ರಾಜಸ್ಥಾನದಲ್ಲಿ ಮಿಂಚುತ್ತಿರುವ ಕರ್ನಾಟಕದ ಐಪಿಎಸ್ ಅಧಿಕಾರಿಗೆ ರಾಷ್ಟ್ರಪತಿ ಪದಕ
ಬೆಂಗಳೂರು, ಅ. 17: ರಾಜಸ್ಥಾನದಲ್ಲಿ ಭ್ರಷ್ಟರ ಪಾಲಿಗೆ ಸಿಂಹಸ್ವಪ್ನವಾಗಿರುವ ಕರ್ನಾಟಕ ಮೂಲದ ಹಿರಿಯ ಐಪಿಎಸ್ ಅಧಿಕಾರಿ ಎಂ.ಎನ್. ದಿನೇಶ್ ಅವರಿಗೆ 75 ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ರಾಷ್ಟ್ರಪತಿ ಪೊಲೀಸ್ ಪದಕ ನೀಡಿ ಗೌರವಿಸಲಾಗಿದೆ.
ಸೊಹ್ರಬುದ್ದೀನ್ ಎನ್ ಕೌಂಟರ್ ಪ್ರಕರಣದಲ್ಲಿ ಏಳು ವರ್ಷ ಜೈಲು ಶಿಕ್ಷೆ ಅನುಭವಿಸಿದ್ದ ಎಂ.ಎನ್. ದಿನೇಶ್ ಇದೀಗ ರಾಜಸ್ಥಾನದಲ್ಲಿ ಭ್ರಷ್ಟರನ್ನು ಜೈಲಿಗೆ ಕಳುಹಿಸುವ ಮೂಲಕ ರಾಜಸ್ಥಾನದ ಮೂಲೆ ಮೂಲೆಯಲ್ಲೂ ಸದ್ದು ಮಾಡುತ್ತಿದ್ದಾರೆ.
ರಾಷ್ಟ್ರಪತಿ ಪದಕ ಗೌರವ ಸ್ವೀಕರಿಸಿದ ಹಿನ್ನೆಲೆಯಲ್ಲಿ ಒನ್ಇಂಡಿಯಾ ಕನ್ನಡಕ್ಕೆ ಪ್ರತಿಕ್ರಿಯೆ ನೀಡಿದ ಎಂ.ಎನ್. ದಿನೇಶ್ ಅವರು, ನನ್ನ ಸೇವೆ ಮೆಚ್ಚಿ ರಾಷ್ಟ್ರಪತಿ ಪದಕ ಗೌರವ ನೀಡಿರುವುದು ಅಭಿನಂದನಾರ್ಹ. ಈ ಮೊದಲೇ ನನಗೆ ಈ ಗೌರವ ಸಿಕ್ಕಬೇಕಿತ್ತು. ಸೊಹ್ರಾಬುದ್ದೀನ್ ಎನ್ ಕೌಂಟರ್ ಪ್ರಕರಣ ಬಾಕಿ ಇದ್ದಿದ್ದರಿಂದ ಸಿಕ್ಕಿರಲಿಲ್ಲ. ಇದೀಗ ಆ ಗೌರವ ಸಿಕ್ಕಿರುವುದು ಸಂತಸ ಉಂಟು ಮಾಡಿದೆ ಎಂದು ತಿಳಿಸಿದ್ದಾರೆ.
ಎಂ.ಎನ್ ದಿನೇಶ್ ಸದ್ಯ ರಾಜಸ್ಥಾನ ಭ್ರಷ್ಟಾಚಾರ ನಿಗ್ರಹ ದಳದ ಎಡಿಜಿಪಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈವರೆಗೂ ಸುಮಾರು ಐದು ನೂರಕ್ಕೂ ಹೆಚ್ಚು ಭ್ರಷ್ಟಚಾರ ಪ್ರಕರಣ ದಾಖಲಿಸುವ ಜತೆಗೆ ಉನ್ನತ ಅಧಿಕಾರಿಗಳನ್ನು ಲಂಚ ಪ್ರಕರಣದಲ್ಲಿ ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಸದ್ಯದ ಮಟ್ಟಿಗೆ ಭ್ರಷ್ಟರ ನಿದ್ದೆ ಗೆಡೆಸುತ್ತಿರುವ ಎಂ ಎನ್. ದಿನೇಶ್ ಕಾರ್ಯ ಶೈಲಿ ರಾಜಸ್ಥಾನದಲ್ಲಿ ದೊಡ್ಡ ಸದ್ದು ಮಾಡುತ್ತಿದೆ. ಅವರದ್ದೇ ಬಹುದೊಡ್ಡ ಅಭಿಮಾನಿ ಬಳಗವೂ ಹುಟ್ಟಿಕೊಂಡಿದೆ.
ಮೂಲತಃ ಮುಳುಬಾಗಿಲುನವರಾದ ಎಂ.ಎನ್. ದಿನೇಶ್ ಖಡಕ್ ಐಪಿಎಸ್ ಅಧಿಕಾರಿ ಅಂತಲೇ ಖ್ಯಾತಿ ಪಡೆದಿದ್ದಾರೆ. ಸೊಹ್ರಾಬುದ್ದೀನ್ ಎನ್ ಕೌಂಟರ್ ಪ್ರಕರಣದಲ್ಲಿ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿದ್ದ ದಿನೇಶ್ ಏಳು ವರ್ಷ ಜೈಲು ಶಿಕ್ಷೆ ಅನುಭವಿಸಿದ್ದರು. ಪ್ರಕರಣ ಖುಲಾಸೆ ಬಳಿಕ ಇದೀಗ ರಾಜಸ್ಥಾನ ಭ್ರಷ್ಟಾಚಾರ ನಿಗ್ರಹ ದಳದ ಎಡಿಜಿಪಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಭ್ರಷ್ಟರ ಪಾಲಿಗೆ ಸಿಂಹಸ್ವಪ್ನವಾಗಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಸೊಹ್ರಬುದ್ದೀನ್ ಎನ್ಕೌಂಟರ್ನಲ್ಲಿ ಜೈಲಿಗೆ ಹೋದ ದಿನಗಳ ಬಗ್ಗೆ ಮೆಲಕು ಹಾಕಿದ ಅವರು, ಏಳು ವರ್ಷ ಜೈಲಿನಲ್ಲಿ ನಾನು ಬೇಸರದಿಂದ ಕಳೆಯಲಿಲ್ಲ. ಜತೆಗೆ ಜೀವನದ ಪ್ರತಿ ಕ್ಷಣವನ್ನೂ ಖುಷಿಯಿಂದ ಕಳೆದಿದ್ದೇನೆ. ಸಮಸ್ಯೆಯನ್ನು ಅನುಭವಿಸದೇ ಎದುರಿಸಿದ್ದೇನೆ. ಅದರಿಂದ ತುಂಬಾನೇ ಕಲಿತಿದ್ದೇನೆ ಎಂದು ಸ್ಪಷ್ಟನೆ ನೀಡಿದರು.
ಪ್ರಶ್ನೆ : ದೇಶ ಸೇವೆ ಅಂತ ಐಪಿಎಸ್ ಆಯ್ಕೆ ಮಾಡಿಕೊಂಡ್ರಿ ಏಳು ವರ್ಷ ಜೈಲಿನಲ್ಲಿದ್ದಾಗ ನೋವು ಕಾಡಲಿಲ್ಲವೇ ?
ಎಂ.ಎನ್. ದಿನೇಶ್: ವ್ಯವಸ್ಥೆ ನನ್ನನ್ನು ಆ ಸಮಸ್ಯೆಗೆ ದೂಡಿತ್ತು. ಜೈಲಿನಲ್ಲಿರುವ ನೋವು ಅನುಭವಿಸುವುದಕ್ಕಿಂತಲೂ ಎದುರಿಸುವುದು ಮುಖ್ಯವಾಗಿತ್ತು. ಅದನ್ನು ನಾನು ಎದರಿಸಿ ಹೊರಬಂದೆ. ಬೇಸರ, ನೋವು ಆಗಿದ್ದು ಸಹಜ. ಆದರೆ ಸಮಸ್ಯೆ ಎದರಿಸಬೇಕಿತ್ತು, ಅದನ್ನು ನಾನು ಮಾಡಿದೆ. ಯಾವತ್ತು ಸಮಸ್ಯೆ ಅಂತ ಕೊರಗಿ ಅನುಭವಿಸಬಾರದು. ಅನುಭವಿಸಲು ಶುರು ಮಾಡಿದ್ರೆ ಅದನ್ನು ಎದರಿಸಿ ಅದರಿಂದ ಹೊರಗೆ ಬರೋಕೆ ಆಗಲ್ಲ. ಯಾರೇ ಆಗಿರಲಿ ಸಮಸ್ಯೆಗೆ ಸಿಲುಕಿದರೆ ಅದನ್ನು ಎದುರಿಸಿ ಹೊರ ಬರಬೇಕು. ಇಲ್ಲದಿದ್ದರೆ, ಆತ ಹೊರ ಬಂದರೂ ನಾಲಾಯಕ್ ಆಗುತ್ತಾನೆ. ಮಾನಸಿಕವಾಗಿ ಕುಗ್ಗಿ ಬಿಟ್ಟರೆ ಆತ ಸಮಾಜಕ್ಕೆ ಹೊರೆಯಾಗುತ್ತಾನೆ. ಕುಟುಂಬಕ್ಕೂ ಹೊರೆ ಯಾಗುತ್ತಾನೆ. ಇಲಾಖೆಗೋ ಭಾರವಾಗುತ್ತಾನೆ. ಹೀಗಾಗಿ ನಾನು ಜೈಲಿನಲ್ಲಿ ಏಳು ವರ್ಷವಿದ್ದರೂ ಒಂದು ನಿಮಿಷ ಕೂಡ ನಕಾರಾತ್ಮಕವಾಗಿ ಚಿಂತಿಸಲಿಲ್ಲ. ಹೀಗಾಗಿ ಅದನ್ನು ಎದರಿಸಿ ಹೊರ ಬಂದೆ. ನಾನಲ್ಲ, ಯಾವುದೇ ಪ್ರಜೆ ಸಮಸ್ಯೆಯನ್ನು ಎದುರಿಸಬೇಕೇ ವಿನಃ ಅದರಿಂದ ನೋವು ಅನುಭವಿಸಿ ನಕಾರಾತ್ಮಕ ಬದುಕು ಕಟ್ಟಿಕೊಳ್ಳಬಾರದು.
ಪ್ರಶ್ನೆ : ಜೈಲಿನಲ್ಲಿ ನೀವು ಕಲಿತ ಜೀವನದ ಪಾಠವೇನು ?
ಎಂ.ಎನ್.ದಿನೇಶ್: ನಾನು ಐಪಿಎಸ್ ಅಧಿಕಾರಿಯಾಗಿ, ನನ್ನಂತೆ ಯಾರೇ ಆಗಿರಲಿ ಒಬ್ಬ ಕ್ರಿಮಿನಲ್ನನ್ನು ಬಂಧಿಸಿ ಜೈಲಿಗೆ ಕಳುಹಿಸುತ್ತೇವೆ. ಆದರೆ ವಾಸ್ತವದಲ್ಲಿ ಜೈಲಿನ ವ್ಯವಸ್ಥೆ ಅರ್ಥ ಮಾಡಿಕೊಳ್ಳಲು ಅಸಾಧ್ಯ. ನಾನು ಜೈಲಿನಲ್ಲಿದ್ದಾಗ ಕ್ರಿಮಿನಲ್ ಗಳು ಜೈಲಿನಲ್ಲಿ ಹೇಗಿರುತ್ತಾರೆ. ಅಲ್ಲಿನ ವ್ಯವಸ್ಥೆ ಹೇಗಿರುತ್ತದೆ. ಅಲ್ಲಿದ್ದುಕೊಂಡು ಕ್ರಿಮಿನಲ್ ಗಳು ಹೊರಗೆ ಹೇಗೆ ಅಪರಾಧ ಚಟುವಟಿಕೆ ನಡೆಸುತ್ತಾರೆ. ಅಲ್ಲಿ ಯಾವ ರೀತಿಯ ಸೌಲಭ್ಯಗಳನ್ನು ಅವರು ಅನುಭವಿಸುತ್ತಿದ್ದಾರೆ ಎಂಬುದನ್ನು ಹತ್ತಿರದಿಂದ ಕಂಡೆ. ಜೈಲಿನ ವ್ಯವಸ್ಥೆ ಬಗ್ಗೆ ಬದುಕಿನಲ್ಲಿ ತಿಳಿಯಲಾಗದ ಸತ್ಯಗಳನ್ನು ತಿಳಿದುಕೊಂಡೆ. ನಾನು ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವುದಿಂದ ಕ್ರಿಮಿನಲ್ಗಳು, ಅವರ ಮೇಲೆ ಕ್ರಮ ಕೈಗೊಳ್ಳಬೇಕು ಎಂಬುದನ್ನು ಕಲಿತೆ. ಅದರಿಂದ ನಾನು ಪೊಲೀಸ್ ಸೇವೆ ವಿಶಿಷ್ಠವಾಗಿ ಸಲ್ಲಿಸಲು ಸಹಾಯವಾಗುತ್ತಿದೆ.
ಪ್ರಶ್ನೆ: ನಿಮ್ಮ ಜೀವನಾಧಾರಿತ ಸಿನಿಮಾ ನಿರ್ಮಾಣ ಆಗುತ್ತಿದೆ ಎಂಬ ಸುದ್ದಿ ಇದೆಯಲ್ಲಾ ?
ನನ್ನ ಜೀವನಾಧಾರಿತ ಸಿನಿಮಾ ಮಾಡಲು ಅನೇಕರು ನನ್ನ ಅನುಮತಿ ಕೇಳಿದರು. ನಾನು ಪೊಲೀಸ್ ಸೇವೆಯಲ್ಲಿರುವ ಕಾರಣ ನಾನು ಅನುಮತಿ ಕೊಟ್ಟಿಲ್ಲ. ಅದರ ಬಗ್ಗೆ ನಾನು ಇನ್ನೂ ಆಲೋಚನೆ ಮಾಡಿಲ್ಲ. ನಿವೃತ್ತಿ ನಂತರ ನನ್ನ ಜೀವನಾನುಭವವನ್ನು ಪುಸ್ತಕ ರೂಪದಲ್ಲಿ ಹೊರ ತರುವ ಆಸೆ ಹೊಂದಿದ್ದೇನೆ. ಬದುಕಿನ ವಾಸ್ತವಿಕತೆಯನ್ನು ಬರೆಯಬೇಕೆನ್ನುವ ಆಸೆಯಿದೆ. ಸದ್ಯಕ್ಕೆ ಈ ವಿಚಾರದ ಬಗ್ಗೆ ಮಾತನಾಡುವುದು ಬೇಡ.
ಪ್ರಶ್ನೆ: ಎಸಿಬಿಯ ಎಡಿಜಿಪಿಯಾಗಿ ರಾಜಸ್ಥಾನದಲ್ಲಿ ಭ್ರಷ್ಟರ ಭೇಟೆ ಹೇಗೆ ಮುಂದುವರೆದಿದೆ ?
ಎಂ.ಎನ್. ದಿನೇಶ್: ನಾನು ರಾಜಸ್ಥಾನ ಎಡಿಜಿಪಿಯಾಗಿ ಅಧಿಕಾರ ವಹಿಸಿಕೊಂಡು ಈವರೆಗೆ ( ಜು. 31 ) ವರೆಗೆ ಲಂಚ ಸ್ವೀಕರಿಸಿದ 262 ಭ್ರಷ್ಟ ಅಧಿಕಾರಿಗಳನ್ನು ಬಂಧಿಸಿಲಾಗಿದೆ. 315 ಕ್ಕೂ ಹೆಚ್ಚು ಅಕ್ರಮ ಆಸ್ತಿ ಗಳಿಕೆ, ಸರ್ಕಾರಿ ಹಣ ದುರುಪಯೋಗ ಕುರಿತ ಕೇಸುಗಳನ್ನು ದಾಖಲಿಸಿದ್ದೇವೆ. ಭ್ರಷ್ಟರ ವಿರುದ್ಧ ರಾಜಸ್ಥಾನ ಭ್ರಷ್ಟಾಚಾರ ನಿಗ್ರಹ ಮಾಡುತ್ತಿರುವ ಕಾರ್ಯ ಶೈಲಿಗೆ ಜನರು ಸಾಕಷ್ಟು ಖುಷಿಯಲ್ಲಿದ್ದಾರೆ. ಬಡವರ ರಕ್ತ ಹೀರುವ ಭ್ರಷ್ಟಾಚಾರ ಮುಕ್ತವಾಗುವ ನಿಟ್ಟಿನಲ್ಲಿ ನನ್ನ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ.
ಪ್ರಶ್ನೆ : ಐಎಎಸ್, ಐಪಿಎಸ್ ಅಧಿಕಾರಿಗಳನ್ನು ಲಂಚ ಪ್ರಕರಣಗಳಲ್ಲಿ ಜೈಲಿಗೆ ಕಳುಹಿಸುತ್ತಿದ್ದೀರಾ ?
ಎಂ.ಎನ್. ದಿನೇಶ್: ಲಂಚ ಸ್ವೀಕರಿಸುವ ವೇಳೆ ಒಬ್ಬ ಐಎಎಸ್ ಅಧಿಕಾರಿಯನ್ನು ಬಂಧಿಸಿದ್ದೇವೆ. ಒಬ್ಬ ಐಪಿಎಸ್ ಅಧಿಕಾರಿಯನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ. ಇಂಡಿಯನ್ ಪೋಸ್ಟಲ್ ಸರ್ವೀಸ್, ಯುನಿವರ್ಸಿಟಿ ವಿಸಿ ಸೇರಿದಂತೆ ಅನೇಕರನ್ನು ರಾಜಸ್ಥಾನ ಭ್ರಷ್ಟಾಚಾರ ನಿಗ್ರಹ ದಳ ಬಂಧಿಸಿ ಪ್ರಕರಣ ದಾಖಲಿಸಿದೆ. ಸರ್ಕಾರಿ ಸೇವೆಗೆ ಬರುವುದು ಎಷ್ಟು ಕಷ್ಟ ಅಂತ ಇವತ್ತು ಎಲ್ಲರಿಗೂ ಗೊತ್ತು. ಕಷ್ಟ ಪಟ್ಟು ಓದಿ ಸರ್ಕಾರಿ ಸೇವೆಗೆ ಬರವರಿಗೆ ಇವತ್ತು ಸರ್ಕಾರಗಳು ಕೈತುಂಬಾ ವೇತನ ನೀಡುತ್ತಿದೆ. ಆರನೇ ವೇತನ ಆಯೋಗದ ಶಿಫಾರಸಿನಿಂದ ಬದುಕಲು ಬೇಕಾಗುವಷ್ಟು ಹಣ ಸಂಬಳ ರೂಪದಲ್ಲಿ ಸಿಗುತ್ತಿದೆ. ಆದರೂ ಬಡವರಿಂದ, ಸರ್ಕಾರಿ ಯೋಜನೆಗಳಿಂದ ಲಂಚ ಸ್ವೀಕರಿಸುವುದು ತಪ್ಪು. ಐಎಎಸ್ - ಐಪಿಎಸ್ ಅಧಿಕಾರಿಗಳು ಜೈಲಿಗೆ ಹೋಗುವುದಕ್ಕಿಂತಲೂ ಅವರು ಯಾವ ಅಪರಾಧದಲ್ಲಿ ಜೈಲಿಗೆ ಹೋಗಿದ್ದಾರೆ ಎಂಬುದು ಮುಖ್ಯ. ಒಬ್ಬ ಸರ್ಕಾರಿ ನೌಕರ ಲಂಚ ಸ್ವೀಕರಿಸಿ ಜೈಲಿಗೆ ಹೋಗುವುದು ದೊಡ್ಡ ಅವಮಾನ. ಸಮಾಜದಲ್ಲಿ ಆತನನ್ನು ನೋಡುವ ದೃಷ್ಟಿ ಕೋನವೇ ಬದಲಾಗುತ್ತದೆ. ಆ ಅವಮಾನಕ್ಕಿಂತ ದೊಡ್ಡ ನೋವು ಯಾವುದೂ ಇರುವುದಿಲ್ಲ. ಇದನ್ನು ಮನಗಂಡು ಸೇವೆಗೆ ಬಂದಮೇಲೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಬೇಕು. ಲಂಚವಿಲ್ಲದೇ ಗೌರವಯುತವಾಗಿ ಬದುಕಬೇಕು ಎಂಬ ಮನೋಭಾವನೆ ಅಧಿಕಾರಿಗಳಲ್ಲಿ ಬರಬೇಕು.
ಪ್ರಶ್ನೆ: ಸಾವಿರ, ಐದು ನೂರು ರೂ. ಲಂಚ ಪಡೆಯುವರನ್ನು ಜೈಲಿಗೆ ಕಳುಹಿಸುವಾಗ ನಿಮಗೆ ಏನೂ ಅನ್ನಿಸುವುದಿಲ್ಲವೇ ?
ಎಂ.ಎನ್. ದಿನೇಶ್: ಒಂದು ನಿರ್ಧಿಷ್ಟ ಪ್ರಕರಣ ಎಂದರೆ ಇದಕ್ಕೆ ಉತ್ತರ ಕೊಡಬಹುದು. ಸಾಮಾನ್ಯವಾಗಿ ಹೇಳಬೇಕಾದರೆ, ಲಂಚ ಐದು ನೂರು ಕೊಡವನು ಬೇಸತ್ತು ದೂರು ಕೊಡ್ತಾನೆ ಎಂದರೆ ಆ ಸಣ್ಣ ಮೊತ್ತವೇ ಅವನಿಗೆ ದೊಡ್ಡದು. ಸಾರಿಗೆ ಇಲಾಖೆ, ಕಂದಾಯ ಇಲಾಖೆಯ ಅಧಿಕಾರಿಗಳು ಕೇವಲ ನೂರು- ಇನ್ನೂರು ರೂಪಾಯಿಯೇ ಲಂಚ ಸ್ವೀಕರಿಸುವುದು. ಆದರೆ ಎಷ್ಟು ಮಂದಿ ಬಳಿ ದಿನಕ್ಕೆ ವಸೂಲಿ ಮಾಡುತ್ತಾರೆ ಎನ್ನುವುದು ಮಹತ್ವ ಆಗುತ್ತದೆ. ಒಬ್ಬ ಸಾರಿಗೆ ಇಲಾಖೆ ಅಧಿಕಾರಿ ರಸ್ತೆ ಮೇಲೆ ನಿಂತರೆ ಸಾವಿರಾರು ವಾಹನದಿಂದ ಹಣ ವಸೂಲಿ ಮಾಡುತ್ತಾನೆ. ಹೀಗಾಗಿ ಭ್ರಷ್ಟಾಚಾರ ವಿಚಾರ ಬಂದಾಗ, ಕೊಡುವನಿಗಿಂತಲೂ ತೆಗೆದುಕೊಳ್ಳುವನ ಹಿನ್ನೆಲೆ, ಅವರು ಸೇವೆ ಮಾಡುತ್ತಿರುವ ಇಲಾಖೆ ಮುಖ್ಯವಾಗುತ್ತದೆ. ಹೀಗಾಗಿ ಭ್ರಷ್ಟಾಚಾರ ವಿಚಾರದಲ್ಲಿ ಕ್ಷಮೆ ಅನ್ನುವುದೇ ಇರಬಾರದು ಎಂಬುದು ನನ್ನಅನಸಿಕೆ.
ರಾಷ್ಟ್ರಪತಿ ಪದಕ ಸಿಕ್ಕಿದ ಬಗ್ಗೆ ನಿಮ್ಮ ಅನಿಸಿಕೆ ?
ಎಂ.ಎನ್. ದಿನೇಶ್: ನನ್ನ ಸೇವೆ ಗುರುತಿಸಿ ರಾಷ್ಟ್ರಪತಿ ಪದಕ ನೀಡಿರುವುದು ಸಂತಸ ತಂದಿದೆ. ನನ್ನ ಸೇವೆಗೆ ಯಾವಾಗಲೋ ಸಿಗಬೇಕಿತ್ತು. ನನ್ನ ಮೇಲೆ ದಾಖಲಾಗಿದ್ದ ಎನ್ಕೌಂಟರ್ ಪ್ರಕರಣ ಇತ್ಯರ್ಥ ವಾಗಿರಲಿಲ್ಲ. ಇದೀಗ ನನಗೆ ರಾಷ್ಟ್ರಪತಿ ಪದಕ ಸಿಕ್ಕಿರುವುದು ತುಂಬಾ ಖುಷಿ ನೀಡಿದೆ. ನನ್ನ ಜವಾಬ್ದಾರಿಯನ್ನೂ ಹೆಚ್ಚಿಸಿದೆ. ಸರ್ಕಾರಿ ಸೇವೆಯಲ್ಲಿರುವ ತನಕ ಪ್ರಾಮಾಣಿಕ ಸೇವೆ ಮಾಡುವುದೇ ದಿನೇಶ್ ಅವರ ಏಕೈಕ ಗುರಿ.