ವ್ಯಕ್ತಿ ಸೇವಿಸೋ ಆಹಾರಕ್ಕೂ ಆತನ ಗುಣಕ್ಕೂ ಸಂಬಂಧವಿದೆಯಾ...?!
ಯಾರು ಯಾವ ರೀತಿಯ ಆಹಾರ ಸೇವಿಸುತ್ತಾರೆಯೋ ಅದರ ಮೇಲೆ ಅವರ ಗುಣಗಳು ಅವಲಂಬಿತವಾಗಿರುತ್ತದೆ ಎಂದರೆ ಹೆಚ್ಚಿನವರು ನಂಬಲಾರರು. ಆದರೆ ಇದು ನಿಜ ಎಂಬುದಾಗಿ ಅಧ್ಯಾತ್ಮಿಕ ಚಿಂತಕರು ಅಭಿಪ್ರಾಯಪಡುತ್ತಾರೆ.
ಅಧ್ಯಾತ್ಮಿಕ ಚಿಂತಕರ ಪ್ರಕಾರ ಮನುಷ್ಯನ ಗುಣಗಳು ಸತ್ವ, ರಜ, ತಮೋ ಎಂಬ ಮೂರು ಗುಣಗಳಿಂದ ರೂಪಗೊಂಡಿದೆಯಂತೆ. ಈ ಮೂರು ಗುಣಗಳು ಕೂಡ ಅವರವರು ಸೇವಿಸುವ ಆಹಾರಕ್ಕನುಗುಣವಾಗಿ ವೃದ್ಧಿಯಾಗುತ್ತವೆಯಂತೆ.
ರಸಯುಕ್ತ, ಸ್ನಿಗ್ದ, ಸ್ಥಿರವಾದ ಹಾಗೂ ಮನಸ್ಸಿಗೆ ಪ್ರಿಯವಾದ ಆಹಾರಗಳು ಸತ್ವಗುಣಗಳನ್ನು, ಅತ್ಯಂತ ಕಹಿ, ಹುಳಿ, ಉಪ್ಪು, ಉಷ್ಣ, ತೀಕ್ಷ್ಣವೂ, ಒಣಕಲು ಆಹಾರವು ರಜಗುಣವನ್ನು ಮತ್ತು ಆರಿದ, ರಸಹೀನ, ದುರ್ಗಂಧಮಯವೂ, ತಂಗಳು, ಕೊಳಕಾದ ಆಹಾರವು ತಮೋ ಗುಣವನ್ನುಂಟು ಮಾಡುತ್ತದೆ.
ಅಚ್ಚುಮೆಚ್ಚಿನ ಬಣ್ಣದಲ್ಲಡಗಿದೆ ನಿಮ್ಮ ಗುಣ-ಸ್ವಭಾವ: ಚಿತ್ರ ನೋಡಿ!
ಈ ಮೂರು ಗುಣಗಳು ಕೂಡ ಮನಸ್ಸಿನ ಮೇಲೆ ಭಾರಿ ಪರಿಣಾಮವನ್ನುಂಟು ಮಾಡುತ್ತವೆ. ಹೀಗಾಗಿ ಈ ಆಹಾರ ಪದಾರ್ಥಗಳನ್ನು ಸೇವಿಸುವ ಮಂದಿ ಅದಕ್ಕನುಗುಣವಾಗಿ ತಮ್ಮ ವರ್ತನೆಯನ್ನು ತೋರುತ್ತಾನಂತೆ. ಉಪನಿಷತ್ತುಗಳಲ್ಲಿ ವಿವರಿಸಿರುವ ಪ್ರಕಾರ ನಾವು ತಿನ್ನುವ ಆಹಾರ ಅರ್ಥಾತ್ ಅನ್ನವು ಮೂರು ವಿಧವಾಗಿ ಪರಿವರ್ತಿತವಾಗುತ್ತದೆಯಂತೆ. ಅದು ಹೇಗೆ ?
ಆಹಾರ ಶುದ್ಧವಾಗಿರಬೇಕು
ಅನ್ನದಲ್ಲಿ ಯಾವುದು ಸ್ಥೂಲತಮವಾದದ್ದೋ ಅದು ಮಲವಾಗುತ್ತದೆ. ಯಾವುದು ಮಧ್ಯಮ ಧಾತುವೋ ಅದು ಮಾಂಸವಾಗುತ್ತದೆ. ಯಾವುದು ಸೂಕ್ಷ್ಮತಮ ಧಾತುವೋ ಅದು ಮನಸ್ಸಾಗುತ್ತದೆ. ಇದು ಹೇಗೆಂದರೆ ಮೊಸರನ್ನು ಕಡೆದಾಗ ಅದರ ಸೂಕ್ಷ್ಮವಾದ ಭಾಗವು ಮೇಲೆ ತೇಲಿ ಬಂದು ಬೆಣ್ಣೆಯಾಗುತ್ತದೆ.
ಹಾಗೆಯೇ ನಾವು ಅನ್ನವನ್ನು ತಿಂದಾಗ ಅದರ ಸೂಕ್ಷ್ಮತಮ ಧಾತುವು ಮೇಲೆದ್ದು ಮನಸ್ಸಾಗುತ್ತದೆಯಂತೆ ಹೀಗಾಗಿಯೇ ನಾವು ಸೇವಿಸುವ ಆಹಾರವು ಶುದ್ಧವಾಗಿರಬೇಕು, ಆಹಾರ ಶುದ್ಧವಾಗಿದ್ದರೆ ಮನಸ್ಸು ಶುದ್ಧವಾಗಿರುತ್ತದೆ. ಶುದ್ಧ ಮನಸ್ಸು ಜಿಗುಪ್ಸೆ, ಭಯ, ಭ್ರಮೆಯನ್ನು ದೂರ ಮಾಡುತ್ತದೆ.
ಇದರಿಂದ ಮನಸ್ಸಿನ ಮಾಲಿನ್ಯಗಳು ದೂರವಾಗಿ ನಮ್ಮಲ್ಲಿ ಸದ್ಗುಣಗಳು ಬೆಳೆಯಲು ಸಹಕಾರಿಯಾಗುತ್ತವೆ ಎನ್ನುವುದು ಅಧ್ಯಾತ್ಮಿಕ ಚಿಂತಕರ ಅಭಿಪ್ರಾಯವಾಗಿದೆ.
ಜನ್ಮದಿನಾಂಕದ ಪ್ರಕಾರ ನಿಮ್ಮ ಗುಣ-ಸ್ವಭಾವ ಹೇಗೆ?
ಅಚಾತುರ್ಯಗಳಿಗೂ ಕಾರಣ
ಮಾಂಸ ಆಹಾರ ಸೇವಿಸಿದಾಗ ಹಾಗೂ ಮೊಸರನ್ನ ಸೇವಿಸಿದಾಗ ನಮ್ಮ ಮೇಲೆ ಬೀರುವ ಪ್ರತ್ಯೇಕ ಪರಿಣಾಮಗಳನ್ನು ಗಮನಿಸಿದಾಗ ಇದರ ಅರಿವಾಗುತ್ತದೆ. ಒಂದು ಲೋಟ ಕಬ್ಬಿನ ಹಾಲು ಸೇವಿಸಿದ ವ್ಯಕ್ತಿಯ ವರ್ತನೆಗೂ, ಒಂದು ಲೋಟ ಮದ್ಯ ಸೇವಿಸಿದ ವ್ಯಕ್ತಿಯ ವರ್ತನೆಗೂ ಅಜಗಜಾಂತರ ವ್ಯತ್ಯಾಸವಿದೆ.
ಕಬ್ಬಿನ ಹಾಲು ಸೇವಿಸಿದ ವ್ಯಕ್ತಿ ದೇಹದ ಜಡತ್ವ ಕಳೆದುಕೊಂಡು ಉಲ್ಲಾಸಿತನಾದರೆ, ಮದ್ಯ ಸೇವಿಸಿದ ವ್ಯಕ್ತಿ ದೇಹದ ಹಾಗೂ ಮಾನಸಿಕ ಸಮತೋಲನ ಕಳೆದುಕೊಳ್ಳುತ್ತಾನೆ. ಅಷ್ಟೇ ಅಲ್ಲ ಮನಸ್ಸು ಮಲೀನಗೊಂಡು ದುಷ್ಪ್ರವೃತ್ತಿಗಳು ಆವರಿಸಿಕೊಳ್ಳುತ್ತವೆ.
ಈ ಸಂದರ್ಭ ಆ ವ್ಯಕ್ತಿ ಮನಸ್ಸಿನ ಹಿಡಿತ ಕಳೆದುಕೊಂಡು ತಾನೇನು ಮಾಡುತ್ತಿದ್ದೇನೆ ಎಂಬುವುದನ್ನೇ ಮರೆತು ಹಲವು ಆಚಾತುರ್ಯಗಳಿಗೂ ಕಾರಣನಾಗುತ್ತಾನೆ.
ಹೆಸರಿನ ಮೊದಲ ಅಕ್ಷರದ ಪ್ರಕಾರ ನಿಮ್ಮ ಸ್ವಭಾವ ಏನು?
ಸಾತ್ವಿಕ ಆಹಾರದ ಸಹವಾಸದಲ್ಲಿರಬೇಕು
ಮನಸ್ಸಿನ ಮೇಲೆ ಪರಿಣಾಮ ಉಂಟು ಮಾಡುವ ರಜೋ ಹಾಗೂ ತಮೋ ಗುಣಗಳನ್ನು ಹೊಂದಿರುವ ಆಹಾರವನ್ನು ಆದಷ್ಟು ಮಟ್ಟಿಗೆ ಕಡಿಮೆ ಮಾಡಿ ಸತ್ವ ಗುಣಗಳುಳ್ಳ ಆಹಾರವನ್ನು ಸೇವಿಸಬೇಕು. ಏಕೆಂದರೆ ಸತ್ವ ಗುಣವು ನೀರಿನ ಹಾಗೆ ನಿರ್ಮಲವಾದದರಿಂದ ಅದನ್ನು ನಾವು ಸುಲಭವಾಗಿ ನಮ್ಮ ಅಂಕೆಯಲ್ಲಿಟ್ಟುಕೊಳ್ಳಲು ಸಾಧ್ಯವಿದೆ.
ರಜೋ ಹಾಗೂ ತಮೋ ಗುಣಗಳನ್ನು ಹೊಂದಿರುವ ಆಹಾರ ಸೇವಿಸುವುದರಿಂದ ನಮ್ಮ ಮನಸ್ಸನ್ನು ಹಿಡಿತದಲ್ಲಿಟ್ಟುಕೊಳ್ಳಲಾಗದೆ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ನಮ್ಮಲ್ಲಿರುವ ತಮೋ ಹಾಗೂ ರಜ ಗುಣವನ್ನು ತ್ಯಜಿಸಬೇಕಾದರೆ ಮೊದಲಿಗೆ ಸತ್ವ ಗುಣಗಳನ್ನು ಬೆಳೆಸುವ ವಿಧಾನ ಹಾಗೂ ನಡವಳಿಕೆಗಳನ್ನು ಬೆಳೆಸಿಕೊಳ್ಳಬೇಕು.
ಅದು ಹೇಗೆಂದರೆ ನಾವು ಸದಾ ಸಾತ್ವಿಕ ವಸ್ತುಗಳ ಸಹವಾಸದಲ್ಲಿರಬೇಕು. ಆಗ ಅಧ್ಯಾತ್ಮಿಕತೆ ನಮ್ಮಲ್ಲಿ ಎಚ್ಚರಗೊಳ್ಳುತ್ತದೆ. ಇದರಿಂದ ಜ್ಞಾನೋದಯವಾಗುತ್ತದೆ. ಅಷ್ಟೇ ಅಲ್ಲ ಜ್ಞಾನದ ಮೂಲಕ ತನ್ನ ಸ್ವಂತ ಅಸ್ಥಿತ್ವದ ಅರಿವು ಮೂಡುತ್ತದೆ.
ಹೀಗೆ ಹೇಳುತ್ತಾರೆ ರಾಮಕೃಷ್ಣರು
ಒಂದೆಡೆ ರಾಮಕೃಷ್ಣರು ಹೇಳುತ್ತಾರೆ. ಈ ಪ್ರಪಂಚ ಎನ್ನುವುದು ಒಂದು ದೊಡ್ಡ ಅರಣ್ಯ. ಇದರಲ್ಲಿ ಸತ್ವ, ರಜಸ್ಸು, ತಮಸ್ಸು ಈ ಮೂರು ಜನ ದರೋಡೆಕೋರರು. ಸತ್ಯ ಜ್ಞಾನವನ್ನು ಅರಸಿಕೊಂಡು ನಡೆಯುವ ಮನುಷ್ಯನನ್ನು ದರೋಡೆ ಮಾಡುವವರು ಇವರು. ತಮಸ್ಸು ಈ ಮನುಷ್ಯನನ್ನು ಕೊಲ್ಲೋಣ ಎನ್ನುತ್ತದೆ. ರಜಸ್ಸು ಆತನನ್ನು ಜಗತ್ತಿಗೆ ಕಟ್ಟಿ ಹಾಕುತ್ತದೆ.
ಆದರೆ ಸತ್ವ ಆತನನ್ನು ಬಿಡುಗಡೆ ಮಾಡುತ್ತದೆ. ಸತ್ವದ ರಕ್ಷಣೆಯಿಂದಾಗಿ ಮನುಷ್ಯ ಅಪಾಯದಿಂದ ಅಂದರೆ ಕ್ರೋಧ, ಮೋಹ ಇತ್ಯಾದಿ ತಮೋ ಗುಣ ಪ್ರಧಾನವಾದ ಕೇಡುಗಳಿಂದ ಪಾರಾಗುತ್ತಾನೆ. ತಮಸ್ಸು ಮತ್ತು ರಜಸ್ಸು ಗುಣಗಳುಳ್ಳ ಆಹಾರವನ್ನು ಆದಷ್ಟು ಮಟ್ಟಿಗೆ ತ್ಯಜಿಸುತ್ತಾ ಸತ್ವಗುಣ ವೃದ್ದಿ ಮಾಡುವಂತಹ ಆಹಾರವನ್ನು ಸೇವಿಸಬೇಕು.
ಏಕೆಂದರೆ ತಮೋ ಗುಣವು ಸತ್ವರಜಸ್ಸುಗಳಿಂದಲೂ, ರಜೋಗುಣವು ಸತ್ವಗುಣದಿಂದಲೂ ನಾಶಹೊಂದುತ್ತದೆ. ಆದ್ದರಿಂದ ಶುದ್ಧ ಸತ್ವಗುಣವನ್ನು ವೃದ್ಧಿಸಿಕೊಂಡು ಮುನ್ನಡೆಯಬೇಕು ಆಗ ಒಂದು ಉತ್ತಮ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ.