ಜೋಳಿಗೆ ಹಿಡಿದ ಇಮ್ರಾನ್ ಖಾನ್ 'ತುಂಡಾದ' ಪಾಕಿಸ್ತಾನದ ಕೊನೆ ಪ್ರಧಾನಿಯೇ?
"ಆ ದೇಶವನ್ನು ನಾವಾಗಿ ಏನೂ ಮಾಡುವ ಅಗತ್ಯವಿಲ್ಲ. ತಾನಾಗಿಯೋ ನಾಲ್ಕು ಹೋಳಾಗಿ, ಯಾವುದಕ್ಕೆ ಉಳಿದುಕೊಳ್ಳುವ ಶಕ್ತಿ ಇದೆಯೋ ಉಳಿದುಕೊಳ್ಳುತ್ತದೆ. ಬಾಕಿಯದು ನಾಶವಾಗಿ ಹೋಗುತ್ತದೆ" ಎನ್ನುತ್ತಿದ್ದರು ನನ್ನ ಗೆಳೆಯ. ಅಂತರಾಷ್ಟ್ರೀಯ ಮಟ್ಟದ ವಿದ್ಯಮಾನಗಳನ್ನು ನಿರಂತರವಾಗಿ ಗಮನಿಸುವ ಅವರಿಗೆ ಪಾಕಿಸ್ತಾನದ ಸ್ಥಿತಿ ಏನೀಗ ಎಂದು ನಾನು ಕೇಳಿದ್ದು, ತುಟಿಯ ಮೇಲೊಂದು ನಗು ಮೂಡಿಸಿ, ಇಂಥದ್ದೊಂದು ಉತ್ತರ ನೀಡುವಂತೆ ಮಾಡಿತು.
ಆ ದೇಶದ ಪ್ರಧಾನಿ ಇಮ್ರಾನ್ ಖಾನ್ ದಿನಕ್ಕೊಂದು ದೇಶಕ್ಕೆ ಜೋಳಿಗೆ ಹಿಡಿದು ಹೊರಡಬೇಕು. ಅಮೆರಿಕದ ಎದುರು, ನಾವು ಒಳ್ಳೆಯವರು. ನೀವು ಹೇಳಿದ ಹಾಗೆಲ್ಲ ಕೇಳಿದ್ದೇವೆ ಅಲ್ಲವಾ ಎಂದು ಪೂಸಿ ಹೊಡೆಯಬೇಕು. ಚೀನಾದ ಎದುರು ಮಂಡಿಯೂರುವ ಕಾಲ ಮುಗಿದು, ಈಗ ಶಿರಸಾಷ್ಟಾಂಗ ನಮಸ್ಕಾರ ಮಾಡಿಯಾಗಿದೆ. ಪಕ್ಕದ ಯುಎಇ ಬಳಿಯೂ ನೆರವು ಪಡೆದಾಗಿದೆ. ಇಷ್ಟೆಲ್ಲ ಆದರೂ ಪಾಕಿಸ್ತಾನದ ಆರ್ಥಿಕ ಸ್ಥಿತಿ ಸುಧಾರಿಸಿಲ್ಲ.
ಇಮ್ರಾನ್ ಸರಕಾರಕ್ಕೆ ನೂರು ದಿನ; ಪಾತಾಳ ತಲುಪಿತು ಪಾಕಿಸ್ತಾನದ ರುಪಾಯಿ ಮೌಲ್ಯ
ಪಾಕಿಸ್ತಾನದ ಜನತೆಗೆ ಇನ್ನೊಂದು ವಾರಕ್ಕೆ ಮಾತ್ರ ಪೆಟ್ರೋಲ್-ಡೀಸೆಲ್ ಆಗಬಹುದು. ಏಕೆಂದರೆ ಅಂತರರಾಷ್ಟ್ರೀಯ ಮಟ್ಟದಲ್ಲಿ ತೈಲ ಖರೀದಿಸಬೇಕು ಅಂದರೆ, ಡಾಲರ್ ನಲ್ಲಿ ಪಾವತಿಸಬೇಕು. ಪಾಕಿಸ್ತಾನದ ಬಳಿಯಲ್ಲಿ ಅದಕ್ಕೂ ವಿದೇಶಿ ವಿನಿಮಯ ಇಲ್ಲ. ಈಗಾಗಲೇ ಪಡೆದ ಸಾಲದ ಮರುಪಾವತಿಗೂ ದಾರಿ ಇಲ್ಲ. -ಇಂಥದ್ದೊಂದು ಸುದ್ದಿ ಬರುತ್ತಲೇ ಇರುತ್ತದೆ.
ನಯಾಪೈಸೆ ಕೊಡುವುದಿಲ್ಲ ಎಂದಿರುವ ಟ್ರಂಪ್
ಇಂಥ ಸಮಯದಲ್ಲಿ ವಿಶ್ವ ಬ್ಯಾಂಕ್ ಬಳಿಯೋ ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆ ಹತ್ತಿರವೋ ಸಾಲಕ್ಕಾಗಿ ಹೋದರೆ, ನೀವು ಈ ವರೆಗೆ ಪಡೆದ ಸಾಲವನ್ನು ಹೇಗೆ ಖರ್ಚು ಮಾಡಿದ್ದೀರಿ, ಚೀನಾ ಜತೆಗಿನ ಸಿಪೆಕ್ ಒಪ್ಪಂದದ ಕಾಗದ ಪತ್ರಗಳು ಸರಿಯಾಗಿವೆಯೇ ಎಂದು ಕೇಳಿದರೆ, ಅದಕ್ಕೆ ಕೂಡ ಪಾಕಿಸ್ತಾನದ ಬಳಿ ಒಪ್ಪಿಗೆ ಆಗುವಂಥ ಉತ್ತರವೇ ಇಲ್ಲ. ಇನ್ನು ಚೀನಾದಿಂದ, ಯುಎಇಯಿಂದ ಸಾಲ ಪಡೆದ ಇಮ್ರಾನ್ ಖಾನ್ ಗೆ ಭವಿಷ್ಯದಲ್ಲಿ ಇದೇ ರೀತಿ ನೆರವು ಸಿಗುತ್ತದೆ ಎಂಬ ಯಾವ ನಂಬಿಕೆ ಕೂಡ ಇಲ್ಲ. ಒಂದು ಕೂಡ ಅಮೆರಿಕ ದೇಶ ಚೀನಾವನ್ನು ಹಣಿಯುತ್ತಿದೆ. ತನ್ನ ವ್ಯಾಪಾರ ಸಾಮ್ರಾಜ್ಯವನ್ನು ಉಳಿಸಿಕೊಳ್ಳುತ್ತದೋ ಅಥವಾ ಪಾಕಿಸ್ತಾನಕ್ಕೆ ನೆರವಾಗುತ್ತದೋ ಅಂದರೆ, ಚೀನಾಕ್ಕೆ ತನ್ನ ದೇಶವೇ ಮೊದಲ ಆದ್ಯತೆ. ಇತ್ತ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸ್ಪಷ್ಟವಾಗಿ ಹೇಳಿದ್ದಾರೆ: ಪಾಕಿಸ್ತಾನಕ್ಕೆ ನಯಾ ಪೈಸೆ ಕೊಡುವುದಿಲ್ಲ. ಅಲ್ಲಿಗೆ ಪಾಕಿಸ್ತಾನದ ಸ್ಥಿತಿ ದೈನೇಸಿ ಆದಂತಾಯಿತು.
ಪಾಪದ ಕೊಡ ತುಂಬಿದಂತೆಯೇ
ಹಾಗೆ ನೋಡಿದರೆ ಪಾಕಿಸ್ತಾನದ ಪಾಪದ ಕೊಡ ತುಂಬಿದಂತೆಯೇ ಆಗಿದೆ. ಅಲ್ಲಿನ ರಾಜಕೀಯ ಅಸ್ಥಿರತೆ, ಭಯೋತ್ಪಾದನೆ, ಸಾಂವಿಧಾನಿಕ ಬಿಕ್ಕಟ್ಟು ಇಂಥ ಕಾರಣಗಳಿಗೆ ದೊಡ್ಡ ಮಟ್ಟದ ಹೂಡಿಕೆದಾರರು ಬರುವುದಿಲ್ಲ. ಇನ್ನು ಚೀನಾವೊಂದೇ ಅಲ್ಲಿನ ನೆಲದಲ್ಲಿ ಹೂಡಿಕೆ ಮಾಡಿದರೂ ಅದರ ಹಿಂದೆ ಇರುವುದು ಭಾರತದ ಮೇಲಿನ ಶತ್ರುತ್ವ, ದಕ್ಷಿಣ ಏಷ್ಯಾದಲ್ಲಿ ಪ್ರಭುತ್ವ ಸಾಧಿಸಬೇಕೆಂಬ ಹಪಹಪಿ. ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಪಾಕಿಸ್ತಾನಕ್ಕೆ ಇತ್ತೀಚೆಗೆ ಹಲವು ಸಲ ಮುಖಭಂಗವಾಗಿ, ಈಗೀಗ ಮುಖವೇ ಉಳಿದಿಲ್ಲ. ಇನ್ನು ಆ ದೇಶ ಆಳಿದ ರಾಜಕಾರಣಿಗಳು, ಸೇನಾಧಿಕಾರಿಗಳು ತಮ್ಮ ಸ್ವಾರ್ಥಕ್ಕಾಗಿ ಎಷ್ಟು ಸಾಧ್ಯವೋ ಆ ಆಳತೆಯನ್ನೂ ಮೀರಿ ಲೂಟಿ ಮಾಡಿದ್ದಾರೆ. ಖನಿಜ ಸಂಪತ್ತು, ಕೈಗಾರಿಕೆ, ಕೃಷಿ, ಪ್ರವಾಸೋದ್ಯಮ ಹೀಗೆ ಯಾವುದರಿಂದಲೂ ಪಾಕಿಸ್ತಾನ ಹೆಸರು ಪಡೆದಿಲ್ಲ. ಇನ್ನು ಹೇಗೆ ಆ ದೇಶವನ್ನು ಉಳಿಸಲು ಸಾಧ್ಯ?
ಯಾರದ್ದೋ ಯುದ್ಧಕ್ಕಾಗಿ ಅಮೆರಿಕ ನಮ್ಮನ್ನು ಬಳಸಿಕೊಂಡಿತು: ಇಮ್ರಾನ್ ಖಾನ್
ಭಾರತ ಹೇಳಿದ್ದನ್ನು ನೆನಪಿಸಿಕೊಳ್ಳಿ
ಇದು ಒಂದು ಕಡೆಯಾಯಿತು. ಇಸ್ಲಾಂ ಮೂಲಭೂತವಾದಿಗಳು ಅಲ್ಲಿನ ಸರಕಾರವನ್ನೇ ಅಲುಗಿಸುವ ಮಟ್ಟಕ್ಕೆ ಪ್ರಬಲರಾಗಿದ್ದಾರೆ. ಶಿಕ್ಷಣ, ಆಧುನೀಕತೆಗೆ ಅಲ್ಲಿನ ಯುವ ಜನಾಂಗ ತೆರೆದುಕೊಳ್ಳುವುದು ಅವರಿಗೆ ಬೇಡ. ಇನ್ನೊಂದು ಕಡೆ ಪಕ್ಕದ ಅಫ್ಘಾನಿಸ್ತಾನ, ಭಾರತದಲ್ಲಿ ಭಯೋತ್ಪಾದನಾ ಚಟುವಟಿಕೆಗಳಿಗೆ ಕುಮ್ಮಕ್ಕು ನೀಡುತ್ತಿರುವವರು ಸಹ ಪಾಕಿಸ್ತಾನದ ಇದೇ ಇಸ್ಲಾಂ ಮೂಲಭೂತವಾದಿಗಳು. ಭಾರತದ ಉರಿಯಲ್ಲಿ ಸೇನಾ ನೆಲೆ ಮೇಲೆ ಉಗ್ರಗಾಮಿಗಳ ದಾಳಿ ಆದಾಗ ಭಾರತ ಹೇಳಿದ್ದ ಮಾತು ನೆನಪಿಸಿಕೊಳ್ಳಿ. ಜಾಗತಿಕ ಮಟ್ಟದಲ್ಲಿ ರಾಜತಾಂತ್ರಿಕವಾಗಿ ಪಾಕಿಸ್ತಾನವನ್ನು ಒಂಟಿಯಾಗಿ ಮಾಡುತ್ತೇವೆ ಎನ್ನಲಾಗಿತ್ತು. ಅದೇ ರೀತಿಯ ಸ್ಥಿತಿ ಇಂದು ಪಾಕಿಸ್ತಾನಕ್ಕೆ ಆಗಿದೆ. ಪ್ರಾಯಶಃ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಪರಿಯಲ್ಲಿ ಅನುದಾನ ನಿಲ್ಲಿಸಬಹುದು ಎಂಬ ಅಂದಾಜು ಪಾಕ್ ಗೆ ಇರಲಿಲ್ಲವೇನೋ. ಆದರೆ ಅದೂ ಸರಿಯಾದ ಹೊಡೆತ ಕೊಟ್ಟಿದೆ.
'ತುಂಡಾದ' ಪಾಕಿಸ್ತಾನದ ಕೊನೆ ಪ್ರಧಾನಿಯೇ?
ಆ ಕಾರಣಕ್ಕೆ ಜಾಗತಿಕ ಮಟ್ಟದಲ್ಲಿ ಪಾಕಿಸ್ತಾನಕ್ಕೆ ಶತಾಯಗತಾಯ ತನ್ನ ವರ್ಚಸ್ಸನ್ನು ಬದಲಿಸಿಕೊಳ್ಳಬೇಕು. ಈಗಿರುವ ಆರ್ಥಿಕ ಸಂಕಷ್ಟದಿಂದ ಹೊರಬರಬೇಕು. ಪ್ರಧಾನಿ ಇಮ್ರಾನ್ ಖಾನ್ ನೀಡಿದ ಭರವಸೆ 'ನಯಾ ಪಾಕಿಸ್ತಾನ್' ಅನ್ನು ಸಾಕಾರ ಮಾಡಿಕೊಳ್ಳಬೇಕಿದೆ. ಆದರೆ ಆ ದೇಶದಲ್ಲಿ ಕ್ರಿಕೆಟ್ ಟೂರ್ನ್ ಮೆಂಟ್ ಆಯೋಜಿಸಿ, ಹಣ ಮಾಡಿಕೊಳ್ಳುವುದಕ್ಕೆ ಕೂಡ ಸಾಧ್ಯವಿಲ್ಲದ ಸ್ಥಿತಿ ತಲುಪಿರುವ ಇಮ್ರಾನ್ ಖಾನ್ ರೇ 'ತುಂಡಾದ' (ಪೂರ್ವ ಪಾಕಿಸ್ತಾನ ಈಗಾಗಲೇ ಬಾಂಗ್ಲಾದೇಶ್ ಅಂತ ಒಂದು ತುಂಡಾಗಿದೆ) ಪಾಕಿಸ್ತಾನದಲ್ಲಿ ಪ್ರಧಾನಿಯಾದ ಕೊನೆ ವ್ಯಕ್ತಿ ಆಗಲಿದ್ದಾರಾ ಎಂಬ ಅನುಮಾನ ಹಾಗೂ ಚರ್ಚೆ ಸದ್ಯಕ್ಕೆ ನಡೆಯುತ್ತಿದೆ. ಆರ್ಥಿಕವಾಗಿ ಸೋತು, ನೆಲ ಕಚ್ಚಿ, ಕತ್ತು ಬಗ್ಗಿಸಿರುವ ಕೋಳಿಯಂತೆ ಆಗಿರುವ ಪಾಕಿಸ್ತಾನವು ನಾಲ್ಕೈದು ಚೂರಾಗುವ ದಿನ ದೂರವಿಲ್ಲ ಎಂಬುದು ತಜ್ಞರ ವಿಶ್ಲೇಷಣೆ. ಅಣ್ವಸ್ತ್ರ ಹೊಂದಿದ ದೇಶ ನಮ್ಮದು. ಭಾರತ ಎಚ್ಚರದಿಂದ ಪ್ರತಿಕ್ರಿಯೆ ನೀಡಬೇಕು ಎನ್ನುವ ಪಾಕಿಸ್ತಾನದ ಹಲವು ಮಂದಿಗೆ, ತಮ್ಮದೇ ದೇಶದ ಜನರಿಗೆ ರೊಟ್ಟಿ ಒದಗಿಸುವ ತಾಕತ್ತು ಇಲ್ಲದಂತಾಗಿದೆ.