ಪಾಳು ಗುಡಿಸಲಿನ ಒಡೆಯ ಈಗ ಮೋದಿ ಸರ್ಕಾರದ ಸಚಿವ!
ಜನಸೇವೆಯನ್ನೇ ಬದುಕು ಎಂದುಕೊಂಡ ಕೆಲವರು ರಾಜಕೀಯಕ್ಕೆ ಬಂದಾಗ ರಾಜಕಾರಣದ ಮೇಲಿನ ನಂಬಿಕೆ ಗಟ್ಟಿಯಾಗುತ್ತದೆ. ಮೇ 30 ರಂದು ರಾಷ್ಟ್ರಪತಿ ಭವನದಲ್ಲಿ ಅರವತ್ತರ ಆಸುಪಾಸಿನ ಗಡ್ಡಧಾರಿ ವ್ಯಕ್ತಿಯೊಬ್ಬರು ಬಿಳಿಜುಬ್ಬ ಧರಿಸಿ ವೇದಿಕೆಯ ಮೇಲೆ ಬಂದಾಗ 'ಜನಸಾಮಾನ್ಯರಿಗೆ ರಾಜಕಾರಣವಲ್ಲ' ಎಂದಿದ್ದವರಿಗೆ ಕೊಂಚ ನೆಮ್ಮದಿಯಾಗಿದ್ದು ಸತ್ಯ.
ಆಗಲೋ ಈಗಲೋ ಬಿದ್ದುಹೋಗುವಂಥ ಪಾಳು ಗುಡಿಸಲಿನಲ್ಲಿ ವಾಸಿಸುವ ಪ್ರತಾಪ್ ಚಂದ್ರ ಸಾರಂಗಿ ಅವರು "ಈಶ್ವರ ಹೆಸರಿನಲ್ಲಿ..." ಎನ್ನುತ್ತ ಪ್ರಮಾಣವಚನ ಸ್ವೀಕರಿಸುವಾಗ 'ಯಾರಿವರು?' ಎಂದು ಅಚ್ಚರಿ ವ್ಯಕ್ತಪಡಿಸಿದವರೇ ಹೆಚ್ಚು.
ಒಡಿಶಾದ ಬಾಲಾಸೋರ್ ನಲ್ಲಿ ಬಿಜೆಡಿ ಅಭ್ಯರ್ಥಿ ರಬೀಂದ್ರ ಜೇನಾ ಅವರನ್ನು 12,956 ಮತಗಳಿಂದ ಸೋಲಿಸಿ ಸಂಸದರಾದ ಸಾರಂಗಿ ಅವರಿಗೆ ಮೋದಿ ಸರ್ಕಾರ ಇದೀಗ ಸಚಿವ ಸ್ಥಾನ ನೀಡಿದೆ.
ಈ ಸಂಸದರ ಒಟ್ಟು ಆಸ್ತಿ, ಒಂದು ಗುಡಿಸಲು, ಒಂದು ಸೈಕಲ್, ಒಂದು ಬ್ಯಾಗು!
ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿನ್ನೆಲೆಯಿಂದ ಬಂದು ಹಳ್ಳಿಗಾಡಿನ ಅಭಿವೃದ್ಧಿಗಾಗಿ, ಜನಸೇವೆಗಾಗಿಯೇ ತಮ್ಮ ಬದುಕನ್ನು ಮುಡಿಪಾಗಿಟ್ಟ ಸಾರಂಗಿ ಅವರನ್ನು ಗುರುತಿಸಿ, ಅವರಿಗೆ ಕೇಂದ್ರ ಸರ್ಕಾರದ ಸಚಿವ ಸಂಪುಟದಲ್ಲಿ ಸ್ಥಾನ ನೀಡಲಾಗಿದೆ.
ಮಂತ್ರಿಯಾಗಿ ಸಾರಂಗಿ ಮೊದಲ ಮಾತು
"ಪ್ರಧಾನಿ ನರೇಂದ್ರ ಮೋದಿ ಅವರು ನನ್ನ ಮೇಲೆ ನಂಬಿಕೆ ಇಟ್ಟಿಕೊಂಡು ಮಂತ್ರಿಸ್ಥಾನ ನೀಡಿದ್ದು ನನ್ನ ಪುಣ್ಯ. ಈ ದೇಶದ ಸೇವೆಗೆ ಇದೊಂದು ಮಾಧ್ಯಮ ಎಂದು ನಾನು ಭಾವಿಸಿದ್ದೇನೆ. ನಮ್ಮ ಪಕ್ಷ ಎಂದಿಗೂ, ದೇಶ ಮೊದಲು, ಪಕ್ಷ ನಂತರ, ನಾನು ಕೊನೆಯಲ್ಲಿ ಎಂಬ ತತ್ತ್ವದಲ್ಲಿ ನಂಬಿಕೆ ಇಟ್ಟಿದೆ. ನಾನು ಮೋದಿ ಮತ್ತು ಜನ ಸಾಮಾನ್ಯರ ನಂಬಿಕೆಯನ್ನು ಗಳಿಸಲು, ಉಳಿಸಿಕೊಳ್ಳಲು ನನ್ನ ಕೈಲಾದಷ್ಟು ಕೆಲಸ ಮಾಡುತ್ತೇನೆ" ಪ್ರತಾಪ್ ಚಂದ್ರ ಸಾರಂಗಿ
'ಭಿಕ್ಷಾಟನೆ' ವೃತ್ತಿ ಮಾಡಿಕೊಂಡಿದ್ದಾಕೆ ಇದೀಗ ಸಂಸದೆ!
ವೈಯಕ್ತಿಕ ಬದುಕು
ಸಾರಂಗಿ ಅವರು ಜನಿಸಿದ್ದು ಜನವರಿ 4, 1955 ರಂದು ಒಡಿಶಾದ ಬಾಲಾಸೋರ್ ನ ನೀರಗಿರಿಯ ಗೋಪಿನಾಥಪುರ ಎಂಬಲ್ಲಿ. ಫಕಿರ್ ಮೋಹನ್ ಕಾಲೇಜಿನಲ್ಲಿ ಪದವಿ ಪಡೆದ ಅವರು ಅಧ್ಯಾತ್ಮದತ್ತ ಆಸಕ್ತಿ ತಳೆದರು. ಪಶ್ಚಿಮ ಬಂಗಾಳದ ಬೇಲೂರಿನ ರಾಮಕೃಷ್ಣಮಠದ ಸಂಪರ್ಕಕ್ಕೆ ಬಂದ ಅವರುತಮ್ಮ ಬದುಕನ್ನು ಅಧ್ಯಾತ್ಮ ಸಾಧನೆಗೆ ಮೀಸಲಿಡುವ ನಿರ್ಧಾರಕ್ಕೆ ಬಂದರು. ಆದರೆ ಮನೆಯಲ್ಲಿ ವಿಧವೇ ತಾಯಿ ಇರುವುದು ಮಠದ ಸ್ವಾಮಿಗಳಿಗೆ ತಿಳಿದು ತಾಯಿಯ ಸೇವೆಯನ್ನು ಮಾಡುವಂತೆ ಅವರನ್ನು ವಾಪಸ್ ಮನೆಗೆ ಕಳಿಸಿದರು. ಅಲ್ಲಿಂದ ಹಿಂತಿರುಗಿದ ನಂತರ ಸಾರಂಗಿ ತಮ್ಮನ್ನು ಪೂರ್ಣಾವಧಿ ಸೇವಾಕಾರ್ಯಕ್ಕೆ ಮುಡಿಪಾಗಿಸಿಕೊಂಡರು.
ರಾಷ್ಟ್ರೀಯ ಸ್ವಯಂಸೇವಕ ಸಂಘದೊಂದಿಗಿನ ಸಂಪರ್ಕದಿಂದಾಗಿ ಅವರು ನೂರಾರು ಊರುಗಳಿಗೆ ತೆರಳಿ ದೇಶಸೇವೆಯ ಕಿಡಿ ಹೊತ್ತಿಸಿದರು. ನಂತರ ಬಿಜೆಪಿ ಸಂಪರ್ಕಕ್ಕೆ ಬಂದ ಅವರು 2004 ಮತ್ತು 2009ರಲ್ಲಿವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. 2004 ರಲ್ಲಿ ಬಾಲಸೋರ್ ನಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದ ಅವರು ಸೋತಿದ್ದರು. ಈ ಬಾರಿ ಅದೇ ಕ್ಷೇತ್ರದಿಂದ ಗೆಲುವು ಸಾಧಿಸಿದ್ದಾರೆ.
ವಿಭಿನ್ನ ವ್ಯಕ್ತಿತ್ವ
ತಾವರೆ ಎಲೆ ಮೇಲಿನ ನೀರಿನ ಹಾಗೆ ಇಲ್ಲಿಯೇ ಇದ್ದು, ಎಲ್ಲಿಯೂ ಇಲ್ಲದಂತೆ ಬದುಕುತ್ತಿರುವವರು ಸಾರಂಗಿ. ಏಕಾಂತದಲ್ಲಿ ಅಧ್ಯಾತ್ಮಸಾಧನೆಗೆ ತೊಡಗುವ ಅವರಿಗೆ ಒಂದು ಸೈಕಲ್, ಒಂದು ಜೋಳಿಗೆ ಇದ್ದರೆ ಸಾಕು. ಸಮಯದ ಅರಿವಿಲ್ಲದೆ, ಊಟ-ನಿದ್ದೆ ಇಲ್ಲದೆ ಊರೂರು ಸುತ್ತಿ ರಾಷ್ಟ್ರಸೇವೆಗೆ ಜನರನ್ನು ಉತ್ತೇಜಿಸುವು ಕೆಲಸ ಮಾಡುತ್ತಾರೆ. ಸಂಸ್ಕೃತ ಪಂಡಿತರಾಗಿರುವ ಸಾರಂಗಿ ಮೋದಿ ಸಂಪುಟದಲ್ಲಿ ಸಂಸ್ಕೃತವನ್ನು ಬಲ್ಲ ಏಕೈಕ ಸಂಸದರು ಎಂಬುದು ಅವರ ಮತ್ತೊಂದು ವಿಶೇಷತೆ.
ಅಂದು ಹಾಲಿನ ವ್ಯಾಪಾರಿ, ಇಂದು ಕೋಲಾರದ ಬಿಜೆಪಿ ಸಂಸದ!
ಮತ್ತೆ ಬಿಜೆಪಿ ತೆಕ್ಕೆಗೆ ಬಾಲಸೋರ್
ಬಾಲಸೋರ್ ಕ್ಷೇತ್ರದಲ್ಲಿ 1998, 1999 ಮತ್ತು 2004 ಈ ಮೂರು ಅವಧಿಯನ್ನು ಬಿಟ್ಟರೆ ಬಿಜೆಪಿ ಮತ್ತೆಂದೂ ಗೆಲುವು ಸಾಧಿಸಿರಲಿಲ್ಲ. 2014 ರಲ್ಲಿ ರಬೀಂದ್ರ ಜೈನ್ ಅವರ ವಿರುದ್ಧವೇ ಸ್ಪರ್ಧಿಸಿ ಸೋತಿದ್ದ ಸಾರಂಗಿ ಈ ಬಾರಿ ಗೆಲುವು ಸಾಧಿಸಿದರು. ಇದಕ್ಕೂ ಮುನ್ನ ಅವರು 2004 ಮತ್ತು 2009 ರಲ್ಲಿ ನಿಲಗಿರಿ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು.
ಒಟ್ಟು ಆಸ್ತಿ ಎಷ್ಟು?
ಲೋಕಸಭೆ ಚುನಾವಣೆ ನಾಮಪತ್ರ ಸಲ್ಲಿಸುವ ಸಮಯದಲ್ಲಿ ಅವರು ಚುನಾವಣಾ ಆಯೋಗಕ್ಕೆ ನೀಡಿದ ಅಫಿಡವಿಟ್ ಪ್ರಜಾರ ಅವರ ಒಟ್ಟು ಆಸ್ತಿ 13,46,236 ರೂ. ಒಟ್ಟು ಏಳು ಕ್ರಿಮಿನಲ್ ಕೇಸ್ ಗಳು ಅವರ ಮೇಲಿದೆ.