Draupadi Murmu: ನೂತನ ರಾಷ್ಟ್ರಪತಿ ದ್ರೌಪದಿ ಮುರ್ಮು ಬಗ್ಗೆ ಒಂದು ಪರಿಚಯ
ಬುಡಕಟ್ಟು ಸಮುದಾಯದ ದ್ರೌಪದಿ ಮುರ್ಮು ಭಾರತದ ನೂತನ ರಾಷ್ಟ್ರಪತಿ ಸ್ಥಾನ ಅಲಂಕರಿಸಿದ್ಧಾರೆ. ಇಂದು ನಡೆದ ಚುನಾವಣೆಯಲ್ಲಿ ದ್ರೌಪದಿ ಮುರ್ಮು ನಿರೀಕ್ಷಿತ ಗೆಲುವು ಸಾಧಿಸಿದ್ದಾರೆ.
ಎನ್ಡಿಎ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ದ್ರೌಪದಿ, ತಮ್ಮ ಪ್ರತಿಸ್ಪರ್ಧಿ ಯಶವಂತ್ ಸಿನ್ಹಾರನ್ನು ಒಂದು ಸುತ್ತು ಮತ ಎಣಿಕೆ ಬಾಕಿ ಇರುವಂತೆಯೇ ಗೆಲುವು ಖಾತ್ರಿ ಪಡೆಸಿಕೊಂಡರು. ಎನ್ಡಿಎ ಮೈತ್ರಿಕೂಟದಲ್ಲಿ ಸಂಖ್ಯಾಬಲ ಹೆಚ್ಚಿದ್ದರಿಂದ ದ್ರೌಪದಿ ಮುರ್ಮು ಗೆಲುವಿನಲ್ಲಿ ಯಾವ ಸಂಶಯವೂ ಇರಲಿಲ್ಲ. ಕೆಲ ವಿಪಕ್ಷಗಳೂ ಕೂಡ ದ್ರೌಪದಿ ಮುರ್ಮುಗೆ ಬೆಂಬಲ ವ್ಯಕ್ತಪಡಿಸಿದ್ದವು. ಹೀಗಾಗಿ, ಇದೊಂದು ನಾಮಕಾವಸ್ತೆಯ ರೀತಿಯಲ್ಲಿ ನಡೆದ ಚುನಾವಣೆಯಂತಿತ್ತು.
ದ್ರೌಪದಿ ಮುರ್ಮು ಭಾರತದ 15ನೇ ರಾಷ್ಟ್ರಪತಿ
ಜಾರ್ಖಂಡ್ನ ಮಾಜಿ ರಾಜ್ಯಪಾಲೆಯಾದ ದ್ರೌಪದಿ ಮುರ್ಮು ಹೆಸರು ರಾಷ್ಟ್ರಪತಿ ಸ್ಥಾನಕ್ಕೆ ಹೊಸದಾಗಿ ಕೇಳಿಬಂದದ್ದಲ್ಲ. 2017ರ ರಾಷ್ಟ್ರಪತಿ ಚುನಾವಣೆಯಲ್ಲಿ ಎನ್ಡಿಎನ ಸಂಭಾವ್ಯ ಹೆಸರುಗಳಲ್ಲಿ ದ್ರೌಪದಿ ಹೆಸರು ಮುಂಚೂಣಿಯಲ್ಲಿತ್ತು. ಅಂತಿಮವಾಗಿ ರಾಮನಾಥ್ ಕೋವಿಂದ್ ಹೆಸರು ಆಯ್ಕೆಯಾಗಿತ್ತು. ಆಗ ದ್ರೌಪದಿ ಮುರ್ಮು ಹೆಸರು ಮುಂದಿಟ್ಟಿದ್ದು ಪ್ರಧಾನಿ ಮೋದಿ. ಈಗಲೂ ಅವರ ಹೆಸರು ಮುಂದಿಟ್ಟಿದ್ದು ಮೋದಿಯೇ ಎಂಬುದು ವಿಶೇಷ.
ಬುಡಕಟ್ಟು ಸಮುದಾಯದ ಮಹಿಳೆಯೊಬ್ಬರು ಪ್ರಪ್ರಥಮ ಬಾರಿಗೆ ದೇಶದ ಪ್ರಥಮ ಪ್ರಜೆ ಎಂದೆನಿಸಿಕೊಳ್ಳುವ ಕನಸು ಕೊನೆಗೂ ನೆರವೇರಿದೆ. ಅಷ್ಟಕ್ಕೂ ಈ ದ್ರೌಪದಿ ಮುರ್ಮು ಯಾರು? ಅವರ ರಾಜಕೀಯ ಹಿನ್ನೆಲೆ ಏನು? ಇಲ್ಲಿದೆ ಸಂಕ್ಷಿಪ್ತ ಮಾಹಿತಿ.
ಭಾರತದ ರಾಷ್ಟ್ರಪತಿಗಳ ಸಂಬಳ, ಸೌಲಭ್ಯಗಳನ್ನು ತಿಳಿಯಿರಿ
ಬುಡಕಟ್ಟು ಸಮುದಾಯದ ಮಹಿಳೆ
ಒಡಿಶಾ ಮೂಲದ ದ್ರೌಪದಿ ಮುರ್ಮು ತಂದೆ ಬಿರಂಚಿ ನಾರಾಯಣ್ ಟುಡು. ಕಳೆದ ಎರಡು ದಶಕಗಳಿಂದ ರಾಜಕೀಯ ಕ್ಷೇತ್ರದಲ್ಲಿರುವ ದ್ರೌಪದಿ ಒಡಿಶಾದ ಮಾಜಿ ಸಚಿವೆ ಜಾರ್ಖಂಡ್ ರಾಜ್ಯದ ಮಾಜಿ ರಾಜ್ಯಪಾಲರಾಗಿದ್ದವರು. ಕೇಂದ್ರ ಸಚಿವೆಯಾಗಿದ್ದವರು. ಉತ್ತಮ ಶಾಸಕಿ ಎಂಬ ಹೆಗ್ಗಳಿಕೆಗೆ ಪಾತ್ರರಾದವರು. ಇವರು ರಾಷ್ಟ್ರಪತಿಯಾದರೆ ಹಲವು ಪ್ರಥಮಗಳಿಗೆ ನಾಂದಿ ಹಾಡಲಿದ್ದಾರೆ.ಪ್ರತಿಭಾ ಪಾಟೀಲ್ ನಂತರ ಎರಡನೇ ಮಹಿಳಾ ರಾಷ್ಟ್ರಪತಿ ಎನಿಸಲಿದ್ದಾರೆ. ಬುಡಕಟ್ಟು ಜನಾಂಗದ ಮಹಿಳೆ, ಒಡಿಶಾ/ಜಾರ್ಖಂಡ್ ಮೂಲದಿಂದ ಉನ್ನತ ಹುದ್ದೆಗೆ ಅಲಂಕರಿಸುವ ಮೊದಲ ಮಹಿಳೆ ಎನಿಸಿಕೊಳ್ಳಲಿದ್ದಾರೆ.
ನೀಲಕಂಠ ಪ್ರಶಸ್ತಿ
ದ್ರೌಪದಿ ಮುರ್ಮು ತಮ್ಮ ನಿಸ್ವಾರ್ಥ ಜನಸೇವೆಯಿಂದಾಗಿ ಉತ್ತಮ ಶಾಸಕಿ ಎಂಬ ಪ್ರಶಸ್ತಿಯನ್ನೂ ಪಡೆದಿದ್ದರು. 2007 ರಲ್ಲಿ ನೀಲಕಂಠ ಎಂಬ ಪ್ರಶಸ್ತಿಯನ್ನೂ ಪಡೆದರು. 1997 ರಲ್ಲಿ ಅವರನ್ನು ಕೌನ್ಸಿಲರ್ ಆಗಿ ಆರಿಸಲಾಯಿತು. ನಂತರ ರಾಷ್ಟ್ರೀಯ ಸಲಹಾ ಸಮಿತಿಯ ಉಪಾಧ್ಯಕ್ಷರಾಗಿಯೂ ನೇಮಕಗೊಂಡರು. ಒಡಿಶಾದ ಶಾಸಕಿಯಾಗಿ ಆಯ್ಕೆಯಾಗಿದ್ದಲ್ಲದೆ, ಸಚಿವರಾಗಿಯೂ ಕರ್ತವ್ಯ ನಿಭಾಯಿಸಿದ್ದರು. 2002 ರಿಂದ 2009ರವರೆಗೆ ಬಿಜೆಪಿ ಪರಿಶಿಷ್ಟ ಪಂಗಡ ಮೋರ್ಚಾದ ರಾಷ್ಟ್ರೀಯ ಕಾರ್ಯನಿರ್ವಾಹಕ ಸದಸ್ಯರಾಗಿಯೂ ನೇಮಕಗೊಂಡರು.
ದ್ರೌಪದಿ ಶಿಕ್ಷಣ
ಬಿ.ಎ ಪದವೀಧರರಾದ ದ್ರೌಪದಿ, ರಾಯ್ ರಂಗಪುರ್ ದಲ್ಲಿರುವ ಶ್ರೀ ಅರಬಿಂದೋ ಕಾಲೇಜಿನಲ್ಲಿ ಗೌರವಾನ್ವಿತ ಸಹಾಯಕ ಪ್ರಾಧ್ಯಾಪಕಿಯಾಗಿದ್ದರು. ಒಡಿಶಾದ ನೀರಾವರಿ ಇಲಾಖೆಯಲ್ಲಿ ಜ್ಯೂನಿಯರ್ ಸಹಾಯಕ ಹುದ್ದೆಯಲ್ಲಿ ಕಾರ್ಯ ನಿರ್ವಹಿಸಿದರು. 1997ರಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡರು. ಪತಿ ಶ್ಯಾಮ್ ಚರಣ ಮುರ್ಮು ದಿವಂಗತರಾಗಿದ್ದು, ಇಬ್ಬರು ಪುತ್ರರು ದ್ರೌಪದಿ ಅವರನ್ನು ಅಗಲಿದ್ದಾರೆ. ಪುತ್ರಿ ಇತಿಶ್ರೀ ಮುರ್ಮು ಮಾತ್ರ ಜೊತೆಗಿದ್ದಾರೆ. 2017ರಲ್ಲಿ ದ್ರೌಪದಿ ವೈಯಕ್ತಿಕ 9. 5 ಲಕ್ಷ ರು ಆಸ್ತಿ ಘೋಷಿಸಿಕೊಂಡಿದ್ದರು.
ದ್ರೌಪದಿ ರಾಜಕೀಯ ವೃತ್ತಿ
1997ರಲ್ಲಿ ರಾಯ್ ರಂಗಪುರ್ ಜಿಲ್ಲೆಯ ಕೌನ್ಸಿಲರ್ ಆಗಿ ಆಯ್ಕೆ, ಉಪಾಧ್ಯಕ್ಷ ಸ್ಥಾನಕ್ಕೆ ಅದೇ ವರ್ಷ ಅಯ್ಕೆ 2000ರ ಒಡಿಶಾ ವಿಧಾನಸಭೆ ಚುನಾವಣೆಯಲ್ಲಿ ಆಯ್ಕೆಯಾಗಿ ಸಾರಿಗೆ ಹಾಗೂ ವಾಣಿಜ್ಯ ಖಾತೆ ಸಚಿವೆಯಾಗಿದ್ದರು ಒಡಿಶಾದ ಮೀನುಗಾರಿಕೆ ಸಚಿವೆಯಾಗಿ 2004ರ ತನಕ ಕಾರ್ಯ ನಿರ್ವಹಿಸಿದರು ಮಯೂರ್ ಭಂಜ್ ಜಿಲ್ಲಾ ಬಿಜೆಪಿ ಅಧ್ಯಕ್ಷೆಯಾಗಿ 2002ರಿಂದ 2009ರ ತನಕ ಹುದ್ದೆ ನಿಭಾಯಿಸಿದರು. 2004 ರಿಂದ 2009 ರ ತನಕ ರಾಯ್ ರಂಗಪುರ್ ಶಾಸಕಿಯಾಗಿದ್ದರು. 2006ರಿಂದ 2009 ತನಕ ಬಿಜೆಪಿ ಎಸ್ಟಿ ಮೋರ್ಚಾ ರಾಜ್ಯ ಅಧ್ಯಕ್ಷೆಯಾಗಿದ್ದರು. 2015ರಲ್ಲಿ ಜಾರ್ಖಂಡ್ ರಾಜ್ಯಪಾಲರಾಗಿ ನಿಯುಕ್ತಿಗೊಂಡರು. 2017ರಲ್ಲಿ ರಾಷ್ಟ್ರಪತಿ ಸ್ಥಾನಕ್ಕೆ ಹೆಸರು ಪರಿಗಣಿಸಲಾಗಿತ್ತು.
(ಒನ್ಇಂಡಿಯಾ ಸುದ್ದಿ)
Recommended Video