ಪಠಾಣ್ ಕೋಟ್ - ಪಲ್ವಾಮಾ ದಾಳಿ ತನಕ JeM, ಮಸೂದ್ ದುಷ್ಟರ ಸುತ್ತಾ
ಮೊಹಮ್ಮದನ ಸೇನೆ ಎಂದು ಕರೆದುಕೊಳ್ಳುವ ಜೈಷ್ ಎ ಮೊಹಮ್ಮದ್ ಉಗ್ರ ಸಂಘಟನೆ, ಅದರ ಮುಖ್ಯಸ್ಥ ಮೌಲಾನಾ ಮಸೂದ್ ಅಝರ್ ಹಾಗೂ ಆತನ ಸೋದರ ಆಬ್ದುಲ್ ರಾಫ್ ಅಸ್ಗರ್ ಸದ್ಯ ಭಾರತದ ಪಾಲಿಗೆ ಕಟಂಕಪ್ರಾಯರು. ಕಣಿವೆ ರಾಜ್ಯದಲ್ಲಿ ವಿಧ್ವಂಸಕ ಕೃತ್ಯಗಳನ್ನು ಎಸಗಲು ಅತ್ಯಂತ ಸಮರ್ಥವಾದ ಪಡೆಯನ್ನುಳ್ಳ ಉಗ್ರ ಸಂಘಟನೆಗಳ ಪೈಕಿ ಜೈಷ್ ಎ ಮೊಹಮ್ಮದ್ ಅಗ್ರಗಣ್ಯ ಸ್ಥಾನದಲ್ಲಿದೆ.
ದೆಹಲಿ, ಪಂಜಾಬ್ ನಲ್ಲೂ ತನ್ನ ನೆಲೆಯನ್ನು ಹೊಂದಿರುವ ಜೈಷ್ ಎ ಮೊಹಮ್ಮದ್ ನಿಂದ ಭಾರತಕ್ಕೆ ತೀವ್ರ ಹಾನಿಯುಂಟಾಗಿದೆ. ಸಂಸತ್ ಮೇಲಿನ ದಾಳಿ, ಪಠಾಣ್ ಕೋಟ್ ದಾಳಿ ಹಾಗೂ ಫೆಬ್ರವರಿ 14, 2019ರ ಪುಲ್ವಾಮಾದ ದಾಳಿ ತನಕ ಜೈಷ್ ಸಂಘಟನೆ ಹೇಯಕೃತ್ಯ ಮುಂದುವರೆಸಿದೆ.
ಗುಪ್ತಚರ ಇಲಾಖೆ ದಾರಿ ತಪ್ಪಿಸಲು ಉಗ್ರ ಸಂಘಟನೆಯ ಹೊಸ ತಂತ್ರ
ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಬಹಾವಲ್ಪುರ್ ಗ್ರಾಮದಲ್ಲಿ ಜುಲೈ 10, 1968 ರಲ್ಲಿ ಅಲ್ಲಾ ಭಕ್ಷ್ ಶಬ್ಬೀರ್ ಅವರ 11 ಮಕ್ಕಳ ಪೈಕಿ ಮೂರನೆಯವನಾಗಿ ಜನಿಸಿದ ಮೌಲಾನಾ ಮಸೂದ್ ಅಜರ್ ಗೆ ಜಾಗತಿಕ ಉಗ್ರ ಎಂಬ ಹಣೆಪಟ್ಟಿ ಹಾಕಲು ಯತ್ನಿಸಿರುವ ಭಾರತಕ್ಕೆ ಪಾಕಿಸ್ತಾನ ಹಾಗೂ ಚೀನಾ ನಿರಂತರವಾಗಿ ಅಡ್ಡಗಾಲು ಹಾಕುತ್ತಾ ಬಂದಿದೆ.
ಕಣಿವೆ ರಾಜ್ಯದಲ್ಲಿ ಅಝರ್
ಜೈಷ್ ಆರಂಭವಾಗಿದ್ದು 2000ರ ವೇಳೆಯಲ್ಲಿ, ಆದರೆ, ಕಣಿವೆ ರಾಜ್ಯದಲ್ಲಿ ಅಝರ್ ಈ ಮುಂಚೆ ಕೂಡಾ ಓಡಾಡಿದ್ದ, ಹರ್ಕತ್ ಉಲ್ ಅನ್ಸರ್ ಸಂಘಟನೆಯಲ್ಲಿ ಸಕ್ರಿಯನಾಗಿದ್ದುಕೊಂಡು ಆಫ್ರಿಕಾ ದೇಶಗಳಲ್ಲಿ ಇಸ್ಲಾಂ ಮೂಲಭೂತವಾದಿಗಳನ್ನು ಒಗ್ಗೂಡಿಸಿದ್ದ.
ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯಂತೆ ಹೆಚ್ಚಿನ ಸದಸ್ಯ ಬಲವಿಲ್ಲದಿದ್ದರೂ ಆತ್ಮಾಹುತಿ ದಾಳಿ ಹಾಗೂ ಭಾರಿ ಪ್ರಮಾಣದ ಸ್ಫೋಟಕಗಳ ಬಳಕೆಯಲ್ಲಿ ಜೈಷ್ ಸಂಘಟನೆ ಬೇರೆ ಸಂಘಟನೆಗಳಿಗಿಂತ ಮುಂದಿದೆ.
ಉಗ್ರರ ದಾಳಿಯಲ್ಲಿ ಹುತಾತ್ಮರಾದ ಯೋಧರ ರಾಜ್ಯವಾರು ಪಟ್ಟಿ
ಹಿಜ್ಬುಲ್ ಸಂಘಟನೆಯಲ್ಲಿ 200ರಿಂದ 300 ಮಂದಿ
ಹಿಜ್ಬುಲ್ ಸಂಘಟನೆಯಲ್ಲಿ 200ರಿಂದ 300 ಮಂದಿ ಸದಸ್ಯರಿದ್ದರೆ, ಜೈಶ್ ಸಂಘಟನೆಯಲ್ಲಿ ಗರಿಷ್ಠ 60 ಮಂದಿ ಇರಬಹುದು. 2016ರಲ್ಲಿ ಮಸೂದ್ ಅಜರ್ ಬಿಟ್ಟರೆ ಯಾರೊಬ್ಬರೂ ಜೈಷ್ ನಲ್ಲಿರಲಿಲ್ಲ. ಈಗ ಸಂಖ್ಯೆ ಬೆಳೆಯುತ್ತಿದೆ.
ಭಯಾನಕ ಸಂಘಟನೆ ಜೈಶ್: ಯುದ್ಧ ತರಬೇತಿ ಹಾಗೂ ಹೊಸ ಶಸ್ತ್ರಾಸ್ತ್ರಗಳನ್ನು ಬಳಸುವ ವಿಧಾನದಲ್ಲಿ ಜೈಶ್ ಎಲ್ಲರಿಗಿಂತ ಮುಂದಿದೆ. ಕಣಿವೆ ರಾಜ್ಯದಲ್ಲಿ ಎಂ4 ಕಾರ್ಬೈನ್ ನಂಥ ಅತಿ ಹಗುರ ರೈಫಲ್ ಗಳ ಸದ್ದು ಕೇಳಿಸಿದ್ದು ಜೈಶ್ ಉಗ್ರರಿಂದ ಎಂದರೆ ತಪ್ಪಾಗಲಾರದು.
ಪುಲ್ವಾಮಾ ಹತ್ಯಾಕಾಂಡ : ಪಾಕ್ ಭಯೋತ್ಪಾದನೆ ವಿರುದ್ಧ ವಿಶ್ವದ ಒಗ್ಗಟ್ಟು
ಜಿಹಾದ್ ಹೆಸರಿನಲ್ಲಿ ಸಂಘಟನೆಗೆ ಸೇರಿಸಿಕೊಂಡು
ಅಮಾಯಕ ಯುವಕರನ್ನು ಜಿಹಾದ್ ಹೆಸರಿನಲ್ಲಿ ಸಂಘಟನೆಗೆ ಸೇರಿಸಿಕೊಂಡು, ತರಬೇತಿ ನೀಡಿ, ಆತ್ಮಾಹುತಿ ದಾಳಿಗೆ ಸಿದ್ಧಪಡಿಸುವ ತನಕ ಎಲ್ಲವನ್ನು ಅಜರ್ ನೋಡಿಕೊಳ್ಳುತ್ತಾನೆ. ಹಿಜ್ಬುಲ್ ಎಂದಿದ್ದರೂ ತನ್ನ ಸಂಖ್ಯಾಬಲದಿಂದ ಭಾರತೀಯ ಯೋಧರ ಮೇಲೆ ದಾಳಿ ನಡೆಸಲು ಯತ್ನಿಸಿ ಸೋಲು ಕಾಣುತ್ತಿದೆ. ಹಿಜ್ಬುಲ್ ನಲ್ಲಿ ಸರಿಯಾದ ಶಸ್ತ್ರಾಸ್ತ್ರಗಳಿಲ್ಲ. ಪಿಸ್ತೂಲ್ ಗಾಗಿ ಉಗ್ರರು ತಮ್ಮಲ್ಲೇ ಕಿತ್ತಾಡಿಕೊಂಡ ಉದಾಹರಣೆಗಳಿವೆ. ಶಸ್ತ್ರಾಸ್ತ್ರಗಳು ಸಿಕ್ಕರೂ ತರಬೇತಿ ಇರುವುದಿಲ್ಲ.
ಭಾರತೀಯ ಸೇನೆಯ ಗುಂಡಿನ ದಾಳಿ
ಭಾರತೀಯ ಸೇನೆಯ ಗುಂಡಿನ ದಾಳಿಗೆ ಬಲಿಯಾದ ಬುರ್ಹಾನ್ ವಾನಿ ಹಿಜ್ಬುಲ್ ಮುಜಾಹಿದ್ದಿನ್ ಭಯೋತ್ಪಾದಕನಾಗಿಯೂ, ಪ್ರತ್ಯೇಕತಾವಾದಿಯಾಗಿಯೂ ಗುರುತಿಸಿಕೊಂಡಿದ್ದ. ಜಮ್ಮ-ಕಾಶ್ಮೀರದಲ್ಲಿ ಈತನಿಗೆ ಸಾಕಷ್ಟು ಅನುಯಾಯಿಗಳಿದ್ದರು. ಈತ ಇರುವಷ್ಟು ಕಾಲ ಸಾಮಾಜಿಕ ಜಾಲ ತಾಣಗಳಲ್ಲಿ ಹಿಜ್ಬುಲ್ ಅಸ್ತಿತ್ವವನ್ನು ಉಳಿಸಿದ್ದ. ಆದರೆ, ಭಾರತೀಯ ಸೇನೆ ಅವನ ಅಸ್ತಿತ್ವವನ್ನು ಅಳಿಸಿ ಹಾಕಿದ ಮೇಲೆ ಹಿಜ್ಬುಲ್ ಬಲ ಕುಗ್ಗತೊಡಗಿತು.
ಹಿಜ್ಬುಲ್ ಗೆ ಹೋಲಿಸಿದರೆ ಜೈಶ್ ಗೆ ಪಾಕಿಸ್ತಾನದ ಸೇನೆ ಹಾಗೂ ಐಎಸ್ಐನಿಂದ ನೇರವಾಗಿ ಬೆಂಬಲ ಸಿಗುತ್ತಿದೆ. ಹಣ, ಶಸ್ತ್ರಾಸ್ತ್ರಗಳ ಪೂರೈಕೆ ನಿರಂತರವಾಗಿದೆ. ಇದರ ಪರಿಣಾಮವೇ ನಗ್ರೋತಾ, ಪಠಾಣ್ ಕೋಟ್ ನಲ್ಲಿ ದಾಳಿ ನಡೆಸಲು ಸಾಧ್ಯವಾಯಿತು.
ಪುಲ್ವಾಮಾ ದಾಳಿ
78 ಬಸ್ ಗಳಿದ್ದ 2547ಕ್ಕೂ ಅಧಿಕ ಯೋಧರು ಶ್ರೀನಗರದ ಆವಂತಿಪೊರ್- ಪುಲ್ವಾಮ್ಮಾರ್ಗ ಮಧ್ಯೆ ಹೋಗುವಾಗ ಸ್ಕಾರ್ಪಿಯೋ ಕಾರು ಅಡ್ಡವಾಗಿ ಬಂದು ಡಿಕ್ಕಿ ಹೊಡೆದು ಸ್ಫೋಟ ಸಂಭವಿಸಿದೆ. ಆತ್ಮಾಹುತಿಯಾದವನನ್ನು ಜೈಶ್ ಎ ಮೊಹಮ್ಮದ್ ಸಂಘಟನೆಯ ಆದಿಲ್ ಆಹ್ಮದ್ ದಾರ್ ಅಲಿಯಾಸ್ ವಾಖಾಸ್ ಕಮ್ಯಾಂಡೋ ಎಂದು ಗುರುತಿಸಲಾಗಿದೆ. ಸುಧಾರಿತ ಎಲ್ ಇಡಿ ಬಳಸಿ ಕಾರು ಜತೆ ತಾನು ಸ್ಫೋಟಗೊಂಡಿದ್ದಾನೆ.
ಸ್ಕಾರ್ಪಿಯೋ ಕಾರಿನಲ್ಲಿ ಬಂದ ಆತ್ಮಾಹುತಿ ಉಗ್ರ ಆದಿಲ್ ತನ್ನ ಜತೆ 350 ಕೆ.ಜಿ.ಯ ಸುಧಾರಿತ ಸ್ಫೋಟಕವನ್ನು ಹೊಂದಿದ್ದ ಎಂಬ ಮಾಹಿತಿಯಿದೆ. 2001ರಲ್ಲಿ ಜಮ್ಮು ಮತ್ತು ಕಾಶ್ಮೀರದ ವಿಧಾನಸಭೆ ಕಟ್ಟಡಕ್ಕೆ ಕಾರನ್ನು ನುಗ್ಗಿಸಲಾಗಿತ್ತು. ಈ ಕಾರ್ ಬಾಂಬ್ಸ್ಫೋಟದಲ್ಲಿ ಸುಮಾರು 44 ಮಂದಿ ಮೃತಪಟ್ಟಿದ್ದರು. ಈ ಸ್ಫೋಟದ ನಂತರ ನಡೆದ ಅತ್ಯಂತ ಕೆಟ್ಟ ದಾಳಿ ಇದಾಗಿದೆ.
ಈ ಹಿಂದಿನ ಆತ್ಮಾಹುತಿ ದಾಳಿ
ಈ ಹಿಂದಿನ ಆತ್ಮಾಹುತಿ ದಾಳಿಗಳಲ್ಲಿ ಪಾಕಿಸ್ತಾನಿ ಮೂಲದವರನ್ನೇ ಜೈಷ್ ಸಂಘಟನೆ ಬಳಕೆ ಮಾಡಿತ್ತು. ಸ್ಥಳೀಯರನ್ನು ಸೆಳೆಯುವ ಉಗ್ರ ಸಂಘಟನೆಗಳು, ಯಾವುದೆ ದೊಡ್ಡ ಜವಾಬ್ದಾರಿ ನೀಡುವುದಿಲ್ಲ ಎಂಬ ಕೂಗೆದ್ದಿತ್ತು. ಇದನ್ನು ಬದಲಾಯಿಸಲು ಸ್ಥಳೀಯರನ್ನು ಆತ್ಮಾಹುತಿ ದಾಳಿ ನಡೆಸಲು ಪ್ರೇರಿಪಿಸಲಾಗಿದೆ ಎಂಬ ಸುದ್ದಿ ಬಂದಿದೆ.
ಪುಲ್ವಾಮಾದ ಗಂಡಿಬಾಗ್ ನಿಂದ 2016ರಿಂದ ಆತ ನಾಪತ್ತೆಯಾಗಿದ್ದ ಆದಿಲ್ ಹುಸೇನ್ ಅಹ್ಮದ್ ದಾರ್ ಅಲಿಯಸ್ ವಖಾರ್ ಕಮ್ಯಾಂಡೋ ಪುಲ್ವಾಮಾದಲ್ಲಿ ದಾಳಿ ನಡೆಸಿದ ಸ್ಥಳೀಯ. 2017ರಲ್ಲಿ ಜೈಷ್ ಎ ಮೊಹಮ್ಮದ್ ಉಗ್ರ ಸಂಘಟನೆ ಸೇರಿಕೊಂಡ ಮಾಹಿತಿ ಸಿಕ್ಕಿತ್ತು. ವಿದ್ಯಾಭ್ಯಾಸ ಅರ್ಧಕ್ಕೆ ನಿಲ್ಲಿಸಿ ಶಾಲೆಯಿಂದ ಹೊರಬಿದ್ದ ಅದಿಲ್ ವೃತ್ತಿಯಿಂದ ಕಟ್ಟಡ ನಿರ್ಮಾಣ ಹಾಗೂ ರಿಪೇರಿ ಕೆಲಸದಲ್ಲಿ ನಿರತನಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಕಳೆದ ಕೆಲವು ತಿಂಗಳಲ್ಲಿ ಸ್ಥಳೀಯರನ್ನು ಉಗ್ರ
ಕಳೆದ ಕೆಲವು ತಿಂಗಳಲ್ಲಿ ಸ್ಥಳೀಯರನ್ನು ಉಗ್ರ ಸಂಘಟನೆಗಳಿಗೆ ಸೇರಿಸಿಕೊಳ್ಳುವ ಕಾರ್ಯ ಕುಂಠಿತವಾಗಿತ್ತು. ಇತ್ತೀಚೆಗೆ ಬಾರಮುಲ್ಲಾ ಪ್ರದೇಶವನ್ನು ಉಗ್ರರಿಂದ ಮುಕ್ತ ಪ್ರದೇಶ ಎಂದು ಘೋಷಿಸಲಾಗಿತ್ತು. ಹೀಗಾಗಿ, ಭಾರತಕ್ಕೆ ದೊಡ್ಡ ಮಟ್ಟದಲ್ಲಿ ಸಂದೇಶವನ್ನು ನೀಡುವ ನಿಟ್ಟಿನಲ್ಲಿ ಈ ಕೃತ್ಯ ಎಸಗಿದ್ದಾರೆ ಎಂದು ತಿಳಿದು ಬಂದಿದೆ.