ನರಕದಂತಹ ಗ್ರಹ ಪತ್ತೆಹಚ್ಚಿದ ಭಾರತ ಮೂಲದ ವಿಜ್ಞಾನಿಗಳು
ಕೊತ ಕೊತ ಕುದಿಯುವ ಲಾವಾ ರಸ, ಬೆಂಕಿ ಚಿಮ್ಮಿಸುವ ಜ್ವಾಲಾಮುಖಿ, ಸಮುದ್ರದ ಅಲೆಯಲ್ಲೂ ಅದೇ ಕಿಚ್ಚು. ಅಂದಹಾಗೆ ಇದು ಯಾವುದೋ ಸಿನಿಮಾದಲ್ಲಿ ಬರುವ ನರಕದ ಸೀನ್ ಅಲ್ಲ. ನಮ್ಮ ಬ್ರಹ್ಮಾಂಡದಲ್ಲೇ ಭೂಮಿಯಂತಹ ಗ್ರಹ ಇಂತಹ ಪರಿಸ್ಥಿತಿಯಲ್ಲಿ ಬದುಕುತ್ತಿದೆ. ನರಕದಂತಹ ಗ್ರಹದ ಸಂಪೂರ್ಣ ಚಿತ್ರಣವನ್ನು ಬಾಹ್ಯಾಕಾಶ ವಿಜ್ಞಾನಿಗಳು ಹೊರಹಾಕಿದ್ದಾರೆ. ಭೂಮಿಯಿಂದ 100 ಜ್ಯೋತಿರ್ವರ್ಷ ದೂರದಲ್ಲಿರುವ 'ಕೆ2-141ಬಿ' ಗ್ರಹದಲ್ಲೇ ಇಂತಹ ಭಯಾನಕ ವಾತಾವರಣ ಇರುವುದು.
ಭೂಮಿಯತಹ ರಚನೆ ಇರುವ 'ಕೆ2-141ಬಿ' ಗ್ರಹದಲ್ಲಿ ಜೀವಗಳು ಬದುಕಲು ಸಾಧ್ಯವಾಗದಂತಹ ಪರಿಸ್ಥಿತಿ ಇದೆ. ಈ ಗ್ರಹದ ಉಷ್ಣಾಂಶ ಎಷ್ಟಿದೆ ಎಂದರೆ, ಇಲ್ಲಿನ ಪ್ರತಿಯೊಂದು ವಸ್ತು ಕೂಡ ಈ ಉಷ್ಣಾಂಶಕ್ಕೆ ಕರಗಿ ನೀರಾಗುತ್ತವೆ. ವಿಜ್ಞಾನಿಗಳು ಅಂದಾಜು ಮಾಡಿರುವಂತೆ ಈ ಗ್ರಹದಲ್ಲಿ ಸುಮಾರು 5,400 ಡಿಗ್ರಿ ಫ್ಯಾರನ್ಹೀಟ್ ಉಷ್ಣಾಂಶವಿದೆ.
ಭೂಮಿಯಂತೆ ನೆಲ ರಚನೆ ಹೊಂದಿದ್ದರೂ ಭಾರಿ ಪ್ರಮಾಣದ ಉಷ್ಣಾಂಶದ ಪರಿಣಾಮ ಎಲ್ಲಾ ಅಯೋಮಯವಾಗಿದೆ. ವಿಜ್ಞಾನಿಗಳ ಅಂದಾಜಿನ ಪ್ರಕಾರ ಈ ಗ್ರಹ ಭವಿಷ್ಯದಲ್ಲಿ ತಣ್ಣಗಾಗುವ ಸಾಧ್ಯತೆಯಿದೆ. ಏಕೆಂದರೆ ಕೋಟ್ಯಂತರ ವರ್ಷಗಳ ಹಿಂದೆ ಭೂಮಿಯ ಪರಿಸ್ಥಿತಿ ಕೂಡ ಇದೇ ರೀತಿ ಇತ್ತು.
ಬಾಹ್ಯಾಕಾಶದಲ್ಲಿ ಭಾರತೀಯರದ್ದೇ ಹವಾ..!
ಅಷ್ಟಕ್ಕೂ ಈ ಗ್ರಹದ ಸಂಶೋಧನೆಯಲ್ಲಿ ಭಾರತೀಯರ ಶ್ರಮವೂ ಅಡಗಿದೆ ಎಂಬುದೇ ಹೆಮ್ಮೆಯ ವಿಚಾರ. ಹೇಗೆಂದರೆ 'ಕೆ2-141ಬಿ' ಗ್ರಹ ಸಂಶೋಧನೆಯಲ್ಲಿ ಭಾರತದ 'ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಎಜುಕೇಶನ್' ಕೂಡ ಕೈಜೋಡಿಸಿತ್ತು. ಭಾರತೀಯ ಸಂಸ್ಥೆ ಜೊತೆ ಮ್ಯಾಕ್ಗಿಲ್ ವಿವಿ ಮತ್ತು ಯೋರ್ಕ್ ವಿವಿ ಕೂಡ ಒಟ್ಟಿಗೆ ಸಂಶೋಧನೆ ನಡೆಸಿ 'ಕೆ2-141ಬಿ' ಗ್ರಹದ ಹಲವು ಕುತೂಹಲಕಾರಿ ಸಂಗತಿಗಳನ್ನು ಬಯಲು ಮಾಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಭಾರತ ಬಾಹ್ಯಾಕಾಶ ಕ್ಷೇತ್ರದಲ್ಲಿ ಮಹತ್ವದ ಸಾಧನೆಗಳನ್ನು ಮಾಡುತ್ತಿದೆ. ಕೆಲವೇ ತಿಂಗಳುಗಳ ಹಿಂದೆ ಚಂದ್ರನ ಮೇಲೆ ಛಾಪು ಮೂಡಿಸಿದ್ದ ಭಾರತದ ಹೆಮ್ಮೆಯ ಇಸ್ರೋ, ಇತ್ತೀಚೆಗೆ ಶುಕ್ರಯಾನ ಕೈಗೊಳ್ಳುವುದಾಗಿ ಘೋಷಿಸಿತ್ತು. ಈಗ ಭಾರತ ಮೂಲದ ಮತ್ತೊಂದು ಸಂಸ್ಥೆಯ ಸಂಶೋಧಕರು 'ಕೆ2-141ಬಿ' ಅಥವಾ ನರಕದಂತಹ ಗ್ರಹದ ಬಗ್ಗೆ ಕುತೂಹಲಕಾರಿ ಮಾಹಿತಿಯನ್ನು ಬಯಲು ಮಾಡಿದ್ದಾರೆ.
ಬಂಡೆ ಕಲ್ಲುಗಳ ಮಳೆ, ಜೆಟ್ಗಿಂತ ವೇಗವಾದ ಗಾಳಿ
'ಕೆ2-141ಬಿ' ಗ್ರಹಕ್ಕೆ ಅಲ್ಲಿನ ವಾತಾವರಣವೇ ವಿಲನ್. ಇಲ್ಲಿನ ಉಷ್ಣಾಂಶದ ತೀವ್ರತೆಗೆ ಬಂಡೆಗಳು ಕೂಡ ಕರಗಿ ಆವಿಯಾಗುತ್ತವೆ. ಹಾಗೇ ಭೂಮಿಯಲ್ಲಿ ಬಿದ್ದಂತೆ ನೀರಿನ ಮಳೆ ಇಲ್ಲಿ ಬೀಳುವುದಿಲ್ಲ. ಬದಲಾಗಿ ಈ ಗ್ರಹದಲ್ಲಿ ಬಂಡೆಗಳ ಮಳೆ ಸುರಿಯುತ್ತದೆ. ಇದಿಷ್ಟೇ ಆಗಿದ್ದರೆ ಪರವಾಗಿಲ್ಲ ಎನ್ನಬಹುದಿತ್ತು. ಆದರೆ ಜೆಟ್ಗಿಂತ ವೇಗವಾಗಿ ಗಾಳಿಯೂ ಬೀಸುತ್ತದೆ. ಸೂಪರ್ಸಾನಿಕ್ ಜೆಟ್ಗಳಿಗಿಂತ 'ಕೆ2-141ಬಿ' ಗ್ರಹದ ಗಾಳಿ ವೇಗವಾಗಿ ಇರುತ್ತದೆ. ಸುಮಾರು 5000 ಸಾವಿರ ಕಿಲೋಮೀಟರ್ ವೇಗದಲ್ಲಿ ಇಲ್ಲಿ ಗಾಳಿ ಬೀಸುತ್ತಿದೆ.
ನಮಗೆ ಏನು ಪ್ರಯೋಜನ..?
ಪ್ರತಿಯೊಂದು ವೈಜ್ಞಾನಿಕ ಸಂಶೋಧನೆಗಳು ನಡೆದಾಗಲೂ ಇಂತಹದ್ದೊಂದು ಪ್ರಶ್ನೆ ಉದ್ಭವಿಸುತ್ತದೆ. ಅಷ್ಟಕ್ಕೂ 'ಕೆ2-141ಬಿ' ಗ್ರಹದ ಸಂಶೋಧನೆಯಿಂದ ಭೂಮಿ ಮೇಲೆ ವಾಸಿಸುತ್ತಿರುವ ನಮಗೆ ಸಾಕಷ್ಟು ಪ್ರಯೋಜನ ಸಿಗಲಿದೆ. ಈಗ ವಿಜ್ಞಾನಿಗಳು ಅಂದಾಜು ಮಾಡಿರುವಂತೆ 'ಕೆ2-141ಬಿ' ಗ್ರಹ ಇನ್ನೂ ವಿಕಾಸದ ಹಂತದಲ್ಲಿದೆ. ಭೂಮಿ ಕೂಡ ಕೋಟ್ಯಂತರ ವರ್ಷಗಳ ಹಿಂದೆ ಇದೇ ರೀತಿ ವಿಕಾಸ ಹಂತದಲ್ಲಿತ್ತು. ನಂತರ ವಿಕಾಸ ಹೊಂದಿ, ಪ್ರೌಢಾವಸ್ಥೆ ತಲುಪಿದೆ. ಇನ್ನುಳಿದ ಸುಮಾರು 5 ಕೋಟಿ ವರ್ಷದಲ್ಲಿ ಭೂಗ್ರಹ ಕೂಡ ನಾಶವಾಗಲಿದೆ.
ಗ್ರಹಗಳು ವಿಕಾಸದ ಹಂತದಲ್ಲಿ ಹೇಗೆ ವರ್ತಿಸಲಿವೆ
ಹೀಗೆ ಗ್ರಹಗಳು ವಿಕಾಸದ ಹಂತದಲ್ಲಿ ಹೇಗೆ ವರ್ತಿಸಲಿವೆ. ವಿಕಾಸ ಹೊಂದಿದ ನಂತರ ಅದರ ಪ್ರಭಾವ ಏನು ಎಂಬ ಹಲವು ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬಹುದು. ಭೂಮಿ ಮೇಲಿನ ಸಮಸ್ಯೆಗಳಾದ ಮಾಲಿನ್ಯ, ಭೂಮಿಯ ತಾಪಮಾನ ಬದಲಾವಣೆ, ಪ್ರಾಕೃತಿಕ ವಿಕೋಪಗಳನ್ನು ಇಂತಹ ಸಂಶೋಧನೆಗಳಿಂದ ನಿಯಂತ್ರಿಸಬಹುದು. ನಿಯಂತ್ರಿಸಲು ಸಾಧ್ಯವಾಗದೇ ಇದ್ದರೂ ಪ್ರಾಣಾಪಾಯದಿಂದ ಪಾರಾಗಬಹುದು. ಹೀಗಾಗಿ ಬ್ರಹ್ಮಾಂಡದ ಪ್ರತಿ ವಸ್ತುವಿನ ಅಧ್ಯಯನವೂ ಮಾನವರಿಗೆ ಅತ್ಯಂತ ಪ್ರಯೋಜನಕಾರಿ ವಿಚಾರವಾಗಿರಲಿದೆ.