ಪಾಕ್ ಮಾಜಿ ಸಂಸದ ಈಗ ಕಡಲೆಕಾಯಿ ವ್ಯಾಪಾರಿ
ಹರಿಯಾಣ, ಡಿಸೆಂಬರ್ 14: ಫತೇಬಾದ್ ನ ರಟ್ಟನ್ ಗರ್ ಗ್ರಾಮದ ರಸ್ತೆ ಬದಿಯಲ್ಲಿರುವ ಸಾಲು ಅಂಗಡಿಗಳ ಬದಿಯಲ್ಲೇ ಒಬ್ಬ ಮುದುಕ ಕಡಲೆಕಾಯಿ ಮಾರುತ್ತಾ ಕುಳಿತಿರುವ ದೃಶ್ಯ ಕಂಡುಬರುತ್ತದೆ. 74 ವರ್ಷದ ಈ ವ್ಯಕ್ತಿ ಸೂರ್ಯ ಮೇಲೇರುತ್ತಿದ್ದಂತೆ ಕಡಲೆ ಕಾಯಿ ವ್ಯಾಪಾರಕ್ಕೆ ತಪ್ಪದೇ ಹಾಜರಾಗುತ್ತಾರೆ. ನೆಲದ ಮೇಲೆ ಕಡಲೆಕಾಯಿ ಹರಡಿ ಗಿರಾಕಿಗಳಿಗಾಗಿ ಎದುರು ನೋಡುತ್ತಾ ಕೂರುತ್ತಾರೆ.
ಅಷ್ಟಕ್ಕೂ ಈ ವ್ಯಕ್ತಿ ಕಡಲೆಕಾಯಿ ವ್ಯಾಪಾರ ಮಾಡಲು ಕಾರಣವೇನು? ಕಡಲೆ ಕಾಯಿ ವ್ಯಾಪಾರ ಮಾಡುವ ಈ ವ್ಯಕ್ತಿಯಾದರೂ ಯಾರು ಎಂಬ ಪ್ರಶ್ನೆ ಮುಂದಿಟ್ಟುಕೊಂಡು ಹೊರಟರೆ ದೊಡ್ಡ ಅಚ್ಚರಿಯೇ ಎದುರಾಗುತ್ತದೆ. ನೆಲದ ಮೇಲೆ ಕುಳಿತು ಕಡಲೆಕಾಯಿ ಮಾರುತ್ತಿರುವ ದಿವ್ಯಾರಾಮ್ ಎಂಬ ಈ ವ್ಯಕ್ತಿ ಪಾಕಿಸ್ತಾನದ ಓರ್ವ ಮಾಜಿ ಸಂಸದ ಎಂದರೆ ನಂಬಲೇಬೇಕು!
ಸಲೀಸ್ ಆಗುತ್ತಾ ಭಾರತದ ಪೌರತ್ವ ಪಡೆಯುವ ಹಾದಿ?
ಪೌರತ್ವ ತಿದ್ದುಪಡಿ ಮಸೂದೆ ವಿಚಾರದ ಚರ್ಚೆಯಾಗುತ್ತಿರುವ ಈ ಹೊತ್ತಿನಲ್ಲಿ ಈ ವ್ಯಕ್ತಿಯ ಕಥೆಯೂ ಪ್ರಸ್ತುತವೇ ಆಗಿದೆ.
ಬೆನಜೀರ್ ಭುಟ್ಟೋ ಅಧಿಕಾರಾವಧಿಯಲ್ಲಿ ಸಂಸದರಾದ ದಿವ್ಯಾರಾಮ್
ಅದು 1994ನೇ ಇಸವಿ. ಪಾಕಿಸ್ತಾನದ ಪ್ರಧಾನ ಮಂತ್ರಿಯಾಗಿ ಆಯ್ಕೆ ಆಗಿದ್ದ ಬೆನಜೀರ್ ಭುಟ್ಟೋ ಅವರ ಸರ್ಕಾರ ಅಲ್ಪ ಸಂಖ್ಯಾತ ಕೋಟಾದಡಿಯಲ್ಲಿ ಪಂಜಾಬ್ ಪ್ರಾಂತ್ಯದ ಲೋಹಿಯಾ ಜಿಲ್ಲೆಯಲ್ಲಿ ರೈತರಾಗಿದ್ದ ದಿವ್ಯಾರಾಮ್ ಅವರನ್ನು ಸಂಸದರನ್ನಾಗಿ ನೇಮಿಸಿತು. ಆದರೆ ಈ ನೇಮಕದಿಂದಾಗಿ ಕುಟುಂಬದ ಕಷ್ಟಗಳೇನೂ ದೂರವಾಗಲಿಲ್ಲ. ಅಷ್ಟೇ ಅಲ್ಲ ಗೌರವ ಸ್ಥಾನ ಮಾನಗಳೂ ಹೆಚ್ಚಾಗಲಿಲ್ಲ. ಬದಲಿಗೆ ಇಡೀ ಕುಟುಂಬ ಪ್ರತಿನಿತ್ಯವೂ ಭಯದಲ್ಲೇ ಬದುಕು ಸವೆಸುವಂತಾಯಿತು.
ಸಂಸದರಾದ ಮೊದಲ ದಿನದಿಂದಲೇ ರಾಜೀನಾಮೆಗೆ ಒತ್ತಾಯ
ಪಾಕಿಸ್ತಾನದ ಬಹುಸಂಖ್ಯಾತ ಮುಸ್ಲಿಮರಿದ್ದ ಹಳ್ಳಿಯು ಎಂದಿಗೂ ಮುಸ್ಲಿಮೇತರನೊಬ್ಬ ಉನ್ನತ ಸ್ಥಾನಕ್ಕೇರುವುದನ್ನು ಒಪ್ಪಲು ಸಾಧ್ಯವೇ ಇರಲಿಲ್ಲ. ಸಂಸದರಾದ ದಿನದಿಂದಲೇ ಅವರಿಗೆ ಸಂಕಷ್ಟ, ಕಿರುಕುಳಗಳೂ ಪ್ರಾರಂಭವಾದವು. ಮೊದಲ ದಿನದಿಂದಲೇ ದಿವ್ಯಾರಾಮ್ ಅವರನ್ನು ಸಂಸದ ಸ್ಥಾನಕ್ಕೆ ರಾಜೀನಾಮೆ ಕೊಡುವಂತೆ ಅಲ್ಲಿನ ರಾಜಕೀಯ ಪ್ರಭಾವಿ ಮುಸ್ಲಿಮರ ಗುಂಪು ಒತ್ತಾಯಿಸತೊಡಗಿತು. ಇದೇ ಕಾರಣಕ್ಕಾಗಿ ಅವರು ಸಂಸದರಾದ 15ನೇ ದಿನದಲ್ಲಿ ದುಷ್ಕರ್ಮಿಗಳು ದಿವ್ಯಾರಾಮ್ ಅವರ ಸೋದರ ಸೊಸೆಯನ್ನೇ ಅಪಹರಿಸಿದರು. ದಿವ್ಯಾರಾಮ್ ನ್ಯಾಯಾಲಯಗಳ ಮೊರೆ ಹೋದರು. ಆದರೆ ಸರ್ಕಾರ ಯಾವುದೇ ವ್ಯವಸ್ಥೆ, ರಕ್ಷಣೆ ನೀಡಲೇ ಇಲ್ಲ. ಅವು ತನ್ನ ಜೀವನದ ಅಗ್ನಿ ಪರೀಕ್ಷೆಯ ದಿನಗಳು ಎಂದು ಹೇಳಿಕೊಳ್ಳುತ್ತಾರೆ ದಿವ್ಯಾರಾಮ್. ನಂತರ ಕೇವಲ ಮೂರೇ ತಿಂಗಳಲ್ಲಿ ಅವರು ಮತಾಂಧರಿಂದ ಕಿರುಕುಳಕ್ಕೆ ಒಳಗಾಗಿ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗಿ ಬಂತು.
ಹರ್ಯಾಣ ಚುನಾವಣೆ ಹೊತ್ತಲ್ಲಿ ಕಣ್ಣಿಗೆ ಬಿದ್ದ ಈ 12 ರ ಪತ್ರಕರ್ತ!
ಚಿಕ್ಕಪುಟ್ಟ ವ್ಯಾಪಾರದೊಂದಿಗೆ ಜೀವನ ಸಾಗಿಸುತ್ತಿರುವ ಕುಟುಂಬ
"ನಮ್ಮ ಕುಟುಂಬಕ್ಕೆ ಪಾಕಿಸ್ತಾನದಲ್ಲಿ 25 ಎಕರೆ ಭೂಮಿ ಇತ್ತು. ಇದು ಈಗ ಹಳ್ಳಿಯ ಸ್ಥಳೀಯರೊಂದಿಗೆ ಇದೆ" ಎಂದು ಅವರು ಹೇಳುತ್ತಾರೆ. ಮತಾಂಧರಿಂದ ಕಿರುಕುಳ ತಾಳಲಾರದೆ ದಿವ್ಯಾರಾಮ್ ಮತ್ತು ಅವರ 12 ಸದಸ್ಯರ ಕುಟುಂಬ ಜನವರಿ 2000ರ ಚಳಿಗಾಲದಲ್ಲಿ ಒಂದು ತಿಂಗಳ ವೀಸಾದಲ್ಲಿ ಭಾರತಕ್ಕೆ ಬಂದಿತು. ಪಾಕಿಸ್ತಾನದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯವನ್ನು ಉಲ್ಲೇಖಿಸಿ ಅವರು ಮತ್ತು ಅವರ ಕುಟುಂಬಕ್ಕೆ ಭಾರತದಲ್ಲಿ ಉಳಿಯಲು ಅವಕಾಶ ನೀಡುವಂತೆ ಸ್ಥಳೀಯ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಜಿಲ್ಲಾಡಳಿತ ಉಳಿಯಲು ಅವಕಾಶ ಮಾಡಿಕೊಟ್ಟಿದ್ದು, ಈಗ ಚಿಕ್ಕ ಪುಟ್ಟ ವ್ಯಾಪಾರ ಮಾಡಿಕೊಂಡು ಬದುಕು ನೂಕುತ್ತಿದ್ದಾರೆ.
ಪೌರತ್ವ ತಿದ್ದುಪಡಿ ಮಸೂದೆಗೆ ಧನ್ಯವಾದ ಹೇಳಿದ ವೃದ್ಧ
"ಕೇಂದ್ರ ಸರ್ಕಾರ ಜನರಿಗೆ ತಂದಿರುವ ಪೌರತ್ವ ಕಾಯ್ದೆಯ ತಿದ್ದುಪಡಿಯಿಂದಾಗಿ ನಾನು ಹಾಗೂ ನಮ್ಮ ಕುಟುಂಬ ಇಂದು ಬಹಳ ಸಂತೋಷವಾಗಿದ್ದೇವೆ, 19 ವರ್ಷಗಳಿಂದ ನಿರಾಶ್ರಿತರಾಗಿದ್ದ ನಾವು ಇಂದು ಭಾರತದ ಪೌರತ್ವ ಪಡೆಯಬಹುದಾಗಿದೆ. ಇದಕ್ಕಾಗಿ ಸರ್ಕಾರಕ್ಕೆ ಧನ್ಯವಾದ ಹೇಳುತ್ತೇನೆ" ಎಂದ ದಿವ್ಯಾರಾಮ್ ಅವರು ಪಂಜಾಬ್ನ ಅಮೃತಸರ ಮತ್ತು ಜಲಂಧರ್ ನಲ್ಲಿ, ತಮ್ಮಂತೆಯೇ ಕಿರುಕುಳ ತಾಳಲಾರದೆ ಪಾಕಿಸ್ತಾನದಿಂದ ಭಾರತಕ್ಕೆ "ಪಲಾಯನ" ಮಾಡಿದ ಹಲವಾರು ಕುಟುಂಬಗಳಿವೆ, ಸಿಏಬಿ ಅವರಿಗೆ ಆಶೀರ್ವಾದವಾಗಿದೆ ಎಂದು ಹೇಳುತ್ತಾರೆ.