಹರಣೆಗಳಿವೆ. ಆದರೆ, ಬಂದ್ ಕರೆ ನೀಡುವುದಕ್ಕೂ ಸಮಯ ಸಂದರ್ಭ ಎನ್ನುವುದು ಬೇಕಲ್ಲವೇ?
ಡಿ. 31ರ ಕರ್ನಾಟಕ ಬಂದ್ ಕೈ ಬಿಡಿ; ಬಸವರಾಜ ಬೊಮ್ಮಾಯಿ
ಈಗ ಕೆಲವು ಕನ್ನಡಪರ ಸಂಘಟನೆಗಳು ಕರೆ ನೀಡಿರುವ ನಾಳೆಯ (ಡಿ 31) ಬಂದ್ ಗೆ ಕೂಡಾ ಇದೇ ರೀತಿ ಸಾರ್ವಜನಿಕ ಮತ್ತು ವಾಣಿಜ್ಯ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಯಾಕೆಂದರೆ, ಕೊರೊನಾ ಹಾವಳಿಯಿಂದಾಗಿ ಈಗತಾನೇ ನಾಲ್ಕು ಕಾಸು ನೋಡುತ್ತಿರುವ ವರ್ತಕರು ಮತ್ತು ಕೊರೊನಾದಿಂದಾಗಿ ಅಸ್ತವ್ಯಸ್ತಗೊಂಡಿದ್ದ ಜನಜೀವನ ತಕ್ಕಮಟ್ಟಿಗೆ ಸರಿದಾರಿಗೆ ಬರುತ್ತಿರುವುದು.
ಕನ್ನಡಪರ ಸಂಘಟನೆಗಳಲ್ಲೇ ಒಗ್ಗಟ್ಟಿಲ್ಲ ಎನ್ನುವುದಕ್ಕೆ ನಾಳೆಯ ಬಂದ್ ಇನ್ನೊಂದು ಉದಾಹರಣೆಯಾಗಬಲ್ಲದು. ಒಗ್ಗಟ್ಟಿನ ಕೊರತೆಯಿಂದಾಗಿ ನಾಳೆಯ ಬಂದ್ ಯಶಸ್ವಿಯಾಗುವುದು ಆಮೇಲಿನ ಮಾತು ಬರೀ ರ್ಯಾಲಿಗೆ ಇದು ಸೀಮಿತವಾಗುವ ಸಾಧ್ಯತೆಯಿಲ್ಲದಿಲ್ಲ ಎನ್ನುವ ಮಾತು ಸಂಘಟನೆಯ ವಲಯದಲ್ಲೇ ಕೇಳಿ ಬರುತ್ತಿದೆ.
ಡಿ.30ರಂದು ಕರ್ನಾಟಕ ರಕ್ಷಣಾ ವೇದಿಕೆಯಿಂದ 'ರಾಜಭವನ ಮುತ್ತಿಗೆ' ಚಳವಳಿ
ಎಂಇಎಸ್ ಸಂಘಟನೆಯನ್ನು ನಿಷೇಧಿಸಬೇಕು ಎನ್ನುವ ಆಗ್ರಹ
ಎಂಇಎಸ್ ಸಂಘಟನೆಯನ್ನು ನಿಷೇಧಿಸಬೇಕು ಎಂದು ವಾಟಾಳ್ ನಾಗರಾಜ್ ಮತ್ತು ಸಾ.ರಾ.ಗೋವಿಂದ್ ನೇತೃತ್ವದಲ್ಲಿ ಕರ್ನಾಟಕ ಬಂದ್ ಗೆ ಕರೆನೀಡಲಾಗಿದೆ. "ಎಂಇಎಸ್ ನಿಷೇಧಿಸುವ ವಿಚಾರದಲ್ಲಿ ಕಾನೂನು ರೀತಿಯಲ್ಲಿ ಹೆಜ್ಜೆಯನ್ನು ಇಡಲಾಗುವುದು, ಬಂದ್ ನಡೆಸುವುದು ಬೇಡ" ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಕನ್ನಡಪರ ಸಂಘಟನೆಯವರಲ್ಲಿ ಮನವಿಯನ್ನು ಮಾಡಿದ್ದಾರೆ. ಬಂದ್ ಘೋಷಣೆಯ ವೇಳೆ ಜೊತೆಗಿದ್ದ ಹೆಚ್ಚಿನ ಸಂಘಟನೆಗಳು ಈಗ ನಮ್ಮ ಬೆಂಬಲವಿಲ್ಲ ಎಂದು ಸಾರಿವೆ.
ಬಲಾಢ್ಯವೆಂದೇ ಗುರುತಿಸಲ್ಪಡುವ ಕರ್ನಾಟಕ ರಕ್ಷಣಾ ವೇದಿಕೆ, ನಾರಾಯಣ ಗೌಡ್ರ ಬಣ
ರಾಜ್ಯದ ಕನ್ನಡಪರ ಸಂಘಟನೆಗಳ ಪೈಕಿ ಬಲಾಢ್ಯವೆಂದೇ ಗುರುತಿಸಲ್ಪಡುವ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣ ಗೌಡ್ರ ಬಣ) ಹಿಂದಿನಿಂದಲೂ ಬಂದ್ ಗೆ ಕರೆನೀಡುವ ಅಥವಾ ಬೆಂಬಲಿಸಿದ ಉದಾಹರಣೆಗಳು ಕಮ್ಮಿ. ನಾಡುನುಡಿ ವಿಚಾರದಲ್ಲಿ ತಮ್ಮದೇ ರೀತಿಯಲ್ಲಿ ಹೋರಾಟ ಮಾಡುವ ಕರವೇ, ಗುರುವಾರ (ಡಿ 30) ಪಾದಯಾತ್ರೆ ಮತ್ತು ರಾಜಭವನ ಮುತ್ತಿಗೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. "ಬಂದ್ ಗೆ ಕರೆ ನೀಡುವ ಮುನ್ನ ದೂರದೃಷ್ಟಿ ಇರಬೇಕು, ಅದಕ್ಕಾಗಿ ಪಕ್ಕಾ ಯೋಜನೆಯನ್ನು ಮಾಡಿಕೊಂಡು ಅಂತಹ ಕೆಲಸಕ್ಕೆ ಕೈಹಾಕಬೇಕು. ಬಂದ್ ಎನ್ನುವುದು ಬಾಯಿ ಚಪಲದಂತಾಗಬಾರದು"ಎಂದು ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣ ಗೌಡ ಹೇಳಿದ್ದಾರೆ.
ಕನ್ನಡ ಚಿತ್ರೋದಮಕ್ಕೂ ಡಿಸೆಂಬರ್ 31 ಮಹತ್ವದ ದಿನ
ಕನ್ನಡ ಚಿತ್ರೋದಮಕ್ಕೂ ಡಿಸೆಂಬರ್ 31 ಮಹತ್ವದ ದಿನ, ಅಂದು ಮೂರು ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಬಂದ್ ಮುಂದಕ್ಕೆ ಹಾಕಿ ಎಂದು ಪರಿಪರಿಯಾಗಿ ಆ ಚಿತ್ರದವರು ಮನವಿ ಮಾಡಿದ್ದರೂ, ಅವರ ಕೋರಿಕೆಗೆ ವ್ಯಂಗ್ಯವಾಡಲಾಗಿದೆ. ಇನ್ನು, ಬಂದ್ ಮೂಲ ಉದ್ದೇಶ ಬೆಳಗಾವಿಯಲ್ಲಿ ಕನ್ನಡಪರ ಸಂಘಟನೆಗಳು ಬಂದ್ ಗೆ ಬೆಂಬಲವಿಲ್ಲ ಎಂದಿವೆ. "ಬೆಂಗಳೂರಿನಲ್ಲಿ ಎಸಿ ರೂಂನಲ್ಲಿ ಕೂತು ಬಂದ್ ಗೆ ಕರೆ ನೀಡುವುದಲ್ಲ, ನಮ್ಮೆಲ್ಲರ ಅಭಿಪ್ರಾಯವನ್ನು ಕೇಳಬೇಕಾಗುತ್ತದೆ. ಹಾಗಾಗಿ, ನಾವು ಬಂದ್ ನಡೆಸುವುದಿಲ್ಲ"ಎಂದು ಬೆಳಗಾವಿ ಕನ್ನಡಪರ ಸಂಘಟನೆಗಳ ಮುಖ್ಯಸ್ಥರು ಆಕ್ರೋಶ ಹೊರ ಹಾಕಿದ್ದಾರೆ.
ತಮಿಳುನಾಡಿನಲ್ಲಿ ಜಯಲಲಿತಾ ಮುಖ್ಯಮಂತ್ರಿಯಾಗಿದ್ದ ಅವಧಿ
ತಮಿಳುನಾಡಿನಲ್ಲಿ ಜಯಲಲಿತಾ ಮುಖ್ಯಮಂತ್ರಿಯಾಗಿದ್ದ ಅವಧಿ. ಕಾವೇರಿ ಹೆಚ್ಚುವರಿ ಟಿಎಂಸಿ ನೀರು ಬಿಡಬೇಕೆಂದು ಟ್ರಿಬ್ಯೂನಲ್ ಆದೇಶ ಹೊರಡಿಸಿತ್ತು. ಕನ್ನಡಪರ ಸಂಘಟನೆಗಳು ಆ ವೇಳೆಯೂ ಬಂದ್ ಗೆ ಕರೆ ನೀಡಿದ್ದವು. ಪ್ರಮುಖವಾಗಿ, ಕಾವೇರಿ ಜಲಾಯನ ಪ್ರದೇಶದಲ್ಲಿ ಬಂದ್ ಗೆ ಯಾವ ರೀತಿ ಅಭೂತಪೂರ್ವ ಬೆಂಬಲ ಸಿಕ್ಕಿತ್ತು ಅಂದರೆ, ಗಲ್ಲಿಗಲ್ಲಿಯಲ್ಲಿ ಸಾರ್ವಜನಿಕರೇ ಬೀದಿಗಿಳಿದಿದ್ದರು. ಇತ್ತೀಚಿನ ಹಲವು ವರ್ಷಗಳಲ್ಲಿ ಆ ರೀತಿಯ ಪ್ರತಿಕ್ರಿಯೆ ಕಂಡಿದ್ದು, ನೋಡಿದ್ದು ಕಮ್ಮಿ. ಬಂದ್ ಅದರೆ ಅದು ಎನ್ನುವುದು ಸಾರ್ವಜನಿಕರಿಂದ ಕೇಳಿ ಬರುತ್ತಿರುವ ಮಾತು. ಅಂತದ್ದೇ ಬೆಂಬಲ, ನಾಳೆಯ ಬಂದ್ ಗೆ ಸಿಗಬಹುದೇ?
ಬಂದ್ ಮಾಡಿಯೇ ತೀರುತ್ತೇವೆ, ಎಂದು ವಾಟಾಳ್ ನಾಗರಾಜ್ ಹಠ
"ಯಾರು ಏನೇ ಹೇಳಲಿ, ಬಂದ್ ಗೆ ವಿರೋಧ ಮಾಡುವವರು ಇದ್ದೇ ಇರುತ್ತಾರೆ, ಬಂದ್ ಮಾಡಿಯೇ ತೀರುತ್ತೇವೆ" ಎಂದು ವಾಟಾಳ್ ನಾಗರಾಜ್ ಹಠ ಹಿಡಿದಿದ್ದಾರೆ. ಆದರೆ, ಜಯ ಕರ್ನಾಟಕ, ಕರವೇ ಪ್ರವೀಣ್ ಶೆಟ್ಟಿ ಬಣ, ಹೋಟೆಲ್ ಉದ್ಯಮ, ಕ್ಯಾಬ್, ಆಟೋ, ಟಾಕ್ಸಿ ಸಂಘಟನೆ ಸೇರಿದಂತೆ ಬಹುತೇಕರು ಬಂದ್ ಗೆ ವಿರೋಧ ವ್ಯಕ್ತ ಪಡಿಸಿದ್ದಾರೆ. ವರ್ಷದ ಕೊನೆಯ ದಿನವಾಗಿರುವದರಿಂದ ಮತ್ತು ರಾತ್ರಿ ಹತ್ತು ಗಂಟೆಯ ನಂತರ ನೈಟ್ ಕರ್ಫ್ಯೂ ಇರುವುದರಿಂದ ಸಾರ್ವಜನಿಕರಿಂದ ಯಾವ ರೀತಿ ಬಂದ್ ಗೆ ರೆಸ್ಪಾನ್ಸ್ ಸಿಗಲಿದೆ ಎನ್ನುವುದು ಕಾದು ನೋಡಬೇಕಿದೆ.
Recommended Video