ಮಿತ್ರ ಪಕ್ಷಗಳ ಜತೆಗೂಡಿ ಮೋದಿ ಬಲ ಪ್ರದರ್ಶನ, ಏಕಾಂಗಿ ರಾಹುಲ್ ಗಾಂಧಿ
ಬಿಜೆಪಿಯ ಹಾಗೂ ಎನ್ ಡಿಎ ಮೈತ್ರಿ ಕೂಟದ ಕಡು ವಿರೋಧಿಗಳೂ ಒಪ್ಪಬೇಕಾದ ನಡೆಯನ್ನು ಶುಕ್ರವಾರ ನರೇಂದ್ರ ಮೋದಿ ಇಟ್ಟಿದ್ದಾರೆ. ಉತ್ತರಪ್ರದೇಶದ ವಾರಾಣಸಿಯಲ್ಲಿ ಮೋದಿ ನಾಮಪತ್ರ ಸಲ್ಲಿಸುವ ವೇಳೆಯಲ್ಲಿ ಬಿಜೆಪಿ ಮತ್ತು ಅದರ ಮಿತ್ರ ಪಕ್ಷಗಳ ಪ್ರಮುಖ ನಾಯಕರೇ ಇದ್ದರು.
ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್, ಶಿರೋಮಣಿ ಅಕಾಲಿ ದಳದ ಪರಕಾಶ್ ಸಿಂಗ್ ಬಾದಲ್, ಶಿವಸೇನೆಯ ಉದ್ಧವ್ ಠಾಕ್ರೆ, ಎಐಎಡಿಎಂಕೆ ನಾಯಕರಾದ ಒ.ಪನ್ನೀರ್ ಸೆಲ್ವಮ್ ಹಾಗೂ ಎಂ.ತಂಬಿದುರೈ, ಬಿಜೆಪಿ ನಾಯಕರಾದ ಯೋಗಿ ಆದಿತ್ಯನಾಥ್, ರಾಜ್ ನಾಥ್ ಸಿಂಗ್, ಸುಷ್ಮಾ ಸ್ವರಾಜ್, ಅಮಿತ್ ಶಾ ಮತ್ತು ನಿತಿನ್ ಗಡ್ಕರಿ... ಓಹ್ ಯಾವ ಪ್ರಮುಖರು ಹಾಜರಿರಲಿಲ್ಲ?!
ವಿಷಕಂಠನ ನಾಡಿನಲ್ಲಿ ಮೋದಿ ಬೃಹತ್ ರೋಡ್ ಶೋ ಹಿಂದಿನ ಕಾರಣವೇನು?
ಏಳು ಕಿ.ಮೀ. ದೂರದ ರೋಡ್ ಶೋ, ಗಂಗಾರತಿ, ಚುನಾವಣೆ ಪ್ರಚಾರ ಭಾಷಣ...ಬಿಜೆಪಿಯವರಿಗೆ ಒಂದೋ ರಾಜಕೀಯ ತಂತ್ರಗಾರಿಕೆಯ ಅಸಾಧ್ಯ ಅಸಾಮಿಯೊಬ್ಬ ಸಿಕ್ಕು, ಆ ವ್ಯಕ್ತಿಯ ಮಾತಿನಂತೆ ನಡೆಯುತ್ತಿರಬೇಕು. ಅಥವಾ ಸ್ವತಃ ಮೋದಿ ಅವರಿಗೆ ಜನರ ನಾಡಿ ಮಿಡಿತ ತಿಳಿದುಹೋಗಿ, ಈ ರೀತಿ ಬೆರಗು ಮೂಡಿಸುವ ನಡೆಗಳನ್ನು ಇಡುತ್ತಿರಬೇಕು.
ಬಾದಲ್ ಕಾಲಿಗೆ ನಮಸ್ಕರಿಸಿದ ಪ್ರಧಾನಿ ಮೋದಿ
ಹಾಗೆ ಒಮ್ಮೆ ಹೋಲಿಸಿಕೊಂಡು ನೋಡಿ, ಮೈತ್ರಿ ಕೂಟದಲ್ಲಿ ದೊಡ್ಡ ಪಕ್ಷವೊಂದರ ನಾಯಕನ ವರ್ಚಸ್ಸು ಹೇಗಿರಬೇಕು? ಆತ ಮೈತ್ರಿಕೂಟದ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುಂದಕ್ಕೆ ಹೋಗಬೇಕು. ಹೆಚ್ಚೇನಲ್ಲ, ಐದಾರು ತಿಂಗಳ ಹಿಂದೆ ನರೇಂದ್ರ ಮೋದಿ ಬಗ್ಗೆ ಆಕ್ಷೇಪದ ಮೇಲೆ ಆಕ್ಷೇಪ ಕೇಳಿಬರುತ್ತಿತ್ತು. ಎನ್ ಡಿಎ ಮೈತ್ರಿ ಕೂಟದಿಂದ ಒಬ್ಬೊಬ್ಬರೇ ಹೊರಬರುತ್ತಿದ್ದಾರೆ. ಅದಕ್ಕೆ ಮೋದಿ ಧೋರಣೆ ಕಾರಣ ಎನ್ನಲಾಗುತ್ತಿತ್ತು. ಆದರೆ ಶುಕ್ರವಾರ ನಾಮಪತ್ರ ಸಲ್ಲಿಸುವ ವೇಳೆ ನರೇಂದ್ರ ಮೋದಿ ಅವರು ತೊಂಬತ್ತು ವರ್ಷ ದಾಟಿದ ಬಾದಲ್ ಅವರಿಗೆ ಕಾಲಿಗೆ ನಮಸ್ಕರಿಸಿ, ಇತರ ರಾಜಕೀಯ ನಾಯಕರಿಗೆ ಧನ್ಯವಾದ ಹೇಳಿದ್ದಾರೆ. ಇವನ್ನೆಲ್ಲ ಅದೇನೇ ರಾಜಕೀಯ ತಂತ್ರಗಾರಿಕೆ ಅಂತ ಕರೆದರೂ ಹಾಗೆ ತಂತ್ರ ಹೆಣೆದು, ಬಲ ಪ್ರದರ್ಶನ ಮಾಡುವ ಅಗತ್ಯ ಈಗ ಇತ್ತು ಎಂಬುದು ಸತ್ಯ. ಮೋದಿ- ಅಮಿತ್ ಶಾ ಜೋಡಿ ತಾವು ಅಂದುಕೊಂಡಂತೆ ಭವಿಷ್ಯದಲ್ಲಿ ಮಿತ್ರ ಪಕ್ಷಗಳ ಜತೆಗಿನ ಸ್ನೇಹವನ್ನು ಬಹಿರಂಗವಾಗಿ ಪ್ರದರ್ಶಿಸಿದ್ದಾರೆ.
ವಾರಣಾಸಿಯಲ್ಲಿ ನಾಮಪತ್ರ ಸಲ್ಲಿಸಿದ ಪ್ರಧಾನಿ ನರೇಂದ್ರ ಮೋದಿ
ತಾಯಿ, ತಂಗಿ, ಭಾವ ಅಷ್ಟೇ ಜತೆಗಿದ್ದರು
ಬಿಜೆಪಿ ಹಾಗೂ ಅದರ ಮಿತ್ರ ಪಕ್ಷಗಳದು ಒಂದು ಕಡೆಯಾಯಿತು. ರಾಹುಲ್ ಗಾಂಧಿ ಅವರು ಅಮೇಥಿಯಲ್ಲಿ ನಾಮಪತ್ರ ಸಲ್ಲಿಸಿದ ವೇಳೆ ಇದ್ದದ್ದು ಕುಟುಂಬ ಸದಸ್ಯರು ಮಾತ್ರ. ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ, ಆಕೆಯ ಪತಿ ರಾಬರ್ಟ್ ವಾದ್ರಾ ಮತ್ತು ಆ ದಂಪತಿಯ ಮಕ್ಕಳು. ವಯನಾಡಿನಲ್ಲಂತೂ ಪ್ರಿಯಾಂಕಾ ಮಾತ್ರ ಇದ್ದರೇ ಹೊರತು ಕಾಂಗ್ರೆಸ್ ಮೈತ್ರಿ ಕೂಟದ ಯಾವೊಬ್ಬ ಸದಸ್ಯರು ಇರಲಿಲ್ಲ. ಉತ್ತರಪ್ರದೇಶದಲ್ಲಿ ಸಮಾಜವಾದಿ ಪಕ್ಷ- ಬಹುಜನ ಸಮಾಜ ಪಕ್ಷವು ಕಾಂಗ್ರೆಸ್ ನಿಂದ ಅಂತರ ಕಾಯ್ದುಕೊಂಡಿವೆ. ಇನ್ನು ಬಿಹಾರದಲ್ಲಿ ಕಾಂಗ್ರೆಸ್ ನ ಮೂರು ಸಭೆಯಲ್ಲಿ ಆರ್ ಜೆಡಿ ನಾಯಕ ತೇಜಸ್ವಿ ಯಾದವ್ ಪಾಲ್ಗೊಳ್ಳದೆ ಮುಜುಗರ ಅನುಭವಿಸುವಂತೆ ಮಾಡಿದ್ದಾರೆ. ಇಂಥ ಸೂಕ್ಷ್ಮ ವಿಚಾರಗಳನ್ನು ಮತದಾರರು ಖಂಡಿತಾ ಗಮನಿಸುತ್ತಾರೆ. ಯಾವ ಸಂದೇಶ ರವಾನೆ ಆಗುತ್ತದೆ ಎಂಬುದನ್ನು ಕೂಡ ವಿಶೇಷವಾಗಿ ವಿಸ್ತರಿಸಿ ಹೇಳುವ ಅಗತ್ಯ ಇಲ್ಲ.
ವಾರಣಾಸಿಯಲ್ಲಿ ಸ್ಪರ್ಧಿಸಲ್ಲ ಎಂದು ಪ್ರಿಯಾಂಕಾ ಬಹಿರಂಗವಾಗಿ ಹೇಳಿಲ್ಲವೇಕೆ?
ಅಖಿಲೇಶ್ ಯಾದವ್ ಈ ವಿಚಾರದಲ್ಲಿ ಯಶಸ್ವಿ
ರಾಹುಲ್ ಗಾಂಧಿ ನಾಮಪತ್ರ ಸಲ್ಲಿಸಿದ ವೇಳೆ ಯುಪಿಎ ಅಂಗ ಪಕ್ಷಗಳು ಪ್ರಮುಖ ನಾಯಕರು ಜತೆ ಇರಬಹುದಿತ್ತು. ಕಾಂಗ್ರೆಸ್ ಮತ್ತು ಅದರ ಪ್ರಾದೇಶಿಕ ಮಿತ್ರ ಪಕ್ಷಗಳಲ್ಲಿ ಉತ್ತಮ ಬಾಂಧವ್ಯ ಇದೆ ಎಂಬ ಸಂದೇಶವನ್ನು ಕಳುಹಿಸಬಹುದಿತ್ತು. ಹೀಗೆ ಮಾಡಿದ್ದರೆ ಪಕ್ಷದಲ್ಲಿ ನೈತಿಕ ಸ್ಥೈರ್ಯ ಹೆಚ್ಚಾಗಿರುತ್ತಿತ್ತು. ಉದಾಹರಣೆಗೆ ಅಖಿಲೇಶ್ ಯಾದವ್ ಬಗ್ಗೆ ಹೇಳುವುದಾದರೆ, ಕಡುವಿರೋಧಿಗಳಾದ ತಮ್ಮ ತಂದೆ ಮುಲಾಯಂ ಸಿಂಗ್ ಯಾದವ್ ಹಾಗೂ ಮಾಯಾವತಿ ಅವರನ್ನು ಒಂದೇ ವೇದಿಕೆ ಮೇಲೆ ಕರೆತರಲು ಯಶಸ್ವಿಯಾದರು. ಮೈನ್ ಪುರಿಯಲ್ಲಿ ಮಾಯಾವತಿ ಹಾಗೂ ಮುಲಾಯಂ ಸಿಂಗ್ ಯಾದವ್ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡರು. ಮೈತ್ರಿ ಪಕ್ಷಗಳು ಸರಕಾರ ರಚನೆಯಲ್ಲಿ ಖಂಡಿತಾ ಮುಖ್ಯ ಪಾತ್ರ ವಹಿಸುತ್ತವೆ ಎಂಬ ಸೂಚನೆ ದೊರೆತ ಮೇಲೆ ತಕ್ಷಣ ಎಚ್ಚೆತ್ತು, ಎಲ್ಲರನ್ನೂ ಸಂಭಾಳಿಸಿಕೊಂಡು ಹೋಗುತ್ತಿರುವಂತೆ ಕಾಣುವ ಮೋದಿ ಮುಂದೆ ರಾಹುಲ್ ಗಾಂಧಿ ಹಿಂದೆ ಉಳಿದಂತೆ ಭಾಸವಾಗುತ್ತಾರೆ.
ದೋಸ್ತಿ ನಿಭಾಯಿಸುವುದೇ ಸಮಸ್ಯೆಯಾಗುತ್ತಿದೆಯಾ?
ಬಿಜೆಪಿ ಮತ್ತು ಅದರ ಮಿತ್ರ ಪಕ್ಷಗಳನ್ನು ವಿರೋಧಿಸುವ ಎರಡು ಒಕ್ಕೂಟ ಇದೆ. ಅದರಲ್ಲಿ ಒಂದು ಯುಪಿಎ. ಅಂದರೆ, ಕಾಂಗ್ರೆಸ್ ಮತ್ತದರ ಮಿತ್ರ ಪಕ್ಷಗಳು. ಇನ್ನೊಂದು ಎನ್ ಡಿಎ. ಬಿಜೆಪಿ ಹಾಗೂ ಅದರ ಮಿತ್ರ ಪಕ್ಷಗಳು. ಈ ಮಧ್ಯೆ ಎನ್ ಡಿಎ ಹಾಗೂ ಯುಪಿಎ ಎರಡರಿಂದಲೂ ಸಮಾನ ಅಂತರ ಕಾಯ್ದುಕೊಂಡಿರುವ ಪಕ್ಷಗಳು ಒಂದಿಷ್ಟು ಇವೆ. ಎಸ್ ಪಿ- ಬಿಎಸ್ ಪಿ, ಟಿಎಂಸಿ, ಟಿಆರ್ ಎಸ್... ಹೀಗೆ ಈ ಪಕ್ಷಗಳು ಕಾಂಗ್ರೆಸ್ ಅಥವಾ ಬಿಜೆಪಿ ಜತೆಗೆ ತಮ್ಮನ್ನು ಗುರುತಿಸಿಕೊಂಡಿಲ್ಲ. ಈ ಬಾರಿ ಅತಂತ್ರ ಲೋಕಸಭೆ ಏನಾದರೂ ನಿರ್ಮಾಣವಾದರೆ ಸಣ್ಣ-ಪುಟ್ಟ ಪಕ್ಷಗಳು ಕೂಡ ಪ್ರಮುಖ ಪಾತ್ರ ವಹಿಸಲಿವೆ. ಅಥವಾ ಬಿಜೆಪಿಗೆ ಕಳೆದ ಸಲ ಬಂದಂತೆ ಏಕ ಪಕ್ಷವಾಗಿಯೇ ಬಹುಮತ ದೊರೆಯದಿದ್ದರೂ ಅಥವಾ ಕಾಂಗ್ರೆಸ್ ಗೆ ಅಗತ್ಯ ಸಂಖ್ಯಾ ಬಲ ಇಲ್ಲದಿದ್ದರೂ ಮಿತ್ರ ಪಕ್ಷಗಳು ಮುಖ್ಯ ಪಾತ್ರ ವಹಿಸುತ್ತವೆ. ಈ ರೀತಿ ದೋಸ್ತಿ ನಿಭಾಯಿಸುವುದರಲ್ಲೇ ಕಾಂಗ್ರೆಸ್ ಗೆ ಸಮಸ್ಯೆ ಎದುರಾಗುತ್ತಿದೆಯಾ ಎಂಬ ಬೆಳವಣಿಗೆಗಳು ಕಾಣಿಸುತ್ತಿವೆ.