2019 ರಲ್ಲಿ ರಾಯ್ಬರೇಲಿಯಲ್ಲಿ ಧೂಳೆಬ್ಬಿಸಲಿದ್ದಾರಾ ಪ್ರಿಯಾಂಕಾ ವಾದ್ರಾ?
ನವದೆಹಲಿ, ಡಿಸೆಂಬರ್ 29: 2019ರ ಲೋಕಸಭಾ ಚುನಾವಣೆ ಹಲವು ಕಾರಣಗಳಿಗೆ ಮಹತ್ವದ್ದೆನ್ನಿಸಲಿದೆ. 2014 ರ ಚುನಾವಣೆಯಲ್ಲಿ ಆಗಿನ ಆಡಳಿತಾರೂಢ ಕಾಂಗ್ರೆಸ್ ವಿರುದ್ಧ ಆಡಳಿತವಿರೋಧಿ ಅಲೆಯಿತ್ತು. ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ವಿರುದ್ಧ ಸ್ಪರ್ಧಿಸಲು ರಾಹುಲ್ ಗಾಂಧಿ ಸಮರ್ಥ ಅಭ್ಯರ್ಥಿಯಲ್ಲ ಎಂಬ ಭಾವನೆಯಿತ್ತು. ಅದಕ್ಕೆ ಪೂರಕವೆಂಬಂತೆ ಹಲವು ಬಾಲಿಶ ವರ್ತನೆಯನ್ನು ರಾಹುಲ್ ತೋರಿದ್ದರು.
ಆದರೆ ಈಗ ಕಾಲ ಬದಲಾಗಿದೆ. ಗುಜರಾತ್ ಚುನಾವಣೆ ಮತ್ತು ಮಧ್ಯಪ್ರದೇಶ, ಛತ್ತೀಸ್ ಗಢ, ರಾಜಸ್ಥಾನ ರಾಜ್ಯಗಳ ಚುನಾವಣೆಯಲ್ಲಿ ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ ಪಕ್ಷ ಅಮೋಘ ಪ್ರದರ್ಶನ ತೋರಿದ್ದಲ್ಲದೆ, ಮಧ್ಯಪ್ರದೇಶ, ಛತ್ತೀಸ್ ಗಢ, ರಾಜಸ್ಥಾನಗಳಲ್ಲಿ ಸರ್ಕಾರವನ್ನೂ ರಚಿಸಿದೆ.
'ಮುಂದಿನ ಚುನಾವಣೆಯಲ್ಲಿ ರಾಯ್ ಬರೇಲಿಯಿಂದ ಸೋನಿಯಾ ಸ್ಪರ್ಧೆ'
ಆದ್ದರಿಂದ ಈ ಬಾರಿಯ ಲೋಕಸಭಾ ಚುನಾವಣೆ ಎನ್ ಡಿ ಎ ಮೈತ್ರಿಕೂಟಕ್ಕೆ ಸುಲಭ ತುತ್ತಲ್ಲ. ಈ ಬಾರಿ ಕಾಂಗ್ರೆಸ್ಸಿಗೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಸಹ ಬಲನೀಡಲಿದ್ದಾರೆ ಎಂಬ ವದಂತಿ ಕೇಳಿಬರುತ್ತಿದ್ದು, ಮತ್ತಷ್ಟು ಕುತೂಹಲ ಕೆರಳಿಸಿದೆ.
ರಾರ್ಬರೇಲಿಯಿಂದ ಪ್ರಿಯಾಂಕಾ ಗಾಂಧಿ
ಉತ್ತರ ಪ್ರದೇಶದಲ್ಲಿ ಸೋನಿಯಾ ಗಾಂಧಿ ಸ್ಪರ್ಧಿಸುತ್ತಿದ್ದ ರಾಯ್ಬರೇಲಿ ಕ್ಷೇತ್ರದಲ್ಲಿ ಈ ಬಾರಿ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಬಹುದು ಎಂದು ಕೆಲವು ಮೂಲಗಳು ತಿಳಿಸಿವೆ. ಅನಾರೋಗ್ಯದಿಂದ ಬಳಲುತ್ತಿರುವ ಸೋನಿಯಾ ಗಾಂಧಿ ಚುನಾವಣಾ ರಾಜಕೀಯದಿಂದ ಹೊರಗುಳಿಯುವ ಸಾಧ್ಯತೆ ಇರುವುದರಿಂದ ಅವರ ಕ್ಷೇತ್ರವನ್ನು ಪ್ರಿಯಾಂಕಾ ಪ್ರತಿನಿಧಿಸುವ ಸಾಧ್ಯತೆ ಇದೆ.
ಜನಮನಸೆಳೆಯಬಲ್ಲ ಪ್ರಿಯಾಂಕಾ
ಪ್ರಿಯಾಂಕಾ ಗಾಂಧಿ ವಾದ್ರಾ ಅವರು 2014 ರ ಚುನಾವಣೆ ಸಮಯದಲ್ಲಿ ಮಾಡಿದ ಭಾಷಣಗಳಿಂದ ಸಾಕಷ್ಟು ಜನರನ್ನು ಸೆಳೆದಿದ್ದರು. ಕಾಂಗ್ರೆಸ್ಸಿನ ಭವಿಷ್ಯದ ನಾಯಕಿ ಎಂದೇ ಕರೆಸಿಕೊಂಡಿದ್ದರು. ಅಜ್ಜಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರಂತೆಯೇ ಕಾಣುವ, ಅವರಂತೆಯೇ ಮಾತನಾಡುವ ಪ್ರಿಯಾಂಕಾ ಅವರಿಗೆ ಸಹೋದರ ರಾಹುಲ್ ಗಾಂಧಿ ಅವರ ಮೇಲೆ ಸಾಕಷ್ಟು ಪ್ರೀತಿ. ಅವರನ್ನು ಬೆಳೆಸಿ, ಕಾಂಗ್ರೆಸ್ಸನ್ನು ಮತ್ತೆ ಅಧಿಕಾರಕ್ಕೆ ತರುವ ಸಲುವಾಗಿ ಈ ಬಾರಿ ಅವರೇ ಅಖಾಡಕ್ಕಿಳಿಯುವುದು ಬಹುತೇಕ ಖಚಿತವಾಗಿದೆ.
ನಮ್ಮ ತಂದೆ ಕೊಂದವರನ್ನು ನಾನು, ಪ್ರಿಯಾಂಕಾ ಕ್ಷಮಿಸಿದ್ದೇವೆ
ರಾಹುಲ್ ಹವಾ ಜೋರು?
2014 ರಲ್ಲಿದ್ದ ಹಾಗೆ ರಾಹುಲ್ ಗಾಂಧಿ ಈಗಿಲ್ಲ. ಸರಳತೆಯಿಂದಾಗಿ ಸಾಕಷ್ಟು ಭಿಮಾನಿಗಳನ್ನು ಗಳಿಸಿದ್ದಾರೆ. ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾದ ಮೇಲೆ ಆ ಸ್ಥಾನಕ್ಕೆ ಅಗತ್ಯವಿರುವ ಗಾಂಭೀರ್ಯ, ಚಾಕಚಕ್ಯತೆಯನ್ನು ಬೆಳೆಸಿಕೊಂಡಿದ್ದಾರೆ. ಮೂರು ರಾಜ್ಯಗಳಲ್ಲಿ ಜಯಗಳಿಸಿದ್ದು ರಾಹುಲ್ ವರ್ಚಸ್ಸನ್ನು ಹೆಚ್ಚಿಸಿದೆ. ಆದ್ದರಿಂದ ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಹವಾ ಜೋರಾದರೆ ಅಚ್ಚರಿಯಿಲ್ಲ.
ಎನ್ ಡಿಎಗೆ ತಾಪತ್ರಯ ಗ್ಯಾರಂಟಿ
ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ರಾಹುಲ್ ಗಾಂಧಿಯರ ಪ್ರಚಾರ, ಜೊತೆಗೆ ಮಹಾಘಟಬಂಧನದ ಮೂಲಕ ಪ್ರಾದೇಶಿಕ ಪಕ್ಷಗಳು ಮೋದಿ ವಿರುದ್ಧ ಸಮರಕ್ಕೆ ನಿಂತಿದ್ದೇ ಆದರೆ ಎನ್ ಡಿಎ ಗೆ ಈ ಚುನಾವಣೆ ದೊಡ್ಡ ತಾಪತ್ರಯವಾಗುವುದಂತೂ ನಿಶ್ಚಿತ.