ಮೋಡವಿದ್ದಾಗ ರೇಡಾರ್ ಪರಿಣಾಮಕಾರಿಯಲ್ಲವೇ? ತಾಂತ್ರಿಕ ವಾಸ್ತವ ಇಲ್ಲಿದೆ
ನವದೆಹಲಿ, ಮೇ 14: ಮೋಡದ ವಾತಾವರಣದಲ್ಲಿ ಪಾಕಿಸ್ತಾನದ ರೇಡಾರ್ಗಳು ನಮ್ಮ ವಿಮಾನಗಳನ್ನು ಪತ್ತೆ ಹಚ್ಚಲಾರವು. ಆದ್ದರಿಂದ ಮೋಡ ಇದ್ದ ದಿನವೇ ದಾಳಿ ನಡೆಸಿ ಎಂದು ನಾನೇ ವಾಯುಸೇನೆಗೆ ಸೂಚಿಸಿದ್ದೆ ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಟೆಲಿವಿಷನ್ ಸಂದರ್ಶನವೊಂದರಲ್ಲಿ ನೀಡಿದ ಹೇಳಿಕೆ ವ್ಯಾಪಕ ಟೀಕೆಗೆ ಗುರಿಯಾಗಿತ್ತು. ಆ ಹೇಳಿಕೆಯನ್ನು ಅಣಕಿಸಿ ಅನೇಕ ಜೋಕ್ಗಳು, ಮೀಮ್ಗಳು ಸೃಷ್ಟಿಯಾಗಿದ್ದವು.
ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ
ಮೋಡ ಕವಿದ ವಾತಾವಣರದಲ್ಲಿ ರೇಡಾರ್ಗಳು ವಿಮಾನವನ್ನು ಗುರುತಿಸಲಾರವೇ? ಸೇನೆಗೆ ಈ ರೀತಿ ಸೂಚನೆ ನೀಡಲು ಮೋದಿ ಅವರು ವಿಜ್ಞಾನಿಗಳಿಗಿಂತಲೂ ಬುದ್ಧಿವಂತರೇ ಎಂಬ ಪ್ರಶ್ನೆಗಳನ್ನು ಕೇಳಲಾಗಿತ್ತು.
ಹಾಗಾದರೆ ದಟ್ಟ ಮೋಡ ಕವಿದಿದ್ದಾಗ ರೇಡಾರ್ಗಳು ವಿಮಾನಗಳ ಸಂಚಾರವನ್ನು ಗುರುತಿಸಬಲ್ಲವೇ? ಅಥವಾ ಅವುಗಳನ್ನು ಮರೆಮಾಚಿ ಸಾಗಲು ವಿಮಾನಗಳಿಗೆ ಸಾಧ್ಯವೇ? ಎಂಬ ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ.
ಒನ್ಇಂಡಿಯಾ exclusive : ವಾಯುಸೇನೆ ಬಳಕೆ ಹಿಂದಿನ ಕಾರಣ ಏನು?
ರೇಡಾರ್ ತಂತ್ರಜ್ಞಾನ ಕಾರ್ಯನಿರ್ವಹಿಸುವ ಬಗೆ ಮತ್ತು ಅದರ ಮಿತಿಗಳನ್ನು ಗಮನಿಸಿದರೆ ಮೋದಿ ಅವರು ಸಲಹೆ ನೀಡಿದ್ದಾಗಿ ಕೊಟ್ಟಿರುವ ಹೇಳಿಕೆ ತಾಂತ್ರಿಕವಾಗಿ ಸರಿಯಾಗಿಲ್ಲ ಎನ್ನುತ್ತಾರೆ ಪರಿಣತರು.
ರೇಡಾರ್ಗಳು ದಟ್ಟ ಮೋಡದ ನಡುವೆಯೂ ವಸ್ತುಗಳನ್ನು ಪತ್ತೆಹಚ್ಚಬಲ್ಲವು. ಮಳೆ ಅಥವಾ ಮೋಡದ ವಾತಾವರಣದಂತಹ ಸಂದರ್ಭಗಳಲ್ಲಿ ಅವುಗಳ ನಿಖರತೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿರುತ್ತದೆಯಷ್ಟೇ.
ರೇಡಾರ್ ತಂತ್ರಜ್ಞಾನದ ಕುರಿತ ತಜ್ಞರ ಅಭಿಪ್ರಾಯದ ಪ್ರಕಾರ, ಮಳೆ ಮತ್ತು ಇತರೆ ಅಡ್ಡಿಗಳು ವಸ್ತುಗಳ ಅಸ್ತಿತ್ವವನ್ನು ಪ್ರತಿಫಲಿಸುವ ಸಂಕೇತಗಳ ಸರಾಗರ ರವಾನೆಗೆ ತೊಡಕು ಉಂಟುಮಾಡುತ್ತವೆ.
ಭಾರತೀಯ ಏರ್ಸ್ಟ್ರೈಕ್ಗೆ ಪಾಕಿಸ್ತಾನ ಹೇಳಿದ್ದೇನು?
ರೇಡಾರ್ ವ್ಯವಸ್ಥೆಯು ಆವರ್ತಕಗಳ ವ್ಯಾಪಕವಾದ ಹರಡುವಿಕೆಯನ್ನು ಆಧರಿಸಿ ಕಾರ್ಯನಿರ್ವಹಿಸುತ್ತವೆ. ಮಳೆ ಅಥವಾ ಮೋಡದಂತಹ ವಾತಾವರಣದ ಸ್ಥಿತಿಯಲ್ಲಿ ರೇಡಾರ್ ವ್ಯವಸ್ಥೆಯ ಫ್ರೀಕ್ವೆನ್ಸಿ ಅಧಿಕವಿದ್ದಷ್ಟೂ ಹೆಚ್ಚು ತೊಂದರೆಗೆ ಒಳಗಾಗುತ್ತದೆ. ಆದರೆ, ಟ್ರಾನ್ಸ್ಮಿಟೆಡ್ ಫ್ರೀಕ್ವೆನ್ಸಿ ಹೆಚ್ಚಿದ್ದಷ್ಟೂ ಅದು ಅಧಿಕ ನಿಖರತೆ ಹೊಂದಿರುತ್ತದೆ.
ಶುಭ್ರವಾಗಿದ್ದಾಗ ಸಾಮರ್ಥ್ಯ ಹೆಚ್ಚು
'ಎಸ್' ಬ್ಯಾಂಡ್ ನಲ್ಲಿ ಕಾರ್ಯನಿರ್ವಹಿಸುವ ವಾಯು ವಿಚಕ್ಷಣಾ ರೇಡಾರ್ಗಳು ಪ್ರತಿಕೂಲ ಹವಾಮಾನ ಪರಿಸ್ಥಿತಿಯಲ್ಲಿ ನಿಖರತೆ ಕಾಪಾಡಿಕೊಳ್ಳಲು ಪ್ರಯತ್ನಿಸುತ್ತವೆ. ಆದರೆ, ಈ ಫ್ರೀಕ್ವೆನ್ಸಿಯಲ್ಲಿಯೂ ಭಾರಿ ಮಳೆ, ಮಂಜು ಮತ್ತು ದಟ್ಟ ಮೋಡದ ವಾತಾವರಣದಲ್ಲಿ ಅದರ ಸಾಮರ್ಥ್ಯ ಕ್ಷೀಣಿಸುತ್ತದೆ. ಹೀಗಿದ್ದರೂ ರೇಡಾರ್ಗಳು ಮೋಡಗಳ ನಡುವಿನಿಂದ ವಸ್ತುಗಳನ್ನು ಪತ್ತೆಹಚ್ಚುವಷ್ಟು ಸಮರ್ಥವಾಗಿರುತ್ತವೆ. ಆಕಾಶ ಶುಭ್ರವಾಗಿದ್ದಾಗ ಅವುಗಳ ಸಾಮರ್ಥ್ಯ ಅತ್ಯುತ್ತಮವಾಗಿರುತ್ತವೆ.
ವೈಮಾನಿಕ ದಾಳಿಯಿಂದ ಸರ್ಜಿಕಲ್ ಸ್ಟ್ರೈಕ್ ಗಿಂತ ದೊಡ್ಡ ಮಟ್ಟದ ಹಾನಿ
ಸಂಕೇತಗಳನ್ನು ಬಂದ್ ಮಾಡಿರಬಹುದು
ನಾಗರಿಕ ವಿಮಾನಯಾನಗಳ ವಾಯು ವಿಚಕ್ಷಣೆಯಲ್ಲಿ, ಮೋಡಗಳಿಂದ ಉಂಟಾಗುವ ಅಡ್ಡಿಯನ್ನು ನಿವಾರಿಸಲು ದ್ವಿತೀಯ ಕಣ್ಗಾವಲು ರೇಡಾರ್ ಅನ್ನು ಬಳಸಲಾಗುತ್ತದೆ. ವಿಮಾನದಲ್ಲಿರುವ ಟ್ರಾನ್ಸ್ಪಾಂಡರ್ಗಳು ಕಳುಹಿಸುವ ಸಂಕೇತಗಳನ್ನು ಸೆಕೆಂಡರಿ ರೇಡಾರ್ಗಳು ಬಳಸಿಕೊಳ್ಳುತ್ತವೆ. ಆದರೆ, ಬಾಲಕೋಟ್ ದಾಳಿಯ ಸಂದರ್ಭದಲ್ಲಿ ಈ ಅವಕಾಶ ಪಾಕಿಸ್ತಾನದ ರೇಡಾರ್ಗಳಿಗೆ ಸಿಕ್ಕಿರುವ ಸಾಧ್ಯತೆ ಕಡಿಮೆ. ಏಕೆಂದರೆ, ಬೇರೆ ದೇಶದ ವಾಯುನೆಲೆಯಲ್ಲಿ ಪ್ರವೇಶಿಸಿದಾಗ ಟ್ರಾನ್ಸ್ಪಾಂಡರ್ಗಳನ್ನು ಆಫ್ ಮಾಡಬಹುದು. ಅದೇ ರೀತಿ ಭಾರತೀಯ ವಾಯುಪಡೆ ವಿಮಾನಗಳು ರೇಡಾರ್ಗಳಿಗೆ ಸಂಕೇತ ನೀಡದಂತೆ ಟ್ರಾನ್ಸ್ಪಾಂಡರ್ಗಳನ್ನು ಸ್ವಿಚ್ ಆಫ್ ಮಾಡಿಕೊಂಡಿರಬಹುದು.
ಮಿರಾಜ್ಗೆ ಮೋಡದ ನೆರವು
ಮೋಡ ಮುಸುಕಿದ ವಾತಾವರಣದಿಂದ ಇಲ್ಲಿ ಪಾಕಿಸ್ತಾನದ ಪ್ರಾಥಮಿಕ ರೇಡಾರ್ಗಳು ಪರಿಣಾಮಕಾರಿಯಾಗಿ ಕೆಲಸ ಮಾಡದೆಯೇ ಇರಬಹುದು. ಪಾಕಿಸ್ತಾನಿ ವಾಯುನೆಲೆಯಲ್ಲಿ ಭಾರತದ ವಿಮಾನಗಳು ಪತ್ತೆಯಾಗದಂತೆ ಮೋಡದ ವಾತಾವರಣ ನೆರವಾಗಿದ್ದರಿಂದ ಐಎಎಫ್ನ ಮಿರಾಜ್ 2000 ವಿಮಾನಗಳು ಸುಲಭವಾಗಿ ಪಾಕಿಸ್ತಾನದ ವಾಯು ಪಡೆಯನ್ನು ವಂಚಿಸಿರಬಹುದು.
ಪಾಕ್ ವಾಯುಪಡೆ ವಿಫಲ
ಬಾಲಕೋಟ್ ದಾಳಿಯ ಬಳಿಕ ಪಾಕಿಸ್ತಾನದ ರಕ್ಷಣಾ ಸಚಿವ ಪರ್ವೇಜ್ ಖಟ್ಟಾಕ್ ಇದಕ್ಕೆ ಪೂರಕ ಹೇಳಿಕೆ ನೀಡಿದ್ದರು. ಭಾರತದ ದಾಳಿಗೆ ಪಾಕಿಸ್ತಾನ ಪ್ರತಿಕ್ರಿಯೆ ನೀಡಲು ಸಾಧ್ಯವಾಗದಷ್ಟು ತೀರಾ ಕಗ್ಗತ್ತಲಿತ್ತು ಎಂದು ಅವರು ಹೇಳಿದ್ದರು. ಇದು ಪಾಕಿಸ್ತಾನದ ರೇಡಾರ್ಗಳು ಮೋಡದ ದಟ್ಟಣೆಯಲ್ಲಿ ವಸ್ತುವನ್ನು ಗುರುತಿಸಿದರೂ ಅದು ಭಾರತೀಯ ವಿಮಾನ ಎಂದು ಗ್ರಹಿಸುವಲ್ಲಿ ಪಾಕಿಸ್ತಾನದ ವಾಯುಪಡೆ ಎಡವಿರುವ ಸಾಧ್ಯತೆಗಳಿವೆ.