ಕೊರೊನಾ ಗಂಡಾಂತರ: 'ದೀದಿ ಓ ದೀದಿ' ಎನ್ನುವುದರಲ್ಲಿಯೇ ಪ್ರಧಾನಿ ಬಿಜಿಯೇ?
ನವದೆಹಲಿ, ಏಪ್ರಿಲ್ 16: ದೇಶದಲ್ಲಿ ಎರಡನೆಯ ಹಂತದ ಕೋವಿಡ್ ಅಲೆ ಭಾರಿ ಅನಾಹುತ ಸೃಷ್ಟಿಸುತ್ತಿದೆ. ಮೊದಲ ಹಂತದಲ್ಲಿ ಒಂದು ಲಕ್ಷದ ಸಮೀಪ ಪ್ರಕರಣಗಳು ದಾಖಲಾಗಿದ್ದು ದೊಡ್ಡ ಸಂಖ್ಯೆ ಎಂದು ಹೇಳಲಾಗಿತ್ತು. ಆದರೆ ಎರಡನೆಯ ಅಲೆಯಲ್ಲಿ ಪ್ರತಿ ದಿನ ಎರಡು ಲಕ್ಷಕ್ಕೂ ಅಧಿಕ ಪ್ರಕರಣಗಳು ವರದಿಯಾಗುತ್ತಿವೆ. ಇನ್ನು ಕೆಲವೇ ದಿನಗಳಲ್ಲಿ ಕೋವಿಡ್ ಪ್ರಕರಣ ಮತ್ತು ಕೋವಿಡ್ ಸಾವುಗಳಲ್ಲಿ ಭಾರತ ಮೊದಲ ಸ್ಥಾನಕ್ಕೆ ಏರುವ ಸೂಚನೆಗಳು ಕಂಡುಬರುತ್ತಿವೆ.
ಇನ್ನೊಂದೆಡೆ ಕೋವಿಡ್ ಲಸಿಕೆ ಅಷ್ಟಾಗಿ ಪರಿಣಾಮಕಾರಿಯಾಗುತ್ತಿಲ್ಲ ಎಂಬ ಆರೋಪ ಕೇಳಿಬರುತ್ತಿದೆ. ಅಲ್ಲದೆ, ವಿವಿಧ ರಾಜ್ಯಗಳು ಕೋವಿಡ್ ಲಸಿಕೆ ಕೊರತೆಯನ್ನು ಎದುರಿಸುತ್ತಿವೆ. ದೇಶದ ಅನೇಕ ರಾಜ್ಯಗಳಲ್ಲಿನ ಆರೋಗ್ಯ ಸ್ಥಿತಿ ಆಘಾತಕಾರಿಯಾಗಿದೆ. ಚಿತಾಗಾರಗಳಲ್ಲಿ ಶವಸಂಸ್ಕಾರಕ್ಕೂ ಜಾಗ ಸಿಗದಂತಾಗಿದೆ. ಅನೇಕ ನಗರಗಳ ಆಸ್ಪತ್ರೆಗಳಲ್ಲಿ ಕೋವಿಡ್ ರೋಗಿಗಳ ಚಿಕಿತ್ಸೆಗೆ ಹಾಸಿಗೆ ಸಿಗುತ್ತಿಲ್ಲ. ಪರಿಸ್ಥಿತಿ ಹಿಂದೆಂದಿಗಿಂತಲೂ ಕೈಮೀರಿ ಹೋಗುತ್ತಿದೆ ಎಂಬ ಭೀತಿ ಮೂಡುತ್ತಿರುವಾಗ ಪ್ರಧಾನಿ ನರೇಂದ್ರ ಮೋದಿ ಅವರು ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಮೋದಿ ಫೇಲ್: ಲಸಿಕೆ ವಿತರಣೆ ವೈಫಲ್ಯ ಮುಚ್ಚಿಕೊಳ್ಳಲು 'ಉತ್ಸವ'ದ ಉಲ್ಲೇಖ!
ಕೋವಿಡ್ ಸನ್ನಿವೇಶ ಬಿಗಡಾಯಿಸುತ್ತಿದ್ದು, ಒಂದೆಡೆ ಜನರಲ್ಲಿ ಮತ್ತೆ ಲಾಕ್ಡೌನ್ ಆತಂಕ ಕೂಡ ಶುರುವಾಗಿದೆ. ಈಗಾಗಲೇ ಆರ್ಥಿಕ ಹೊಡೆತಗಳಿಂದ ತತ್ತರಿಸಿರುವ ಜನಸಾಮಾನ್ಯರು, ಇತ್ತ ಆರೋಗ್ಯ ದುಸ್ತರ ಆರೋಗ್ಯ ಸ್ಥಿತಿ ಮತ್ತು ಅತ್ತ ನಿರ್ಬಂಧಗಳ ಏಟನ್ನು ತಡೆದುಕೊಳ್ಳುವ ಸ್ಥಿತಿಯಲ್ಲಿಲ್ಲ.
ಒಂದು ಹಂತಕ್ಕೆ ಆಶಾದಾಯಕ ಸ್ಥಿತಿ ತಲುಪಿದ್ದ ದೇಶದ ಕೋವಿಡ್ ಸನ್ನಿವೇಶ, ಏಕಾಏಕಿ ಬಿಗಡಾಯಿಸಿದ್ದು ಏಕೆ? ಲಸಿಕೆ ಬಂದ ಬಳಿಕವೇ ಕೋವಿಡ್ ಪ್ರಕರಣಗಳಲ್ಲಿ ಏರಿಕೆಯಾಗುತ್ತಿರುವುದು ಏಕೆ? ಹೀಗೆಯೇ ಮುಂದುವರಿದರೆ ಮುಂದೆ ಯಾವ ಪರಿಸ್ಥಿತಿ ಎದುರಾಗಬಹುದು? ಇಂತಹ ನೂರಾರು ಪ್ರಶ್ನೆಗಳು ಜನರನ್ನು ಕಾಡುತ್ತಿವೆ.
ಜಗತ್ತಿನಾದ್ಯಂತ ಇನ್ನೂರಕ್ಕೂ ಅಧಿಕ ದೇಶಗಳು ಈ ಸೋಂಕಿನಿಂದ ಸಂಕಷ್ಟಕ್ಕೆ ಸಿಲುಕಿವೆ. ಕೆಲವು ದೇಶಗಳು ವೈರಸ್ ಹರಡುವಿಕೆಯನ್ನು ನಿಯಂತ್ರಿಸಲು ಬಹುತೇಕ ಯಶಸ್ವಿಯಾಗಿವೆ. ಮುಖ್ಯವಾಗಿ ಆ ದೇಶಗಳ ಮುಖ್ಯಸ್ಥರು ಜನರಿಗೆ ಮಾಧ್ಯಮಗಳ ಮೂಲಕ ಒಟ್ಟಾರೆ ಸನ್ನಿವೇಶ, ಮುಂದಿನ ಕಾರ್ಯಗಳ ಬಗ್ಗೆ ನಿರಂತರ ಮಾಹಿತಿ ನೀಡುತ್ತಿದ್ದಾರೆ. ಆದರೆ ಮನ್ಕಿ ಬಾತ್, ಚರ್ಚಾ ಕಾರ್ಯಕ್ರಮಗಳು, ಚುನಾವಣಾ ಪ್ರಚಾರ ಭಾಷಣಗಳ ಹೊರತಾಗಿ ಪ್ರಧಾನಿ ನರೇಂದ್ರ ಮೋದಿ ಜನರನ್ನು ತಲುಪುವ, ಅವರ ಆತಂಕ ಶಮನ ಮಾಡುವ ಪ್ರಯತ್ನ ಮಾಡುತ್ತಿಲ್ಲ ಎಂಬ ಆರೋಪವಿದೆ.
ಲಸಿಕೆ ವಿತರಣೆಯಲ್ಲಿ ಮೋದಿ 'ರಾಜಕೀಯ' ಆರೋಪ: ಸತ್ಯಾಸತ್ಯತೆಯ ಪರಿಚಯ
ದೇಶದಲ್ಲಿ ಕೋವಿಡ್ ಪ್ರಕರಣಗಳು ಪ್ರಾರಂಭವಾಗಿ ಒಂದು ವರ್ಷಕ್ಕೂ ಅಧಿಕ ಸಮಯ ಕಳೆದಿದೆ. ಈ ಅವಧಿಯಲ್ಲಿ ಒಂದೇ ಒಂದು ಬಾರಿಯೂ ಪ್ರಧಾನಿ ನರೇಂದ್ರ ಮೋದಿ ಸುದ್ದಿಗೋಷ್ಠಿ ನಡೆಸಿಲ್ಲ. ಕೋವಿಡ್ ಸನ್ನಿವೇಶದ ಬಗ್ಗೆ ಅವರು ಏಕಮುಖ ಮಾತುಗಳನ್ನು ಮಾತ್ರ ಮಂಡಿಸಿದ್ದಾರೆ. ಇದುವರೆಗೂ ಯಾವುದೇ ನೇರ ಪ್ರಶ್ನೋತ್ತರಗಳಿಗೆ ಎದುರಾಗಿಲ್ಲ. 200ಕ್ಕೂ ಹೆಚ್ಚು ದೇಶಗಳ ಪೈಕಿ ಈ ರೀತಿ ಸರ್ಕಾರದ ಮುಖ್ಯಸ್ಥರು ಸುದ್ದಿಗೋಷ್ಠಿ ನಡೆಸದೆ ಇರುವುದು ಭಾರತದಲ್ಲಿ ಮಾತ್ರ.
ಕೋವಿಡ್ ಸನ್ನಿವೇಶ ಮಾತ್ರವಲ್ಲ. ಪ್ರಧಾನಿಯಾಗಿ ಕಳೆದ ಸುಮಾರು ಆರು ವರ್ಷಕ್ಕೂ ಹೆಚ್ಚು ಸಮಯದಲ್ಲಿ ಮೋದಿ ಅವರು ಸುದ್ದಿಗೋಷ್ಠಿ ನಡೆಸಿರುವುದು ಕೇವಲ ಒಂದೇ ಬಾರಿ. 2019ರ ಮೇ ತಿಂಗಳಲ್ಲಿ ನಡೆಸಿದ್ದ ಸುದ್ದಿಗೋಷ್ಠಿಯಲ್ಲಿ ಕೂಡ ಮೋದಿ ಅವರು ತಮಗೆ ಕೇಳಲಾದ ಎಲ್ಲ ಪ್ರಶ್ನೆಗಳಿಗೂ ಉತ್ತರ ನೀಡುವ ಜವಾಬ್ದಾರಿಯನ್ನು ಅಮಿತ್ ಶಾ ಅವರುಗೆ ವರ್ಗಾಯಿಸಿದ್ದರು. ಅದರ ನಂತರ ಮೋದಿ ಒಮ್ಮೆಯೂ ಮಾಧ್ಯಮಗಳಿಗೆ ಎದುರಾಗಿಲ್ಲ.
ಮಾಧ್ಯಮಗಳ ಸುದ್ದಿಗೋಷ್ಠಿ, ಸಂದರ್ಶನಗಳಲ್ಲಿ ಒಮ್ಮೆಯೂ ಪ್ರಧಾನಿ ಮೋದಿ ಭಾಗವಹಿಸಿಲ್ಲ. ಹೀಗಾಗಿ ಜನರ ಸಮಸ್ಯೆಗಳನ್ನು, ಆತಂಕ ಮತ್ತು ಪ್ರಶ್ನೆಗಳನ್ನು ಮಾಧ್ಯಮಗಳ ಮೂಲಕ ಪ್ರಧಾನಿಗೆ ತಲುಪಿಸುವ ಕಾರ್ಯ ಸಾಧ್ಯವಾಗಿಲ್ಲ. ವಿಶೇಷವೆಂದರೆ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ 'ಮೌನಿ' ಎಂದು ಟೀಕಿಸುವ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಪ್ರತಿ ಪ್ರಮುಖ ವಿಚಾರಗಳನ್ನು ಸುದ್ದಿಗೋಷ್ಠಿಯಲ್ಲಿ ವಿವರಿಸುತ್ತಿದ್ದರು. ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸುತ್ತಿದ್ದರು. ಆದರೆ ಪ್ರಧಾನಿ ನರೇಂದ್ರ ಮೋದಿ ಅವರು ಸುದ್ದಿಗೋಷ್ಠಿ ನಡೆಸಿದ ಮತ್ತು ಸಂದರ್ಶನ ನೀಡಿದ ಒಂದೇ ಒಂದು ದಾಖಲೆ ತನ್ನ ಬಳಿ ಇಲ್ಲ ಎಂದು ಪ್ರಧಾನಿ ಕಚೇರಿ ಕಳೆದ ವರ್ಷ ಆರ್ಟಿಐ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿತ್ತು.
Conditions Right Now....😐😐
— Rahul Teotia (@imRteotia18) April 16, 2021
i think so🤔🤔
Acc. To Our PM @narendramodi
And Some AndhBhakt "Didi o Didi" sunkar corona bhaag jayega 😅😅#WhereIsPM pic.twitter.com/s40ctd4oml
ಪ್ರಧಾನಿ ಮೋದಿ ಅವರ ಪ್ರಯಾಣಗಳು, ನೆರೆಯ ದೇಶಗಳೊಂದಿಗಿನ ಸಂಬಂಧ, ಚೀನಾದ ಅತಿಕ್ರಮಣ, ಅಪನಗದೀಕರಣ, ಜಿಎಸ್ಟಿಯ ಅವಸರದ ಜಾರಿ, ಸಂಘರ್ಷ-ಪ್ರತಿಭಟನೆಗಳಿಗೆ ಕಾರಣವಾದ ಕಾಯ್ದೆಗಳು, ಪಿಎಂ ಕೇರ್ಸ್ ನಿಧಿಗೆ ಸಂಗ್ರಹಿಸಿದ ಹಣ, ಕೋವಿಡ್ ಸ್ಥಿತಿಯನ್ನು ನಿರ್ವಹಿಸುತ್ತಿರುವ ಬಗೆ ಮುಂತಾದ ವಿಚಾರಗಳ ಬಗ್ಗೆ ನೂರಾರು ಪ್ರಶ್ನೆಗಳಿವೆ. ಆದರೆ ಅವುಗಳನ್ನು ಕೇಳಲು ಮಾಧ್ಯಮಗಳಿಗೆ ಪ್ರಧಾನಿ ಮೋದಿ ಸಿಗುತ್ತಿಲ್ಲ. ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗಲೂ ಅವರು ಮಾಧ್ಯಮಗಳಿಗೆ ಹೆಚ್ಚು ಸಿಗುತ್ತಿರಲಿಲ್ಲ. ಕೆಲವು ಪ್ರಶ್ನೆಗಳಿಗೆ ಉತ್ತರ ನೀಡದೆ ಸುದ್ದಿಗೋಷ್ಠಿಯಿಂದ ಹೊರ ನಡೆದ ಘಟನೆಗಳೂ ನಡೆದಿದ್ದವು.
ಈಗ ಪರಿಸ್ಥಿತಿ ಮತ್ತೆ ಬಿಗಡಾಯಿಸುತ್ತಿದೆ. ಆಸ್ಪತ್ರೆಯಲ್ಲಿ ವೆಂಟಿಲೇಟರ್, ಆಕ್ಸಿಜನ್, ಔಷಧಗಳ ಕೊರತೆ ಉಂಟಾಗುತ್ತಿದೆ. ಆದರೆ ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಇದುವರೆಗೂ ಒಂದೂ ಹೇಳಿಕೆ ನೀಡಿಲ್ಲ. ಪ್ರಧಾನಿ ಮೋದಿ ಅವರು ತಮ್ಮ ಕೆಲಸಗಳನ್ನು ಮಾಡುತ್ತಿದ್ದಾರೆ. ಅವರು ಮಾಧ್ಯಮಗಳಿಗೆ ಉತ್ತರ ನೀಡುವ ಅಗತ್ಯವಿಲ್ಲ. ಅವರನ್ನು ಪ್ರಶ್ನಿಸಲು ಮಾಧ್ಯಮಗಳು ಯಾರು? ಎಂಬ ವಾದಗಳನ್ನೂ ಮೋದಿ ಅಭಿಮಾನಿಗಳು ಮುಂದಿಡುತ್ತಾರೆ. ಆದರೆ ದೇಶವನ್ನು ಮುನ್ನಡೆಸುವ ವ್ಯಕ್ತಿ ಪ್ರಶ್ನಾತೀತರಲ್ಲ. ಅವರು ಜನಸಾಮಾನ್ಯರಿಗೆ ಭರವಸೆ ನೀಡುವ ಉತ್ತರಗಳನ್ನು ನೀಡಬೇಕು ಎನ್ನುವುದು ಸಾಮಾನ್ಯ ಅಭಿಪ್ರಾಯ.