ನಿವೃತ್ತ ಕೃಷಿ ಅಧಿಕಾರಿ ಡಾ.ವಿ.ಮುನಿವೆಂಕಟಪ್ಪರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ
ಕೋಲಾರ, ಅಕ್ಟೋಬರ್ 28: 2020ರ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪಟ್ಟಿ ಪ್ರಕಟವಾಗಿದ್ದು, ಈ ಬಾರಿ 65 ಮಂದಿ ಸಾಧಕರಿಗೆ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಲ್ಲಿ ಕೋಲಾರದ ಡಾ.ವಿ.ಮುನಿವೆಂಕಟಪ್ಪ ಕೂಡಾ ಒಬ್ಬರಾಗಿದ್ದಾರೆ.
ಡಾ.ವಿ.ಮುನಿವೆಂಕಟಪ್ಪ ಹುಟ್ಟಿದ್ದು, ಕೋಲಾರ ಜಿಲ್ಲೆಯ ಯಡಹಳ್ಳಿಯಲ್ಲಿ 1949ರಲ್ಲಿ. ಕೃಷಿ ವಿಜ್ಞಾನದಲ್ಲಿ ಉನ್ನತ ವಿದ್ಯಾಭ್ಯಾಸವನ್ನು ಪೂರೈಸಿ ಬಿಡಿಒ, ಕೃಷಿ ಅಧಿಕಾರಿ ಮುಂತಾದ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದಾರೆ.
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಡಾ.ಅಶೋಕ ಸೊನ್ನದ ಪರಿಚಯ
ಕರ್ನಾಟಕದಲ್ಲಿ ಚಾರಿತ್ರಿಕವಾಗಿ ಹಲವಾರು ಪಲ್ಲಟಗಳಿಗೆ ಕಾರಣವಾದ ದಲಿತ, ರೈತ ಹಾಗೂ ಕಾರ್ಮಿಕ ಹೋರಾಟಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು.
ಕನ್ನಡದಲ್ಲಿ ಶಾಕ್ಯಮುನಿಯೆಂಬ ಕಾವ್ಯನಾಮದಿಂದ ಸಾಂಸ್ಕೃತಿಕ ಚೈತನ್ಯಕ್ಕಾಗಿ ದುಡಿದಿದ್ದಾರೆ. ಸೃಜನ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡು, ಕೆಂಡದ ನಡುವೆ, ಸ್ವಾಭಿಮಾನದ ಬೀಡಿಗೆ, ಐಕ್ಯ ಗೀತೆಗಳು, ಕಾಡುಕಣಿವೆಯ ಹಕ್ಕಿ, ಈ ನೆಲದ ಹಾಡುಗಳು ಎಂಬ ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಬಾಲಕ ಅಂಬೇಡ್ಕರ್ ಎಂಬ ನಾಟಕವನ್ನು ರಚಿಸಿದ್ದಾರೆ.
ಮತಾಂತರ ಮತ್ತು ಇತರ ಲೇಖನಗಳು, ದಲಿತ ಸಾಹಿತ್ಯ ದರ್ಶನ, ಕನ್ನಡ ದಲಿತ ಸಾಹಿತ್ಯ, ದಲಿತ ಚಳವಳಿ ಮತ್ತು ಸಾಹಿತ್ಯ, ಮೀಸಲಾತಿ-ಒಂದು ಅವಲೋಕನ, ಸ್ವಾತಂತ್ರೋತ್ತರ ದಲಿತ ಸಾಹಿತ್ಯ, ಸಾಮಾಜಿಕ ಬದಲಾವಣೆ ಮೊದಲಾದುವು ಇವರ ವಿಮರ್ಶಾ ಕೃತಿಗಳಾಗಿವೆ. ದಲಿತ ಚಳವಳಿ ಚರಿತ್ರೆಯನ್ನು ತುಂಬಾ ಆಸ್ಥೆಯಿಂದ ದಾಖಲಿಸುವ ನಿಟ್ಟಿನಲ್ಲಿ ದಲಿತ ಚಳವಳಿ ಚರಿತ್ರೆ ಎಂಬ ಬೃಹತ್ ಗ್ರಂಥವನ್ನು ಸಂಪಾದಿಸಿದ್ದಾರೆ.
ಇದರೊಂದಿಗೆ ಅಂಬೇಡ್ಕರ್ ವಾದ, ವಿಶ್ವಚೇತನ ಬುದ್ಧ, ಬುದ್ಧಭಾರತ ಗ್ರಂಥಗಳನ್ನು ಸಂಪಾದಿಸಿ ಈವರೆಗಿನ ದಲಿತ ಚಳವಳಿ ಮತ್ತು ಸಂಸ್ಕೃತಿ ಚರಿತ್ರೆಯನ್ನು ದಾಖಲಿಸುವ ಮಹತ್ ಯೋಜನೆಯಲ್ಲಿ ನಿರತರಾಗಿ ೮ ಸಂಪುಟಗಳನ್ನು ಹೊರತಂದಿದ್ದಾರೆ.
ಶ್ರೀಯುತರಿಗೆ ಈಗಾಗಲೇ ನವದೆಹಲಿಯ ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ ಅಂಬೇಡ್ಕರ್ ಫೆಲೋಶಿಫ್ ಪ್ರಶಸ್ತಿ ದೊರೆತಿದೆ. ಕರ್ನಾಟಕ ಸರ್ಕಾರವು 2003ರಲ್ಲಿ ಅಂಬೇಡ್ಕರ್ ಪ್ರಶಸ್ತಿ ನೀಡಿ ಗೌರವಿಸಿದೆ. ಇದಲ್ಲದೆ ಮೈಸೂರು ಸಾಹಿತ್ಯ ರತ್ನ ಪ್ರಶಸ್ತಿ, ಮುಂತಾದ ಪ್ರಶಸ್ತಿ, ಪುರಸ್ಕಾರಗಳು ಮುನಿವೆಂಕಟಪ್ಪನವರಿಗೆ ಸಂದಿವೆ.
2018ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ವತಿಯಿಂದ "ಸಾಹಿತ್ಯಶ್ರೀ' ಪುರಸ್ಕಾರಕ್ಕೂ ಭಾಜನರಾಗಿದ್ದಾರೆ. ಸಾಹಿತ್ಯರತ್ನ, ಬಹುಜನ ಚೇತನ, ಅಂಬೇಡ್ಕರ್ ಪ್ರಶಸ್ತಿ ಮೊದಲಾದ ಪ್ರಶಸ್ತಿ, ಗೌರವ, ಸನ್ಮಾನಗಳು ಸಂದಿವೆ. ಕೃಷಿ ವಿಜ್ಞಾನಿಯಾಗಿ, ಬಿಡಿಓ ಆಗಿ ಸಮಾಜಕ್ಕೆ ಅಪಾರ ಸೇವೆ ಸಲ್ಲಿಸಿದ್ದಾರೆ.
ಸಾಂಸ್ಕೃತಿಕ ಚೈತನ್ಯಶೀಲತೆಗಾಗಿ ಮಾನವೀಯ ನೆಲೆಯಲ್ಲಿ ಸಾಹಿತ್ಯ ಸೇವೆಗೂ ಮುಂದಾದ ಮುನಿವೆಂಕಟಪ್ಪನವರು ಸರ್ಕಾರದಿಂದ ಹಾಗೂ ಪೂರ್ವಾಗ್ರಹಪೀಡಿತದಿಂದ ಹಲವು ಸಂಕಷ್ಟಗಳಿಗೆ ಒಳಗಾದರು. ಆದರೂ ಕುಗ್ಗದೆ ಛಲದಿಂದ ಮುನ್ನಡೆದು ದಲಿತ ಸಂಘರ್ಷ ಮೊದಲಾದ ಜನಪರ ಸಂಘಟನೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
ತಮ್ಮ ಈವರೆಗಿನ ಹೋರಾಟದ ಬದುಕಿನ ಕಥನವನ್ನು "ಅಂತ್ಯಜನ ಅಂತರಂಗ' ಶೀರ್ಷಿಕೆಯಲ್ಲಿ ಆತ್ಮಕಥನವಾಗಿಸಿದ್ದಾರೆ. ಈ ಆತ್ಮಕಥನವು 2002ರಲ್ಲೇ "ಸೂರ್ಯ' ಎಂಬ ವಾರಪತ್ರಿಕೆಯಲ್ಲಿ ಹಲವಾರು ಕಂತುಗಳಲ್ಲಿ ಪ್ರಕಟಗೊಂಡಿದೆ.
ಆತ್ಮಕಥನದ ಕೆಲವು ಭಾಗಗಳು ಅವರ "ಮತಾಂತರ, ಒಂದು ಅವಲೋಕನ' ಎಂಬ ಕೃತಿಯಲ್ಲೂ ಹಾಗೂ ಮಾನಸ ಮೈಸೂರು ಅವರು, ಬದುಕು-ಬರೆಹಗಳ ಕುರಿತಾಗಿ ಸಂಪಾದಿಸಿರುವ "ಬಹುಜನ ಚೇತನ'ಎಂಬ ಕೃತಿಯಲ್ಲೂ ಸಂಕಲನಗೊಂಡಿವೆ.
ಡಾ.ಕೆ.ವಿ.ರಾಜು ಅವರಿಗೆ ಪ್ರಶಸ್ತಿ
2020ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಗೊಂಡಿದ್ದು, ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಪಟ್ಟಿಯಲ್ಲಿ ಕೋಲಾರದ ಡಾ.ಕೆ.ವಿ ರಾಜು ಅವರು ಸ್ಥಾನ ಪಡೆದಿದ್ದಾರೆ.
ಕೋಲಾರದಲ್ಲಿ ಹುಟ್ಟಿ ಬೆಂಗಳೂರಿನಲ್ಲಿ ವಾಸವಾಗಿರುವ ಡಾ.ಕೆ.ವಿ ರಾಜು 2008 ರಲ್ಲಿ ಸರ್ಕಾರದ ಆರ್ಥಿಕ ಸಲಹೆಗಾರರಾಗಿದ್ದರು. ಕೋಲಾರದಲ್ಲಿ ತಮ್ಮ ಪ್ರಾಥಮಿಕ ಶಿಕ್ಷಣ ಮತ್ತು ಪ್ರೌಢ ಶಿಕ್ಷಣವನ್ನು ಮುಗಿಸಿಕೊಂಡು ಅವರು ಬೆಂಗಳೂರಿನಲ್ಲಿ ಉದ್ಯೋಗಿಗಳಾಗಿ ಅಲ್ಲಿಯೇ ನೆಲೆಸಿದ್ದಾರೆ. ಉತ್ತಮ ಆರ್ಥಿಕ ತಜ್ಞರಾಗಿದ್ದ ಅವರು ರಾಜ್ಯ ಸರ್ಕಾರದಲ್ಲಿ ಆರ್ಥಿಕ ಸಲಹೆಗಾರರಾಗಿದ್ದರು.