ಸರಳ ನಡೆ-ನುಡಿ, ಅಗಾಧ ವೈಚಾರಿಕ ಶಕ್ತಿ; ಇವರೇ ಬಿ. ಎಲ್. ಸಂತೋಷ್
ಬೆಂಗಳೂರು, ಜುಲೈ 15 : "5 ವರ್ಷದ ಆಡಳಿತದ ಬಳಿಕ ನರೇಂದ್ರ ಮೋದಿ ಮತ್ತು ಬಿಜೆಪಿ ಹೆಸರಿನಲ್ಲಿ ಮತ ಕೇಳಲು ನನಗೆ ಯಾವುದೇ ಮುಜುಗರವಿಲ್ಲ."
ಇದು ಬಿಜೆಪಿ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ, ಕನ್ನಡಿಗ ಬಿ. ಎಲ್. ಸಂತೋಷ್ 2019ರ ಚುನಾವಣಾ ಪ್ರಚಾರದ ವೇಳೆ ಬೆಂಗಳೂರಿನ ಜಯನಗರದಲ್ಲಿ ಹೇಳಿದ್ದ ಮಾತು.
ಲೋಕಸಭಾ ಚುನಾವಣೆ ಮುಗಿದಿದೆ. ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮತ್ತೊಮ್ಮೆ ಅಧಿಕಾರಕ್ಕೆ ಬಂದಿದೆ. ಪಕ್ಷ ಸಂಘಟನೆಯಲ್ಲಿ ಮಹತ್ವದ ಬದಲಾವಣೆ ಮಾಡಿರುವ ಬಿಜೆಪಿ ಬಿ. ಎಲ್. ಸಂತೋಷ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ನೇಮಿಸಿದೆ.
ಜೀನ್ಸ್, ಡಿಎನ್ಎ ನೋಡಿ ಟಿಕೆಟ್ ಕೊಡಲು ಆಗುತ್ತಾ?: ಬಿ.ಎಲ್. ಸಂತೋಷ್
1993ರಲ್ಲಿ ಪ್ರಚಾರಕರಾಗಿ ಪಕ್ಷ ಸಂಘಟನೆ ಆರಂಭಿಸಿದ್ದ ಬಿ. ಎಲ್. ಸಂತೋಷ್ ಬಿಜೆಪಿಯ ಸಂಘಟನಾ ಕಾರ್ಯದಲ್ಲಿ ಈಗ ಉನ್ನತ ಹುದ್ದೆಗೇರಿದ್ದಾರೆ. ಕನ್ನಡಿಗರೊಬ್ಬರು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದು (ಸಂಘಟನಾ) ಇದೇ ಮೊದಲು. ಪ್ರಧಾನಿ ಮೋದಿ ಇದೇ ಸ್ಥಾನವನ್ನು ಒಂದಷ್ಟು ವರ್ಷಗಳ ಕಾಲ ನಿಭಾಯಿಸಿದ್ದವರು.
ಯಡಿಯೂರಪ್ಪ ಸ್ಥಾನಕ್ಕೆ ಸಂತೋಷ್ ಬರ್ತಾರೆ: ಬೇಳೂರು ಗೋಪಾಲಕೃಷ್ಣ
ಬಿಳಿ ಪಂಚೆ, ಜುಬ್ಬಾ, ಹಣೆಗೆ ಕುಂಕುಮ, ಮುಖದಲ್ಲಿ ಸದಾ ಮಂದಹಾಸ. ಇದು ಸಂತೋಷ್ ಅವರ ಬಾಹ್ಯಚಹರೆ. ಬಿ. ಎಲ್. ಸಂತೋಷ್ ಇರುವುದು ಹಾಗೆ; ಎಲ್ಲಾ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪೂರ್ಣಾವಧಿ ಪ್ರಚಾರಕರಂತೆ ಸರಳ ಉಡುಗೆ ತೊಡುಗೆ. ಕರ್ನಾಟಕದ ಬಿಜೆಪಿ ಕಾರ್ಯಕರ್ತರಿಗೆ "ಬಿಜೆಪಿ ಎಂದಿಗೂ ವ್ಯಕ್ತಿ ಕೇಂದ್ರಿತವಲ್ಲ. ವಿಚಾರ ಕೇಂದ್ರಿತ. ರಾಷ್ಟ್ರ ಕಟ್ಟುವುದೇ ನಮ್ಮ ಗುರಿ" ಎಂದು ಹೇಳಿಕೊಟ್ಟವರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದಲ್ಲಿ ಪೂರ್ಣಾವಧಿ ಕಾರ್ಯಕರ್ತರಾದ ಬಿ. ಎಲ್. ಸಂತೋಷ್ ಇಂದು ಬಿಜೆಪಿಯ ಸಂಘಟನಾವಲಯದಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ. ಆರ್ಎಸ್ಎಸ್ ಪೂರ್ಣಾವಧಿ ಕಾರ್ಯಕರ್ತರಿಗೆ 'ಪ್ರಚಾರಕ್' ಎನ್ನುತ್ತಾರೆ. ಸಂಘನೆಯ ಕೆಲಸವನ್ನು ಬಿಟ್ಟು ಸಂಬಳ ಬರುವ ಬೇರೆ ಯಾವುದೇ ಹುದ್ದೆಯನ್ನು ಇವರು ಹೊಂದಿರುವುದಿಲ್ಲ.
2014ರ ಲೋಕಸಭಾ ಚುನಾವಣೆ ಫಲಿತಾಂಶ ಪ್ರಕಟಗೊಂಡ ಕೆಲವೇ ದಿನದಲ್ಲಿ ಬಿ. ಎಲ್. ಸಂತೋಷ್ ಅವರನ್ನು ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿಯಾಗಿ ನೇಮಿಸಲಾಗಿತ್ತು. 2019ರ ಫಲಿತಾಂಶ ಬಂದ ಕೆಲವೇ ದಿನದಲ್ಲಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ (ಸಂಘಟನಾ) ನೇಮಿಸಲಾಗಿದೆ.
ಬಿ. ಎಲ್. ಸಂತೋಷ್ ಪರಿಚಯ : ಬಿ. ಎಲ್. ಸಂತೋಷ್ ಉಡುಪಿ ಜಿಲ್ಲೆಯ ಹಿರಿಯಡ್ಕದವರು. ಚಿನ್ನದ ಪದಕದೊಂದಿಗೆ ಇಂಜಿನಿಯರಿಂಗ್ ಪದವಿ ಮುಗಿಸಿದ್ದಾರೆ. 1993ರಲ್ಲಿ ಆರ್ಎಸ್ಎಸ್ ಪ್ರಚಾರಕರಾಗಿ ಸಂಘಟನೆಯಲ್ಲಿ ತೊಡಗಿಸಿಕೊಂಡರು.
1993 ರಿಂದ 2006ರ ತನಕ ಮೈಸೂರು, ಶಿವಮೊಗ್ಗ, ಬೆಂಗಳೂರು, ಶಿವಮೊಗ್ಗ ವಿಭಾಗ್ ಪ್ರಚಾರಕ್ ಆಗಿ ಕಾರ್ಯ ನಿರ್ವಹಿಸಿದರು. 2006ರಲ್ಲಿ ಕರ್ನಾಟಕ ಬಿಜೆಪಿಯ ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ನೇಮಕಗೊಂಡರು.
2013ರ ಕರ್ನಾಟಕ ವಿಧಾನಸಭೆ ಚುನಾವಣೆ, 2014ರ ಲೋಕಸಭಾ ಚುನಾವಣೆಯಲ್ಲಿ ಸಂತೋಷ್ ಅವರ ಸಂಘಟನಾ ಚತುರತೆ ಹೇಗಿದೆ ಎಂಬುದು ಸಾಬೀತಾಯಿತು. ಆದ್ದರಿಂದ, 2014ರ ಲೋಕಸಭಾ ಚುನಾವಣೆ ಬಳಿಕ ಅವರನ್ನು ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿಯಾಗಿ ನೇಮಕ ಮಾಡಲಾಯಿತು.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದ ರಾಮ್ಲಾಲ್ ಅವರು ಆರ್ಎಸ್ಎಸ್ಗೆ ಮರಳಿದ್ದು, ಅವರ ಸ್ಥಾನಕ್ಕೆ ಬಿ. ಎಲ್. ಸಂತೋಷ್ ಅವರನ್ನು ನೇಮಕ ಮಾಡಲಾಗಿದೆ. ಇದು ಇತ್ತೀಚಿನ ದಿನಗಳಲ್ಲಿ ಆರ್ಎಸ್ಎಸ್ ಮತ್ತು ಬಿಜೆಪಿ ಸಂಘಟನೆಗಳ ಒಳಗೆ ನಡೆದ ಮಹತ್ವ ಬೆಳವಣಿಗೆ ಎಂದೇ ಗುರುತಿಸಲಾಗುತ್ತಿದೆ.