ತಲಕಾಡು ಪಂಚಲಿಂಗ ದರ್ಶನಕ್ಕೆ ದಿನಗಣನೆ...
ಮತ್ತೆ ತಲಕಾಡಿನಲ್ಲಿ ಪಂಚಲಿಂಗ ದರ್ಶನ (ಡಿಸೆಂಬರ್ 14)ದ ಸಂಭ್ರಮಕ್ಕೆ ದಿನಗಣನೆ ಆರಂಭವಾಗಿದೆ. ಪಂಚಲಿಂಗ ದರ್ಶನವೆಂದರೆ ಇಡೀ ಭಕ್ತ ಸಮೂಹ ಪುಳಕಗೊಳ್ಳುತ್ತಿತ್ತು. ಆದರೆ ಈ ಬಾರಿ ಕೊರೊನಾದಿಂದಾಗಿ ಆ ಸಂಭ್ರಮಕ್ಕೆ ತಣ್ಣೀರು ಎರಚಿದಂತಾಗಿದೆ.
ತಲಕಾಡು ಎಂದ ತಕ್ಷಣ ಮೈನವಿರೇಳುತ್ತದೆ. ಅದಕ್ಕೆ ಕಾರಣ ಪೌರಾಣಿಕ ಮತ್ತು ಐತಿಹಾಸಿಕವಾಗಿ ಈ ಸ್ಥಳ ಪ್ರಸಿದ್ಧಿಯಾಗಿದೆ. ಜೊತೆಗೆ ನಿಸರ್ಗ ಸುಂದರತೆ ಇಲ್ಲಿ ತಾಂಡವವಾಡುತ್ತಿದೆ. ಸುತ್ತಲೂ ಹಸಿರಿನಿಂದ ಕಂಗೊಳಿಸುವ ನಿಸರ್ಗಸಿರಿ, ಮರಳ ರಾಶಿ ನಡುವಿನ ದೇವಾಲಯಗಳು, ವಿಶಾಲವಾಗಿ ಹರಡಿ ಹರಿಯುವ ಕಾವೇರಿ ನದಿಯ ಚೆಲುವು ಮನ ಪುಳಕಗೊಳಿಸುತ್ತದೆ. ಕಾವೇರಿಯು ಇಲ್ಲಿ ಶಿವ ಕ್ಷೇತ್ರ ಮತ್ತು ವಿಷ್ಣುಕ್ಷೇತ್ರವನ್ನು ಸೃಷ್ಟಿಸಿದ್ದು ಚತುರ್ (ಪೂರ್ವ, ದಕ್ಷಿಣ, ಪಶ್ಚಿಮ ಮತ್ತು ಉತ್ತರ) ವಾಹಿನಿಯಾಗಿ ಹರಿಯುವುದು ವಿಶೇಷವಾಗಿದೆ. ಮುಂದೆ ಓದಿ...
ಮಹಾಮುನಿಗಳು ಮೋಕ್ಷ ಪಡೆದ ತಾಣ
ಮೈಸೂರಿನಿಂದ ಸುಮಾರು ಅರುವತ್ತು ಕಿ.ಮೀ. ದೂರದಲ್ಲಿರುವ ತಲಕಾಡು ತಿ.ನರಸೀಪುರ ತಾಲೂಕಿಗೆ ಸೇರಿದೆ. ಭಕ್ತರಿಗೆ ಪವಿತ್ರ ತಾಣವಾಗಿ, ಪ್ರವಾಸಿಗರಿಗೆ ಚೆಲುವಿನ ತಾಣವಾಗಿ ಗಮನಸೆಳೆಯುತ್ತದೆ. ಸೋಮದತ್ತ ಋಷಿ ಮತ್ತು ಶಿಷ್ಯರು ಇಲ್ಲಿ ಮೋಕ್ಷ ಪಡೆದಿದ್ದರಿಂದ ಗಜಾರಣ್ಯ ಕ್ಷೇತ್ರ, ಸಿದ್ಧಾರಣ್ಯ ಕ್ಷೇತ್ರವೆಂದೂ, ಗಂಗರ ರಾಜಧಾನಿಯಾಗಿ ಬಳಿಕ ಚೋಳರ ಅಧೀನಕ್ಕೆ ಬಂದಾಗ ರಾಜರಾಜಪುರ ಎಂದೂ, ಇದಾದ ನಂತರ ತಲ ಮತ್ತು ಕಾಡ ಎಂಬ ಬೇಡರು ಇಲ್ಲಿರುವ ವೈದ್ಯನಾಥೇಶ್ವರನನ್ನು ಆರಾಧಿಸಿ ಮೋಕ್ಷ ಪಡೆದಿದ್ದರಿಂದ ತಲಕಾಡು ಎಂಬ ಹೆಸರು ಬಂತೆಂದು ಹೇಳಲಾಗುತ್ತಿದೆ.
ಡಿ.14ರಿಂದ ತಲಕಾಡಿನ ಪಂಚಲಿಂಗ ದರ್ಶನ ಮಹೋತ್ಸವ; ಈ ಬಾರಿ ಹೇಗೆ ನಡೆಯಲಿದೆ?
ಗಂಗರು- ಚೋಳರು ಆಳ್ವಿಕೆ ನಡೆಸಿದ್ದರು
ಇತಿಹಾಸದ ಪುಟಗಳನ್ನು ತಿರುವಿದರೆ ಪಶ್ಚಿಮ ಗಂಗರು ಕ್ರಿ.ಶ. ಸುಮಾರು ಆರನೇ ಶತಮಾನದಿಂದ ಹತ್ತನೇ ಶತಮಾನದ ಕೊನೆವರೆಗೂ ತಲಕಾಡನ್ನು ರಾಜಧಾನಿಯನ್ನಾಗಿಸಿಕೊಂಡು ರಾಜ್ಯಭಾರ ನಡೆಸಿ ತಲಕಾಡು ಗಂಗರೆಂದೇ ಹೆಸರುವಾಸಿಯಾದರು. ಆದರೆ ಹತ್ತನೇ ಶತಮಾನದ ಕೊನೆಯ ಭಾಗದಲ್ಲಿ ತಲಕಾಡು ಹಾಗೂ ಸುತ್ತಮುತ್ತಲ ಪ್ರಾಂತ್ಯಗಳನ್ನು ಚೋಳ ಚಕ್ರವರ್ತಿ ರಾಜರಾಜ ಚೋಳನು ತನ್ನ ವಶಕ್ಕೆ ತೆಗೆದುಕೊಂಡನು ಎಂದು ಹೇಳಲಾಗುತ್ತದೆ. ಆನಂತರ ಸುಮಾರು 130 ವರ್ಷಗಳ ಕಾಲಚೋಳರು ಆಳ್ವಿಕೆ ನಡೆಸಿದರೆಂದೂ 1117ರಲ್ಲಿ ಹೊಯ್ಸಳ ವಿಷ್ಣುವರ್ಧನ ಚೋಳರನ್ನು ಯುದ್ಧದಲ್ಲಿ ಸೋಲಿಸಿ ಅಧಿಪತ್ಯ ಸ್ಥಾಪಿಸಿದ್ದರಿಂದ ತಲಕಾಡುಗೊಂಡ ಎಂಬ ಬಿರುದು ಪಡೆದನೆಂದೂ ಆ ನಂತರ ಮೈಸೂರು ಒಡೆಯರ್ ಆಳ್ವಿಕೆ ನಡೆಸಿದರೆಂಬುದು ಇತಿಹಾಸದಿಂದ ತಿಳಿದು ಬರುತ್ತದೆ.
ಮರಳ ರಾಶಿ ಪ್ರಕೃತಿಯ ಸೋಜಿಗ
ತಲಕಾಡಿಗೆ ಭೇಟಿ ನೀಡುವವರಿಗೆ ಇಲ್ಲಿನ ಮರಳ ರಾಶಿ ವಿಸ್ಮಯ ಮೂಡಿಸುತ್ತದೆ. ಇದು ಈ ಕ್ಷೇತ್ರದ ಆಕರ್ಷಣೆಯೂ ಹೌದು. ಇಲ್ಲಿ ಹರಿದು ಹೋಗುವ ಕಾವೇರಿ ನದಿ ದಂಡೆಯಿಂದ ಸುಮಾರು ಮೂರು ಕಿ.ಮೀ. ಒಳಭಾಗದವರೆಗೆ ನಿರ್ಮಾಣವಾಗಿರುವ ನಲವತ್ತು ಅಡಿಗಿಂತಲೂ ಎತ್ತರವಾಗಿರುವ ಮರಳಿನ ದಿಬ್ಬಗಳು ಈ ಕ್ಷೇತ್ರದ ವಿಶೇಷತೆಯನ್ನು ಸಾರುತ್ತಾ ದೂರದಿಂದ ಬರುವ ಪ್ರವಾಸಿಗರನ್ನು ಆಶ್ಚರ್ಯ ಚಕಿತರನ್ನಾಗಿಸುತ್ತದೆ. ಮೇಲ್ನೋಟಕ್ಕೆ ಮರಳ ರಾಶಿಗಳು ಪ್ರಕೃತಿಯ ಸೋಜಿಗವಾಗಿ ಕಂಡು ಬಂದರೂ ಇದು ತಲಕಾಡಿಗೆ ತಟ್ಟಿದ ಶಾಪ ಎಂದರೆ ಆಶ್ಚರ್ಯವಾಗಬಹುದು.
ಒಂದು ಸಾವಿರ ಜನಕ್ಕೆ ಸೀಮಿತವಾಗಿ ಪಂಚಲಿಂಗ ದರ್ಶನ
ಮರಳಿನಲ್ಲಿ ಹುದುಗಿರುವ ನಾಲ್ಕು ಶಿವಾಲಯ
ಇಲ್ಲಿರುವ ವೈದ್ಯನಾಥೇಶ್ವರ, ಅರ್ಕೇಶ್ವರ, ಪಾತಾಳೇಶ್ವರ ಮತ್ತು ಮರಳೇಶ್ವರ ಎಂಬ ನಾಲ್ಕು ಶಿವದೇವಾಲಯಗಳನ್ನು ಸುತ್ತಲಿನಿಂದಲೂ ಮರಳು ಆವರಿಸಿಕೊಳ್ಳುತ್ತದೆ. ಹೀಗಾಗಿ ಈ ದೇವಾಲಯಗಳು ಮರಳಿನಲ್ಲಿ ಹುದುಗಿ ಹೋಗುತ್ತವೆ. ಪಂಚಲಿಂಗದರ್ಶನ ಸಂದರ್ಭ ಮರಳು ತೆಗೆದು ದೇವಾಲಯಗಳಲ್ಲಿ ಪೂಜಾಕಾರ್ಯ ನಡೆಸಿ ಭಕ್ತರಿಗೆ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ. ಇಲ್ಲಿನ ನಾಲ್ಕು ದೇವಾಲಯಗಳಲ್ಲದೆ ಮುಡುಕುತೊರೆಯ ಮಲ್ಲಿಕಾರ್ಜುನ ದೇವಾಲಯದ ಮಲ್ಲಿಕಾರ್ಜುನೇಶ್ವರ ಲಿಂಗವೂ ಸೇರಿಕೊಂಡಿದೆ.