ಕೊರೋನಾ ವೈರಸ್: ಇಲ್ಲಿದೆ ನಿಮಗೆ ಗೊತ್ತಿರದ ಕರ್ನಾಟಕದ ಸ್ಥಿತಿಗತಿ!
ಬೆಂಗಳೂರು, ಫೆ. 09: ಕೊರೋನಾ ವೈರಸ್ಗೆ ಸಂಬಂಧಿಸಿದಂತೆ ಭಯಬೇಡ ಎಂದಿರುವ ರಾಜ್ಯ ಆರೋಗ್ಯ ಇಲಾಖೆ, ರೋಗ ಹರಡದಂತೆ ತಡೆಯುವುದಷ್ಟೇ ಸಧ್ಯಕ್ಕೆ ವೈರಸ್ಗೆ ಇರುವ ಮದ್ದು ಎಂದು ತಿಳಿಸಿದೆ. ಇನ್ನೂ ಯಾವುದೇ ನಿಖರವಾದ ಚಿಕಿತ್ಸೆಯನ್ನು ಕೊರೋನಾ ವೈರಸ್ಗೆ ಕಂಡು ಹಿಡಿಯಲಾಗಿಲ್ಲ, ಹಾಗಂತ ಯಾವುದೇ ಭಯಬೇಡ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನು ರಾಜ್ಯ ಆರೋಗ್ಯ ಇಲಾಖೆ ತೆಗೆದುಕೊಂಡಿದೆ. ಈವರೆಗೆ ಎಲ್ಲ ಶಂಕಿತರನ್ನು ತಪಾಸಣೆಗೆ ಒಳಪಡಿಸಲಾಗಿದ್ದು, ಯಾರಲ್ಲಿಯೂ ಕೊರೋನಾ ವೈರಸ್ ಪತ್ತೆ ಆಗಿಲ್ಲ ಎಂದು ಸ್ಪಷ್ಟಪಡಿಸಿದೆ.
ಸಾರ್ಸ್ ದಾಖಲೆ ಮುರಿದ ಕೊರೊನಾ; ಸಾವಿನ ಸಂಖ್ಯೆ 803ಕ್ಕೆ ಏರಿಕೆ
ಕೊರೋನಾ ವೈರಸ್ ತಗುಲಿದ ವ್ಯಕ್ತಿಗೆ 14 ದಿನಗಳಲ್ಲಿ ರೋಗ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ, ರೋಗ ಲಕ್ಷಣಗಳು ಕಾಣಿಸಿಕೊಳ್ಳದೇ ಇರುವ ವ್ಯಕ್ತಿಗಳ ಮೇಲೆ 28 ದಿನಗಳ ವರೆಗೆ ನಿಗಾವಹಿಸಲಾಗುತ್ತಿದೆ. ಸಧ್ಯಕ್ಕೆ ನಿಖರವಾದ ಚಿಕಿತ್ಸೆ ಇಲ್ಲದಿದ್ದರೂ ಸೋಂಕು ತಗುಲಿದ ಎಲ್ಲರೂ ಸಾವನ್ನಪ್ಪುವುದಿಲ್ಲ, ಬದಲಿಗೆ ರೋಗನಿರೋಧಕ ಶಕ್ತಿ ಇರುವವರು ಸಾಮಾನ್ಯ ಜ್ವರಕ್ಕೆ ಕೊಡುವ ಚಿಕಿತ್ಸೆಯಿಂದಲೇ ಚೇತರಿಸಿಕೊಳ್ಳುವುದು ಸಾಧ್ಯವಿದೆ.
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸೇರಿದಂತೆ ರಾಜ್ಯದಲ್ಲಿರುವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳು, ಬಂದರುಗಳಲ್ಲಿ ಕೊರೋನಾ ವೈರಸ್ ದೃಢಪಟ್ಟಿರುವ ದೇಶಗಳಿಂದ ಬರುವ ಪ್ರಯಾಣಿಕರನ್ನು ಥರ್ಮಲ್ ಸ್ಕ್ಯಾನಿಂಗ್ ಮೂಲಕ ತಪಾಸಣೆ ಮಾಡಲಾಗುತ್ತಿದೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಳೆದ ಜನವರಿ 20ರಿಂದಲೇ ತಪಾಸಣೆ ಆರಂಭಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ಕೊಟ್ಟಿದೆ.
CoronaVirus: ಸೋಂಕಿತರು ಸರಿದಾಡಿದರೂ ಮೆಸೇಜ್, ತಂತ್ರಜ್ಞಾನದ ಎಫೆಕ್ಟ್!
ಚೀನಾದಲ್ಲಿ ಈವರೆಗೆ ಕೊರೋನಾ ವೈರಸ್ಗೆ 37,580 ಜನರು ತುತ್ತಾಗಿದ್ದು, ಅಲ್ಲಿ ಈವರೆಗೆ 813 ಜನರು ಬಲಿಯಾಗಿದ್ದು, 2792 ಜನರು ರೋಗದಿಂದ ಚೇತರಿಸಿಕೊಂಡಿದ್ದಾರೆ ಎಂಬ ಅಧಿಕೃತ ಮಾಹಿತಿಯಿದೆ.
ಬೆಂಗಳೂರಿನ 4 ಆಸ್ಪತ್ರೆಗಳಲ್ಲಿ ಐಸೊಲೇಟೆಡ್ ವಾರ್ಡ್ ಸ್ಥಾಪನೆ
ಕೊರೋನಾ ವೈರಸ್ ಶಂಕಿತರನ್ನು ತಪಾಸಣೆ ಮಾಡಲು, ವೈರಸ್ ಪತ್ತೆಯಾದಲ್ಲಿ ಚಿಕಿತ್ಸೆ ಕೊಡಲು ರಾಜ್ಯ ಆರೋಗ್ಯ ಇಲಾಖೆ ಸಿದ್ಧತೆ ಮಾಡಿಕೊಂಡಿದೆ. ವೈರಸ್ ಕುರಿತು ವಿಶ್ವ ಆರೋಗ್ಯ ಸಂಸ್ಥೆ ಅಧಿಕೃತ ಪ್ರಕಟಣೆ ಹೊರಡಿಸುತ್ತಿದ್ದಂತೆಯೆ ಬೆಂಗಳೂರಿನ ರಾಜೀವ್ ಗಾಂಧಿ ಎದೆರೋಗಗಳ ಸಂಸ್ಥೆಯಲ್ಲಿ 10 ಹಾಸಿಗೆಗಳ ಐಸೊಲೇಟೆಡ್ ವಾರ್ಡ್ ಸ್ಥಾಪಿಸಲಾಗಿದೆ. ಜೊತೆಗೆ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆ, ಬೆಂಗಳೂರು ಮೆಡಿಕಲ್ ಕಾಲೇಜು ಆಸ್ಪತ್ರೆ, ಪೋರ್ಟಿಸ್ ಆಸ್ಪತ್ರೆ ಹಾಗೂ ನಾರಾಯಣ ಹೃದಯಾಲಯದಲ್ಲಿ ಐಸೊಲೇಟೆಡ್ ವಾರ್ಡ್ಗಳನ್ನು ನಿರ್ಮಾಣ ಮಾಡಲಾಗಿದೆ. ಜೊತೆಗೆ ರಾಜ್ಯ ಆರೋಗ್ಯ ಇಲಾಖೆಯೊಂದಿಗೆ ಒಡಂಬಡಿಕೆ ಮಾಡಿಕೊಂಡಿರುವ ಎಲ್ಲ ಪ್ರಮುಖ ಖಾಸಗಿ ಆಸ್ಪತ್ರೆಗಳಲ್ಲಿಯೂ ಕೊರೋನಾ ವೈರಸ್ ರೋಗಿಗಳಿಗೆ ಚಿಕಿತ್ಸೆ ಕೊಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
ಉಳಿದಂತೆ ರಾಜ್ಯದ ಎಲ್ಲ ಜಿಲ್ಲಾ ಆಸ್ಪತ್ರೆಗಳಲ್ಲಿಯೂ ಐಸೊಲೇಟೆಡ್ ವಾರ್ಡ್ಗಳನ್ನು ಸ್ಥಾಪಿಸಲಾಗಿದೆ. ಶಂಕಿತರು ಅಥವಾ ಇತ್ತಿಚಿಗೆ ಚೀನಾಕ್ಕೆ ಹೋಗಿ ಬಂದವರು ಕಂಡುಬಂದಲ್ಲಿ ಉಚಿತ ಸಹಾಯವಾಣಿ ಸಂಖ್ಯೆ 104ಕ್ಕೆ ದೂರವಾಣಿ ಕರೆ ಮಾಡಿ ಮಾಹಿತಿ ಕೊಡುವಂತೆ ಆರೋಗ್ಯ ಇಲಾಖೆ ಮನವಿ ಮಾಡಿಕೊಂಡಿದೆ.
ಕರೋನಾ ಮಾಹಿತಿಗೆ ಆರೋಗ್ಯ ಸಹಾಯವಾಣಿ
ಕೊರೋನಾ ವೈರಸ್ ಕುರಿತಂತೆ ಯಾವುದೇ ಮಾಹಿತಿ ಪಡೆಯಲು ಉಚಿತ ಆರೋಗ್ಯ ಸಹಾಯವಾಣಿಯನ್ನು ಜನವರಿ ತಿಂಗಳಿನಲ್ಲಿಯೇ ತೆರೆಯಲಾಗಿದೆ. ಈ ವರೆಗೆ ಒಟ್ಟು 1,792 ಕರೆಗಳು ಜನರಿಂದ ಬಂದಿವೆ. ಎಲ್ಲರಿಗೂ ಪೂರಕವಾದ ಮಾಹಿತಿಯನ್ನು ದಿನದ 24 ಗಂಟೆಯೂ ಒದಗಿಸಲಾಗುತ್ತಿದೆ. ಯಾವುದೇ ಅನುಮಾನಗಳಿದ್ದಲ್ಲಿ ಅಥವಾ ವೂಹಾನ್ನಲ್ಲಿ ಕೊರೋನಾ ವೈರಸ್ ಪತ್ತೆಯಾದ ಬಳಿಕ ಚೀನಾಕ್ಕೆ ಹೋಗಿ ಬಂದವರ ವಿವರಗಳನ್ನು ಸಹಾಯವಾಣಿಯ ಮೂಲಕ ಕೊಡುವಂತೆ ಆರೋಗ್ಯ ಇಲಾಖೆ ಮನವಿ ಮಾಡಿಕೊಂಡಿದೆ.
ಕೋಳಿಯಿಂದ ಕೊರೊನಾ ವೈರಸ್: ಸುಳ್ಳು ಸುದ್ದಿ ಹರಡುವವರ ವಿರುದ್ಧ ದೂರು
ಥರ್ಮಲ್ ಸ್ಕಾನಿಂಗ್ ಮೂಲಕ 14,153 ಪ್ರಯಾಣಿಕರ ತಪಾಸಣೆ
ಕೊರೋನಾ ವೈರಸ್ ದೃಢಪಟ್ಟಿರುವ 28 ದೇಶಗಳಿಂದ ಬಂದಿರುವ ಎಲ್ಲ ಪ್ರಯಾಣಿಕರನ್ನು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಥರ್ಮಲ್ ಸ್ಕ್ಯಾನಿಂಗ್ ಮೂಲಕ ತಪಾಸಣೆ ಮಾಡಲಾಗಿದೆ. ಜನವರಿ 20ರಿಂದ ಇಲ್ಲಿಯವರೆಗೆ ಒಟ್ಟು 14,153 ಪ್ರಯಾಣಿಕರನ್ನು ತಪಾಸಣೆ ಮಾಡಲಾಗಿದೆ. ಅವರಲ್ಲಿ ಕೊರೋನಾ ವೈರಸ್ ಪೀಡಿತ ದೇಶಗಳಿಂದ ಬಂದಿದ್ದ 138 ಶಂಕಿತರ ಮೇಲೆ ನಿಗಾ ಇಡಲಾಗಿದೆ, ಅವರಲ್ಲಿ 130 ಜನರು ಮನೆಯಲ್ಲಿಯೆ ಪ್ರತ್ಯೇಕವಾಗಿರುವಂತೆ ಸೂಚಿಸಲಾಗಿದೆ. 4 ಚೀನಿ ಪ್ರಯಾಣಿಕರು ತಮ್ಮ ದೇಶಕ್ಕೆ ಹಿಂದಿರುಗಿದ್ದಾರೆ, ಉಳಿದಂತೆ 4 ಶಂಕಿತರು ವಿವಿಧ ಆಸ್ಪತ್ರೆಗಳ ಐಸೊಲೇಟೆಡ್ ವಾರ್ಡ್ಗಳಲ್ಲಿ ನಿಗಾದಲ್ಲಿದ್ದಾರೆ.
ಈ ವರೆಗೆ ರೋಗಲಕ್ಷಣಗಳು ಕಂಡುಬಂದಿದ್ದ 104 ಶಂಕಿತರ ರಕ್ತ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳಿಸಲಾಗಿದ್ದು, ಅವರಲ್ಲಿ 85 ಜನರ ರಕ್ತಮಾದರಿಯಲ್ಲಿ ಕೊರೋನಾ ವೈರಸ್ ಇಲ್ಲ ಎಂದು ದೃಢಪಟ್ಟಿರುವುದಾಗಿ ಆರೋಗ್ಯ ಇಲಾಖೆ ಮಾಹಿತಿ ಕೊಟ್ಟಿದೆ. ಹೀಗಾಗಿ ವರೆಗೆ ರಾಜ್ಯದಲ್ಲಿ ಕರೋನಾ ವೈರಸ್ ದೃಢಪಟ್ಟಿಲ್ಲ ಎಂದು ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ.
ವೈರಸ್ ಪತ್ತೆಗೆ ಬೆಂಗಳೂರಿನಲ್ಲಿ ಪ್ರಯೋಗಾಲಯ ಆರಂಭ
ಕೊರೋನಾ ವೈರಸ್ ರಕ್ತ ಮಾದರಿ ಸಂಗ್ರಹಿಸಿ ಪುಣೆಯ ಪ್ರಯೋಗಾಯಕ್ಕೆ ಕಳುಹಿಸಿ ಕೊಡಬೇಕಾಗಿತ್ತು. ವರದಿ ಬರಲು ಕನಿಷ್ಠ ಸುಮಾರು 48 ಗಂಟೆಗಳ ಕಾಲಾವಕಾಶ ಬೇಕಿತ್ತು. ಆದರೆ ಇದೀಗ ಬೆಂಗಳೂರಿನ ಎರಡು ಕಡೆಗಳಲ್ಲಿ ಕೊರೋನಾ ವೈರಸ್ ಪತ್ತೆಗೆ ಪ್ರಯೋಗಾಲಯ ನಿರ್ಮಿಸಲಾಗಿದೆ. ರಾಜೀವ್ ಗಾಂಧಿ ಎದೆರೋಗಗಳ ಸಂಸ್ಥೆ ಹಾಗೂ ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ ಕೊರೋನಾ ವೈರಸ್ ಪತ್ತೆಗೆ ಪ್ರಯೋಗಾಲಯ ಸಿದ್ಧಪಡಿಸಲಾಗಿದೆ, ಇದರಿಂದಾಗಿ ಕೇವಲ 10 ತಾಸುಗಳಲ್ಲಿ ವರದಿ ಸಿಗಲಿದೆ. ಎರಡೂ ಪ್ರಯೋಗಾಲಯಗಳಲ್ಲಿ ದಿನಕ್ಕೆ ತಲಾ 10 ಜನರ ರಕ್ತ ಮಾದರಿ ತಪಾಸಣೆ ಮಾಡಲು ಸೌಲಭ್ಯವಿದೆ.
ಕೊರೊನಾ ವೈರಸ್ ಹರಡಲು ಪ್ಯಾಂಗೋಲಿನ್ ಕಾರಣ?
ಕೋರೋನಾ ವೈರಸ್ಗೆ ಇಲ್ಲ ಯಾವುದೇ ಚಿಕಿತ್ಸೆ!
ಕೊರೋನಾ ವೈರಸ್ ಬರದಂತೆ ತಡೆಯಲು ಹಾಗೂ ಕರೋನಾ ವೈರಸ್ ರೋಗಿಗಳನ್ನು ಗುಣಪಡಿಸಲು ಯಾವುದೇ ನಿಖರ ಚಿಕಿತ್ಸೆ ಲಭ್ಯವಿಲ್ಲ ಎಂದು ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ. ರೋಗ ನಿರೋಧಕ ಲಸಿಕೆ ಕಂಡುಹಿಡಿಯಲು ಈಗಾಗಲೇ ಪ್ರಯತ್ನಗಳು ಆರಂಭವಾಗಿದ್ದು, ವಿಶ್ವ ಆರೋಗ್ಯ ಸಂಸ್ಥೆ ಕೂಡ ಲಸಿಕೆ ಕಂಡುಹಿಡಿಯಲು ಹಾಗೂ ಕೊರೋನಾ ವೈರಸ್ ಚಿಕಿತ್ಸೆಗೆ ಪರಿಣಾಮಕಾರಿ ಔಷಧ ಕಂಡುಹಿಡಿಯಲು ಸಹಾಯ ಮಾಡುತ್ತಿದೆ.
ಬಾಯಿ ಮುಕ್ಕಳಿಸುವಿಕೆ, ಎಳ್ಳಿನ ಎಣ್ಣೆಯನ್ನು ದೇಹಕ್ಕೆ ಹಚ್ಚಿಕೊಳ್ಳುವುದರಿಂದ ಅಥವಾ ಶುಂಟಿಯನ್ನು ಸೇವನೆ ಮಾಡುವುದರಿಂದ ಕೊರೋನಾ ವೈರಸ್ ಬಾರದಂತೆ ತಡೆಯುವುದು ಅಥವಾ ವೈರಸ್ಗೆ ಚಿಕಿತ್ಸೆ ರೂಪದಲ್ಲಿ ಕೊಡುವುದು ಅಸಾಧ್ಯ ಎಂದು ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ. ಯಾವುದೇ ಪ್ರತಿಜೀವಕ (antibiotic) ಕೂಡ ಈವರೆಗೆ ಕೊರೋನಾ ವೈರಸ್ ನಿಯಂತ್ರಿಸಿದ್ದು ದೃಢಪಟ್ಟಿಲ್ಲ, ಮುಂಜಾಗ್ರತೆ ವಹಿಸುವುದು ಮಾತ್ರ ರೋಗ ತಡೆಯುವ ಸಾಧನವಾಗಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ಕೊಟ್ಟಿದೆ.
ಕೇರಳದಲ್ಲಿ ಕೊರೋನಾ ವೈರಸ್ ಪತ್ತೆ, ರಾಜ್ಯದಲ್ಲಿ ನಿಗಾ
ಕೇರಳದ 3 ಶಂಕಿತರಲ್ಲಿ ಈಗಾಗಲೇ ಕೊರೋನಾ ವೈರಸ್ ದೃಢಪಟ್ಟಿರುವುದರಿಂದ ಕೇರಳ ಗಡಿಗೆ ಹೊಂದಿಕೊಂಡಿರುವ ಜಿಲ್ಲೆಗಳಲ್ಲಿ ತೀವ್ರ ನಿಗಾ ವಹಿಸಲಾಗಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ತಿಳಿಸಿದೆ.
ಕೊರೊನಾ ಸುಳಿಯಲ್ಲಿ 70 ಭಾರತೀಯ ವಿದ್ಯಾರ್ಥಿಗಳು, ಇದು ಕಥೆಯಲ್ಲ ಸತ್ಯ!
ಕೇರಳದಲ್ಲಿ ಕೊರೋನಾ ವೈರಸ್ ಕಂಡು ಬಂದಿರುವುದರಿಂದ ರಾಜ್ಯದ ದಕ್ಷಿಣ ಕನ್ನಡ, ಕೊಡಗು, ಚಾಮರಾಜನಗರ ಮತ್ತು ಮೈಸೂರು ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಜಿಲ್ಲಾ ಆಸ್ಪತ್ರೆಗ, ಆರೋಗ್ಯ ಇಲಾಖೆ ತೀವ್ರ ನಿಗಾವಹಿಸಿವೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಮೆಟ್ರೊ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಮಾಹಿತಿ
ಇನ್ನು ನಮ್ಮ ಮೆಟ್ರೊ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಕೊರೋನಾ ವೈರಸ್ ಬಗ್ಗೆ ಮಾಹಿತಿ ಫಲಕಗಳ ಮೂಲಕ ಸಾರ್ವಜನಿಕರಿಗೆ ತಿಳಿವಳಿಕೆ ಕೊಡಲಾಗುತ್ತಿದೆ. ಮೆಟ್ರೊ, ವಿಮಾನ ನಿಲ್ದಾಣ, ರೇಲ್ವೆ ನಿಲ್ದಾಣ, ಬಹುರಾಷ್ಟ್ರೀಯ ಕಂಪನಿಗಳು, ಐಟಿ ಕಂಪನಿಗಳಲ್ಲಿ ತಿಳಿವಳಿಕೆ ಕೊಡುವ ಮುಂಜಾಗ್ರತಾ ಫಲಕಗಳ ಮೂಲಕ ಅರಿವು ಮೂಡಿಸಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ಕೊಟ್ಟಿದೆ.
ಕೊರೋನಾ ವೈರಸ್ ತಪಾಸಣೆ ಸಂದರ್ಭ H1N1 ಪತ್ತೆ!
ಇನ್ನು ಕೊರೋನಾ ವೈರಸ್ ತಪಾಸಣೆ ಮಾಡುವಾಗ ಮಾಡುವಾಗ ಎಚ್1ಎನ್1 ವೈರಾಣು ಪತ್ತೆಯಾಗಿರುವ ಅಘಾತಕಾರಿ ಮಾಹಿತಿ ಬಂದಿದೆ. ಕರೋನಾ ವೈರಸ್ ಸಂದರ್ಭದಲ್ಲಿ ರಕ್ತ ಮಾದರಿ ಸಂಗ್ರಹಿಸಿ ತಪಾಸಣೆ ನಡೆಸಿದಾಗ 74 ಜನರಲ್ಲಿ ಎಚ್1ಎನ್1 ಪತ್ತೆಯಾಗಿರುವ ಅಘಾತಾಕಾರಿ ಅಂಶ ಬೆಳಕಿಗೆ ಬಂದಿದೆ. ಆ ಬಗ್ಗೆಯೂ ರಾಜ್ಯ ಆರೋಗ್ಯ ಇಲಾಖೆ ನಿಗಾ ಇಟ್ಟಿದೆ ಎಂದು ತಿಳಿದು ಬಂದಿದೆ.
Fact Check: 20,000 ಕೊರೊನಾ ವೈರಸ್ ರೋಗಿಗಳ ಹತ್ಯೆಗೆ ಚೀನಾ ನಿರ್ಧಾರ ಸತ್ಯವೇ?
ಈಗಾಗಲೇ ಸಾರ್ಸ್ ಮೀರಿಸಿರುವ ಕೊರೋನಾ ವೈರಸ್
ಕಳೆದ 2000ನೇ ಇಸ್ವಿಯಲ್ಲಿ ಪತ್ತೆಯಾಗಿದ್ದ ಸಾರ್ಸ್ ವೈರಸ್ನ್ನು ಕೊರೋನಾ ವೈರಸ್ ಮೀರಿಸಿದೆ. ಸಾರ್ಸ್ ವೈರಾಣು ಪತ್ತೆಯಾದಾಗ ಜಗತ್ತಿನಾದ್ಯಂತ ಸುಮಾರು 774 ಜನರು ಬಲಿಯಾಗಿದ್ದರು ಎಂಬ ಮಾಹಿತಿಯಿದೆ. ಕೊರೋನಾ ವೈರಸ್ಗೆ ಬಲಿಯಾದವರ ಸಂಖ್ಯೆ ಈಗಾಗಲೇ 813 ಮೀರಿದೆ. ಹೀಗಾಗಿ ಈ ಹಿಂದೆ ಕಾಣಿಸಿಕೊಂಡಿದ್ದ ಎಲ್ಲ ವೈರಾಣು ರೋಗಗಳಿಗಿಂತ ಕೊರೋನಾ ವೈರಸ್ ಸೃಷ್ಟಿಸುತ್ತಿರುವ ಭೀಕರತೆ ಹೆಚ್ಚಾಗುತ್ತಿದೆ.
ರಾಜ್ಯದಲ್ಲಿ ಮಾಸ್ಕ್ಗಳ ಕೊರತೆಯಿಲ್ಲ ಎಂದ ಆರೋಗ್ಯ ಇಲಾಖೆ
ಜಗತ್ತಿನಾದ್ಯಂತ ಕೊರೋನಾ ವೈರಸ್ ತಡೆಯಲು ಮಾಸ್ಕ್ಗಳ ಕೊರೆತೆಯಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. ಆದರೆ ರಾಜ್ಯದಲ್ಲಿ ಮಾಸ್ಕ್ಗಳ ಕೊರೆತೆಯಿಲ್ಲ ಎಂದು ರಾಜ್ಯ ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ. ಹಿಂದೆ H1N1 ವೈರಾಣು ಕಾಣಿಸಿಕೊಂಡಾಗಲೇ ಸಾಕಷ್ಟು ಮಾಸ್ಕ್ ಸಂಗ್ರಹ ಮಾಡಿಕೊಳ್ಳಲಾಗಿತ್ತು, ಹೀಗಾಗಿ ರಾಜ್ಯದಲ್ಲಿ ಮಾಸ್ಕ್ ಕೊರೆತೆಯಿಲ್ಲ. N95 ಮಾದರಿಯ ಮಾಸ್ಕ್ ಎಲ್ಲರಿಗೂ ಬೇಕಿಲ್ಲ, ಶಂಕಿತರಿಗೆ ಮಾತ್ರ ಆ ಮಾದರಿಯ ಮಾಸ್ಕ್ ಬೇಕಾಗುತ್ತದೆ. ಹೀಗಾಗಿ ಭಯದಿಂದ N95ಮಾದರಿಯ ಮಾಸ್ಕ್ ಖರೀದಿಗೆ ಜನರು ಮುಂದಾಗಬಾರದು ಎಂದು ಆರೋಗ್ಯ ಇಲಾಖೆ ಮನವಿ ಮಾಡಿಕೊಂಡಿದೆ.
ಆತಂಕದಲ್ಲಿ ಬೆಂಗಳೂರು ಟ್ರಾಫಿಕ್ ಪೊಲೀಸರು
ಕೊರೋನಾ ವೈರಸ್ ಭೀತಿಯಿಂದ ಬೆಂಗಳೂರು ಸಂಚಾರಿ ಪೊಲೀಸರು ಆತಂಕದಲ್ಲಿದ್ದಾರೆಂಬ ಮಾಹಿತಿ ಬಂದಿದೆ. ಮದ್ಯಪಾನ ಮಾಡಿ ವಾಹನ ಚಲಾಯಿಸುವವರನ್ನು ತಪಾಸಣೆ ಮಾಡಲು ಅಲ್ಕೊಮೀಟರ್ ಬಾಯಿಗಿಟ್ಟು ಊದಿಸಬೇಕಾಗುತ್ತದೆ. ಆದರೆ ಊಸಿರಿನಿಂದ ಕೊರೋನಾ ವೈರಸ್ ಹರಡುತ್ತದೆ ಎಂಬುದು ದೃಢಪಟ್ಟಿರುವುದರಿಂದ ಬೆಂಗಳೂರು ಸಂಚಾರಿ ಪೊಲೀಸರು ರಾತ್ರಿ ತಪಾಸಣೆ ಮಾಡಲು ಹಿಂಜರಿಯುತ್ತಿದ್ದಾರೆಂಬ ಮಾಹಿತಿ ಬಂದಿದೆ.
CoronaVirus Effect: ಬೆಂಗಳೂರಲ್ಲಿ ಡ್ರಿಂಕ್ ಆಂಡ್ ಡ್ರೈವ್ ಪರೀಕ್ಷೆ ಸ್ಘಗಿತ!
ಆದರೆ ಈ ವರೆಗೆ ರಾಜ್ಯದಲ್ಲಿ ಕರೋನಾ ವೈರಸ್ ದೃಢಪಟ್ಟಿಲ್ಲ, ಹೀಗಾಗಿ ಅಂತಹ ವದಂತಿಗಳಿಗೆ ಕಿವಿಗೊಡದಿರಲು ಸೂಚಿಸಿಲಾಗಿದೆ ಎಂಬ ಮಾಹಿತಿಯಿದೆ.