ಎಬಿವಿಪಿ ನಾಯಕನಿಂದ ಸಿಎಂವರೆಗೆ: ವಿಜಯ್ ರೂಪಾನಿ ವ್ಯಕ್ತಿಚಿತ್ರ
ಗಾಂಧಿನಗರ, ಸೆಪ್ಟೆಂಬರ್ 11: ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಶನಿವಾರ ರಾಜೀನಾಮೆ ನೀಡಿದ್ದಾರೆ. ತಮ್ಮ ರಾಜೀನಾಮೆ ಬಗ್ಗೆ ಹೇಳಿಕೆ ನೀಡಿರುವ ವಿಜಯ್ ರೂಪಾನಿ, "ನಮ್ಮ ಪಕ್ಷದಲ್ಲಿ ಕಾಲಕ್ಕೆ ತಕ್ಕಂತೆ ಮುಖ್ಯಮಂತ್ರಿ ಬದಲಾವಣೆ ಮಾಡುವ ಸಂಸ್ಕೃತಿ ಇದೆ. ಹೀಗಾಗಿ ರಾಜೀನಾಮೆ ನೀಡಿದ್ದೇನೆ. ಮುಂಬರುವ ದಿನಗಳಲ್ಲಿ ಪಕ್ಷ ಸಂಘಟನೆಯಲ್ಲಿ ಪಾಲ್ಗೊಳ್ಳುತ್ತೇನೆ," ಎಂದು ಹೇಳಿದ್ದಾರೆ.
ಮಾಜಿ ಮುಖ್ಯಮಂತ್ರಿ ಆನಂದಿಬೆನ್ ಪಟೇಲ್ ಅವರನ್ನು ಬದಲಿಸಿ ವಿಜಯ್ ರೂಪಾನಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲಾಗಿತ್ತು. ವಿಜಯ್ ರೂಪಾನಿ ಆರ್ಎಸ್ಎಸ್ ಹಿನ್ನೆಲೆಯಲ್ಲಿ ಬಂದಿರುವವರು ಆಗಿದ್ದಾರೆ. ಗುಜರಾತ್ ವಿಧಾನಸಭಾ ಚುನಾವಣೆಗೆ 16 ತಿಂಗಳ ಮೊದಲು ವಿಜಯ್ ರೂಪಾನಿ ಧಿಡೀರ್ ರಾಜೀನಾಮೆ ನೀಡಿರುವುದು ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. ಇನ್ನು ವಿಜಯ್ ರೂಪಾನಿ ಈ ರಾಜೀನಾಮೆ ಬಗ್ಗೆ ಯಾವುದೇ ಸ್ಪಷ್ಟವಾದ ಉತ್ತರ ನೀಡಿಲ್ಲ. ಬರೀ "ನಮ್ಮ ಪಕ್ಷದಲ್ಲಿ ಕಾಲಕ್ಕೆ ತಕ್ಕಂತೆ ಮುಖ್ಯಮಂತ್ರಿ ಬದಲಾವಣೆ ಮಾಡುವ ಸಂಸ್ಕೃತಿ ಇದೆ. ಹೀಗಾಗಿ ರಾಜೀನಾಮೆ ನೀಡಿದ್ದೇನೆ," ಎಂದಿದ್ದಾರೆ.
ಗುಜರಾತ್ ಸಿಎಂ ರೂಪಾನಿ ರಾಜೀನಾಮೆ: ಸಿಎಂ ರೇಸಿನಲ್ಲಿರುವ ಐವರು
ವಿಜಯ್ ರೂಪಾನಿ ಮೊದಲಿನಿಂದಲೂ ತಮ್ಮ ಪಕ್ಷದ ಸಿದ್ದಾಂತಕ್ಕೆ ದೃಢವಾಗಿ ಇರುವವರು. ಎಂದಿಗೂ ತಮ್ಮ ಸಿದ್ದಾಂತವನ್ನು ಬದಲಾವಣೆ ಮಾಡಿಲ್ಲ. ವಿದ್ಯಾರ್ಥಿ ಜೀವನದಲ್ಲಿ ಜನಸಂಘದಲ್ಲಿ ಒಲವು ತೋರಿದ ವಿಜಯ್ ರೂಪಾನಿ, ಬಳಿಕ ರಾಜ್ಯದಲ್ಲಿ ಶಾಸಕರಾಗಿದ್ದಾರೆ. ಹಾಗೆಯೇ ಮಂತ್ರಿಯಾಗಿದ್ದಾರೆ. ರಾಜ್ಯ ಸಭಾ ಸಂಸದರೂ ಆಗಿದ್ದರು. ಬಳಿಕ ಬಿಜೆಪಿಯು ಗುಜರಾತ್ನ ರಾಜ್ಯದ ಆಡಳಿತವನ್ನು ವಿಜಯ್ ರೂಪಾನಿ ಕೈಗೆ ನೀಡಿತ್ತು.
ವಿದೇಶದಲ್ಲಿ ವಿಜಯ್ ರೂಪಾನಿ ಜನನ
ವಿಜಯ್ ರೂಪಾನಿ ಮ್ಯಾನ್ಮಾರ್ (ಹಿಂದಿನ ಬರ್ಮಾ) ರಾಜಧಾನಿ ರಂಗೂನ್ನಲ್ಲಿ 1956 ರ ಆಗಸ್ಟ್ 2 ರಂದು ಜನಿಸಿದ್ದಾರೆ. ವಿಜಯ್ ರೂಪಾನಿ ತಂದೆ ವ್ಯಾಪಾರದ ಹಿನ್ನೆಲೆ ವಿದೇಶಕ್ಕೆ ಹೋಗಿದ್ದರು. ಬಳಿಕ 1960 ರಲ್ಲಿ ಅಂದರೆ 4 ವರ್ಷಗಳ ನಂತರ ವಿಜಯ್ ರೂಪಾನಿ ತಂದೆ ರಾಜ್ಕೋಟ್ಗೆ ಮರಳಿದ್ದಾರೆ. ರೂಪಾನಿ ಜೈನ ಬನಿಯಾ ಸಮುದಾಯಕ್ಕೆ ಸೇರಿದವರು. ವಿಜಯ್ ರೂಪಾನಿ ಗುಜರಾತ್ಗೆ ಆಗಮಿಸಿದ ನಂತರ ತನ್ನ ಅಧ್ಯಯನವನ್ನು ಗುಜರಾತ್ನಲ್ಲೇ ಮುಂದುವರಿಸಿದ್ದಾರೆ.
Breaking: ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ರಾಜೀನಾಮೆ
ಎಬಿವಿಪಿ ಸೇರಿ ಜನಸಂಘಕ್ಕೆ ಬಂದ ರೂಪಾನಿ
ಗುಜರಾತ್ನಲ್ಲಿ ತನ್ನ ವಿದ್ಯಾರ್ಥಿ ಜೀವನದ ಸಂದರ್ಭದಲ್ಲಿ ವಿಜಯ್ ರೂಪಾನಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ (ಎಬಿವಿಪಿ)ಗೆ ಸೇರ್ಪಡೆಯಾದರು. ಎಬಿವಿಪಿ ನಾಯಕರಾಗಿ ತನ್ನ ವಿದ್ಯಾರ್ಥಿ ಜೀವನದಲ್ಲೇ ರಾಜಕೀಯಕ್ಕೆ ವಿಜಯ್ ರೂಪಾನಿ ಸೇರ್ಪಡೆಯಾಗಿದ್ದಾರೆ. 1971 ರಲ್ಲಿ, ಜನಸಂಘಕ್ಕೆ (ಈಗಿನ ಬಿಜೆಪಿ) ಸೇರ್ಪಡೆಯಾಗಿದ್ದಾರೆ. ಭಾರತೀಯ ಜನತಾ ಪಕ್ಷ ಆರಂಭವಾದ ಸಂದರ್ಭದಿಂದಲೇ ವಿಜಯ್ ರೂಪಾನಿ ಬಿಜೆಪಿಯಲ್ಲಿ ಇದ್ದಾರೆ. ಹಾಗೆಯೇ ಈಗಲೂ ತಮ್ಮ ಸಿದ್ದಾಂತದಲ್ಲಿ ಯಾವುದೇ ಬದಲಾವಣೆಯನ್ನು ವಿಜಯ್ ರೂಪಾನಿ ಮಾಡಿಕೊಂಡಿಲ್ಲ.
ತುರ್ತು ಪರಿಸ್ಥಿತಿ ಸಂದರ್ಭ ಜೈಲು ಸೇರಿದ್ದ ರೂಪಾನಿ
ಗುಜರಾತ್ ಸರ್ಕಾರದಲ್ಲಿ ಇರುವ ನಾಯಕರ ಪೈಕಿ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಜೈಲಿಗೆ ಹೋದ ಏಕೈಕ ನಾಯಕ ವಿಜಯ್ ರೂಪಾನಿ ಆಗಿದ್ದಾರೆ. 1976 ರಲ್ಲಿ ತುರ್ತುಪರಿಸ್ಥಿತಿಯ ಸಮಯದಲ್ಲಿ ವಿಜಯ್ ರೂಪಾನಿ ಭಾವನಗರ ಮತ್ತು ಭುಜ್ ಜೈಲಿನಲ್ಲಿ 11 ತಿಂಗಳ ಕಾಲ ಸೆರೆವಾಸ ಅನುಭವಿಸಿದ್ದಾರೆ. 1987 ರಲ್ಲಿ ರಾಜ್ಕೋಟ್ ಮುನ್ಸಿಪಲ್ ಕಾರ್ಪೊರೇಶನ್ ಚುನಾವಣೆಯಲ್ಲಿ ವಿಜಯ್ ರೂಪಾನಿ ಸ್ಪರ್ಧೆಗೆ ಇಳಿದಿದ್ದಾರೆ. 1996 ರಿಂದ 1997 ರವರೆಗೆ ರಾಜ್ಕೋಟ್ನ ಮೇಯರ್ ಆಗಿದ್ದರು. ಹಾಗೆಯೇ ಬಳಿಕ 1998 ರಲ್ಲಿ ಬಿಜೆಪಿಯ ಗುಜರಾತ್ ಘಟಕದ ಪ್ರಧಾನ ಕಾರ್ಯದರ್ಶಿಯಾಗಿದ್ದರು. 2006 ರಲ್ಲಿ, ಗುಜರಾತ್ ಪ್ರವಾಸೋದ್ಯಮದ ಅಧ್ಯಕ್ಷರಾಗಿ ನೇಮಕಗೊಂಡಿದ್ದರು. 2006 ರಿಂದ 2012 ರವರೆಗೆ ರಾಜ್ಯಸಭಾ ಸದಸ್ಯರಾಗಿದ್ದರು.
2016 ರಲ್ಲಿ ಸಿಎಂ ಆದ ವಿಜಯ್ ರೂಪಾನಿ
2014 ರಲ್ಲಿ ಮೊದಲ ಬಾರಿಗೆ ವಿಧಾನಸಭಾ ಚುನಾವಣೆಯಲ್ಲಿ ವಿಜಯ್ ರೂಪಾನಿ ಗೆಲುವು ಸಾಧಿಸಿದ್ದಾರೆ. ವಜುಭಾಯಿ ವಾಲಾ ರಾಜ್ಯಪಾಲರಾದ ನಂತರ, ತನ್ನ ಸ್ಥಾನವನ್ನು ರೂಪಾನಿ ತೊರೆದಿದ್ದು, ಉಪಚುನಾವಣೆಯಲ್ಲಿ ಮತ್ತೆ ಗೆಲುವು ಸಾಧಿಸಿದರು. ನವೆಂಬರ್ 2014 ರಲ್ಲಿ, ಅಂದಿನ ಮುಖ್ಯಮಂತ್ರಿ ಆನಂದಿಬೆನ್ ಪಟೇಲ್ ಮೊದಲ ಕ್ಯಾಬಿನೆಟ್ ಅನ್ನು ವಿಸ್ತರಿಸಿದಾಗ, ವಿಜಯ್ ರೂಪಾನಿಯನ್ನು ಮಂತ್ರಿಯನ್ನಾಗಿ ಮಾಡಲಾಗಿತ್ತು. ವಿಜಯ್ ರೂಪಾನಿಗೆ ಸಾರಿಗೆ, ನೀರು ಸರಬರಾಜು, ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಜವಾಬ್ದಾರಿಯನ್ನು ನೀಡಲಾಗಿತ್ತು. ಫೆಬ್ರವರಿ 2016 ರಿಂದ ಆಗಸ್ಟ್ 2016 ರವರೆಗೆ ಬಿಜೆಪಿಯ ರಾಜ್ಯಾಧ್ಯಕ್ಷರಾಗಿದ್ದರು. 5 ಆಗಸ್ಟ್ 2016 ರಂದು ವಿಜಯ್ ರೂಪಾನಿಯನ್ನು ಗುಜರಾತ್ ಮುಖ್ಯಮಂತ್ರಿಯನ್ನಾಗಿ ಮಾಡಲಾಗಿದೆ. ಈಗ ದಿಢೀರ್ ವಿಜಯ್ ರೂಪಾನಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ನಡುವೆ ಮುಂದಿನ ಮುಖ್ಯಮಂತ್ರಿ ಯಾರು ಆಗುತ್ತಾರೆ ಎಂಬುವುದು ಕಾದು ನೋಡಬೇಕಾಗಿದೆ.
(ಒನ್ ಇಂಡಿಯಾ ಸುದ್ದಿ)