ಇದು ಶಿಕ್ಷಕಿಯೊಬ್ಬರ ಪತ್ರ, ಯಾರಲ್ಲಾದರೂ ಇದೆಯಾ ಉತ್ತರ!?
ವಾಟ್ಸಾಪ್ ನಲ್ಲಿ ಬಂದ 'ಪತ್ರ' ಇದು. ಇದನ್ನು ಬರೆದವರೊಬ್ಬರು ಶಿಕ್ಷಕಿ ಎಂದು ಮೇಲ್ನೋಟಕ್ಕೆ ಗೊತ್ತಾಗುತ್ತದೆ. ಅದರ ಸತ್ಯಾಸತ್ಯತೆ ಬಗ್ಗೆ ಗೊತ್ತಿಲ್ಲ. ಆದರೆ ಇಲ್ಲಿರುವ ವಿಚಾರ ಬಹಳ ಗಹನವಾಗಿಯೂ, ಆತಂಕಕ್ಕೆ ಕಾರಣವಾಗುವಂತೆಯೂ ಇದೆ. ಆ ಅನಾಮಿಕ ಶಿಕ್ಷಕಿ ಹೇಳಿಕೊಂಡ ಸಂಗತಿಯನ್ನೆಲ್ಲ ಯಥಾವತ್ತಾಗಿ ಇಲ್ಲಿ ಪ್ರಕಟಿಸಲಾಗಿದೆ. - ಸಂಪಾದಕ
***
ನಾನೊಬ್ಬ ಶಿಕ್ಷಕಿ. ನನ್ನ ವೃತ್ತಿ ಎಂದರೆ ನನಗೆ ತುಂಬಾ ಇಷ್ಟ. ನನ್ನ ವಿದ್ಯಾರ್ಥಿಗಳು ಎಂದರೆ ನನಗೆ ತುಂಬಾ ಪ್ರೀತಿ. ನನ್ನ ವಿದ್ಯಾರ್ಥಿಗಳಿಗೆ ನಾನೆಂದರೆ ಎಷ್ಟೋ ಗೌರವ!
ಮಗಳು ಬರೆದ ಲೇಖನ ಓದಿ ಅಪ್ಪನ ಕಣ್ಣಲ್ಲಿ ಅಶ್ರುಧಾರೆ!
ಆದರೆ, ಈಗದೆಲ್ಲಾ ಗತಕಾಲದ ನೆನಪು. ಪ್ರತಿ ದಿನ ನನಗೀಗ ಭಯ ಭಯ. ಮಕ್ಕಳೆಂದರೆ ದೇವರ ಸಮಾನ ಮುಗ್ಧರು ಎಂಬ ಭಾವನೆ ಇಲ್ಲ. ಇದು ಗತಕಾಲದಲ್ಲಿ. ಟಿವಿಗಳು, ಇಂಟರ್ನೆಟ್, ಬಿಝಿ ಲೈಫ್ ತಂದೆ-ತಾಯಿ, ಎಲ್ಲರೂ ಗೊತ್ತಿದ್ದೂ ಗೊತ್ತಿಲ್ಲದೆಯೇ ಮಕ್ಕಳ ಮನಸ್ಸನ್ನು ಕಲ್ಮಷ ಮಾಡಿದರು.
ಹರಿಯಾಣ: ಬೈದರೆಂದು ಪ್ರಿನ್ಸಿಪಾಲ್ರನ್ನೇ ಗುಂಡಿಟ್ಟು ಕೊಂದ ವಿದ್ಯಾರ್ಥಿ
ನನಗೀಗ ಶಾಲೆಗೆ ಹೋದಂತಿಲ್ಲ. ಪಾಠ ಹೇಳುತ್ತಿದ್ದರೆ ನನ್ನ ಸೊಂಟದ ಕಡೆಗೆ ಹೈಸ್ಕೂಲ್ ವಿದ್ಯಾರ್ಥಿ ನೋಟ. ಡಸ್ಟರ್ ಗಾಗಿ ಬಗ್ಗಿ ತೆಗೆದುಕೊಂಡರೆ ಯಾವುದೋ ಹತ್ತು ಕಣ್ಣುಗಳು ನನ್ನನ್ನು ತಿನ್ನುವಂತೆ ನೋಡಿದವೆಂಬ ಭಾವ. ತರಗತಿಯಲ್ಲಿ ಹುಡುಗ- ಹುಡುಗಿಯರು ಯಾವುದೋ ಲೋಕದಲ್ಲಿ ಇರುತ್ತಾರೆ.
ಬಾತ್ ರೂಮ್ ನಲ್ಲಿ ಚುಂಬಿಸಿಕೊಂಡರು
ಆರನೇ ತರಗತಿಯಿಂದಲೇ ಜೋಡಿಗಳು. ಮೊನ್ನೆ ಬಾತ್ರೂಮ್ನಲ್ಲಿ ಇಬ್ಬರು ಮಕ್ಕಳು ಚುಂಬಿಸಿಕೊಂಡರು ಎಂದು ನಮ್ಮ ಸೋಷಲ್ ಟೀಚರ್ ಹೇಳಿದರೆ ನಮಗ್ಯಾಕೆ ಗೊತ್ತಾದರೆ ಗಲಾಟೆಯಾಗುತ್ತದೆ ಎಂಬ ಪ್ರಿನ್ಸಿಪಾಲರ ಹಾರಿಕೆ ಉತ್ತರ. 15 ವರ್ಷಗಳ ಅನುಭವ. ನನ್ನ ಪಾಠವನ್ನು ಮಕ್ಕಳು ತುಂಬ ಶ್ರದ್ಧೆಯಿಂದ ಕೇಳುತ್ತಿದ್ದರು.
ಈಗ ಪರಿಸ್ಥಿತಿ ಬೇರೆ. ಪಾಠ ಎಷ್ಟು ಇಂಟರೆಸ್ಟಿಂಗ್ ಆಗಿ ಹೇಳಿದರೂ ಕೇಳದ ಮಕ್ಕಳು. ನಡುರಾತ್ರಿ ತನಕ ಮೊಬೈಲ್ ಫೋನ್ನಲ್ಲಿ ಗೇಮ್ಸ್ ಆಡಿದವರು, ನೀಲಿ ಚಿತ್ರಗಳನ್ನು ನೋಡಿದವರು. ಚಾಟಿಂಗ್ ಮಾಡಿದವರು. ಕ್ಲಾಸ್ ರೂಮಿನಲ್ಲಿ ಕುಳಿತುಕೊಂಡರೆ ಯಾವುದೋ ಲೋಕದಲ್ಲಿರುವ ಅಧಿಕ ಮಂದಿ ಮಕ್ಕಳು.
ಪ್ರಿನ್ಸಿಪಾಲರು ತಲೆ ತಗ್ಗಿಸಿರುತ್ತಾರೆ
ಪರೀಕ್ಷೆ ಬಂದರೆ ತಂದೆತಾಯಿಗೆ ಅಂಕಗಳು ಬೇಕು. ಇಲ್ಲದಿದ್ದರೆ ಪೋಷಕರ ಮೀಟಿಂಗ್ ನಲ್ಲಿ ಮಕ್ಕಳ ಮುಂದೆಯೇ ನಾನಾ ಬೈಗುಳ. ಹುಡುಗ ಓದಿನ ಮೇಲೆ ಶ್ರದ್ಧೆ ತೋರುತ್ತಿಲ್ಲ ಎಂದರೆ ನಿನ್ನ ಕೈಲಿ ಆಗಲ್ಲ ಎಂದು ಎಲ್ಲ ತಂದೆ- ತಾಯಿ ಎದುರಿಗೆ ಅವಹೇಳನ. ಸಪೋರ್ಟ್ ಗಾಗಿ ಪ್ರಿನ್ಸಿಪಾಲ್ ಕಡೆಗೆ ನೋಡಿದರೆ ತಲೆಬಗ್ಗಿಸಿಕೊಂಡಿರುವ ಅವರು.
ಟಿವಿಯಲ್ಲಿ ಬ್ರೇಕಿಂಗ್ ನ್ಯೂಸ್
ಹೋಮ್ ವರ್ಕ್ ಕೊಡಬೇಡ. ಹೋಗಲಿ ಪಾಠ ಓದಿಕೊಂಡು ಬಾ ಎಂದರೆ ಕಿವಿಗೆ ಹಾಕಿಕೊಳ್ಳದ ಮಕ್ಕಳು. ಕ್ಲಾಸ್ನಲ್ಲಿ ಇದೇನು ಎಂದರೆ, ನೀನು ಬೈಯ್ಯುತ್ತಿದ್ದೀಯಾ ಎಂದು ನಮ್ಮ ತಂದೆಗೆ ಹೇಳುತ್ತೇನೆ, ಅವರು ಮಾಧ್ಯಮಗಳಿಗೆ ಹೇಳುತ್ತಾರೆ ಎಂದು ಮಕ್ಕಳ ಬೆದರಿಕೆ. ಮೊನ್ನೆ ಪಕ್ಕದ ಶಾಲೆಯಲ್ಲಿ ಇದೇ ನಡೆಯಿತು. ಮಕ್ಕಳ ವರ್ತನೆ ಮಿತಿ ಮೀರಿದರೆ ಟೀಚರ್ ಕೋಪಗೊಂಡು ಸ್ವಲ್ಪ ಹೊತ್ತು ನಿಂತುಕೊಳ್ಳಲು ಹೇಳಿದರಂತೆ.
ಮರುದಿನ ಟಿವಿಯಲ್ಲಿ ಬ್ರೇಕಿಂಗ್ ನ್ಯೂಸ್. ಟೀಚರನ್ನು ರಾಕ್ಷಸನಂತೆ ಚಿತ್ರೀಕರಣ. ಒಂದು ದಿನ ಜೈಲಿನಲ್ಲಿ ಕಳೆದ ಆ ಟೀಚರ್, ಎರಡು ತಿಂಗಳ ಸಂಬಳ ಖರ್ಚು ಮಾಡಿದ ಬಳಿಕ ಜಾಮೀನು. ಇನ್ನೊಂದು ಕಡೆ ಪ್ರಿನ್ಸಿಪಾಲರನ್ನು ಶಾಲೆಯಲ್ಲೇ ಹತ್ಯೆ ಮಾಡಿದ ಸುದ್ದಿ. ನನ್ನ ಭವಿಷ್ಯ ತಿಳಿದುಕೊಂಡರೆ ನನಗೆ ಭಯ.
ನಮಗ್ಯಾಕೆ ಮುಳ್ಳಿನ ಕಿರೀಟ
ನನಗೂ ಒಂದು ಕುಟುಂಬ ಇದೆ. ಮನೆಯಲ್ಲಿ ಗಂಡ- ಮಕ್ಕಳಿದ್ದಾರೆ. ಮನೆಯಿಂದ ಶಾಲೆಗೆ ಬಂದಾಗ ಮನೆಗೆ ಮತ್ತೆ ಕ್ಷೇಮವಾಗಿ ಹೋಗುತ್ತೇನೆ ಎಂಬ ಗ್ಯಾರಂಟಿ ಇಲ್ಲ. ಜೈಲಿಗೇ ಹೋಗುತ್ತೇನೋ, ನನ್ನ ಶವವೇ ತಿರುಗಿ ಹೋಗುತ್ತೋ? ಬಾಲಲೋಕವನ್ನು ಎಲ್ಲರೂ ಸೇರಿಕೊಂಡು ಕಲ್ಮಷ ಮಾಡಿದರು. ಅವರನ್ನು ದಾರಿಗೆ ತರಬೇಕಾದದ್ದು ಟೀಚರ್ಗಳೇ ಅಂತೆ.
ನಮಗ್ಯಾಕೆ ಮುಳ್ಳಿನ ಕಿರೀಟ? ಇಲ್ಲ, ಇಂದು ಈ ವೃತ್ತಿಗೆ ಗೌರವ ಇಲ್ಲ. ಇಂದು ಈ ಪ್ರವೃತ್ತಿಗೆ ಮನ್ನಣೆ. ಬದುಕಿದ್ದರೆ ಏನಾದರೂ ಮಾಡಬಹುದು. ಬದುಕೇ ಇಲ್ಲದಿದ್ದರೆ ಟೀಚರ್ ಮಾತ್ರ ಆಗಬೇಡ ಎನ್ನುತ್ತಿದ್ದೇನೆ.