ರಾಜಕೀಯ ವಿಶೇಷ: ರಾಜ್ಯದಲ್ಲಿ ಜೆಡಿಎಸ್ ಬಲಿಷ್ಠವಾದಷ್ಟೂ ಕಾಂಗ್ರೆಸ್ಗೆ ಸಂಕಷ್ಟ!
ಬೆಂಗಳೂರು, ಡಿಸೆಂಬರ್ 28: ಜೆಡಿಎಸ್ ಪಕ್ಷ ಗಟ್ಟಿಯಾದಷ್ಟು ಅದರ ಪರಿಣಾಮ ನಮ್ಮ ಪಕ್ಷದ ಮೇಲಾಗುತ್ತದೆ ಎಂಬ ಸತ್ಯ ಕಾಂಗ್ರೆಸ್ ನಾಯಕರಿಗೆ ಗೊತ್ತಾಗಿದೆ. ಹೀಗಾಗಿಯೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಜೆಡಿಎಸ್ನ್ನು ಬಗ್ಗು ಬಡಿಯುವ ಪ್ರಯತ್ನಕ್ಕೆ ಮುಂದಾಗಿದ್ದು, ಅದರ ಮೊದಲ ಪ್ರಯತ್ನವಾಗಿ ಹಾಸನದಲ್ಲಿ ನಾಯಕರ ಸಭೆ ನಡೆಸಿ ಬಂದಿದ್ದಾರೆ.
ಹಾಸನದಲ್ಲಿ ಜೆಡಿಎಸ್ ನಾಯಕರು ಸೇರಿದಂತೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಕುಟುಂಬವನ್ನು ಪರೋಕ್ಷವಾಗಿ ಹೀಗಳೆದಿದ್ದಲ್ಲದೆ, ಒಂದಷ್ಟು ಟೀಕೆಗಳನ್ನು ನೇರವಾಗಿ ದೇವೇಗೌಡರ ಕುಟುಂಬಕ್ಕೆ ತಾಕುವಂತೆಯೇ ಮಾಡಿದ್ದಾರೆ. ಆ ಮೂಲಕ ಮುಂದಿನ ಚುನಾವಣೆಯಲ್ಲಿ ಜೆಡಿಎಸ್ನ್ನು ಟಾರ್ಗೆಟ್ ಮಾಡಿದ್ದೇವೆ ಎಂಬ ಸಂದೇಶವನ್ನು ಸಾರಿದ್ದಾರೆ.
ಡಿಕೆಶಿ ಕೊಡಗಿಗೆ ತೆರಳಿದ್ದರಿಂದ ಲಾಭವಾಗಿಲ್ಲ
ಇದೆಲ್ಲದರ ನಡುವೆ ಕೊಡಗಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತೆರಳಿದ್ದರಿಂದ ಅಲ್ಲಿ ಅಂತಹ ಲಾಭವೇನು ಕಂಡು ಬಂದಿಲ್ಲ. ಬದಲಿಗೆ ಪಕ್ಷದೊಳಗಿನ ಒಡಕು, ಭಿನ್ನಾಭಿಪ್ರಾಯಗಳು ತುಸು ಹೆಚ್ಚಾದಂತಾಗಿದೆ. ಈಗಾಗಲೇ ಕೊಡಗು ಜಿಲ್ಲೆಯಲ್ಲಿ ನಾಯಕತ್ವದ ಕೊರತೆಯನ್ನು ಪಕ್ಷ ಎದುರಿಸುತ್ತಿದ್ದು, ಜತೆಗೆ ಅರೆಗೌಡ ಸಮುದಾಯವನ್ನು ಪಕ್ಷದಲ್ಲಿ ಕಡೆಗಣಿಸಲಾಗುತ್ತಿದೆ ಎಂಬ ಆಕ್ರೋಶಗಳು ಭುಗಿಲೆದ್ದಿವೆ. ಇದನ್ನು ಒಂದಷ್ಟು ಅರೆಗೌಡ ಸಮುದಾದಯದ ಮುಖಂಡರು ಬಹಿರಂಗವಾಗಿಯೇ ಹೇಳಿಕೊಂಡಿದ್ದಾರೆ.
ಕಳೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಹೊರಗಿನ ಅಭ್ಯರ್ಥಿಗೆ ಟಿಕೆಟ್ ಕೊಟ್ಟರೆಂಬ ಅಸಮಾಧಾನ ಪಕ್ಷದ ನಾಯಕರಲ್ಲಿತ್ತು. ಜಿಲ್ಲೆಯಲ್ಲಿ ಸಮರ್ಥನಾದ ವ್ಯಕ್ತಿ ಇರಲಿಲ್ಲವೇ? ಎಂಬ ಮಾತುಗಳು ಕೇಳಿ ಬಂದಿದ್ದವು. ಇದೀಗ ಪಕ್ಷದಲ್ಲಿ ಜಿಲ್ಲೆಯಲ್ಲಿ ಇತರೆ ಜನಾಂಗದ ನಡುವೆ ಪ್ರಾಬಲ್ಯ ಸಾಧಿಸಿರುವ ಅರೆಗೌಡ ಸಮುದಾಯವನ್ನು ಕಾಂಗ್ರೆಸ್ನಲ್ಲಿ ಕಡೆಗಣಿಸಲಾಗಿದೆ. ಯಾವುದೇ ಸ್ಥಾನಮಾನ ನೀಡಿಲ್ಲ ಎಂಬ ಅಸಮಾಧಾನ ಹೊರಬಂದಿದೆ. ಇದು ಮುಂದಿನ ಚುನಾವಣೆ ವೇಳೆಯಲ್ಲಿ ಹೊಸ ರೂಪ ಪಡೆದುಕೊಂಡರೂ ಅಚ್ಚರಿಯಿಲ್ಲ.
ಜೆಡಿಎಸ್ ಹಣಿಯಲು ಕಾಂಗ್ರೆಸ್ ತಂತ್ರ
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಹೆಚ್ಚಿನ ಸ್ಥಾನ ಪಡೆದು ಮತ್ತೆ ಅತಂತ್ರ ಪರಿಸ್ಥಿತಿ ನಿರ್ಮಾಣವಾದರೆ ಹಿಂದೆ ಕಹಿ ಅನುಭವ ಅನುಭವಿಸಿರುವ ಎಚ್.ಡಿ. ಕುಮಾರಸ್ವಾಮಿ ಮತ್ತೆ ಕಾಂಗ್ರೆಸ್ನತ್ತ ಮುಖ ಮಾಡದೆ ಬಿಜೆಪಿಯತ್ತ ಒಲವು ತೋರಿದರೆ ನಮಗೆ ಕಷ್ಟವಾಗುತ್ತದೆ ಎಂಬುದನ್ನು ಮನದಟ್ಟು ಮಾಡಿಕೊಂಡಿರುವ ಕಾಂಗ್ರೆಸ್, ಇದೀಗ ಜೆಡಿಎಸ್ನ್ನು ಹಣಿಯಲು ಸರ್ವ ಪ್ರಯತ್ನ ಮಾಡುತ್ತಿದೆ.
ವಿಪಕ್ಷ ನಾಯಕ ಸಿದ್ದರಾಮಯ್ಯನವರು ದೇವೇಗೌಡರ ಕುಟುಂಬವನ್ನು ಸಮಯ ಸಿಕ್ಕಾಗಲೆಲ್ಲ ಟೀಕಿಸುತ್ತಲೇ ಇದ್ದಾರೆ. ಇದೀಗ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸರದಿಯಾಗಿದ್ದು, ಪರೋಕ್ಷವಾಗಿ ದೇವೇಗೌಡರ ಕುಟುಂಬದ ಮೇಲೆ ವಾಗ್ದಾಳಿ ನಡೆಸಲು ಆರಂಭಿಸಿದ್ದಾರೆ. ಅಷ್ಟೇ ಅಲ್ಲದೆ, ಮೇಕೆದಾಟು ಪಾದಯಾತ್ರೆಯನ್ನು ನಡೆಸುವ ಮೂಲಕ ಟಾಂಗ್ ಕೊಟ್ಟಿದ್ದಾರೆ.
ಜೋಡೆತ್ತುಗಳ ನಡುವೆ ಮಾತಿನ ಸಮರ
ಹಿಂದೆ ಕಾಂಗ್ರೆಸ್ ಮತ್ತು ಜೆಡಿಎಸ್ ಸೇರಿ ಸಮ್ಮಿಶ್ರ ಸರ್ಕಾರ ರಚಿಸಿದ್ದ ವೇಳೆ ಜೋಡೆತ್ತುಗಳಂತೆ ರಾಜ್ಯದ ಜನರ ಮುಂದೆ ಫೋಸ್ ಕೊಟ್ಟಿದ್ದ ಎಚ್ಡಿಕೆ ಮತ್ತು ಡಿಕೆಶಿ ಇವತ್ತು ರಾಜಕೀಯ ಅಸ್ತಿತ್ವಕ್ಕಾಗಿ ಬದ್ಧ ವೈರಿಗಳಾಗಿ ಹೋರಾಟಕ್ಕಿಳಿದಿರುವುದು ಅಚ್ಚರಿ ತಂದಿದೆ. ಈಗಿನಿಂದಲೇ ಇಬ್ಬರ ನಡುವೆ ಮಾತಿನ ಸಮರ ಶುರುವಾಗಿದೆ.
ಮೇಕೆದಾಟು ಯೋಜನೆ ವಿಚಾರವನ್ನು ಮುಂದಿಟ್ಟು ಹೋರಾಟ ಹಮ್ಮಿಕೊಂಡಿದ್ದರೆ, ಅದರಿಂದ ಈ ರಾಮನಗರ ವ್ಯಾಪ್ತಿಯ ಜನರ ಒಲವು ಮತ್ತು ರಾಜ್ಯದ ಜನರ ಗಮನ ತಮ್ಮೆಡೆಗೆ ಸೆಳೆಯಬಹುದು ಎನ್ನುವುದು ಡಿ.ಕೆ. ಶಿವಕುಮಾರ್ ಆಲೋಚನೆಯಾಗಿದೆ. ಆದರೆ ಇದು ಒಂದು ವೇಳೆ ಸಕ್ಸಸ್ ಆದರೆ ಬಿಜೆಪಿ ಮೇಲೆ ರಾಜಕೀಯವಾಗಿ ಪರಿಣಾಮ ಬೀರುತ್ತೋ, ಇಲ್ಲವೋ ಗೊತ್ತಿಲ್ಲ. ಆದರೆ ಜೆಡಿಎಸ್ಗೆ ಅದರಲ್ಲೂ ಎಚ್.ಡಿ. ಕುಮಾರಸ್ವಾಮಿಗೆ ಒಂದಷ್ಟು ನಷ್ಟಗಳಾಗುವುದು ಖಚಿತ.
ಕಾಂಗ್ರೆಸ್ನದು ಪಾದಯಾತ್ರೆಯಲ್ಲ ಮತಯಾತ್ರೆ
ಹೀಗಾಗಿಯೇ ಎಚ್ಚೆತ್ತುಕೊಂಡಿರುವ ಎಚ್.ಡಿ. ಕುಮಾರಸ್ವಾಮಿಯವರು ಡಿ.ಕೆ. ಶಿವಕುಮಾರ್ ವಿರುದ್ಧ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ. ಆ ಮೂಲಕ ಕಾಂಗ್ರೆಸ್ ಮತಕ್ಕಾಗಿ ಮಾಡುತ್ತಿರುವ ಪಾದಯಾತ್ರೆ ಎಂಬುದಾಗಿ ಬಹಿರಂಗವಾಗಿ ಹೇಳಿದ್ದಾರೆ. ಕಾಂಗ್ರೆಸ್ ಪಾದಯಾತ್ರೆ ಬಗ್ಗೆ ಬಿಜೆಪಿ ನಾಯಕರು ಯಾವುದೇ ರೀತಿಯ ಮಾತುಗಳನ್ನಾಡುತ್ತಿಲ್ಲ. ಬದಲಿಗೆ ಜೆಡಿಎಸ್ನ ಎಚ್.ಡಿ. ಕುಮಾರಸ್ವಾಮಿ ಮಾತಿನ ಬಾಣಗಳನ್ನು ಎಸೆದಿದ್ದು ಅದು ನಾಟಿದರೂ ನಾಟಬಹುದು.
ಇಷ್ಟಕ್ಕೂ ಕುಮಾರಸ್ವಾಮಿ ಅವರು ಹೇಳಿದ್ದೇನು? ಎನ್ನುವುದನ್ನು ನೋಡುವುದಾದರೆ, ಕಾಂಗ್ರೆಸ್ ನಡಿಗೆ ಕೃಷ್ಣೆಯ ಕಡೆಗೆ ಎಂಬ ಹೋರಾಟ ಮಾಡಿ ಕೃಷ್ಣೆಯ ನೀರನ್ನು ಹೇಗೆ ಉಳಿಸಿದರು ಅನ್ನುವುದನ್ನು ನೋಡಿದ್ದೇವೆ. ಈಗ ಮೇಕೆದಾಟು ಯೋಜನೆಗೆ ಆಗ್ರಹಿಸಿ ಪಾದಯಾತ್ರೆ ಮೂಲಕ ಮತಯಾತ್ರೆ ಮಾಡುತ್ತಿದ್ದಾರೆ. ಜನರ ಬಗ್ಗೆ ನಿಜವಾದ ಕಾಳಜಿ ಮತ್ತು ಶಕ್ತಿ ಇದ್ದರೆ ದೆಹಲಿಗೆ ಹೋಗಿ, ಕೇಂದ್ರ ಸರಕಾರದ ಮುಂದೆ ಕುಳಿತು ಹೋರಾಟ ಮಾಡಲಿ. ಅದು ಬಿಟ್ಟು ಮತಕ್ಕಾಗಿ ಪಾದಯಾತ್ರೆ ಮಾಡಿ ಜನರನ್ನು ಯಾಮಾರಿಸಲು ಎಲ್ಲ ಸಂದರ್ಭದಲ್ಲಿಯೂ ಸಾಧ್ಯವಿಲ್ಲ ಎಂದಿದ್ದಾರೆ.
ರಾಜಕೀಯ ಲಾಭಕ್ಕೆ ಕಾಯುತ್ತಿರುವ ಬಿಜೆಪಿ
ಎಚ್.ಡಿ. ಕುಮಾರಸ್ವಾಮಿಯವರ ಈ ಹೇಳಿಕೆ ಕಾಂಗ್ರೆಸ್ಗೆ ಈ ಸಮಯದಲ್ಲಿ ಇರಿಸುಮುರಿಸು ತಂದಿದ್ದಂತು ನಿಜ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಆರೋಪ ಮತ್ತು ಪ್ರತ್ಯಾರೋಪಗಳು ಹೆಚ್ಚಾಗುವ ಸಾಧ್ಯತೆಯಿದ್ದು, ಇದರ ಲಾಭ ಪಡೆಯಲು ಬಿಜೆಪಿ ಕಾಯುತ್ತಿದೆ.
Recommended Video