ಸುಧಾಮೂರ್ತಿ ನೇತೃತ್ವದ ತಂಡದ ಸೇವೆಗೆ ಕೃತಜ್ಞತೆ ಸಲ್ಲಿಸಿದ ಪ್ರಧಾನ ಮಂತ್ರಿ
ನವದೆಹಲಿ, ಅಕ್ಟೋಬರ್ 21: ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಮಹಾಸಂಸ್ಥೆ ಎಐಐಎಂಎಸ್ ನ ಝಾಜ್ಜಾರ್ ಕ್ಯಾಂಪಸ್ ನಲ್ಲಿರುವ ರಾಷ್ಟ್ರೀಯ ಕ್ಯಾನ್ಸರ್ ಸಂಸ್ಥೆಯಲ್ಲಿ ಬೆಂಗಳೂರು ಮೂಲದ ಇನ್ಫೋಸಿಸ್ ಪ್ರತಿಷ್ಠಾನ ನಿರ್ಮಿಸಿರುವ ವಿಶ್ರಾಮ್ ಸದನವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಂದು ವೀಡಿಯೊ ಕಾನ್ಫರೆನ್ಸ್ ಮೂಲಕ ಲೋಕಾರ್ಪಣೆ ಮಾಡಿದರು.
ನಂತರ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಪ್ರಧಾನ ಮಂತ್ರಿ ಅವರು, ''ಭಾರತದ ಪಾಲಿಗೆ ಇಂದು ಐತಿಹಾಸಿಕ ದಿನವಾಗಿದೆ. ಕೋವಿಡ್-19 ಸೋಂಕು ನಿಯಂತ್ರಣಕ್ಕೆ ದೇಶಾದ್ಯಂತ ಭರದಿಂದ ಸಾಗಿರುವ ಲಸಿಕೆ ನೀಡಿಕೆ ಅಭಿಯಾನದಲ್ಲಿ ಭಾರತವಿಂದು 100 ಕೋಟಿ ಡೋಸ್ ಲಸಿಕೆ ಹಾಕಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ. 100 ವರ್ಷಗಳಲ್ಲೇ ಕಾಣಿಸಿಕೊಂಡ ಬೃಹತ್ ಸೋಂಕು ಎದುರಿಸಲು ಭಾರತವೀಗ 100 ಕೋಟಿ ಡೋಸ್ ಲಸಿಕೆ ನೀಡಿ ಬಲಿಷ್ಠ ರಕ್ಷಣಾ ಗೋಡೆಯನ್ನು ಹಾಕಿಕೊಂಡಿದೆ. ಈ ಸಾಧನೆ ಭಾರತ ದೇಶಕ್ಕೆ ಮತ್ತು ಅದರ ಮಹಾಜನತೆಗೆ ಸಲ್ಲಬೇಕು,'' ಎಂದು ತಿಳಿಸಿದರು.
ಆರೋಗ್ಯ ವಲಯದ ವೃತ್ತಿಪರರಿಗೆ ಕೃತಜ್ಞತೆ
ದೇಶದ ಎಲ್ಲಾ ಕೋವಿಡ್-19 ಲಸಿಕೆ ತಯಾರಿಕಾ ಕಂಪನಿಗಳು, ಲಸಿಕೆ ಸರಬರಾಜು ಮತ್ತು ಸಾಗಣೆಯಲ್ಲಿ ತೊಡಗಿಸಿಕೊಂಡಿರುವ ಕಾರ್ಮಿಕರು, ಲಸಿಕೆ ಅಭಿವೃದ್ಧಿಯಲ್ಲಿ ನಿರತರಾಗಿದ್ದ ಆರೋಗ್ಯ ವಲಯದ ವೃತ್ತಿಪರರಿಗೆ ಕೃತಜ್ಞತೆಗಳು ಸಲ್ಲುತ್ತವೆ ಎಂದರು.
ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಮಹಾಸಂಸ್ಥೆಯ ಝಾಜ್ಜಾರ್ ಕ್ಯಾಂಪಸ್ ಗೆ ರೋಗಿಗಳು ಕ್ಯಾನ್ಸರ್ ಚಿಕಿತ್ಸೆಗಾಗಿ ಬರುತ್ತಾರೆ. ಅವರಿಗೆ ಈಗ ಬಹುದೊಡ್ಡ ಅನುಕೂಲ ದೊರೆತಂತಾಗಿದೆ. ರಾಷ್ಟ್ರೀಯ ಕ್ಯಾನ್ಸರ್ ಸಂಸ್ಥೆಯಲ್ಲಿ ಇನ್ಫೋಸಿಸ್ ಪ್ರತಿಷ್ಠಾನ ನಿರ್ಮಿಸಿರುವ ವಿಶ್ರಾಮ್ ಸದನವು ರೋಗಿಗಳು ಮತ್ತು ಅವರ ಸಂಬಂಧಿಕರ ವಾಸ್ತವ್ಯ ಆತಂಕಗಳನ್ನು ದೂರ ಮಾಡಲಿದೆ ಎಂದು ಪ್ರಧಾನ ಮಂತ್ರಿ ತಿಳಿಸಿದರು.
ಇನ್ಫೋಸಿಸ್ ಪ್ರತಿಷ್ಠಾದ ವಿಶ್ರಾಮ್ ಸದನ
ಇನ್ಫೋಸಿಸ್ ಪ್ರತಿಷ್ಠಾವು ವಿಶ್ರಾಮ್ ಸದನವನ್ನು ನಿರ್ಮಿಸಿ, ಬಹುದೊಡ್ಡ ಉಪಕಾರ ಮಾಡಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದ ಪ್ರಧಾನ ಮಂತ್ರಿ, ಎಐಐಎಂಎಸ್ ಆವರಣದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಿಸಲು ಇನ್ಫೋಸಿಸ್ ಗೆ ಜಾಗ, ವಿದ್ಯುತ್ ಮತ್ತು ನೀರು ಒದಗಿಸಿರುವ ಎಐಐಎಂಎಸ್ ಝಾಜ್ಜಾರ್ ಕ್ರಮ ಶ್ಲಾಘನೀಯವಾಗಿದೆ. ಈ ಬೃಹತ್ ಸೇವೆ ಒದಗಿಸಿರುವ ಸುಧಾಮೂರ್ತಿ ನೇತೃತ್ವದ ಇನ್ಫೋಸಿಸ್ ಪ್ರತಿಷ್ಠಾನದ ತಂಡ ಮತ್ತು ಎಐಐಎಂಎಸ್ ಆಡಳಿತ ಮಂಡಳಿಗೆ ಕೃತಜ್ಞತೆ ಮತ್ತು ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದರು.
ಆಯುಷ್ಮಾನ್ ಭಾರತ್ -ರೋಗಿಗಳು ಉಚಿತ ಚಿಕಿತ್ಸೆ
ಭಾರತದ ಕಾರ್ಪೊರೇಟ್ ರಂಗ, ಖಾಸಗಿ ವಲಯ ಮತ್ತು ಸಾಮಾಜಿಕ ಸಂಘಟನೆಗಳು ದೇಶದ ಆರೋಗ್ಯ ಸೇವೆಯನ್ನು ಬಲಪಡಿಸಲು ನಿರಂತರ ಕೊಡುಗೆ ನೀಡುತ್ತಾ ಬಂದಿವೆ. ಆಯುಷ್ಮಾನ್ ಭಾರತ್ - ಪಿಎಂಜೆಎವೈ ಇದಕ್ಕೆ ಬಹುದೊಡ್ಡ ಉದಾಹರಣೆಯಾಗಿದೆ ಎಂದು ಪ್ರಧಾನ ಮಂತ್ರಿ ಉಲ್ಲೇಖಿಸಿದರು.
ಆಯುಷ್ಮಾನ್ ಭಾರತ್ ಯೋಜನೆ ಅಡಿ, ರೋಗಿಗಳು ಉಚಿತ ಚಿಕಿತ್ಸೆ ಪಡೆದಾಗ, ಯೋಜನೆಯ ಸೇವೆ ಸಾಫಲ್ಯ ಕಂಡಂತಾಯಿತು. ಈ ಸೇವೆಯ ಪ್ರೇರಣೆಯಿಂದಲೇ ಸರ್ಕಾರ, 400 ಕ್ಯಾನ್ಸರ್ ಔಷಧಗಳ ಬೆಲೆ ತಗ್ಗಿಸಲು ಕ್ರಮ ಕೈಗೊಂಡಿತು ಎಂದು ಪ್ರಧಾನಿ ತಿಳಿಸಿದರು.
ಆಯುಷ್ಮಾನ್ ಭಾರತ್ - ಡಿಜಿಟಲ್ ಮಿಷನ್
ಆಯುಷ್ಮಾನ್ ಭಾರತ್ - ಡಿಜಿಟಲ್ ಮಿಷನ್ ʻಆಯುಷ್ಮಾನ್ ಭಾರತ್ - ಡಿಜಿಟಲ್ ಮಿಷನ್ʼ ಯೋಜನೆಯು ಈಗ ದೇಶಾದ್ಯಂತ ಆಸ್ಪತ್ರೆಗಳ ಡಿಜಿಟಲ್ ಆರೋಗ್ಯ ಪರಿಹಾರಗಳನ್ನು ಪರಸ್ಪರ ಸಂಪರ್ಕಿಸಲಿದೆ ಎಂದು ಪ್ರಧಾನಿ ಹೇಳಿದರು. ಈ ಯೋಜನೆಯು ಆಸ್ಪತ್ರೆಗಳ ಪ್ರಕ್ರಿಯೆಗಳನ್ನು ಸರಳಗೊಳಿಸುವುದಲ್ಲದೆ, ಜೀವನದ ಸುಗಮತೆಯನ್ನು ಹೆಚ್ಚಿಸುತ್ತದೆ ಎಂದು ಅವರು ಹೇಳಿದರು. ಇದರ ಅಡಿಯಲ್ಲಿ, ಪ್ರತಿಯೊಬ್ಬ ನಾಗರಿಕರೂ ಈಗ ʻಡಿಜಿಟಲ್ ಆರೋಗ್ಯ ಗುರುತಿನ ಚೀಟಿʼಯನ್ನು ಪಡೆಯುತ್ತಾರೆ ಮತ್ತು ಅವರ ಆರೋಗ್ಯ ದಾಖಲೆಯನ್ನು ಡಿಜಿಟಲ್ ಆಗಿ ಸಂರಕ್ಷಿಸಲಾಗುತ್ತದೆ ಎಂದರು. ಭಾರತವು ಸಮಗ್ರ ಮತ್ತು ಎಲ್ಲರನ್ನೂ ಒಳಗೊಂಡ ಮಾದರಿಯ ಆರೋಗ್ಯಸೇವೆ ವ್ಯವಸ್ಥೆಗಾಗಿ ಕೆಲಸ ಮಾಡುತ್ತಿದೆ ಎಂದು ಪ್ರಧಾನಿ ಮಾಹಿತಿ ನೀಡಿದರು. ರೋಗ ತಡೆಗೆ ಹಾಗೂ ಒಂದು ವೇಳೆ ಅನಾರೋಗ್ಯ ಉಂಟಾದ ಸಂದರ್ಭದಲ್ಲಿ ಸುಲಭ, ಕೈಗೆಟುಕುವ ದರದ ಮತ್ತು ಎಲ್ಲರಿಗೂ ಲಭ್ಯವಾಗುವಂತಹ ಚಿಕಿತ್ಸೆಗೆ ಈ ವ್ಯವಸ್ಥೆ ಒತ್ತು ನೀಡುತ್ತದೆ ಎಂದರು. ಆರೋಗ್ಯ ಶಿಕ್ಷಣದಲ್ಲಿ ಅಭೂತಪೂರ್ವ ಸುಧಾರಣೆಗಳ ಬಗ್ಗೆಯೂ ಚರ್ಚಿಸಿದ ಅವರು, 7-8 ವರ್ಷಗಳ ಹಿಂದಿನ ಅವಧಿಗೆ ಹೋಲಿಸಿದರೆ ಈಗ ಭಾರತದಲ್ಲಿ ಹೆಚ್ಚಿನ ಸಂಖ್ಯೆಯ ವೈದ್ಯರು ಮತ್ತು ಅರೆ ವೈದ್ಯಕೀಯ ಮಾನವ ಸಂಪನ್ಮೂಲವನ್ನು ಸೃಷ್ಟಿಸಲಾಗುತ್ತಿದೆ ಎಂದು ಹೇಳಿದರು.