ಸಾವಿರದೈನೂರಕ್ಕೂ ಹೆಚ್ಚು ಹೆರಿಗೆ ಮಾಡಿಸಿದ ಮಹಾತಾಯಿಗೆ 'ಪದ್ಮಶ್ರೀ'
ಆಕೆ ಮಹಾತಾಯಿ. ಎಷ್ಟೆಲ್ಲ ಮಂದಿಯ ಹಾರೈಕೆ ಈ ತೊಂಬತ್ತೇಳು ವರ್ಷದ 'ಸೂಲಗಿತ್ತಿ' ನರಸಮ್ಮ ಅವರ ಮೇಲಿದೆಯೋ! ಪಾವಗಡದವರೆಗೆ ಪದ್ಮಶ್ರೀ ಗೌರವ ತಲುಪಿದೆ. ನರಸಮ್ಮ ಅವರು ಈ ವೃತ್ತಿಗೆ ಬಂದದ್ದು ಕೂಡ ಅಚಾನಕ್ಕಾಗಿ. ಆದರೆ ಸೂಲಗಿತ್ತಿಯಾಗಿ ಅವರು ತರಬೇತುಗೊಂಡಿದ್ದು ತಮ್ಮ ಅಜ್ಜಿ ಮರಿಗಮ್ಮ ಅವರಿಂದ.
ನರಸಮ್ಮ ಅವರ ಜೀವನದಲ್ಲಿ ವೈಫಲ್ಯ ಅಂತ ನೋಡಿದ್ದೇ ಇಲ್ಲ. ಅದೇ ನನ್ನ ಪಾಲಿನ ಸಮಾಧಾನ ಎಂದು ಹಿಂದೊಮ್ಮೆ ಮಾಧ್ಯಮವೊಂದರ ಸಂದರ್ಶನದಲ್ಲಿ ಅವರೇ ಹೇಳಿಕೊಂಡಿದ್ದರು. ಅಂದಹಾಗೆ ಕೃಷ್ಣಾಪುರ ಸುತ್ತಮುತ್ತಲ ಗ್ರಾಮದವರ ಪಾಲಿಗೆ ನರಸಮ್ಮ ಅವರು ನರ್ಸ್ ಹೌದು, ಡಾಕ್ಟರೂ ಹೌದು.
ಪಾವಗಡದ ಸೂಲಗಿತ್ತಿ ನರಸಮ್ಮ ಅವರಿಗೆ ಪದ್ಮಶ್ರೀ ಪ್ರಶಸ್ತಿ
ನರಸಮ್ಮ ಅವರಿಗೆ ಮದುವೆಯಾದಾಗ ಹನ್ನೆರಡು ವರ್ಷ. ಪತಿಯ ಹೆಸರು ಆಂಜಿನಪ್ಪ. ಈ ದಂಪತಿಗೆ ಹನ್ನೆರಡು ಮಕ್ಕಳು. ತುಮಕೂರು ವಿಶ್ವ ವಿದ್ಯಾಲಯದ ಗೌರವ ಡಾಕ್ಟರೇಟ್ ಸೇರಿದಂತೆ ಹಲವು ಗೌರವ, ಮನ್ನಣೆಗೆ ಪಾತ್ರರಾದವರು ನರಸಮ್ಮ. ರಾಷ್ಟಪತಿಗಳಿಂದ ವಯೋಶ್ರೇಷ್ಠ ಸಮ್ಮಾನ್ ಪ್ರತಿಷ್ಠಿತ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ.
ಒಂದೂವರೆ ಸಾವಿರಕ್ಕೂ ಹೆಚ್ಚು ಹೆರಿಗೆಗಳನ್ನು ಮಾಡಿಸಿದ ಅನಕ್ಷರಸ್ಥೆ ನರಸಮ್ಮ ಅವರು 'ಸೂಲಗಿತ್ತಿ ನರಸಮ್ಮ' ಎಂದೇ ಖ್ಯಾತರು. ಅವರ ಆಡುಭಾಷೆ ತೆಲುಗು. ತಮ್ಮ ಸೊಸೆಗೆ ಕೂಡ ಕೆಲ ವರ್ಷಗಳ ಹಿಂದೆ ಅವರೇ ಹೆರಿಗೆ ಮಾಡಿಸಿದ್ದಾರೆ.
ಹೆರಿಗೆ ಮಾಡಿಸಿದ್ದಕ್ಕೆ ಜನರು ರವಿಕೆ ಬಟ್ಟೆ, ಭತ್ತ, ರಾಗಿ ಇತ್ಯಾದಿಗಳನ್ನು ನೀಡುತ್ತಿದ್ದರು. ಅಷ್ಟೇ ಅಲ್ಲ, ವರ್ಷದ ಫಸಲು ಬಂದಾಗ ಬೆಳೆಯ ರಾಶಿಯಲ್ಲಿ ಎಷ್ಟೋ ಮಂದಿ ಮೊದಲನೇ ಮೊರವು ನರಸಮ್ಮ ಅವರಿಗೆ ಮೀಸಲಾಗುತ್ತಿತ್ತು.
ನಡೆದುಕೊಂಡು ಹೋಗಿ ಹೆರಿಗೆ ಮಾಡಿಸುತ್ತಿದ್ದ ನರಸಮ್ಮನವರನ್ನು ಕರೆದುಕೊಂಡು ಹೋಗಲು ಹೆಚ್ಚೆಂದರೆ ಎತ್ತಿನ ಗಾಡಿ ತರುತ್ತಿದ್ದರು. ಎಷ್ಟೋ ಸಲ 20 ಮೈಲು ದೂರ ನಡೆದುಕೊಂಡು ಹೋಗಿಯೇ ಹೆರಿಗೆ ಮಾಡಿಸಿದ್ದೂ ಇದೆ. ಒಂದೇ ದಿನದಲ್ಲಿ ನಾಲ್ವರಿಗೆ ಹೆರಿಗೆ ಮಾಡಿಸಿದ್ದಿದೆ. ಇಂಥ ಮಹಾತಾಯಿಗೆ ಈಗ ಪದ್ಮಶ್ರೀ ಗೌರವ ಸಂದಿದೆ.