ನ್ಯಾ. ಕರ್ಣನ್ ವಿಚಾರದಲ್ಲಿ ಕುರುಡಾಗಿದ್ದ ಭಾರತ, ಪ್ರಶಾಂತ್ ಭೂಷಣ್ ವಿಚಾರದಲ್ಲಿ ಎಚ್ಚೆತ್ತಿದೆ...
ನವದೆಹಲಿ, ಆಗಸ್ಟ್ 19: ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅವರು ತಪ್ಪಿತಸ್ಥರು ಎಂದು ಸುಪ್ರೀಂಕೋರ್ಟ್ ಹೇಳಿದೆ. ಅವರಿಗೆ ಶಿಕ್ಷೆಯನ್ನೂ ವಿಧಿಸಲಾಗುತ್ತಿದೆ. ಇದೇ ರೀತಿಯ ಪ್ರಕರಣದಲ್ಲಿ ಈ ಹಿಂದೆ ನ್ಯಾ. ಕರ್ಣನ್ ಕೂಡ ಸಿಲುಕಿದ್ದರು. ಈ ಎರಡೂ ಪ್ರಕರಣಗಳ ಸ್ವರೂಪ ಬೇರೆ. ಹಾಗೆಯೇ ಈ ಎರಡರಲ್ಲಿಯೂ ಕೇಳಿಬರುತ್ತಿರುವ ಜನರ ಅಭಿಪ್ರಾಯಗಳಲ್ಲಿಯೂ ವ್ಯತ್ಯಾಸವಿದೆ ಎನ್ನುತ್ತಾರೆ ದಿಲೀಪ್ ಮಂಡಲ್. ಈ ಪ್ರಕರಣದಲ್ಲಿ 'ದಿ ಪ್ರಿಂಟ್' ಪತ್ರಿಕೆಗೆ ಅವರು ಬರೆದ ಬರಹದ ಆಯ್ದ ಅಂಶಗಳು ಇಲ್ಲಿವೆ.
ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ವಕೀಲ ಪ್ರಶಾಂತ್ ಭೂಷಣ್ ವಿರುದ್ಧ ಸುಪ್ರೀಂಕೋರ್ಟ್ ನೀಡಿರುವ ತೀರ್ಪು ತೀವ್ರ ಚರ್ಚೆಗೀಡಾಗಿದೆ. ಇದರ ವಿರುದ್ಧ ಪ್ರಗತಿಪರರ ಆಕ್ರೋಶ ವ್ಯಕ್ತವಾಗುತ್ತಿದೆ. ಅನೇಕ ನ್ಯಾಯಮೂರ್ತಿಗಳು ಕೂಡ ಪ್ರಶಾಂತ್ ಭೂಷಣ್ ಪರವಾಗಿ ದನಿ ಎತ್ತಿದ್ದಾರೆ.
ಪ್ರಶಾಂತ್ ಭೂಷಣ್ ನ್ಯಾಯಾಂಗ ನಿಂದನೆ ಪ್ರಕರಣ: ಮತ್ತಷ್ಟು ಪರಿಶೀಲನೆಗೆ ಮುಂದಾದ ಸುಪ್ರೀಂಕೋರ್ಟ್
ಆದರೆ ಬಹಳ ಹಿಂದೇನಲ್ಲ, ನ್ಯಾಯಮೂರ್ತಿ ಸಿ.ಎಸ್ ಕರ್ಣನ್ ಅವರನ್ನು ಭ್ರಷ್ಟ ನ್ಯಾಯಾಧೀಶರು ಎಂದು ಹೇಳಿಕೆ ನೀಡಿದ್ದಕ್ಕಾಗಿ ಆರು ತಿಂಗಳ ಜೈಲು ವಾಸಕ್ಕೆ ಕಳುಹಿಸಿದ್ದನ್ನು ಅನೇಕರು ಮೌನವಾಗಿ ವೀಕ್ಷಿಸಿದ್ದರು. ವಾಸ್ತವವಾಗಿ ಸ್ವತಃ ಪ್ರಶಾಂತ್ ಭೂಷಣ್ ಕೂಡ ಮುಕ್ತವಾಗಿ ಮಾತನಾಡಿದ್ದ ಈ ದಲಿತ ನ್ಯಾಯಮೂರ್ತಿಯ ಶಿಕ್ಷೆಯನ್ನು ಸ್ವಾಗತಿಸಿದ್ದರು. ಭಾರತೀಯ ನ್ಯಾಯಾಂಗ ಇತಿಹಾಸದಲ್ಲಿಯೇ ಇಂತಹ ಘಟನೆ ನಡೆದಿದ್ದು ಇದೇ ಮೊದಲು. ಮುಂದೆ ಓದಿ.
ಜಾತಿ ಆಧಾರಿತ ಆಕ್ರೋಶ
ಈ ಆಕ್ರೋಶ ಬಹಳ ಸೀಮಿತವಾಗಿದೆ ಎನ್ನುವುದು ಸ್ಪಷ್ಟ. ಈ ಆಕ್ರೋಶವು ಜಾತಿ ವ್ಯತ್ಯಾಸದ ಆಧಾರಿತ ಎಂದೂ ಹೇಳಲಾರೆ. ಹಾಗೆ ಹೇಳುವುದು ಬಹಳ ಸರಳ ಮತ್ತು ಚಿಕ್ಕದು ಎನಿಸುತ್ತದೆ. ಆದರೆ ಪ್ರಶಾಂತ್ ಭೂಷಣ್ ಒಬ್ಬ ದೆಹಲಿಯ ಪ್ರಭಾವಶಾಲಿ ವರ್ಗದ ಉತ್ಪನ್ನ. ಈ ಸ್ನೇಹಶೀಲ ವಾತಾವರಣಕ್ಕೆ ನ್ಯಾಯಮೂರ್ತಿ ಕರ್ಣನ್ ಹೊರಗಿನವರು. ಕಳೆದ ವಾರದ ಸುಪ್ರೀಂಕೋರ್ಟ್ ತೀರ್ಪಗಿಂತ ವಿಭಿನ್ನವಾಗಿ ಕಾನೂನು ಮತ್ತು ಭಿನ್ನಮತೀಯರ ನಿಯಮಗಳನ್ನು ಭಾರತೀಯರು ಹೇಗೆ ಗ್ರಹಿಸುತ್ತಾರೆ ಎನ್ನುವುದನ್ನು ಇದೇ ಹೇಳುತ್ತದೆ.
ನ್ಯಾ. ಕರ್ಣನ್ ಪ್ರಕರಣ
ನ್ಯಾಯಮೂರ್ತಿ ಕರ್ಣನ್ ಅವರು ತಮಗೆ ವಿಧಿಸಿದ ಸಂಪೂರ್ಣಾವಧಿ ಶಿಕ್ಷೆಯನ್ನು ಅನುಭವಿಸಬೇಕಾಗಿತ್ತು. ಸಂಸತ್ತು, ಆಗಿನ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಸೇರಿದಂತೆ ವಿವಿಧೆಡೆ ಅವರು ಸಲ್ಲಿಸಿದ ಕ್ಷಮೆ ಮತ್ತು ಪರಾಮರ್ಶನ ಮನವಿಗಳನ್ನು ಕಡೆಗಣಿಸಲಾಗಿತ್ತು.
ಈ ಎರಡೂ ಪ್ರಕರಣಗಳು ನ್ಯಾಯಾಂಗ ನಿಂದನೆ ಕಾಯ್ದೆಯ ಉಲ್ಲಂಘನೆಗೆ ಸಂಬಂಧಿಸಿದ್ದವು. ಈ ಪ್ರಕರಣದಲ್ಲಿ ಗರಿಷ್ಠ ಆರು ತಿಂಗಳ ಸಜೆ ಮತ್ತು/ ಅಥವಾ 2,000 ರೂ. ದಂಡ ವಿಧಿಸಬಹುದು. ಆ ಪ್ರಕರಣದಲ್ಲಿ ನ್ಯಾ. ಕರ್ಣನ್ ಅವರಿಗೆ ಕಾಯ್ದೆಯಡಿ ಗರಿಷ್ಠ ಮಟ್ಟದ ಶಿಕ್ಷೆಯನ್ನು ವಿಧಿಸಲಾಗಿತ್ತು. ಅವರ ಪದಚ್ಯುತಿಯ ಪ್ರಕ್ರಿಯೆಗಳನ್ನು ಪ್ರಾರಂಭಿಸದೆಯೇ ಜೈಲಿಗೆ ಹಾಕಲಾಗಿತ್ತು.
ಕರ್ಣನ್ ಹಿಂದಿನ ಕಥೆ ಏನು?
ಆ ಪ್ರಕರಣದ ಕುರಿತು ಬಿಬಿಸಿ ವರ್ಲ್ಡ್ ಹೀಗೆ ಬರೆದಿತ್ತು: 2017ರ ಜನವರಿಯಲ್ಲಿ ನ್ಯಾಯಮೂರ್ತಿ ಕರ್ಣನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದರು. ಅದರಲ್ಲಿ ತಾವು ಭ್ರಷ್ಟರು ಎಂದು ಉಲ್ಲೇಖಿಸಿದ್ದ 20 ನ್ಯಾಯಾಧೀಶರ ಹೆಸರನ್ನು ಬಹಿರಂಗಪಡಿಸಿದ್ದರು. ನ್ಯಾಯಮೂರ್ತಿ ಕರ್ಣನ್ ಅವರ ಹೇಳಿಕೆಗಳನ್ನು ಪ್ರಕಟಿಸುವುದು ಮತ್ತು ಪ್ರಸಾರ ಮಾಡುವುದನ್ನು ಸುಪ್ರೀಂಕೋರ್ಟ್ ನಿಷೇಧಿಸಿತ್ತು. ಹೀಗಾಗಿ ಇಡೀ ಘಟನೆಯ ಹಿಂದಿನ ಕಥೆ ಏನೆಂಬುದು ನಮಗ್ಯಾರಿಗೂ ಗೊತ್ತಾಗಲಿಲ್ಲ.
ಈ ಪ್ರಕರಣದ ವರದಿಗಾರಿಕೆಗೆ ತಡೆಯೊಡ್ಡಿದ್ದ ಸುಪ್ರೀಂಕೋರ್ಟ್ ಆದೇಶವನ್ನು ಅನೇಕ ಪತ್ರಕರ್ತರು ವಿರೋಧಿಸಿದ್ದರು. 'ನ್ಯಾಯಮೂರ್ತಿ ಕರ್ಣನ್ ಅವರ ಹೇಳಿಕೆಯನ್ನು ಪತ್ರಿಕೆಯೊಂದು ಪ್ರಕಟಿಸಿದರೆ ಏನಾಗುತ್ತದೆ? ಸುಪ್ರೀಂಕೋರ್ಟ್ ಆ ಪತ್ರಿಕೆಯ ಸಂಪಾದಕ ಮತ್ತು ವರದಿಗಾರನನ್ನು ಜೈಲಿಗೆ ಕಳುಹಿಸುತ್ತದೆಯೇ? ಯಾವ ಕಾನೂನಿನ ಅಡಿ?' ಎಂದು ಈಗಿನ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ನೀತಿ ಸಲಹೆಗಾರ ಅಶೋಕ್ ಮಲಿಕ್ ಟ್ವೀಟ್ ಮಾಡಿದ್ದರು.
ನ್ಯಾಯಾಂಗ ನಿಂದನೆ: ಆಗಸ್ಟ್.20ರಂದು ವಕೀಲ ಪ್ರಶಾಂತ್ ಭೂಷಣ್ ರಿಗೆ ಶಿಕ್ಷೆ
ಭಾರತದಲ್ಲಿ ನ್ಯಾಯಾಂಗ ನಿಂದನೆ ಕಾನೂನು
ಭಾರತದಲ್ಲಿ ನ್ಯಾಯಾಂಗ ನಿಂದನೆ ಕಾಯ್ಡೆಯು 1926ರಲ್ಲಿ ಮೊದಲು ಜಾರಿಗೆ ಬಂದಿತ್ತು. ಇದರ ಮೂಲ ಬ್ರಿಟಿಷ್ ಕಾನೂನು. ಈ ಶಾಸನಕ್ಕೆ ಬಳಿಕ ತಿದ್ದುಪಡಿ ಮಾಡಲಾಗಿತ್ತು. ಈಗಿರುವ ಕಾಯ್ದೆ 1971ರಲ್ಲಿ ಅಸ್ತಿತ್ವಕ್ಕೆ ಬಂದಿತು. ಈ ಕಾನೂನನ್ನು ಬ್ರಿಟನ್ ಬಹಳ ಹಿಂದೆಯೇ ತೆಗೆದು ಹಾಕಿದ್ದರೂ, ಭಾರತ ಮಾತ್ರ ಮುಂದುವರಿಸುತ್ತಲೇ ಇದೆ. 1971ರ ನ್ಯಾಯಾಂಗ ನಿಂದನೆ ಕಾನೂನಿನ ಕುರಿತಾದ ಕಾನೂನು ಆಯೋಗದ ವರದಿಯಲ್ಲಿ ಭಾರತವು ಅತಿ ಹೆಚ್ಚು ಸಂಖ್ಯೆಯ ಪ್ರಕರಣಗಳನ್ನು ಹೊಂದಿದೆ ಎಂದು ತಿಳಿಸಿತ್ತು (2018ರಲ್ಲಿ ವರದಿ ಸಲ್ಲಿಸುವಾಗ ಸುಮಾರು 1 ಲಕ್ಷ ಪ್ರಕರಣಗಳಿದ್ದವು). ಇಷ್ಟು ಸಂಖ್ಯೆಯ ಪ್ರಕರಣಗಳು ಬ್ರಿಟನ್ನಲ್ಲಿ 1931ರಲ್ಲಿ ಇತ್ತು. ಹೀಗಾಗಿ ಭಾರತದಲ್ಲಿ ಈ ಕಾಯ್ದೆಯು ಪ್ರಸ್ತುತವಾಗಿರುವುದನ್ನು ಅಧಿಕ ಸಂಖ್ಯೆಯ ಪ್ರಕರಣಗಳು ಸಮರ್ಥಿಸುತ್ತವೆ ಎಂದು ಆಯೋಗ ಹೇಳಿತ್ತು.
ಪ್ರಶಾಂತ್ ಭೂಷಣ್ ಹೀಗೆ ಹೇಳಿದ್ದರು
2017ರಲ್ಲಿ ನ್ಯಾ. ಕರ್ಣನ್ ವಿರುದ್ಧ ನೀಡಲಾಗಿದ್ದ ಸುಪ್ರೀಂಕೋರ್ಟ್ ತೀರ್ಪನ್ನು ಪ್ರಶಾಂತ್ ಭೂಷಣ್ ಸ್ವಾಗತಿಸಿದ್ದರು. 'ನ್ಯಾಯಾಂಗ ನಿಂದನೆಗಾಗಿ ಕರ್ಣನ್ ಅವರನ್ನು ಸುಪ್ರೀಂಕೋರ್ಟ್ ಕೊನೆಗೂ ಜೈಲಿಗೆ ಕಳುಹಿಸಿರುವುದು ಒಳ್ಳೆಯ ಸಂಗತಿ' ಎಂದು ಟ್ವೀಟ್ ಮಾಡಿದ್ದರು. ಕೋಲ್ಕತಾ ಹೈಕೋರ್ಟ್ನ ಹಾಲಿ ನ್ಯಾಯಮೂರ್ತಿ ಆಗಿದ್ದ ಕರ್ಣನ್ನ ಅವರನ್ನು ಭೂಷಣ್, 'ನ್ಯಾಯಮೂರ್ತಿ' ಎಂದು ಸಂಬೋಧಿಸದೆ ಇರುವುದು ಸ್ಪಷ್ಟವಾಗಿ ಅರಿವಾಗುತ್ತಿತ್ತು. ಅಲ್ಲದೆ, ಅವರು ನ್ಯಾಯಾಂಗ ನಿಂದನೆ ಕಾಯ್ದೆ ವಿರುದ್ಧ ಇರಲಿಲ್ಲ, ಬದಲಾಗಿ ಅದಕ್ಕೆ ಬೆಂಬಲಿಸಿದ್ದರು ಎನ್ನುವುದನ್ನೂ ತಿಳಿಸುತ್ತಿತ್ತು.
ನ್ಯಾಯಾಂಗ ನಿಂದನೆ: ಪ್ರಶಾಂತ್ ಭೂಷಣ್ ವಿಷಾದ ಒಪ್ಪಿಕೊಳ್ಳಲು ಸುಪ್ರೀಂಕೋರ್ಟ್ ನಕಾರ
ಮಾಧ್ಯಮದ ಮೌನ
ಕರ್ಣನ್ ಅವರ ಶಿಕ್ಷೆ ಸಂದರ್ಭದಲ್ಲಿ ಪತ್ರಿಕೆಗಳ ಸಂಪಾದಕೀಯಗಳು ತೀರ್ಪನ್ನು ಬೆಂಬಲಿಸುತ್ತಿದ್ದವು. ಚರ್ಚೆಗಳಲ್ಲಿಯೂ ಅದನ್ನು ಸಮರ್ಥಿಸಲಾಗುತ್ತಿತ್ತು. ಮಾಧ್ಯಮಗಳಿಗೆ ಬಹಿರಂಗ ಪತ್ರ ಬರೆದಿದ್ದ ಕರ್ಣನ್, 'ನಾನು ಜಾತಿ ತಾರತಮ್ಯದ ಬಲಿಪಶು ಎಂದು ಹಲವು ಬಾರಿ ನನ್ನ ಸಂವಹನಗಳಲ್ಲಿ ತಿಳಿಸಿದ್ದೇನೆ. ಇಂತಹ ಗಂಭೀರ ವಿಚಾರಗಳನ್ನು ರಾಷ್ಟ್ರ ಮಟ್ಟದ ಮಾಧ್ಯಮಗಳಲ್ಲಿ ಪ್ರಕಟಿಸದೆ ಇರುವುದು ಬಹಳ ದುರದೃಷ್ಟಕರ ಮತ್ತು ಬಹುಶಃ ರಾಷ್ಟ್ರೀಯ ವಿಪತ್ತಿನಂತೆ' ಎಂದು ಹೇಳಿದ್ದರು.
ಆಕ್ರೋಶ ಮತ್ತು ಮೌನ
ನ್ಯಾ. ಕರ್ಣನ್ ಮತ್ತು ಭೂಷಣ್ ಪ್ರಕರಣಗಳಲ್ಲಿ ಸ್ಪಷ್ಟವಾದ ವ್ಯತ್ಯಾಸಗಳಿವೆ. ನ್ಯಾ. ಕರ್ಣನ್ ಅವರು ಯಾವುದೇ ನ್ಯಾಯಧೀಶರ ವಿರುದ್ಧ ಸಾರ್ವಜನಿಕವಾಗಿ ಭ್ರಷ್ಟಾಚಾರ ಆರೋಪ ಮಾಡಿರಲಿಲ್ಲ. ಬದಲಾಗಿ ತಮ್ಮ ದೂರನ್ನು ಮುಚ್ಚಿದ ಲಕೋಟೆಯಲ್ಲಿ ಪ್ರಧಾನಿಗೆ ರವಾನಿಸಿದ್ದರು. ಭೂಷಣ್ ಸಾರ್ವಜನಿಕ ವೇದಿಕೆಯಾಗಿರುವ ಸಾಮಾಜಿಕ ಮಾಧ್ಯಮದಲ್ಲಿ ಆರೋಪ ಮಾಡಿರುವುದು. ಹೀಗಾಗಿ ಭೂಷಣ್ ಪ್ರಕರಣದ ಆಕ್ರೋಶ ಮತ್ತು ನ್ಯಾ. ಕರ್ಣನ್ ಪ್ರಕರಣದ ಮೌನವನ್ನು ಹೇಗೆ ಅರ್ಥ ಮಾಡಿಕೊಳ್ಳುವುದು?
ನ್ಯಾ. ಕರ್ಣನ್ ದಲಿತರಾಗಿರುವುದರಿಂದ ಮಾಧ್ಯಮವು ಪಕ್ಷಪಾತಿಯಾಗಿ ನಡೆದುಕೊಂಡಿತು. ಅವರ ಪ್ರಕರಣವನ್ನು ಸಂಪೂರ್ಣವಾಗಿ ತೆರೆದಿಡಲು ವಿಫಲವಾಯ್ತು. ಹಾಗೆಯೇ ಪ್ರಶಾಂತ್ ಭೂಷಣ್ ಮೇಲ್ವರ್ಗಕ್ಕೆ ಮತ್ತು ಎಲೈಟ್ ಗುಂಪಿಗೆ ಸೇರಿದವರು. ಅವರ ತಂದೆ ಶಾಂತಿ ಭೂಷಣ್, ಮೊರಾರ್ಜಿ ದೇಸಾಯಿ ಸಂಪುಟದಲ್ಲಿ ಕಾನೂನು ಸಚಿವರಾಗಿದ್ದರು.
ಉನ್ನತ ವರ್ಗ ಸಹಿಸಲಿಲ್ಲ
ಕರ್ಣನ್ ಅವರು ಉನ್ನತ ನ್ಯಾಯಾಂಗವನ್ನು ಮಾತ್ರವೇ ಪ್ರಶ್ನಿಸಿರಲಿಲ್ಲ, ಅವರು ಇಡೀ ಶಕ್ತಿ ವ್ಯವಸ್ಥೆಯನ್ನು ಒರೆಗೆ ಹಚ್ಚಿದ್ದರು. ಮೇಲ್ವರ್ಗದ ಪ್ರಭಾವದ ನ್ಯಾಯಾಂಗದಲ್ಲಿ ದಲಿತ ನ್ಯಾಯಮೂರ್ತಿಯ ಹಸ್ತಕ್ಷೇಪ ಅಧಿಕಾರದಲ್ಲಿರುವವರಿಗೆ ಸಹನೀಯವಾಗಿರಲಿಲ್ಲ. ಸಂಸತ್ನ ಕರಿಯಾ ಮುಂಡಾ ಸಮಿತಿ ಹೇಳಿರುವಂತೆ 1998ರ ಸಮಯಕ್ಕೆ 481 ಹೈಕೋರ್ಟ್ ನ್ಯಾಯಾಧೀಶರಲ್ಲಿ ಕೇವಲ 15 ಪರಿಶಿಷ್ಟ ಜಾತಿ ಮತ್ತು 5 ಪರಿಶಿಷ್ಟ ಪಂಗಡದವರು ಇದ್ದರು. ಸುಪ್ರೀಂಕೋರ್ಟ್ನಲ್ಲಿ ನ್ಯಾಯಮೂರ್ತಿ ಸ್ಥಾನದಲ್ಲಿ ಈ ವರ್ಗಗಳ ಯಾರೊಬ್ಬರೂ ಇರಲಿಲ್ಲ. ಆದರೆ ಅದಕ್ಕೆ ಅರ್ಹರಾದವರು ಅನೇಕರು ಇದ್ದರು.
ನ್ಯಾಯಾಂಗದಲ್ಲಿನ ಭ್ರಷ್ಟಾಚಾರದ ಕುರಿತಾದ ನ್ಯಾ. ಕರ್ಣನ್ ಆರೋಪವು ಶಕ್ತಿ ವರ್ಗಗಳಿಗೆ ಇರಿಸುಮುರುಸು ಉಂಟಮಾಡಿತ್ತು. ನ್ಯಾ. ಕರ್ಣನ್ ಅವರ ಆರೋಪಗಳ ತನಿಖೆಗೆ ಜಂಟಿ ಸಂಸದೀಯ ಸಮಿತಿ ಅಥವಾ ಆಯೋಗವೊಂದನ್ನು ಸ್ಥಾಪನೆ ಮಾಡುವ ಪ್ರಧಾನಿ ನರೇಂದ್ರ ಮೋದಿ ಅವರ ನಿರ್ಧಾರವು ಏನಾಯಿತು ಎಂದು ನಮಗೆ ತಿಳಿದಿಲ್ಲ.
ಭೂಷಣ್ಗೆ ಸಿಕ್ಕ ಬೆಂಬಲ
ನ್ಯಾ. ಕರ್ಣನ್ ಆರೋಪಗಳಿಗೆ ಹೋಲಿಸಿದರೆ ಭೂಷಣ್ ಯಾವುದೇ ಮೂಲಭೂತ ವಿಚಾರಗಳನ್ನು ಎತ್ತಿಲ್ಲ. ಅವರ ಟ್ವೀಟ್ ವ್ಯಕ್ತಿಗತವಾಗಿತ್ತು. ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೊಬ್ಡೆ ಸೂಪರ್ ಬೈಕ್ನಲ್ಲಿ ಕುಳಿತಿದ್ದರ ಕುರಿತಾಗಿತ್ತು. ಸಿಜೆಐ ಅವರ ವೈಯಕ್ತಿಕ ನಡವಳಿಕೆಯನ್ನಷ್ಟೇ ಅವರು ಪ್ರಶ್ನಿಸಿದ್ದರು. ಇದು ವೈಯಕ್ತಿಕ ನೈತಿಕತೆಗೆ ಸಂಬಂಧಿಸಿದ್ದು.
ಸುಪ್ರೀಂಕೋರ್ಟ್ ಆದೇಶದ ಬಳಿಕ ಭೂಷಣ್ ಅವರಿಗೆ ಆಡಳಿತ ಸ್ಥಾನದಲ್ಲಿರುವ ಅನೇಕ ಸ್ನೇಹಿತರ ಬೆಂಬಲ ಸಿಕ್ಕಿದೆ. ಅವರಲ್ಲಿ ಅವರೂ ಒಬ್ಬರು ಎಂಬುದಷ್ಟೇ ಅಲ್ಲ, ಅವರೂ ವ್ಯವಸ್ಥೆಯ ವ್ಯಕ್ತಿ ಎನ್ನುವುದೂ ಕಾರಣ. ನ್ಯಾ. ಕರ್ಣನ್ ಒಬ್ಬ ಹೊರಗಿನ ವ್ಯಕ್ತಿ. ಈ ಶ್ರೇಷ್ಠ ವರ್ಗದಲ್ಲಿ ಅವರಿಗೆ ಸ್ನೇಹಿತರು ಮತ್ತು ಅಭಿಪ್ರಾಯ ಸೃಷ್ಟಿಕರ್ತರು ಇಲ್ಲದಿರುವುದು ಸ್ವಾಭಾವಿಕ.